ಜರ್ಮನಿಯಿಂದ ಬಿ ಎ ವಿವೇಕ ರೈ

೧೯ರ ಬೆಳಗ್ಗೆ ಎದ್ದು ನೋಡಿದರೆ ದಟ್ಟ್ಟ ಮಂಜಿನ ಮಬ್ಬು ಮುಸುಕಿದ ಮುಂಜಾನೆ ಇಡೀ ವೂರ್ಜಬರ್ಗ್ ನಗರ ಕೋಟಿನ ಮೇಲೆ ಕೋಟಿನ ಮೇಲೆ ಕೋಟು ತೊಟ್ಟುಕೊಂಡು ೭ ಗಂಟೆಗೆ ಮದುವೆಗೆ ಹೊರಟ ಸಡಗರದಲ್ಲಿದೆ. ಮಧ್ಯಾವಧಿ ರಜೆಯ ಬಳಿಕ ವೂರ್ಜಬರ್ಗ್ ವಿವಿ ತೆರೆದುಕೊಂಡ ದಿನ ಅದು.ಸೊನ್ನೆಯಿಂದ ಸೊನ್ನೆಗೆ ಚಳಿಯ ಶೀತಮಾನ ಇಳಿವ ಹೊತ್ತಿನಲ್ಲಿ ಕಚೇರಿಗಳ ಆರಂಭ ,ತರಗತಿಗಳು ಶುರು ೮ ಗಂಟೆಗೆ. ನಮ್ಮಲ್ಲಾದರೆ ಬೆಚ್ಚನೆ ಹೊದ್ದು ಚಳಿಯ ಸಂಕಥನದ ಪರಸಂಗದ ಹೇಳುವ ಹೊತ್ತು ಅದು.
೧.೩೦ ಲಕ್ಷ ಜನಸಂಖ್ಯೆಯ ವೂರ್ಜಬರ್ಗ್ ನಗರದಲ್ಲಿನ ವೂರ್ಜಬರ್ಗ್ ವಿವಿಯ ವಿಧ್ಯಾರ್ಥಿಗಳ ಸಂಖ್ಯೆ ೨೧ ಸಾವಿರ. ವಿವಿಯ ಸಿಬ್ಬಂದಿ ೧೦ ಸಾವಿರ. ಇವರಲ್ಲಿ ೪೦೦ ಪ್ರಾಧ್ಯಾಪಕರ ಸಹಿತ ೩ ಸಾವಿರ ಮಂದಿ ಶೈಕ್ಷಣಿಕ ಸಿಬ್ಬಂದಿ. ಇವರ ಕುಟುಂಬ, ಇವರ ಸೌಕರ್ಯಕ್ಕಾಗಿ ಇರುವ ಬ್ಯಾಂಕ್ ಗಳು, ಅಂಗಡಿಗಳು -ಹೀಗೆ ಎಲ್ಲಾ ಸೇರಿದರೆ ನಗರದ ಅರ್ಧ ಭಾಗ ವಿಶ್ವ ಕುಟುಂಬಿಗಳು.
ಸಾಂಕೇತಿಕ ಎನ್ನುವಂತೆ ವಿವಿಯ ಮಾನವಿಕ, ಸಾಮಾಜಿಕ ಫ್ಯಾಕಲ್ಟಿಗಳು, ವಿಶಾಲ ಗ್ರಂಥಾಲಯ ಎಲ್ಲ ಬೆಟ್ಟದ ತುದಿಯಲ್ಲಿವೆ. ನಾನೇರುವೆತ್ತರಕೆ ನೀನೇರಬಲ್ಲೆಯಾ? ಎನ್ನುವ ಸವಾಲು. ಇಂಡಾಲಜಿ ವಿಭಾಗಕ್ಕೆ ದಿನಾ ಏರುವಾಗ ನನಗೆ ನೆನಪು ಮಾತ್ರ ಅಲ್ಲ, ಶಾಸ್ತ್ರ ಶ್ರೀ ಗಿರಿಯನ್ನು ಆರೋಹಣ ಮಾಡುವ ಬೌದ್ಧಿಕ ಆಯಾಸವು ಹೌದು. ಬೆಟ್ಟದ ಮೇಲೊಂದು ವಿವಿ ಮಾಡಿ ಚಳಿಗೆ ಅಂಜಿದೊಡೆ ಎಂತಯ್ಯ?
