ನಿತ್ಯಾನಂದ ಬಿ ಶೆಟ್ಟಿ
ಘಟನೆ-1: ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆಯನ್ನು ದೇಶದಲ್ಲೇ ಮೊದಲಿಗೆ ಜಾರಿಗೆ ತಂದಿತ್ತು. ಆಗಲೂ ಅದರ ಪರ– ವಿರೋಧ ಚರ್ಚೆ ಬಿರುಸಾಗಿ ನಡೆಯಿತು. ನಮ್ಮನ್ನು ಸುತ್ತುವರಿದಿರುವ ಶೈಕ್ಷಣಿಕ, ಸಾಮಾಜಿಕ ಸಂಗತಿಗಳೆಲ್ಲವೂ ಬಿಸಿಯೂಟದ ಅನ್ನದ ಬಟ್ಟಲಿನ ಸುತ್ತ ಕುಣಿದವು.
ನಾನು ಆಗ ಮೂಡುಬಿದಿರೆಯಲ್ಲಿ ಅಧ್ಯಾಪಕನಾಗಿದ್ದೆ. ವೈಯಕ್ತಿಕ ಕುತೂಹಲದಿಂದ ಒಂದು ಮಧ್ಯಾಹ್ನ ನನ್ನ ಇಬ್ಬರು ವಿದ್ಯಾರ್ಥಿಗಳೊಂದಿಗೆ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿದೆ. ಎಲ್ಲ ಮಕ್ಕಳಲ್ಲೂ ನಜ್ಜುಗುಜ್ಜಾದ ಅಲ್ಯುಮಿನಿಯಂ ತಟ್ಟೆಗಳು (ಬಟ್ಟಲುಗಳು). ಆದರೆ ಒಂದು ಮಗು ಎರಡು ಕೆಸುವಿನ ಎಲೆಗಳನ್ನು ಹಿಡಿದುಕೊಂಡು ಕುಳಿತಿತ್ತು (ಈ ಎಲೆಗಳ ರಸ ಸೋಕಿದರೆ ವಿಪರೀತ ತುರಿಕೆ). ನಾನು ಶಿಕ್ಷಕರನ್ನು ‘ಈ ಮಗು ಯಾಕೆ ತಟ್ಟೆ ತಂದಿಲ್ಲ’ ಎಂದು ಕೇಳಿದೆ. ಅದಕ್ಕೆ ಅವರು ‘ಸಾರ್, ಅದಕ್ಕೂ ಅವರಲ್ಲಿ ದುಡ್ಡಿಲ್ಲ. ಆ ಹುಡುಗ ಎರಡು ಎಲೆ ತಂದಿದ್ದಾನಲ್ಲ. ಅದರಲ್ಲಿ ಒಂದು ಅವನ ತಮ್ಮನಿಗೆ. ಅವನಿಗೆ ಇನ್ನೂ ನಾಲ್ಕು ವರ್ಷ. ಈ ಶಾಲೆಗೆ ಅವನು ಪ್ರವೇಶವೇ ಪಡೆದಿಲ್ಲ. ಆದರೆ ಮನೆಯಲ್ಲಿ ಕೂಳಿಲ್ಲ. ಸ್ಕೂಲ್ಗೆ ಬಂದು ಹೊಟ್ಟೆ ತುಂಬಿಸ್ಕೋತಾರೆ ಪಾಪ. ಭಾನುವಾರ ಊಟಕ್ಕೆ ಏನು ಮಾಡ್ತಾರೆ ಎಂಬುದೇ ನನ್ನ ಚಿಂತೆ’. ಇದು ಶಿಕ್ಷಣ ಕಾಶಿ, ಆಧುನಿಕತೆಯ ಹೆಬ್ಬಾಗಿಲು, ಬುದ್ಧಿವಂತರ ಜಿಲ್ಲೆ ಇತ್ಯಾದಿ ಏನೇನೋ ವಿಶೇಷಣಗಳನ್ನು ಪಡೆದುಕೊಂಡ ಜಿಲ್ಲೆಯಲ್ಲಿನ ನನ್ನ ಅನುಭವ.
