ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ ಎಂ ಬಷೀರ್ ಕಥೆ: ಪಯಣ

ರೈಲುಗಾಡಿ ವೇಗವನ್ನು ಪಡೆಯುತ್ತಿದ್ದಂತೆಯೇ ಅವರ ಮಾತಿನ ತಿಕ್ಕಾಟವೂ ತೀವ್ರ ರೂಪವನ್ನು ಪಡೆಯತೊಡಗಿತ್ತು. ಓರ್ವ ವೃದ್ದ ಮತ್ತು ಇನ್ನೊಬ್ಬ ಮಧ್ಯಮ ವಯಸ್ಸಿನ ಸಣಕಲ ಕುಳಿತುಕೊಳ್ಳುವ ಆಸನದ ವಿಷಯದಲ್ಲಿ ಕಿತ್ತಾಡಿಕೊಳ್ಳುತ್ತಿದ್ದರು. ಅದು ಫಸ್ಟ್‌ಕ್ಲಾಸ್ ಬೋಗಿ. ಯಾವುದೋ ತಾಂತ್ರಿಕ ಸಮಸ್ಯೆಯಿಂದ ಅವರಿಬ್ಬರ ಆಸನ ಅದಲು ಬದಲಾಗಿತ್ತು. ವೃದ್ಧರಿಗೆ ಸಿಕ್ಕಿದ ಆಸನದ ಒಂದು ಭಾಗ ಹರಿದು ಹೋಗಿದ್ದು ಆತ, ಎದುರಿನ ಆಸನದ ಮಧ್ಯವಯಸ್ಕನೊಂದಿಗೆ ಜಗಳಕ್ಕೆ ನಿಂತಿದ್ದರು. ‘‘ಅದು ನನ್ನ ಜಾಗ. ತಕ್ಷಣ ಅದರಿಂದ ಎದ್ದೇಳಬೇಕು’’ ಏದುಸಿರು ಬಿಡುತ್ತಾ ಜೋರಾಗಿ ಒದರಿದರು.

ಮಧ್ಯ ವಯಸ್ಕನೋ ಆಸನದಿಂದ ಏಳುವ ಲಕ್ಷಣವಿಲ್ಲ. ತಲೆಯೆತ್ತಿ ವೃದ್ಧರನ್ನು ಕೆಕ್ಕರಿಸಿ ನೋಡಿ ಹೇಳಿದ ‘‘ನೀವು ಹೋಗಿ…ರೈಲ್ವೇ ಸಿಬ್ಬಂದಿಯನ್ನು ಕರಕೊಂಡು ಬನ್ನಿ…ಮತ್ತೆ ನೋಡುವ…’’ ಎನ್ನುತ್ತಾ ಉಡಾಫೆಯಿಂದ ಯಾವುದೋ ಆಂಗ್ಲ ಪತ್ರಿಕೆಯನ್ನು ಬಿಡಿಸತೊಡಗಿದ.

ವೃದ್ಧರು ಸಿಟ್ಟಿನಿಂದ ಕಂಪಿಸುತ್ತಿದ್ದರು.

ಅಷ್ಟರಲ್ಲಿ ಅವರ ಬಲಭಾಗದ ಸೀಟಿನಿಂದ ಮಾತೊಂದು ತೂರಿ ಬಂತು ‘‘ಹಟ ಹಿಡಿಯುವುದಕ್ಕೆ ಇದೇನೂ ಸ್ವಂತ ಮನೆಯೇನೂ ಅಲ್ಲವಲ್ಲ…ಒಂದು ರಾತ್ರಿ ಕಳೆದರೆ ಈ ಗಾಡಿಯಿಂದ ಎಲ್ಲರೂ ಅವರವರ ನಿಲ್ದಾಣದಲ್ಲಿ ಇಳಿಯಲೇ ಬೇಕು. ತುಸು ಹೊಂದಾಣಿಕೆ ಮಾಡಿಕೋಬಾರದೆ…’’

ವೃದ್ಧ ಧ್ವನಿ ಬಂದತ್ತ ಹೊರಳಿದರು. ತರುಣನೊಬ್ಬ ಕುಳಿತಿದ್ದಾನೆ. ಆತನ ಮುಖದಲ್ಲಿ ಕಂಗೊಳಿಸುತ್ತಿರುವ ನಗು ವೃದ್ಧರನ್ನು ಇನ್ನಷ್ಟು ಸಿಟ್ಟಿಗೆಬ್ಬಿಸಿತು.

‘‘ಹಾಗಾದರೆ ನೀ ಬಂದು ಈ ಸೀಟಲ್ಲಿ ಕುಳಿತುಕೋ…’’ ವೃದ್ಧ ಸಿಟ್ಟಿನಿಂದ ಕಂಪಿಸುತ್ತಾ ಅಬ್ಬರಿಸಿದರು.

‘‘ಸರಿ ಹಾಗೇ ಮಾಡೋಣ…’’ ಎಂದು ಅದೇ ಮುಗುಳ್ನಗೆಯೊಂದಿಗೆ ತರುಣ ತನ್ನ ಬ್ಯಾಗ್‌ನೊಂದಿಗೆ ಎಡಭಾಗಕ್ಕೆ ಬಂದ. ಅಷ್ಟೇ ಅಲ್ಲ, ವೃದ್ಧರ ಬ್ಯಾಗುಗಳನ್ನು ಜೋಪಾನ ಎತ್ತಿ ಬಲಭಾಗದ ಸೀಟಿನ ಮೇಲೆ ಇಟ್ಟ.

