“ಭಾಮಿನಿ ಷಟ್ಪದಿ”
ಚೇತನಾ ತೀರ್ಥಹಳ್ಳಿ
ಒಂದಾನೊಂದು ಕಾಲದಲ್ಲಿ ಓದಿಕೊಂಡಿದ್ದ ಕಥೆ ಧುತ್ತನೆ ನೆನಪಾಗಿದ್ದಕ್ಕೆ ಯಾವ ವಿಶೇಷ ಕಾರಣಗಳೂ ಹೊಳೀತಿಲ್ಲ. ಹೀಗೆ ನೆನಪಾದ ಕಥೆಯನ್ನ ನಿಮ್ಮೊಟ್ಟಿಗೆ ಹಂಚಿಕೊಳ್ಳೋಣವೆನ್ನಿಸಿತು.
* * *
ಅವನೊಬ್ಬ ಸದಾಚಾರಿ. ಮಹಾ ಭಕ್ತ. ಹೆಸರು- ಬಿಲ್ವ ಮಂಗಳ.
ನಿದ್ರೆ, ಹಸಿವು, ಮೈಥುನಗಳಷ್ಟೇ ಭಕ್ತಿಯೂ ಸಹಜವೇನೋ ಅನ್ನುವಷ್ಟು ಭಗವದ್ಭಕ್ತಿ ಅವನಲ್ಲಿ. ಅಥವಾ ನಿದ್ರೆ, ಹಸಿವಿನಷ್ಟೇ ತೀವ್ರವಾಗಿತ್ತು ಅವನ ಕಾಮ ವಾಂಛೆ.
ಚೂಡಾಮಣಿ, ಸೌಂದರ್ಯ ಶಿರೋಮಣಿ.
ಹುಟ್ಟಿದ್ದು ವೇಶ್ಯೆಯರ ಕುಲದಲ್ಲಾದರೂ ಮೈ ಮಾರಾಟಕ್ಕಿಟ್ಟಿರಲಿಲ್ಲ. ದಿನಾಲೂ ಅವಳೊಡನಾಡಲು ಹಂಬಲಿಸಿ ಬರ್ತಿದ್ದ ಬಿಲ್ವ ಮಂಗಲ ಅವಳನ್ನ ಮದುವೆಯಾಗಿರಲಿಲ್ಲ, ಅಷ್ಟೆ.
ಒಮ್ಮೆ ಹೀಗಾಯ್ತು. ಆ ರಾತ್ರಿ ಗುಡುಗು ಸಿಡಿಲಿನ ಮಳೆ ಧೋ ಅಂತ ಸುರೀತಿತ್ತು. ಕಾರ್ಗತ್ತಲು ಬೇರೆ. ಮನೆಯಲ್ಲಿ ಆತ ಚಡಪಡಿಸಿಹೋಗಿದ್ದ. ಪ್ರತಿ ಬಾರಿಯ ಮಿಂಚೂ ಅವನಲ್ಲಿ ಕಾಮೋದ್ರೇಕವನ್ನ ಹೆಚ್ಚಿಸ್ತಿತ್ತು.
ಅತ್ತ ಚೂಡಾಮಣಿ, ಈ ಮಳೆಯಲ್ಲಿನ್ನು ಆತ ಬರಲಾರನೆಂದು ಹೊದ್ದು ಮಲಗುವ ಏರ್ಪಾಡಿನಲ್ಲಿದ್ದಳು.
ಅರ್ಧರಾತ್ರಿ ಸರಿದಿರಬಹುದು. ಮನದನ್ನನಿಲ್ಲದೆ ನಿದ್ರೆ ಕಳಕೊಂಡಿದ್ದವಳ ಕಿವಿಯಲ್ಲಿ ಬಾಗಿಲು ಬಡಿಯುವ ಸದ್ದು!