೨೦ರ ಮಂಗಳವಾರ ಬೆಳಗ್ಗೆ ವಿದ್ಯಾರ್ಥಿಗಳು ತಮ್ಮ ಹೊಸ ವರ್ಷದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ‘ಸ್ವಯಂವರ’ದ ಪ್ರಸಂಗ. ಹಾಲಿನಲ್ಲಿ ವಿದ್ಯಾರ್ಥಿಗಳು ಕಿಕ್ಕಿರಿದು ತುಂಬಿದ್ದರು.ಅಧ್ಯಾಪಕರಿಗೆ ಕುಳಿತುಕೊಳ್ಳಲು ಕುರ್ಚಿಗಳು ಇರಲಿಲ್ಲ. ಕುರ್ಚಿ ಬಿಟ್ಟ ನನಗೆ ನಿಂತುಕೊಳ್ಳುವುದು ಕಷ್ಟವಾಗಲಿಲ್ಲ. ಎಲ್ಲ ಸೇರಿ ೭ ಅಧ್ಯಾಪಕರು ಇದ್ದೆವು. ಎಲ್ಲ ಜರ್ಮನ್ ಭಾಷೆಯಲ್ಲಿ ಮಾತುಕತೆ. ಕನ್ನಡದ ಸರದಿ ಬಂದಾಗ ಇಂಗ್ಲೀಷಿನಲ್ಲಿ ಮಾತಾಡಿದೆವು. ಎಲ್ಲ ಜರ್ಮನ್ ವಿದ್ಯಾರ್ಥಿಗಳು. ಕನ್ನಡಕ್ಕಾಗಿ ಕೆಲವರು ಕೈ ಎತ್ತಿದರು. ಅವರ ಕೈ ಕಲ್ಪವೃಕ್ಷ ಆಗಲಿ ಎಂದು ನಾನು ಅಂದುಕೊಂಡೆ.
ಕನ್ನಡವನ್ನು ಹೊಸತಾಗಿ ಕಲಿಯುವ ತಂಡ ಒಂದನೆಯದು. ಈಗಾಗಲೇ ಕನ್ನಡ ಕಲಿತು ೪ನೆ ಸೆಮಿಸ್ಟರ್ ನಲ್ಲಿ ಕನ್ನಡ ಕಲಿಯುವ ತಂಡ ಎರಡನೆಯದು. ಕನ್ನಡ ಓದಲು ಬರೆಯಲು ಅಭ್ಯಾಸ ಆಗಿ ಕಥೆಯಂತಹ ಸಾಹಿತ್ಯ ಓದಲು ತೊಡಗಿರುವ ತಂಡ ಮೂರನೆಯದು.. ಜೊತೆಗೆ ಹೊಸತಾಗಿ ಇಲ್ಲಿ ಆರಂಭಿಸುತ್ತಿರುವ ವಿಷಯ -‘ಕರ್ನಾಟಕ ಅಧ್ಯಯನ.’
ಕನ್ನಡದ ಮೊದಲ ತಂಡಕ್ಕೆ ಎಂಟು, ಪ್ರೌಢರ ಎರಡನೆಯ ಗುಂಪಿಗೆ ಐದು, ಕನ್ನಡ ಜಾಣರ ಮೂರನೆಯ ಟೀಮಿಗೆ ಐದು ಮಂದಿ ಸೇರಿದ್ದಾರೆ.. ಕರ್ನಾಟಕಅಧ್ಯಯನವನ್ನು ಕನ್ನಡ ಮತ್ತು ಇಂಗ್ಲೀಷಿನಲ್ಲಿ ಹೆಚ್ಚು ಜನಪ್ರಿಯಗೊಳಿಸಲು ಮುಂದಿನ ಸೋಮವಾರ ಆಸಕ್ತರ ಸಭೆ ಕರೆದಿದ್ದೇವೆ. ಸಾಕಷ್ಟು ಜರ್ಮನ್ ವಿದ್ಯಾರ್ಥಿಗಳು ಈ ವಿಷಯದ ಬಗ್ಗೆ ಆಸಕ್ತಿ ತೋರಿಸಿದ್ದಾರೆ.
ಕನ್ನಡದ ಈ ಎಲ್ಲ ಸಾಹಸಗಳ ಹಿಂದಿನ ಚಾಲಕ ಶಕ್ತಿ ಇಂಡಾಲಜಿ ವಿಭಾಗ. ಇದರ ಪ್ರಾಧ್ಯಾಪಕಿ, ಮುಖ್ಯಸ್ಥೆ ಪ್ರೊ.ಹೈಡ್ರೂನ್ ಬ್ರೂಕ್ನರ್. ನನ್ನಂತಹ ಅತಿಥಿಗಳ ಬೇಕುಬೇಡ ನೋಡುತ್ತಾ, ಸಭೆಗಳಲ್ಲಿ ಭಾಗವಹಿಸುತ್ತಾ, ವೇಳಾಪಟ್ಟಿ ಹೊಂದಿಸಿಕೊಳ್ಳುತ್ತಾ, ನನಗೆ ಅನ್ನ ಮೀನುಸಾರು ಅಡಿಗೆ ಮಾಡಿಕೊಡುತ್ತಾ ಹೀಗೆ ಲೌಕಿಕ-ಶೈಕ್ಷಣಿಕಗಳ ನಡುವೆ ಹೊಂದಾಣಿಕೆ ಮಾಡುತ್ತಾ ಕನ್ನಡವನ್ನು ವಿವಿಯಲ್ಲಿ ಬೆಳೆಸಲು ಮಾಡುತ್ತಿರುವ ಪ್ರಯತ್ನ, ಕನ್ನಡ ರಾಜ್ಯೋತ್ಸವದ ಗದ್ದಲವಿಲ್ಲದೆ ಇಲ್ಲಿ ನಡೆಯುತ್ತಿದೆ.
