ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ ಎಸ್ ಲಿಂಗದೇವರು ಕಂಡಂತೆ ‘ನಾಟಿ ಬೀಜ’

ಬಿ ಎಸ್ ಲಿಂಗದೇವರು

ಆದಿತ್ಯ ಸದಾಶಿವರವರು ದೃಶ್ಯ ಮಾಧ್ಯಮದ ಮೇಲೆ ಇಟ್ಟಿರುವ ದೃಡವಾದ ನಂಬಿಕೆಯ ಪ್ರತಿಫಲ ‘ನಾಟಿ ಬೀಜ’ ಎಂಬುದು ನನ್ನ ಭಾವನೆ. ದೃಶ್ಯ ಮಾಧ್ಯಮವು ತಂತ್ರಜ್ಞಾನ ಒಳಗೊಂಡಂತೆ ದೃಶ್ಯಗಳನ್ನು ಕಟ್ಟುವ ಕ್ರಮದಲ್ಲಿಯೂ ವಿಕಾಸ ಆಗ್ತಾ ಇರುವ ಈ ಕಾಲಘಟ್ಟದಲ್ಲಿ ನಮಗೆ ಅನೇಕ ವಿಸ್ಮಯಕರ ಸಂಗತಿಗಳು, ಘಟನೆಗಳು ಪರಿಚಯ ಆಗುತ್ತಿವೆ, ಈ ಹಿನ್ನೆಲೆಯಲ್ಲಿ ‘ನಾಟಿ ಬೀಜ’ ವಿಶೇಷವಾದ ಸಾಕ್ಷ್ಯಚಿತ್ರ.

ಕಳೆದ ನವೆಂಬರ್ ನಲ್ಲಿ ನನಗೆ YouTube ಲಿಂಕ್ ಕಳುಹಿಸಿ ನನ್ನ ಮಗ ಈ ಸಾಕ್ಷ್ಯಚಿತ್ರ ಮಾಡಿದ್ದಾನೆ ನೋಡಿ ತಮ್ಮ ಅಭಿಪ್ರಾಯ ತಿಳಿಸಿ ಎಂದು ಆದಿತ್ಯ ಸದಾಶಿವರವರ ತಂದೆ ಮೆಸೇಜ್ ಮಾಡಿದ್ರು, (ನಾನು ಅವರ ತಂದೆಯ ಹೆಸರನ್ನು ಉದ್ದೇಶಪೂರ್ವಕವಾಗಿ ಪ್ರಸ್ತಾಪ ಮಾಡಿಲ್ಲ, ತಂದೆ ಪ್ರಸಿದ್ಧ ಚಿತ್ರ ಕಲಾವಿದರು. ಅವರ ಹೆಸರು ತಂದರೆ ಮಗನ ಅದ್ಭುತ ಕೆಲಸವನ್ನು ನೋಡುವ ದೃಷ್ಟಿಕೋನ ಬದಲಾದೀತೆಂಬ ಎಂಬ ಉದ್ದೇಶದಿಂದ ಅಷ್ಟೇ) ಕಳೆದ ಸೆಪ್ಟೆಂಬರ್ ನಿಂದ ‘ವಿರಾಟಪುರ ವಿರಾಗಿ’ ಸಿನಿಮಾ ಸ್ಕ್ರಿಪ್ಟ್ ತಯಾರಿ ಆರಂಭಿಸಿದ್ದರಿಂದ ಆಗ ಗಮನ ಕೊಡಲು ಸಾಧ್ಯವಾಗಲಿಲ್ಲ ಮತ್ತು ಏಕಾಗ್ರತೆ ಭಂಗ ಆಗುತ್ತೆ ಎನ್ನುವ ಭಯ ಕೂಡ ಇತ್ತು.

ಏಪ್ರಿಲ್ ನಲ್ಲಿ ನನ್ನ ಸಿನಿಮಾ ಸ್ಕ್ರಿಪ್ಟ್ ಮುಗಿಸಿ ಚಿತ್ರೀಕರಣದ ಪೂರ್ವೋತ್ತರ ಕೆಲಸಗಳು ಆರಂಭಿಸಿದ್ದೆ, ಆದರೆ ಈ ಕರೋನ ಹೆಮ್ಮಾರಿ ಮತ್ತೆ ಬಂದು ವಕ್ಕರಿಸಿ ನಾಲ್ಕಾರು ಸಂಬಂಧಿಗಳು, ಸ್ನೇಹಿತರು ಬಲಿಯಾಗಿದ್ದಲ್ಲದೇ ಕೆಲವರು ಆಸ್ಪತ್ರೆ ಸೇರಿದ್ದು, ಇನ್ನೂ ಕೆಲವರ ಇಡೀ ಕುಟುಂಬಕ್ಕೆ ಹೆಮ್ಮಾರಿ ಬಂದಿರೋದು ನನ್ನ ಮನಸ್ಸಿನ ಮೇಲೆ ಆಘಾತ ತಂದಿತ್ತು. ಒಂದು ರೀತಿಯ ಖಿನ್ನತೆ ಆರಂಭ ಆಗಿತ್ತು. ಇಂತಹ ಸಮಯದಲ್ಲಿ ನನ್ನ ಬಂಧುಗಳಾದ ಚಿಕ್ಕರಿಯಪ್ಪನವರು ಒಂದು ಲಿಂಕ್ ಕಳುಹಿಸಿ ಈ ಸಾಕ್ಷ್ಯಚಿತ್ರ ನೀನು ನೋಡಬೇಕು ಅಂತ ಹೇಳಿದ್ದರಿಂದ ಅವರ ಮೇಲಿನ ಗೌರವಕ್ಕಾಗಿ ನಾಟಿ ಬೀಜ ನಿನ್ನೆ ನೋಡಲು ಆರಂಭಿಸಿದಾಗ ಸಣ್ಣ ಪ್ರಮಾಣದ ಹಿಂಜರಿಕೆ ಆಯ್ತು..