ಆ ಮೇಲೆ ರೈಲು ಗಾಡಿಯ ಚಲನೆಯನ್ನು ಬಿಟ್ಟರೆ, ಆ ಭೋಗಿಯಲ್ಲಿ ಬೇರೆ ಸದ್ದುಗದ್ದಲವಿಲ್ಲ್ಲ. ಮಾತಂತೂ ಇಲ್ಲವೇ ಇಲ್ಲ. ಯುದ್ಧದನಂತರದ ರಣರಂಗದಂತೆ. ಎಲ್ಲರೂ ನಿದ್ದೆಗೆ ಅಣಿಯಾದರು. ಬೋಗಿಯೊಳಗಿನ ಬೆಳಕು ಆರಿತು. ಅವರೆಲ್ಲ ಚಲಿಸುತ್ತಿರುವ ತೊಟ್ಟಿಲೊಂದರಲ್ಲಿ ನಿದ್ದೆಗೆ ಶರಣಾದ ಕಂದಮ್ಮಗಳಂತೆ ಕಾಣುತ್ತಿದ್ದರು. ಗೊಣಗುತ್ತಾ ವೃದ್ಧರೂ ನಿದ್ದೆ ಹೋದರು.

***

ಗಾಢ ಕತ್ತಲನ್ನು ಸೀಳಿ ಬಂದ ಕೈಯೊಂದು ‘‘ನಿಲ್ಲಾಣ ಬಂತು. ಇಳಿಯಿರಿ’’ ಎಂದು ತಟ್ಟಿ ಎಬ್ಬಿಸಿದಂತಾಗಿ ಆ ವೃದ್ಧರು ಗಕ್ಕನೆ ಎದ್ದು ಕುಳಿತರು. ಕಿಟಕಿಯಿಂದ ನೋಡಿದರೆ ಬರೇ ಕತ್ತಲು. ಅಕ್ಕಪಕ್ಕದಲ್ಲಿ ಯಾರೂ ಇಲ್ಲ. ರೈಲು ವೇಗವಾಗಿ ಚಲಿಸುತ್ತಿತ್ತು. ಬೋಗಿಯೊಳಗೆ ಮಂದ ಬೆಳಕು. ಎಲ್ಲರೂ ಗಾಢ ನಿದ್ದೆಯಲ್ಲಿದ್ದಾರೆ.

‘ಇದು ಸ್ವಂತ ಮನೆಯೇನೂ ಅಲ್ಲವಲ್ಲ…ಎಲ್ಲರೂ ಅವರವರ ನಿಲ್ದಾಣದಲ್ಲಿ ಇಳಿಯಲೇ ಬೇಕು’ ಎನ್ನುವ ಮಾತು ಅವರೊಳಗಿನ ಆಳದಿಂದ ಪಿಸುಗುಟ್ಟಿದಂತಾಯಿತು. ರಾತ್ರಿ ಮಲಗುವ ಮುನ್ನ ತರುಣ ಹೇಳಿದ ಮಾತು ಅವರೊಳಗೆ ಚಿತ್ರವಿಚಿತ್ರ ಅರ್ಥ ಪಡೆದುಕೊಳ್ಳುತ್ತಿತ್ತು. ಅವರ ಏದುಸಿರು ಜೋರಾಯಿತು.

ಎದ್ದು ನಿಂತ ಅವರು ಎಡಭಾಗದಲ್ಲಿ ಗಾಢ ನಿದ್ದೆಯಲ್ಲಿರುವ ತರುಣನತ್ತ ನೋಡಿದರು. ಸಿಟ್ಟಿನ ಭರದಲ್ಲಿ ಅವನ ಮುಖವನ್ನೇ ಸರಿಯಾಗಿ ಗಮನಿಸಿರಲಿಲ್ಲ. ಎನ್ನುತ್ತಾ ಅವನೆಡೆಗೆ ಬಾಗಿದರು. ಮುಖ ಕಂಬಳಿಯಿಂದ ಮುಚ್ಚಿತ್ತು. ಕಂಬಳಿಯಿಂದ ಇಣುಕುತ್ತಿದ್ದ ಪಾದ ಮಾತ್ರ ಆ ಮಂದ ಬೆಳಕಿನಲ್ಲಿ ಹೊಳೆಯುತ್ತಿತ್ತು. ವೃದ್ಧರು ಬಾಗಿ ಆ ತರುಣನ ಪಾದವನ್ನು ಸ್ಪರ್ಶಿಸಿದವರು ಹಾವನ್ನು ಮುಟ್ಟಿದವರಂತೆ ಪಕ್ಕನೆ ಕೈಯನ್ನು ಹಿಂದೆಗೆದುಕೊಂಡರು. ಆ ತರುಣನ ಪಾದ ಮಂಜಿನಂತೆ ಕೊರೆಯುತ್ತಿತ್ತು.!

‍ಲೇಖಕರು G

11 July, 2011

4 Comments

  1. Vithal Dalawai

    Tallanagolisuva kathe

  2. yogesh.r

    good

  3. Nagaraju L M

    ನಿಮ್ಮ ಯಾವುದೋ ಬರಹದಲ್ಲಿ ಬುದ್ದಿವಂತತೆಗೂ, ಸಂತತ್ವಕ್ಕೂ ಇರುವ ವ್ಯತ್ಯಾಸದ ಬಗ್ಗೆ ಓದಿದ್ದೆ. ಜಾಣರ ಜಂಗುಳಿಯ ನಡುವೆ ನಿಮ್ಮ ಮನದೊಳಗಣ ಸಂತ ಅಮರವಾಗಿರಲಿ.

  4. shreenandi

    i got my soul thank u sir.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading