ಮುಂದಿನ ವಾರ ಯುಗಾದಿ ಅಮಾವಾಸ್ಯೆಗೆ ಕಪ್ಪಡಿ ಜಾತ್ರೆ ಕೊನೆಗೊಳ್ಳಲಿದೆ. ಸರಕಾರ ಎಂದಿನಂತೆ ಪ್ರಾಣಿ ಬಲಿನಿಷೇಧವನ್ನು ನಿಷೇಧ ಮಾಡಿದೆ!!.
ಮಾಂಸಾಹಾರ ಪ್ರಸಾದದ ಜಾತ್ರೆಗಳಲ್ಲಿ ಈ ರೀತಿಯ ನಿಷೇಧ ನಿಲ್ಲಬೇಕು ಎಂದು ರಾಜೇಂದ್ರ ಪ್ರಸಾದ್ ಆಗ್ರಹಿಸಿದ್ದರು. ಅದಕ್ಕೆ ಶ್ರೀವತ್ಸ ಕಂಚಿನಮನೆ ಹಾಗೂ ಗೀತಾ ಕಲ್ಮನೆ ಅವರು ಪ್ರತಿಕ್ರಿಯೆ ನೀಡಿದರು. ಇದಕ್ಕೆ ರಾಜೇಂದ್ರ ಪ್ರಸಾದ್ ಉತ್ತರ ನೀಡಿದ್ದಾರೆ. ಈಗ ಅವಧಿಗೆ ಬಂಡ ಇನ್ನಷ್ಟು ಪ್ರತಿಕ್ರಿಯೆಗಳು ಇಲ್ಲಿವೆ.
ಮಾಂಸಾಹಾರ ಬೇಕೇ ಬೇಡವೇ? ಏನನ್ನಿಸುತ್ತಿದೆ ನಿಮಗೆ
ಬನ್ನಿ ಚರ್ಚೆಯಲ್ಲಿ ಭಾಗವಹಿಸಿ
ನಿಮ್ಮ ಕಾಮೆಂಟ್ ಗಳನ್ನು [email protected] ಗೆ ಕಳುಹಿಸಿ
ಗೀತಾ ಹೆಗ್ಡೆ
ಜಾತ್ರೆ ಅಂತಲ್ಲ ಯಾವುದೇ ಸಾವ೯ಜನಿಕ ಸ್ಥಳಗಳಲ್ಲಿ ಬಾಡೂಟ ಮತ್ತು ಪ್ರಾಣಿಗಳ ಮಾರಣ ಹೋಮ ಸಂಪೂರ್ಣ ನಿಷೇಧಿಸಬೇಕು. ಹಾಗೆ ಮಾಧ್ಯಮದಲ್ಲಿ ಬರುವ ಜ್ಯೋತಿಷ್ಯ ಕಾಯ೯ಕ್ರಮ ಸಂಪೂರ್ಣ ನಿಷೇಧಿಸಬೇಕು. ಇದರಿಂದ ಮೂಡ ನಂಬಿಕೆ ಜಾಸ್ತಿ ಆಗುತ್ತಿದೆ. ಕಂಡ ಕಂಡಲ್ಲಿ ದೇವಾಲಯ ಸೃಷ್ಟಿ ಆಗುತ್ತಿದೆ. ದೇವರ ಹೆಸರಲ್ಲಿ ದುಡ್ಡು ಮಾಡುವ ಧಂದೆ ಅವ್ಯಾಹತವಾಗಿ ನಡೆಯುತ್ತಿದೆ. ದಯವಿಟ್ಟು ನನ್ನಂಥ ಅಸಹಾಯಕ ಹೆಣ್ಣಿನ ಕೂಗು ಸರಕಾರದ ಕಿವಿ ಮುಟ್ಟುವಂತೆ ಅವಧಿಯು ಪ್ರಯತ್ನಿಸುವುದೆಂದು ನಂಬಿರುತ್ತೇನೆ. “ಅವಧಿ” ಗೆ ನನ್ನ ಧನ್ಯವಾದಗಳು.
ಸಂತೋಷ್ ಕುಮಾರ್ ಆಚಾರ್
ನಾನು ಸಸ್ಯಾಹಾರಿ, ಹಾಗಂತ ಶುದ್ಧ ಸಸ್ಯಾಹಾರಿಯೇನಲ್ಲ, ಏಕೆಂದರೆ ಇಂಥ ವಿಷಯ ಬಂದಾಕ್ಷಣ ಎಲ್ಲರೂ ನೀವು ಕೇಕ್ ತಿನ್ನಲ್ವಾ? ಚಾಕೋಲೇಟ್ ತಿನಲ್ವಾ, ಅದರಲ್ಲಿ ಮೊಟ್ಟೆ ಹಾಕಿರುತ್ತಾರೆ ಗೊತ್ತಾ? ಅಂತ ವಾದಕ್ಕಿಳಿಯುತ್ತಾರೆ. ಹೌದು ನಾನು ಕೇಕ್ ತಿನ್ನುತ್ತೇನೆ, ಆದರೆ ನೇರವಾಗಿ ಮೀನು, ಮೊಟ್ಟೆ, ಕೋಳಿ-ಕುರಿ-ಆಡಿನ ಮಾಂಸ ತಿನ್ನೋದಿಲ್ಲ. ಆದರೆ ಯಾವುದೇ ವ್ಯಕ್ತಿಗೆ ನೀವು ಇಂಥದನ್ನೇ ತಿನ್ನಬೇಕು, ಇಂಥ ಜಾಗದಲ್ಲಿ ಇದನ್ನೇ ಮಾಡಿಕೊಂಡು ತಿನ್ನಬೇಕು ಎಂದು ಹೇಳುವ ಅಧಿಕಾರ ನಮಗೇನಿದೆ? ಹತ್ತನೆಯ ತರಗತಿಯವರೆಗೂ ಈ ವಿಷಯದಲ್ಲಿ ನಮ್ಮ ಮನೆಯಲ್ಲಿ ನನಗೆ ಕಟ್ಟುನಿಟ್ಟಾದ ನಿರ್ಬಂಧವಿದ್ದರೂ ಕಾಲೇಜಿಗೆ ಹೋದಾಗ ಈ ಬೇಲಿಯನ್ನು ಯಾವಾಗಲೋ ದಾಟಬಹುದಿತ್ತು. ಏಕೆಂದರೆ ಕಾಲೇಜಿನಲ್ಲಿ ನನ್ನ ಆಪ್ತಮಿತ್ರರೆಲ್ಲರೂ ಮಾಂಸಾಹರಿಗಳೇ. ನಾವೆಲ್ಲಾ ಒಟ್ಟಿಗೆ ಹೋಟೆಲಿಗೆ ಹೋಗಿದ್ದೇವೆ. ಅವರವರಿಗೆ ಬೇಕಾದ್ದನ್ನು ಅವರು ತರಿಸಿಕೊಂಡು ತಿಂದಿದ್ದಾರೆ. ನಾನು ಪೂರಿ ತಿನ್ನಬೇಕಾದರೆ ಎದುರಿನ ನನ್ನ ಮಿತ್ರ ಕೋಳಿಯ ಭಕ್ಷ್ಯವನ್ನು ತರಿಸಿಕೊಂಡು ತಿಂದ. ನಾನೇಕೆ ಬೇಡವೆನ್ನಬೇಕು.
ಸಸ್ಯಾಹಾರಿಗಳಿಗೆ ಹೇಗೆ ಮಾಂಸ ತಿನ್ನಬಾರದು ಎಂದು ಹೇಳಲು ಸಬೂಬುಗಳು ಸಿಗುತ್ತವೆಯೋ ಹಾಗೆಯೇ ಮಾಂಸಾಹಾರಿಗಳಿಗೂ ಮನುಷ್ಯ ಮೂಲತಃ ಮಾಂಸಾಹಾರಿಯೆಂದು, ಕುಡಿಯುವ ಹಾಲು ಕೂಡಾ ಪ್ರಾಣಿಜನ್ಯವೆಂದು ಹೇಳಲು ಅವಕಾಶಗಳಿವೆ.
ವೈದಿಕ ದೇವಸ್ಥಾನಗಳಲ್ಲಿ ಪ್ರಸಾದವೆಂದು ಕೊಡುವ ಯಾವುದೇ ತಿಂಡಿಯನ್ನಾಗಲೀ ದೇವರಿಗಾಗಿ ಮಾಡಿದ್ದಲ್ಲ. ಅದು ಮಾಂಸವಿರಬಹುದು, ಪುಳಿಯೋಗರೆ-ಮೊಸರನ್ನವಿರಬಹುದು. ತಿನ್ನುವ ಭಕ್ತರಿಗಾಗಿಯೇ ಮಾಡಿರುವುದೆಂದ ಮೇಲೆ ಯಾವ ಜಾತಿಯಾದರೇನು, ಯಾವ ಮತವಾದರೇನು ಹೊಟ್ಟೆ ತುಂಬಲು.
ಕೊನೆಯದಾಗಿ ಚಂದನ ಟಿವಿಯಲ್ಲಿ ಪಾವಗಡ ಪ್ರಕಾಶ್ ರವರು ಒಮ್ಮೆ ಹೇಳಿದ ಮಾತು, ನಿಮಗೆ ಮಾಂಸ ತಿನ್ನಬೇಕು ಅಂತ ಅನ್ನಿಸಿದರೆ ತಿನ್ನಿ, ಬೇಡವಾದಲ್ಲಿ ಬೇಡ. ಅದಕ್ಕೆ ಜಾತಿಯ, ಧರ್ಮದ, ಮತದ ಹಂಗೇಕೆ? ಎಂದು ಹೇಳಿದ್ದರು. ಇದನ್ನೇ ಮುಂದುವರೆಸುವುದಾದರೆ ಸರ್ಕಾರದ ಹಂಗೇಕೆ ಎಂದು ಕೂಡಾ ಇನ್ನು ಮುಂದೆ ಕೇಳಬೇಕಾಗುತ್ತದೆ.
0 ಪ್ರತಿಕ್ರಿಯೆಗಳು