ಚಿಮಣಿಯ ಬೆಳಕಲ್ಲಿ ಕಂಡಿದ್ದು ಮಳೆಯಲ್ಲಿ ತೊಯ್ದು ತೊಪ್ಪಡಿಯಾಗಿ ನಿಂತಿದ್ದ ಬಿಲ್ವ ಮಂಗಳ!!
ಹೊರಗೆ ಕೆರೆ ತುಂಬಿ ಹರಿದ ನೀರು ಮನೆ ಹೊಸಿಲು ದಾಟಲು ಹವಣಿಸುತ್ತಿತ್ತು. ಸಿಡಿಲಿಗೆ ಸುಟ್ಟು ಕರಕಲಾಗಿದ್ದ ಮರದಲ್ಲಿ ಇನ್ನೂ ಹೊಗೆಯಾಡುತ್ತಿತ್ತು!
ಬಂದವನನ್ನ ಬಾಚಿ ತಬ್ಬಿದವಳೇ ಬಿಕ್ಕಿ ಬಿಕ್ಕಿ ಅತ್ತಳು. “ನಿಮಗೇನಾದರೂ ಆಗಿ ಹೋಗಿದ್ದರೆ?”
ಬಿಲ್ವ ಮಂಗಳ ನಸು ನಕ್ಕ. “ಎಲ್ಲ ನಿನಗಾಗಿ; ನಿನ್ನ ಪಡೆಯಲಿಕ್ಕೆ ಏನೆಲ್ಲ ಮಾಡಬಲ್ಲೆ ನೋಡು!”
ಥಟಕ್ಕನೆ ತಲೆ ಎತ್ತಿದ ಚೂಡಾಮಣಿ, ಹೇಳಿದ್ದೊಂದೇ ಮಾತು. “ಛೆ! ಏನೂ ನೀಡದ ಈ ಮೂಳೆ ಮಾಂಸದ ದೇಹವನ್ನ ನೋಡಲಿಕ್ಕೆ, ಪಡೆಯಲಿಕ್ಕೆ ನೀವು ಇಷ್ಟು ಸಾಹಸಪಡುವ ಬದಲು ಆ ಭಗವಂತನನ್ನ ಪಡೆಯೋ ಸಾಹಸ ಮಾಡಿದ್ದಿದ್ದರೆ? ಬ್ರಹ್ಮಾನಂದವೇ ನಿಮ್ಮ ಪಾದಸೇವೆ ಮಾಡಿಕೊಂಡು ಬಿದ್ದಿರುತ್ತಿತ್ತು!”
ಕಾಲ ಕೂಡಿ ಬಂಡಿತ್ತು. ಮರು ಮಾತಿಲ್ಲದೆ ಎದ್ದ ಬಿಲ್ವ ಮಂಗಳ ದೇವಾಲಯದಲ್ಲಿ ನಿಂತಿದ್ದ. ಮುಂದೆ ವೈಷ್ಣವ ಪಂಥವೊಂದರ ಪ್ರಮುಖ ಗುರುವೂ ಆದ.
ಹಾಗೆಲ್ಲ ಆದಮೇಲೂ ಆತ ಚೂಡಾಮಣಿಯನ್ನು ಮರೆಯಲಿಲ್ಲ. ಅವಳನ್ನ ’ಗುರು’ವೆಂದು ಕರೆದ. ತನ್ನ ಕೃತಿಗಳಲ್ಲಿ ಅವಳ ಹೆಸರುಳಿಸಿ ಅಮರಳನ್ನಾಗಿಸಿದ.
* * *
ಹಾಂ! “ಗಂಡಸನ್ನ ಕೆಳಗೆಳೆಯೋಳು ಹೆಣ್ಣು” ಅಂತ ಮೊನ್ನೆ ಯಾರೋ ಭಾಷಣ ಬಿಗೀತಿದ್ದರು. ಬಹುಶಃ ಈ ಕಥೆಯ ನೆನಪಿನ ನೆವ, ಅದೇ ಇರಬಹುದು!


0 Comments