ನಿನ್ನೆ ದಿನ ,ಶುಕ್ರವಾರ, ಅಕ್ಟೋಬರ ೨೩ ಕನ್ನಡದ ಮೊದಲ ವಿದ್ಯಾರ್ಥಿಗಳಿಗೆ ನನ್ನ ಮೊದಲ ತರಗತಿ. ಏಳು ಜರ್ಮನ್
ವಿದ್ಯಾರ್ಥಿಗಳು -ಆರು ಹುಡುಗಿಯರು :ಮರ್ತಿನಾ, ಲೌರಾ, ನಾದಿಯಾ, ಲೀಸಾ, ಮರಿಯಾ, ಫ್ರಿಡೆರಿಕಾ. ಒಬ್ಬನೇ ಹುಡುಗ-ಸ್ಟೆಫಾನ್. ಇನ್ನೊಬ್ಬಳು ಮುಂದಿನ ವಾರ ಬರುತ್ತೇನೆ ಎಂದಿದ್ದಾಳೆ.
ಮೈಸೂರಿನ ಸಿ.ಐ.ಐ.ಎಲ್.ನಲ್ಲಿ ಲಿಂಗದೇವರು ಹಳೆಮನೆ ಸಿದ್ಧಪಡಿಸಿದ ‘ಭಾಷಾ ಮಂದಾಕಿನಿ’ ಯೋಜನೆಯ ‘ದ್ರಾವಿಡ ಭಾಷೆಗಳಲ್ಲಿ ಕನ್ನಡ ಭಾಷೆ’ ಡಿವಿಡಿ ತೋರಿಸಿದೆ. ಬಳಿಕ ಸರಳ ಸರಸ ಮಾತುಕತೆ ಸುರುಮಾಡಿದೆ.ಒಂದೂವರೆ ಗಂಟೆಯ ಬಳಿಕ ಅವರಿಗೆಲ್ಲ ‘ನಾನು ಯಾರು ‘ನೀನು ಯಾರು’ ‘ಅವನು ಮತ್ತು ಅವಳು ಯಾರು’ ಎಂದು ಗೊತ್ತಾಯಿತು. ಅವರೆಲ್ಲ ಕನ್ನಡದಲ್ಲಿ ನಾಲ್ಕು ಮಾತು ನವಂಬರ್ ಒಂದರ ಮೊದಲೇ ಆಡಿದರು ಮತ್ತು ನವಂಬರ್ ಬಳಿಕವೂ ಆಡುವ ವಿಶ್ವಾಸ ಪಡೆದರು.
ನಾನು ಯಾರು ಮತ್ತು ನೀನು ಯಾರು ಎನ್ನುವ ತತ್ವಜ್ಞಾನದ ಪ್ರಶ್ನೆಗಳಿಗೆಲ್ಲ ಸ್ಪೂರ್ತಿ, ಪರಸ್ಪರ ಒಬ್ಬರು ಇನ್ನೊಬ್ಬರೊಡನೆ ನಗುಮುಖದಿಂದ ಮಾತನಾಡಲು ತೊಡಗುವುದು. ಅದೇ ನಮ್ಮಲ್ಲಿ ಸಾಧ್ಯವಾಗದಿದ್ದರೆ ನಮ್ಮ ಭಾಷೆಗೆ , ನಮ್ಮ ಸಿದ್ಧಾಂತಗಳಿಗೆ , ತತ್ವಜ್ಞಾನಕ್ಕೆ ಏನು ಬೆಲೆ?

ಬೆಟ್ಟದ ಮೇಲೊಂದು ವಿವಿ ಮಾಡಿ ಚಳಿಗೆ ಅಂಜಿದೊಡೆ ಎಂತಯ್ಯ?
ನಿಮಗೆ ಇವೂ ಇಷ್ಟವಾಗಬಹುದು…





ಅಭಿನಂದನೆಗಳು
ಜೈ ಕನ್ನಡ.
ಜೈ ಕರ್ನಾಟಕ ಮಾತೆ
ಪ್ರೀತಿಯ ವಿವೇಕ ರೈ
ಹೊಸ ಎತ್ತರಕ್ಕೆ ಏರಿ’
‘ಆರೋಹಣ’ ತಂಡದ ಹಾರೈಕೆ.
ಪ್ರೀತಿಯಿಂದ
ಪಂಡಿತಾರಾಧ್ಯ
sir
khushiyayitu. kannadada bhavutannu germanyalli
haarisuttiddeeri. thanq sir samasta kannadigara
paravagi.
nimma
byregowda
Khushi aythu. illi kannada kalibeka bedva annuva kaaladalli, alli heege kannada belitha irodu santosha.
Mattashtu haaraikegalu.
Ashwini