ಶಿವಾನಂದ ತಗಡೂರು
ಅಲ್ಲೊಂದು ಮಹಾನಗರ
ಬೈಕು, ಆಟೊ, ಮೆಟ್ರೋ, ರೈಲು, ಬಸ್, ಲಾರಿಗಳ ಕಾರು-ಬಾರು
ದಾರಿಯುದ್ದಕ್ಕೂ ಜನಸಂದಣಿ
ಟ್ರಾಪಿಕ್ ಸಿಗ್ನಲ್ ಗಳ ಪಿರಿಪಿರಿ
ಹೋಟೆಲ್ ಮಾಲು-ಮಹಲುಗಳ
ನಡುವೆ ಉಳ್ಳವರ ಐಷಾರಾಮಿ ಬದುಕು, ಉಳ್ಳದವರ ಹೋರಾಟದ ಬವಣೆ;
ಬಣ್ಣ ಬೆಡಗು ಭಿನ್ನಾಣದ ಮೋಹಕ್ಕೆ ಮಾರು ಹೋದ
ಜನಜಂಗುಳಿ
ತುತ್ತು ತುತ್ತಿಗೂ ತೂಕದ ಲೆಕ್ಕ
ಬಗೆ ಬಗೆಯ ಊಟ, ಜೂಜು, ಮೋಜು ಮಸ್ತಿಯ ಕೂಟ
ಲೋಹದ ಹಕ್ಕಿಗಳ ಹಾರಾಟ;
ಇನ್ನು….., ಹೀಗೆಯೇ ಬದುಕೆಂಬುದು
ಸೈಟ್, ಪ್ಲಾಟು, ಕಾರು – ಕಂಪ್ಯೂಟರ್ ಗಳ ಮಾರುಕಟ್ಟೆ – ಕಂಪನಿಗಳ ಪೈಪೋಟಿಯ ಲೆಕ್ಕಾಚಾರ
ಕನ್ನಡದ ನೆಲವೀಗ
ಕಾರ್ಪೊರೇಟ್ ಕಲ್ಚರ್ ನ
ಇಂಗ್ಲಿಷ್ ನ ವಸಾಹತು
ಅವರಿಗಷ್ಟೆ ನೌಕರಿ ಮೀಸಲು
ಈ ನಾಡ ರಂಗನೇ
ಇಲ್ಲಿ ಪರಕೀಯ !
ನಮ್ಮವ್ವನಿಗೂ ಬೆರಗಿನೂರು
ನನ್ನದಲ್ಲ ಅಂತಲೇ ಅನ್ನಿಸಿತು
ಬೆಂಗಳೂರು ಬ್ರಹ್ಮ ರಾಕ್ಷಸ
ಅದೆಷ್ಟು ಲಾರಿ ಲೋಡು ಅಕ್ಕಿ, ಬೇಳೆ, ದಿನಸಿ, ಹಾಲು, ತರಕಾರಿ
ನಿತ್ಯವೂ ಸರಬರಾಜು, ಕಾವೇರಿ ನೀರು ಇಲ್ಲಿಗೆ ಹೆಚ್ಚು ಹರಿವಳು
ಎಷ್ಟು ನೀಡಿದರೂ ತೀರದು
ಹೊಟ್ಟೆ ತಂಬಿದವರ ದಾಹ
ಕತ್ತಲ ಜೋಪಡಿಗಳಿಗೆ ಕತ್ತಲೆಯೆ ಸಂಗಾತಿ
ಕೊಳ್ಳುಬಾಕರ ಬಾವಿ.
ಜಗಮಗಿಸುವ ಮನೆ ಮಹಲುಗಳಿಗೆ ಬೆಳಕಿನ ವಾಕರಿಕೆ
ಕಾರ್ಮಿಕರ ಬೆವರ ಕಾಲುವೆಯಲ್ಲಿ ಮಾಲೀಕರ
ಮೋಜಿನ ಈಜಾಟ
ಕಾಂಕ್ರೀಟ್ ನಗರಿಯೊಳಗೆ
ಮಾನವೀತೆಯ ಹೆಣದ ಮೆರವಣಿಗೆ
ನನ್ನ ಬೆಂದ ಕಾಳೂರು
ಎಂದೋ ಬೆಂದು ಹೋಗಿದೆ.
