ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫೇಸ್ ಬುಕ್ ರಿಪಬ್ಲಿಕ್ v/s ಬಳ್ಳಾರಿ ರಿಪಬ್ಲಿಕ್

rajaram tallur low res profile

ರಾಜಾರಾಂ ತಲ್ಲೂರು

ಮುಖಪುಟ ಚಿತ್ರ: ಅಪಾರ

ಇದೊಂಥರಾ ತುದಿಯಿಲ್ಲದವರ ವಿರುದ್ಧ ತಳವಿಲ್ಲದವರ ಸಮರ. ನೋಡೋಕೆ ಸದ್ಯ ಮಜವಾಗಿದೆ. ಆದರೆ ಈ ಕುಶಾಲು ನಾಳೆ ಸಾಮಾಜಿಕ, ಸಾಂವಿಧಾನಿಕ ಸ್ವಾಸ್ಥ್ಯಕ್ಕೆ ಘಾತಿ ತಂದರೆ? ಎಂಬ ಯೋಚನೆ ಬಂದಾಗ ಕಳವಳವಾಗತೊಡಗುತ್ತದೆ. ಎರಡೂ ಕಡೆ ಮಾಡಬಾರದ್ದು ಮಾಡಿಕೊಂಡು, ಆಗಬಾರದ್ದು ಆಗುತ್ತಿದೆ.

avadhi-column-tallur-verti- low res- cropಬಳ್ಳಾರಿ ರಿಪಬ್ಲಿಕ್ಕು, ಅದರ ಆಟ-ಪಾಠಗಳು ನಾಡಿಗೆ ಹೊಸದೇನಲ್ಲ. ಕೂಡ್ಲಿಗಿಯ ಡಿ ವೈ ಎಸ್ಪಿ ಜೊತೆಯ ವೈರವು  ಪರಮೇಶ್ವರ ನಾಯ್ಕರ ಸಚಿವಸ್ಥಾನಕ್ಕೆ ಸಂಚಕಾರ ತರಲೂ ಬಹುದು; ತರದಿರಲೂ ಬಹುದು. ಆದರೆ ಈ ಘಟನೆಯಿಂದ ಆಗಲಿರುವ ಮುಕ್ಕು ಕಳೆದ ಆರು ತಿಂಗಳಿನಿಂದ ರಾಜ್ಯ ಸರ್ಕಾರಕ್ಕೆ  ಬೆನ್ನು ಬೆನ್ನಿಗೆ ತಗಲುತ್ತಿರುವ ಮುಕ್ಕು-ಸುಕ್ಕುಗಳಿಗೆ ಹೋಲಿಸಿದರೆ ಹತ್ತರೊಟ್ಟಿಗೆ ಹನ್ನೊಂದಾಗಿ ನಿಂತೀತು ಅಷ್ಟೇ…. ಈ ಬಗ್ಗೆ ಯಾರಿಗೂ ಅಚ್ಚರಿ ಇಲ್ಲ.

ಈಗ ನಮ್ಮೆದುರಿರುವ ಅಚ್ಚರಿಯ ತುಣುಕು – ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಮತ್ತು ಅವರ ಪರ ಫೇಸ್ ಬುಕ್ ರಿಪಬ್ಲಿಕ್ ಎಬ್ಬಿಸುತ್ತಿರುವ ಧ್ವನಿ. ಕರ್ನಾಟಕ ರಾಜ್ಯ ಪೊಲೀಸ್ ಕಾಯಿದೆ – 1963, ನಾಡಿನ ಪೊಲೀಸ್ ಅಧಿಕಾರಿಗಳಿಗೆ, ಅವರು ಅಧಿಕಾರದಲ್ಲಿರುವಾಗ ಹೇಗೆ ವರ್ತಿಸಬೇಕು ಎಂಬ ಬಗ್ಗೆ ವಿವರವಾಗಿ ಹೇಳುತ್ತದೆ. ಅನುಪಮಾ ಅದನ್ನು ಮೊನ್ನೆಯ ತನಕ ಪಾಲಿಸುತ್ತಾ ಬಂದಿದ್ದಾರೆ ಎಂದುಕೊಂಡಿದ್ದೇನೆ.

