ಸು ರಂ ಎಕ್ಕುಂಡಿ ಜನ್ಮ ಶತಮಾನೋತ್ಸವಕ್ಕೆ ವಿಶಿಷ್ಟ ಸ್ಪರ್ಶ…
ಅದು ತೀರಾ ಭಿನ್ನವಾದ ಕಾರ್ಯಕ್ರಮ. ಅಲ್ಲಿ ಹಕ್ಕಿಗಳ ಕುಕಿಲಿತ್ತು, ಜೀರುಂಡೆಗಳ ಹಿಮ್ಮೇಳವಿತ್ತು, ಹಸುವಿನ ‘ಅಂಬಾ’ ದನಿಯಿತ್ತು. ಇದರ ಮಧ್ಯೆ ಹತ್ತಾರು ಕವಿತೆಗಳು ಕನ್ನಡದ ಬಹು ಮುಖ್ಯ ಕವಿ, ಕವಿತೆಯೊಳಗೆ ಕಥೆಯನ್ನು ಕೂರಿಸಿದ ಸುಬ್ಬಣ್ಣ ರಂಗನಾಥ ಎಕ್ಕುಂಡಿ ಅವರನ್ನು ಇನ್ನಿಲ್ಲದಂತೆ ನೆನಪಿಸಿಕೊಂಡವು.
ಇದು ಜರುಗಿದ್ದು ಧಾರವಾಡದ ಸ್ವಯಂ ದೀಪ ಝೆನ್ ಸಂಸ್ಥೆ ಹಾಗೂ ಬೆಂಗಳೂರಿನ ‘ಬಹುರೂಪಿ’ ಸಂಸ್ಥೆಯ ಸಹಯೋಗದಲ್ಲಿ.
ನಗರದಿಂದ 10 ಕಿ ಮೀ ದೂರವಿರುವ ಸುಮನ ಸಂಗಮ ಕಾಡು ತೋಟದಲ್ಲಿ ಬಕುಲದ ಕವಿ ಎಂದೇ ಹೆಸರಾದ, ಬಕುಲದ ಹೂವುಗಳು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಸು ರಂ ಎಕ್ಕುಂಡಿ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸಲಾಯಿತು.
ಬಕುಲದ ಮರಕ್ಕೆ ಸು ರಂ ಎಕ್ಕುಂಡಿ ಅವರ ಮಗ ರಂಗನಾಥ ಎಕ್ಕುಂಡಿ ಹಾಗೂ ಸೊಸೆ ವೇದಾ ಎಕ್ಕುಂಡಿ ಅವರು ಬಕುಲದ ಹೂವುಗಳು ಕವಿತೆಯನ್ನು ತೂಗು ಬಿಡುವುದರ ಮೂಲಕ ಎಕ್ಕುಂಡಿ ಹಬ್ಬಕ್ಕೆ ದಾರಿ ಮಾಡಿಕೊಟ್ಟರು.
ನಂತರ ಹಿರಿಯ ಕವಿಗಳಾದ ಶ್ಯಾಮಸುಂದರ ಬಿದರಕುಂದಿ, ಅನಸೂಯಾ ಕಾಂಬಳೆ, ಸಂಗಮೇಶ ಮೆಣಸಿನಕಾಯಿ, ಕೃಷ್ಣಮೂರ್ತಿ ಬಿಳಿಗೆರೆ ಅವರು ಎಕ್ಕುಂಡಿ ಕವಿತೆ ಸಾಲುಗಳಿದ್ದ ಬುಕ್ ಮಾರ್ಕರ್ ಗಳನ್ನು ಬಿಡುಗಡೆ ಮಾಡಿದರು.
ರಾಜಕುಮಾರ ಮಡಿವಾಳರ ಹಾಗೂ ಹರ್ಷವರ್ಧನ ಶೀಲವಂತರ ಅವರು ಬಕುಲದ ಹೂಗಳು ಕವಿತೆಯನ್ನು ವಾಚಿಸಿದರು.
ನಂತರ ಸುಮನ ಸಂಗಮದ ದುಂಡು ರಂಗಭೂಮಿಯಲ್ಲಿ ನಗರದ ನಾನಾ ಕಡೆಯಿಂದ ಬಂದಿದ್ದ ಸಾಹಿತಿಗಳು, ಪತ್ರಕರ್ತರು, ವಿದ್ಯಾರ್ಥಿಗಳು ಎಕ್ಕುಂಡಿ ಕವಿತೆಗಳನ್ನು ವಾಚಿಸಿ, ಹಾಡಿ ಕಾರ್ಯಕ್ರಮಕ್ಕೆ ರಂಗು ತುಂಬಿದರು.
ಬಹುರೂಪಿಯ ಸ್ಥಾಪಕ ಜಿ ಎನ್ ಮೋಹನ್ ಅವರು ಮಾತನಾಡಿ ಸು ರಂ ಎಕ್ಕುಂಡಿ ಅವರು ನಂಬಿದ ಮಾನವೀಯತೆಯ ದೀಪವನ್ನು ಬೆಳಗಿಸಬೇಕಾಗಿದೆ. ಇಂದಿನ ಕಗ್ಗತ್ತಲ ದಿನಗಳನ್ನು ಎದುರಿಸಬೇಕಾಗಿದೆ ಎಂದರು.
ರಂಗನಾಥ ಎಕ್ಕುಂಡಿ ಅವರು ಎಕ್ಕುಂಡಿ ಅವರನ್ನು ನಾಡಿನ ಜನ ನಿಷ್ಕಲ್ಮಶವಾಗಿ ಪ್ರೀತಿಸಿರುವುದರ ದ್ಯೋತಕ ಈ ಕಾರ್ಯಕ್ರಮ ಎಂದರು.
ಶಾಮಸುಂದರ ಬಿದರಕುಂದಿ ಅವರು ಈ ದಿನ ನಾವು ಎಕ್ಕುಂಡಿ ಎಂಬ ಬೀಜವನ್ನು ಬಿತ್ತಿದ್ದೇವೆ. ನಾಡಿನಾದ್ಯಂತ ಅದರ ಫಸಲು ಸಿಗಲಿದೆ ಎಂದರು.
ಸುಮನ ಸಂಗಮದ ಡಾ ಸಂಜೀವ ಕುಲಕರ್ಣಿ ಅವರು ಉಪಸ್ಥಿತರಿದ್ದರು.
0 ಪ್ರತಿಕ್ರಿಯೆಗಳು