ಸತ್ಯಕಾಮ ಶರ್ಮಾ ಕಾಸರಗೋಡು
ಮಳೆ
ಬರ
ಬೇಕಾದರೆ ಏನು ಬೇಕೋ
ಅವೆಲ್ಲವೂ ಅಲ್ಲಿತ್ತು
ಗಾಳಿ ಸುಯ್ಯುತಲಿತ್ತು
ಮೋಡ ಕವಿದಿತ್ತು
ಆದರೂ ಮಳೆಯಾಗಲಿಲ್ಲ
ಯಾಕೆ ಮತ್ತೂ?
ಅದಾವುದೋ ಮಾಂತ್ರಿಕ ಸ್ಪರ್ಶ
ಇಲ್ಲವಾದಲ್ಲಿ ಇಲ್ಲವೇ?
ಇಲ್ಲ ವರ್ಷ!
ಇಲ್ಲವಾದರೂ ಹುಟ್ಟು
ಹೃದಯ ಮಿದುಳು ಪುಪ್ಪುಸ
ಉದರ ಯಕೃತ್ತು
ಮತ್ತಿತರವುಗಳೆಲ್ಲವನೂ ತೊಗಲಿನೊಳಗಿಟ್ಟು
ಜೀವತಳೆಯಲು ಕಾದ ಹಾಗೆ
ಆ ಇನ್ಯಾವುದೋ ಇದೆಯಲ್ಲ
ಅದನದರೊಳಗೆ ತರುವುದು ಹೇಗೆ?
ಅದು ಯಾರ ಕೈಯಲ್ಲಿ ಇದೆ
ಇದೆಯಾದರೆ ಅವರ ಅವನ ಅವಳ
ಅಂತರಾಳದಲ್ಲಿ ಏನಿದೆ?
ಸೇರಿಸಿದರೆ ಪೇರಿಸಿದರೆ ಶಬ್ದಗಳ ಬರಿ ಸಂತೆ
ಆಗದದು ಆ ಗಾರುಡಿಗ ಬರೆದಂತೆ
ಅAದ ಗಂಧದ ನಂಟಿರದ ಹೂ
ಬರಿ ಕಾಗದದ ಹಾಗಾದಂತೆ
ಬೇಯುವುದು ಸುಲಭ
ಬೆಂದುದರಲ್ಲಿ ತರಲು ಒಂದು ಹದ
ಹೊರಡಿಸಲು ನಾದದ ನವನೀತ
ಸದಾ ಕಾಯ ಬೇಕು
ಕಾಯದೊಳಗಾ. . . ಮಾಯೆ ಜೀವ ಬೇಕು
ಬೇಂದ್ರೆಯಾಗುವುದಿಲ್ಲ ಬೆಂದವರೆಲ್ಲ
ಕವಿತೆಯಾಗುವುದಿಲ್ಲ ಕೊರಗಿದ್ದೆಲ್ಲ
ಪಾತರಗಿತ್ತಿ ಮೊದಲಗಿತ್ತಿ ಆಗುವ ಪವಾಡ
ಅದು ಧಾರವಾಡದ ಪೇಡ ಮತ್ತದರ ಕೈವಾಡ
ಅದರ ಸಿಹಿ ಸವಿಯುವ ಭಾಗ್ಯ
ನಮಗೆ ದಕ್ಕಿದೆ
ಅದರ ಪಾಕ ಅವರ ಹಕ್ಕು
ನಮ್ಮದನು ನಾವು ಹುಡುಕಬೇಕಿದೆ
ಒಳ್ಳೆಯ ಕವಿತೆ. ಬೆಂದವರೆಲ್ಲಾ ಕವಿತೆಯಾಗುವುದಿಲ್ಲ… ಒಳ್ಳೆಯ ಸಾಲುಗಳು
Thank you!
ಐದನೇ ಚರಣದ ಮೂರನೇ ಸಾಲನ್ನು ‘ಅಂದ ಗಂಧದ ನಂಟಿರದ ಹೂ’ ಎಂದು ಓದಿಕೊಳ್ಳಬೇಕಾಗಿ ವಿನಂತಿ. ಇಲ್ಲಿ ‘ತಂತ್ರಾಮ್ ಶರಾಕ್ಷಸ’ ನ ಹಾವಳಿಯಿಯಿಂದ ಏನೋ ತಪ್ಪಾಗಿದೆ!