ಘಟನೆ-2: ಕಾಲಾಂತರದಲ್ಲಿ ಉದ್ಯೋಗ ನಿಮಿತ್ತವಾಗಿ ನಾನು ತುಮಕೂರಿಗೆ ಬಂದೆ. ನನ್ನ ಪಕ್ಕದ ಮನೆಯಲ್ಲಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ವಾಸವಾಗಿದ್ದರು. ಪ್ರತಿ ಭಾನುವಾರವೂ ಅವರು ಅರ್ಧ ದಿನದ ಮಟ್ಟಿಗಾದರೂ ಶಾಲೆಗೆ ಹೋಗುತ್ತಿದ್ದರು. ‘ಯಾಕೆ ಟೀಚರ್ ಭಾನುವಾರ ಸ್ಕೂಲ್ಗೆ ಹೋಗ್ತೀರಿ?’ ಎಂದು ಕೇಳಿದೆ. ಅದಕ್ಕವರು ‘ಇಲ್ಲ ಸಾರ್, ನಾನು ಭಾನುವಾರ ಹೋಗಿ ಮಕ್ಕಳಿಗೆ ಏನೋ ಸ್ವಲ್ಪ ಬೇಯಿಸಿ ಹಾಕದೇ ಇದ್ದರೆ ಸೋಮವಾರ ನಮ್ಮ ಶಾಲೆಗೆ ಯಾವ ಮಕ್ಕಳೂ ಬರೋ ಸ್ಥಿತಿಯಲ್ಲಿ ಇರಲ್ಲ’ ಅಂದರು. ಇದು ಪ್ರತಿನಿತ್ಯ ಅನ್ನದಾಸೋಹ ನಡೆಯುವ ಊರಿನ ಘಟನೆ.

ಇದಕ್ಕೆ ತದ್ವಿರುದ್ಧವಾಗಿರುವ ಇನ್ನೆರಡು ಘಟನೆಗಳು:
ಘಟನೆ-1: ನನ್ನ ಗೆಳೆಯರೊಬ್ಬರು ಮಂಗಳೂರಿನಲ್ಲಿ ಅಧಿಕ ಸಂಬಳ ಇರುವ ಸರ್ಕಾರಿ ಉದ್ಯೋಗಿ. ಅವರ ಹೆಂಡತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ. ಅವರಿಗೆ ಮದುವೆಯಾಗಿ ಹತ್ತು ವರ್ಷಗಳಾಗಿವೆ. ಮಕ್ಕಳಿಲ್ಲ. ನಾನು ಅವರನ್ನು ಭೇಟಿಯಾದಾಗಲೆಲ್ಲ ಅವರು ಬಿಸಿಯೂಟ ಯೋಜನೆಯ ಬಗ್ಗೆ ವಿಪರೀತ ತಕರಾರು ತೆಗೆಯುತ್ತಿದ್ದರು. ಇತ್ತೀಚೆಗೆ ತಕರಾರು ತೆಗೆಯುವುದನ್ನು ಬಿಟ್ಟಿದ್ದರು. ಯಾಕೆ ಎಂದು ವಿಚಾರಿಸಿದೆ. ಅವರು ಹೇಳಿದ್ದು ಸ್ವಾರಸ್ಯಪೂರ್ಣವಾಗಿತ್ತು. ಅವರ ಹೆಂಡತಿ ಕೆಲಸ ಮಾಡುವ ಶಾಲೆಯಲ್ಲಿ ಈಗ ಬಿಸಿಯೂಟ ಬೇಯುವುದಿಲ್ಲವಂತೆ. ಅಲ್ಲಿಗೆ ‘ಇಸ್ಕಾನ್’ರವರ ಅಕ್ಷಯಪಾತ್ರೆಯ (ಸರ್ಕಾರಿ ಯೋಜನೆಯನ್ನು ಹೊರಗುತ್ತಿಗೆ ನೀಡಿರುವುದರಿಂದ) ಬಿಸಿಯೂಟ ಬರುತ್ತದಂತೆ. ಅದರ ಸಾರಿನ ಘಮವೇ ಬೇರೆ ಅಂತೆ. ಅವರ ಹೆಂಡತಿ ಪ್ರತಿ ಸಂಜೆ ಬರುವಾಗ ಒಂದು ದೊಡ್ಡ ಟಿಫಿನ್ ಬಾಕ್ಸ್ನಲ್ಲಿ ಸಾರು-ಅನ್ನ ತರುತ್ತಿದ್ದಾರಂತೆ. ಕಳೆದ ಆರು ವರ್ಷಗಳಿಂದ ಭಾನುವಾರ ಹಾಗೂ ಹಬ್ಬ-ಹರಿದಿನಗಳನ್ನು ಬಿಟ್ಟು ಮನೆಯಲ್ಲಿ ಅವರು ಯಾವತ್ತೂ ಪೂರ್ಣಪ್ರಮಾಣದ ಅಡುಗೆ ಮಾಡಿದ್ದಿಲ್ವಂತೆ. ರಾತ್ರಿ ಊಟಕ್ಕೆ ಏನೋ ಸ್ವಲ್ಪ ಹಪ್ಪಳ-ಸಂಡಿಗೆ ಹುರ್ಕೊಂಡರೆ ಸಾಕಾಗುತ್ತದಂತೆ.