ಅಭಿವೃದ್ಧಿಯ ಬಡಬಡಿಕೆಗಳಿಂದ.ಜಗದ ಸುಂದರಿಯಾಗುವ ಮೋಹದಿಂದ .
ನಳನಳಿಸುವ ನಗರವಾಗುವ ನರಳಾಟದಿಂದ
ಇಲ್ಲಿ ಮನುಷ್ಯರಿಗಿಂತ ಯಂತ್ರಗಳು – ಗಡಿಯಾರಗಳು
ಮಾತಾಡುತ್ತವೆ
ಎದೆಯ ಮಾತುಗಳೂ
ಆಟೋರಿಕ್ಷಾದ ಮೀಟರ್ ನಂತೆ ಚಲಿಸುತ್ತವೆ.
ಈ ಬೆಂಗಳೂರು ಈಗ ನನ್ನ ಬೆಂದಕಾಳೂರೇ ಆಗಿ ಕಾಣುತ್ತಿದೆ.
ಕೊರೊನಾ ಕಾಟಕ್ಕೆ ಸಟ್ಟನೆ
ಬದಲಾಗಿಬಿಟ್ಟಿತು.
ಜೀವಕ್ಕೆ ಹೆದರಿದ ಗೂಡಿದ್ದ ಜನ
ಗೂಡು ಸೇರಿಕೊಂಡರು
ಬೀದಿಯ
ನನ್ನ ಜನ ಆಗಲೂ ಬೀದಿಯಲ್ಲಿಯೆ ಇದ್ದರು,
ಹಸಿವ ತಬ್ಬಿಕೊಂಡು
ಪೊಲೀಸ್ ಲಾಟಿಗೆ ಮೈವೊಡ್ಡಿಕೊಂಡು
ದಾರಿ ಸವೆದರು
ಬೆಂಗಳೂರಿಗೊಂದು ಗುಡ್ ಬೈ ಹೇಳಿ..
ಬೆಂಗಳೂರು ಹಿಂದಿನಂತಿಲ್ಲ.
ಎಲ್ಲೆಲ್ಲೂ ನಿಶ್ಯಬ್ದ,
ಸ್ಮಶಾನ ಮೌನ
ಈಗಿಲ್ಲ ಟ್ರಾಫಿಕ್ ಜಾಮ್, ಮಾಲಿನ್ಯದ ಹರಾಕಿರಿ
ಪ್ರಾಣಿ- ಪಕ್ಷಿಗಳಿಗೂ ಸ್ವಾತಂತ್ರ್ಯ ದಕ್ಕಿದೆ
ಸುಯ್ಯೊ ಗಾಳಿ ಸೊಂಪಾಗಿದೆ.
ಸತ್ತ ಮಾನವತೆ ಮತ್ತೆ ನಡೆದಾಡುತ್ತಿದೆ
ಗಲ್ಲಿ ಗಲ್ಲಿಗೆ ,ಎದೆ ಎದೆಗೆ , ಮನೆ ಮನೆಗೆ ಅನ್ನ ಬಟ್ಟೆ, ಮಾಸ್ಕ್, ಸ್ಯಾನಿಟೈಸರ್ , ಔಷಧಿ….ಹೀಗೆ…ಮಾನವತೆಯ ಮಹಾಪಯಣ…
ಕಾಲಕ್ಕೊಂದು ನಮಸ್ಕಾರ
ನನ್ನ ಬೆಂದಕಾಳೂರು ನನಗೆ ದಕ್ಕಿಸಿಕೊಟ್ಟಿದ್ದಕ್ಕೆ.
ಸಮಯ ಕ್ಕೆ ಹೇಳಿ ಮಾಡಿಸಿದ ಪದ ಗುಚ್ಛ ಗಳ ಸರಿ -ಗಮ-ಪದ -ನಿಸ- ಕಾವ್ಯ ಸo ಗ ಮ. ಕವಿಗೆ ನಮನಗಳು. ನಿಲ್ಲದೆ ಸಾಗಲಿ ಈ ಪಯಣ.. ಶುಭಾಶಯಗಳು
ಹೀಗೆ ದಕ್ಕಬೇಕಿತ್ತೆ!