ಕೃಷ್ಣ ಶ್ರೀಕಾಂತ ದೇವಾಂಗಮಠ
ಮುಚ್ಚಿದ ಕಣ್ಣುಗಳಲ್ಲಿ
ತೆರೆದ ಜಗತ್ತಿನ ಒಳಹೊರಗುಗಳು
ಬೆನ್ನ ಹಿಂದೆ ಇರಿಯುವ ಕೈಗಳು
ಬೆಕ್ಕಿನ ನಡಿಗೆಯ ಹೆಜ್ಜೆಗಳು
ಧ್ಯಾನಸ್ಥನಿಗೆ ದಕ್ಕುತ್ತವೆ.
ಕಳ್ಳಿ ಹಾಲಿನಂಥ ಸುಳ್ಳುಗಳನ್ನು 
ಗಂಡು ಮುಳ್ಳಿನಂಥ ಹಿಂಸೆಯನ್ನು
ಹತ್ತಿರ ಸುಳಿಯದಂತೆ ಹತ್ತಿಕ್ಕುತ್ತಾನೆ.
ಋಷಿಗಳ ತಪಸ್ಸು ಕೆಡಿಸಲು
ಕಾದು ಕೂತ ಮಾಯೆಗಳಂತೆ
ಮನದ ಶಾಂತಿ ಕದಡಲು
ಭುಜವೇರಿ ಕುಳಿತ ಮಂಡೂಕ
ಗೊತ್ತಿಲ್ಲ ಅದಕೆ ಶಾಂತಿಧೂತನ ಆತ್ಮಸ್ಥೈರ್ಯ ಸದಾ ಕುಲುಮೆಯಲ್ಲಿ ಬೇಯುವ ಅವನ ಸಿಟ್ಟುಗಳ ಬಗ್ಗೆ.
ಜೀಹ್ವೆಯ ಚಾಚಿ ಮಿಡತೆಯ ನುಂಗಿ
ಬುಸುಗುಡುವ ಶಬ್ದಕ್ಕೆ ನಡುಕ
ಇದಕ್ಕೂ ರೆಕ್ಕೆ ಹಕ್ಕಿಯ ಭಯ
ಸಾವು ಅಳುಕಿನ ನೆರಳು
ನಿರ್ಭಯ ಸ್ಥಿತಿಗೆ ಶಾಂತಿಯ ಅಭಯ.
ಕಲ್ಲು ಪ್ರತಿಮೆ ಪ್ರಶಾಂತತೆಯನ್ನ
ತನ್ಮಯತೆಯಿಂದ ಧ್ಯಾನಿಸಲು
ತದೇಕ ಚಿತ್ತದಲ್ಲಿ ಕ್ರೂರತೆ ನರಳುತ್ತದೆ
ಶಿಲಾಪಾಚಿಗೆ ಕಪ್ಪೆರಾಯನ ಎಂಜಲು ತಾಗಿ
ಮೌನ ಸಂಭಾಷಣೆ ಜರುಗಿ
ಬುದ್ದನ ಪ್ರಾಣ ಪ್ರತಿಷ್ಠಾಪನೆ.
ಜೀವ ಬಂದ ಅವನ ಸುತ್ತ
ನೀರವ ಮೌನ
ಮತ್ತೆ ಕಣ್ಣು ಮುಚ್ಚಿ ಧ್ಯಾನಸ್ಥನಾಗುತ್ತಲೇ
ಜಗಕ್ಕೆ ಮಂಡೂಕ ಶಾಂತಿ ರೂವಾರಿ.





very nice