ಘಟನೆ-2: ಆ ಹುಡುಗನ ಹೆಸರು ನರಸಿಂಹರಾಜು. ತುಮಕೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಅವನು ನನ್ನ ವಿದ್ಯಾರ್ಥಿ. ಮನೆಯಲ್ಲಿ ಕಡುಬಡತನ. ಜಾತಿಯಲ್ಲಿ ಅವನು ಆದಿಕರ್ನಾಟಕ ಸಮುದಾಯಕ್ಕೆ ಸೇರಿದವನು. ನಮ್ಮ ವಿಶ್ವವಿದ್ಯಾಲಯದಲ್ಲಿ ರಾತ್ರಿ ಸೆಕ್ಯುರಿಟಿ ಕೆಲಸ ಮಾಡಿ ಬೆಳಿಗ್ಗೆ ಕ್ಲಾಸ್ಗೆ ಬರುತ್ತಿದ್ದ ಹುಡುಗ. ಒಂದು ದಿನ ಸಂಜೆ ನನ್ನ ಬಳಿ ಬಂದು ‘ಸಾರ್, ತಹಶೀಲ್ದಾರರಿಗೆ ಒಂದು ಪತ್ರ ಬರೆಯಬೇಕು, ಸಹಾಯ ಮಾಡಿ’ ಅಂದ. ‘ಏನು ಪತ್ರ ಅಪ್ಪೀ?’ ಅಂದೆ. ಅದಕ್ಕವನು ‘ಸಾರ್, ನನಗೊಬ್ಬ ಹುಟ್ಟು ಅಂಗವಿಕಲನಾದ ಅಣ್ಣ ಇದ್ದ. ಅವನಿಗೆ ಅಂತ್ಯೋದಯ ಕಾರ್ಡ್ ಇತ್ತು. ತಿಂಗಳಿಗೆ ಮೂವತ್ತು ಕೆ.ಜಿ ಅಕ್ಕಿ ಬರುತ್ತಿತ್ತು. ಮೊನ್ನೆ ಅವನು ಸತ್ತು ಹೋಗ್ಬಿಟ್ಟ. ಅದಕ್ಕೆ ಅವನ ಕಾರ್ಡ್ ಕ್ಯಾನ್ಸಲ್ ಮಾಡಬೇಕಿತ್ತು’ ಅಂದ. ನಾನಂದೆ– ‘ಪರವಾಗಿಲ್ವೋ, ನೀನು ಕಷ್ಟಪಡುತ್ತಿದ್ದೀಯಲ್ಲ. ಆ ಅಕ್ಕಿ ನಿನಗೆ ಸಹಾಯಕ್ಕೆ ಬರುತ್ತೆ’. ಅದಕ್ಕವನು, ‘ಅಯ್ಯೋ ಬೇಡಿ ಸಾರ್, ನಮ್ಮ ಸಂಸಾರಕ್ಕೆ ಸಿದ್ರಾಮಣ್ಣನ ಅನ್ನಭಾಗ್ಯದ ಅಕ್ಕಿ ಸಿಗುತ್ತೆ. ಉಳಿದ ಖರ್ಚಿಗೆ ನನಗೆ ಸಂಬಳ ಬರುತ್ತೆ. ಇದು ಅಂತ್ಯೋದಯ ಯೋಜನೆಯ ಅಕ್ಕಿ. ಯಾರಾದ್ರೂ ನನ್ನಂತಹ ಬೇರೆ ಬಡವರಿಗೆ ಅನುಕೂಲ ಆಗುತ್ತೆ ಸಾರ್, ತಹಶೀಲ್ದಾರರಿಗೆ ಬರೆಯಬೇಕಾದ ಪತ್ರದ ಒಕ್ಕಣೆ ಹೇಗಿರ್ಬೇಕು ಅಂತ ನನಗೆ ಗೊತ್ತಾಗುತ್ತಿಲ್ಲ, ದಯವಿಟ್ಟು ಬರ್ಕೊಡಿ ಸಾರ್’.






0 Comments