ಒಂದೂವರೆ ಗಂಟೆ ಅವಧಿ ಅಂತ ಇದ್ದುದರಿಂದ ಈ ಹಿಂಜರಿಕೆ! ಆದರೂ ಒತ್ತಾಯ ಪೂರ್ವಕವಾಗಿ ನೋಡಲು ಕುಳಿತೆ. ಆರಂಭದಲ್ಲಿಯೇ ಇದು ನನ್ನ ಸೆಳೆಯಿತು ಮತ್ತು ಸಂಪೂರ್ಣ ಸಾಕ್ಷ್ಯಚಿತ್ರ ನೋಡಿದ ಮೇಲೆ ನನ್ನ ಖಿನ್ನತೆ ಶಮನ ಆಗಿ, ತಕ್ಷಣ ನನ್ನ ಸಿನಿಮಾದ ನಿರ್ಮಾಪಕರಿಗೂ ಲಿಂಕ್ ಕಳುಹಿಸಿ ದಯವಿಟ್ಟು ನೋಡಿ ಎಂದು ವಿನಂತಿ ಮಾಡಿದೆ ಮತ್ತು ಇವತ್ತಿನಿಂದ ಮತ್ತೆ ನಮ್ಮ ಸಿನಿಮಾದ ಕೆಲಸ ಮತ್ತೆ ಆರಂಭ ಮಾಡುವೆ ಅಂತ ಹೇಳಿದೆ. ಅಷ್ಟರ ಮಟ್ಟಿಗೆ ನನ್ನ ಮೇಲೆ ಪ್ರಭಾವ ಬೀರಿದ ಸಾಕ್ಷ್ಯಚಿತ್ರ ನಾಟಿ ಬೀಜ

ಇನ್ನು ನಾಟಿ ಬೀಜ ವಸ್ತುವಿನ ಬಗ್ಗೆ ಹೇಳುವುದಾದರೆ, ಇದು ಜಿ ಎಚ್ ಕಾಶೀನಾಥ್ ಎಂಬುವರ ಜೀವನ ಚರಿತ್ರೆ ಆಧರಿಸಿದ್ದು. ಕಾಶೀನಾಥ್ ಒಬ್ಬ ರೈತನಾಗಿದ್ದು, ಹೆಚ್ಚು ವಿಧ್ಯಾಭ್ಯಾಸವಿಲ್ಲದೆ ಸಮಾಜದಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತಂದು ಅಜ್ಜಂಪುರ ತಾಲ್ಲೂಕಿನ ಗಿರಿಯಾಪುರ ಮತ್ತು ಸುತ್ತ ಮುತ್ತಲಿನ ಗ್ರಾಮಗಳ ರೈತರ ಬದುಕಿಗೆ ಹೊಸ ಆಯಾಮ ಕೊಟ್ಟಂತವರು.

ದೃಶ್ಯ ಸೌಂದರ್ಯ ಮತ್ತು ಸಾಕ್ಷ್ಯಚಿತ್ರ ಕಟ್ಟುವಿಕೆ, ರಚನೆ ಬಗ್ಗೆ ಆಸಕ್ತಿ ಇರುವವರು ಮತ್ತು ಸಾಕ್ಷ್ಯಚಿತ್ರನ ಎಂದು ಮೂಗು ಮುರಿಯವವರು ದಯವಿಟ್ಟು ನೋಡಿ.

ಜಿ ಎಚ್ ಕಾಶೀನಾಥ್ ರವರು ನಮ್ಮೊಳಗೆ ಇರುವುದು ನಮ್ಮೆಲ್ಲರ ಹೆಮ್ಮೆ ಮತ್ತು ಅವರನ್ನು ದೃಶ್ಯ ಮಾಧ್ಯಮದ ಮೂಲಕ ಪರಿಚಯಿಸಿದ ಆದಿತ್ಯ ಸದಾಶಿವರವರವರಿಗೆ ಅಭಿನಂದನೆಗಳು.

‍ಲೇಖಕರು Avadhi

8 May, 2021

1 Comment

  1. ಸಂಗೀತ ರವಿರಾಜ್

    ಉತ್ತಮವಾದ ಚಿತ್ರ ವಿಶ್ಲೇಷಣೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading