ಆಸೆ ತೀರಿಸಿದ ‘ರಂಗ ಸಂಗಾತಿ’
ಗಣೇಶ್ ಅದ್ಯಪಾಡಿ, ಮಂಗಳೂರು
ನಾನು ಮಾತನಾಡಲು ಹೆದರುವ ಕೆಲವೇ ವ್ಯಕ್ತಿಗಳಲ್ಲಿ ವಿವೇಕ ರೈಗಳು ಒಬ್ಬರು. ಅವರನ್ನು ಕಂಡಾಗ ಸಂಪೂರ್ಣ ಮೂಕನಾಗುತ್ತೇನೆ. ಬಾಲ್ಯದಿಂದಲೂ ಅವರ ಬಗ್ಗೆ ಕೇಳುತ್ತಾ ಓದುತ್ತಾ, ಭಾಷಣ ಆಲಿಸುತ್ತಾ ಬಂದ ನನಗೆ ಒಂದು ಬಾರಿಯಾದರು ಮನಸ್ಸು ಬಿಚ್ಚಿ ಮಾತಾಡಬೇಕು, ಅವರ ತರಗತಿಯ ವಿದ್ಯಾರ್ಥಿಯಾಗಿರಬೇಕಿತ್ತು ಅಂತ ಅನಿಸಿತ್ತು ಈ ನನ್ನ ಆಸೆ ‘ರಂಗಸಂಗಾತಿ ಪ್ರತಿಷ್ಠಾನ’ದಿಂದ ನಿಜವಾಗಿದೆ.
ಹೌದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜ್ನಲ್ಲಿ ಸೋಮವಾರದಿಂದ ರಂಗಸಂಗಾತಿ ಆಯೋಜಿಸಿರುವ ‘ಪಂಪ ಭಾರತ’ ಉಪನ್ಯಾಸ ಮಾಲಿಕೆಯ ಒಬ್ಬ ಜಿಜ್ಞಾಸುವಾಗಿ ನಾನು ಸೇರಿಕೊಂಡು ಈಗ ಒಂದು ವಾರಗಳ ರೈಗಳ ಉಪನ್ಯಾಸ ಕೇಳುವ ಭಾಗ್ಯ ನನ್ನದಾಗಿಸಿಕೊಂಡೆ.
ಒಂದು ಕಡೆ ಪಂಪ ಮತ್ತೊಂದು ಕಡೆ ಗುರುಗಳ ಅಭೂತಪೂರ್ವ ಜ್ಞಾನ ಮತ್ತೆ ಮತ್ತೆ ಓದಿನ ಹೊಸ ಮಜಲನ್ನು ತೆರೆಸುತ್ತಾ ಹೋಗುತ್ತದೆ. ನನಗಿಂತ ಬಹಳ ದೂರದಲ್ಲಿದ್ದ ಪಂಪ ನನ್ನ ಹತ್ತಿರ ಹತ್ತಿರ ಬರುತ್ತಿದ್ದಾನೆ ಅನಿಸುತ್ತಿದೆ. ಹತ್ತನೆ ತರಗತಿಯಲ್ಲಿ ಕೊನೆಯ ಬಾರಿಗೆ ಓದಿದ ಪಂಪನು ನನ್ನ ಮನದ ಮೂಲೆಯಲ್ಲಿ ಎಲ್ಲೋ ಇದ್ದಾನೆ. ಅವನನ್ನು ಮತ್ತೆ ಓದಬೇಕು, ಅಕ್ಕರದ ಮನೆಯ ಒಡೆಯ ಅಕ್ಕರಲೋಕದ ಹೊಸ ಬಾಗಿಲನ್ನು ನಮಗೆ ತೆರೆದುಕೊಡುತ್ತಿದ್ದಾರೇನೊ ಎಂದೆನಿಸಿತು.
ಇಲ್ಲಿಯವರೆಗೆ ಎರಡು ದಿನಗಳ ಉಪನ್ಯಾಸ ಮಾತ್ರ ಮುಗಿದಿದೆ. ಇದರಲ್ಲಿಯೇ ಬಹಳಷ್ಟು ಅರಿವನ್ನು ವಿವೇಕ ರೈಗಳು ಮಸ್ತಕದಿಂದ ಮಸ್ತಕಕ್ಕೆ ರವಾನಿಸಿದ್ದಾರೆ ಎಂದರೆ ಅತಿಶಯೋಕ್ತಿಯಿಲ್ಲ.
ಪಂಪ ನನಗೆ ಹತ್ತಿರವಾಗದಿದ್ದರೂ ಪರವಾಗಿಲ್ಲ. ಆದರೆ ರೈಗಳ ತರಗತಿಯಲ್ಲಿ ಒಬ್ಬನಾದ ನನಗೆ ಅದಕ್ಕಿಂತ ಮತ್ತೊಂದು ಖುಷಿಯಿಲ್ಲ ಅನಿಸ್ತಾ ಇದೆ. ಒಂದು ಸಾರಿ ಮನಸ್ಸು ಬಿಚ್ಚಿ ವಿವೇಕ ರೈಗಳ ಜತೆ ಮಾತನಾಡಬೇಕೆಂಬ ಹಂಬಲ ಆದರೂ ಆಂತರ್ಯದಲ್ಲಿ ಅದೆಂಥದೊ ತಳಮಳ… ಅರಿವಾಗುತ್ತಿಲ್ಲ…
ವಿವೇಕ ರೈಗಳ ವಿದ್ಯಾರ್ಥಿಯಾಗುವ ಆಸೆ ಯಾರಿಗಿರಲಾರದು? ಸುವರ್ಣ ಅವಕಾಶವನ್ನು ಕಳಕೊಂಡೆ. ಮಿಕ್ಕಿರುವ ದಿನಗಳಾದರೂ ಹಾಜರಾಗಲು ಪ್ರಯತ್ನಿಸಬೇಕು…
ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ಕನ್ನಡ ವಿಭಾಗ ಮತ್ತು ರಂಗ ಸಂಗಾತಿ, ಮಂಗಳೂರು ಇದರ ಸಹಯೋಗದಲ್ಲಿ ನಡೆಯುತ್ತಿರುವ ಪಂಪಭಾರತ ಉಪನ್ಯಾಸ ಮಾಲಿಕೆಯ ನಾಲ್ಕನೆಯ ದಿನದ ಉಪನ್ಯಾಸ ಸಂಪನ್ನಗೊಂಡಿತು. ಮಹಾಭಾರತದಲ್ಲಿ ಉತ್ತರ ಗೋಗ್ರಹಣ ಪ್ರಸಂಗ ಸಂದರ್ಭದ ಯುದ್ಧ ಕುರುಕ್ಷೇತ್ರ ಯುದ್ಧಕ್ಕೆ ಪೂರ್ವಭಾವಿ ತಯಾರಿಯಾಗಿದೆ ಎಂದು ಪ್ರೊ. ರೈಯವರು ಹೇಳಿದರು.
ಚೆನ್ನಾಗಿದೆ