ಆದರೆ, ಮೊನ್ನೆ ಮಾತ್ರ ಅವರು ರಾಜಕಾರಣಿಯಂತೆ ರಾಜೀನಾಮೆ ಪತ್ರ ಎಸೆದು ಹೊರಟದ್ದು – ಪೊಲೀಸ್ ಕಾಯಿದೆಗೆ ತದ್ವಿರುದ್ಧ ನಡೆ. ಕಾಯಿದೆಯ ಮೂರನೇ ಚಾಪ್ಟರ್ ನಲ್ಲಿ ಪೊಲೀಸ್ ಅಧಿಕಾರಿ ರಾಜೀನಾಮೆ ನೀಡಬಹುದೆ? ನೀಡಬಹುದಾದರೆ ಹೇಗೆ? ಯಾವುದೆಲ್ಲಾ ಸ್ಥಿತಿಯಲ್ಲಿ  ಅವರು ಪೊಲೀಸ್ ಅಧಿಕಾರಿಯಾಗಿಯೇ ಮುಂದುವರಿದಿರುತ್ತಾರೆ ಎಂಬೆಲ್ಲ ನಿಯಮಗಳನ್ನು ವಿವರವಾಗಿ ಹೇಳಲಾಗಿದೆ. ಈ ರೂಲುಗಳನ್ನೆಲ್ಲ ಅನುಪಮಾ ಶೆಣೈ ರಾಜೀನಾಮೆ ನೀಡಿದಂದಿನಿಂದ ಈಚೆಗೆ ಉಲ್ಲಂಘಿಸುತ್ತಾ ಬಂದಿರುವುದು ಈಗ ಬಹಿರಂಗ ಸತ್ಯ.

ಅನುಪಮಾ ಅವರ ಹೆಸರಿನಲ್ಲಿರುವ ಖಾಸಗಿ ಫೇಸ್ ಬುಕ್ ಅಕೌಂಟ್ ಒಂದರ ಮೂಲಕ ಅವರ ಹೋರಾಟದ ಫೂತ್ಕಾರಗಳು ಹೊರಹೊಮ್ಮುತ್ತಿರುವುದು ಕುತೂಹಲಕರವಾಗಿದೆ. ಸಾರ್ವಜನಿಕವಾಗಿ ಒದಗಿರುವ ಕೆಲವು ಫೂತ್ಕಾರಗಳಂತೂ ತೀರಾ ಬಾಲಿಷವಾಗಿದ್ದು, ಪ್ರಾಥಮಿಕ ಶಾಲಾ ಮಕ್ಕಳ ಕಡ್ಡಿ-ಪೆನ್ಸಿಲ್ ಜಗಳದ ಮಟ್ಟದಲ್ಲಿದೆ. ಇದರ ಹಿಂದೆ ಯಾರದಾದರೂ ಸಂಚು ಇದೆಯೇ ಎಂಬುದನ್ನು ಹೇಳಲು ಕಾಲವಿನ್ನೂ ಪಕ್ವವಾಗಿಲ್ಲ.

ತಮಾಷೆ ಎಂದರೆ, ಈ ಎರಡು ರಿಪಬ್ಲಿಕ್ಕುಗಳ ನಡುವಿನ ಕದನದಲ್ಲಿ “ಬ್ರಹನ್ನಳೆ” ಆಗಿ ತಕಥೈ ಕುಣಿಯತೊಡಗಿರುವುದು ಮಾಧ್ಯಮಗಳು! ಅನುಪಮಾ ಅವರ ದೈಹಿಕ ಅನುಪಸ್ಥಿತಿ ಮತ್ತು ವರ್ಚುವಲ್ ಉಪಸ್ಥಿತಿಗಳು – ನಾಳೆ ಅವರದೆನ್ನಲಾದ ಫೇಸ್ ಬುಕ್ ಅಕೌಂಟ್ ಅವರ ಅಧಿಕೃತ ಅಕೌಂಟ್ ಅಲ್ಲ ಎಂಬ ಹಂತ ತಲುಪಿದರೆ, ಆಗ ಈ ಬ್ರಹನ್ನಳೆಯರು ಯಾವ ಸ್ಥಿತಿ ತಲುಪಲಿದ್ದಾರೆ?!!

ಈ ಒಟ್ಟು ಪ್ರಕರಣವನ್ನು ಗಣನೆಗೆ ತೆಗೆದುಕೊಂಡಾಗ ಈವತ್ತಿಗೆ ಅನ್ನಿಸಿದ್ದು ಇಷ್ಟು…

  1. ಬಳ್ಳಾರಿ ರಿಪಬ್ಲಿಕ್ ಕೊನೆಗೊಳಿಸುತ್ತೇವೆಂಬ ವಾಗ್ದಾನವನ್ನು ಉಳಿಸಿಕೊಳ್ಳಲು ಈವತ್ತಿನ ಸರ್ಕಾರಕ್ಕೆ ಸಾಧ್ಯ ಆಗಿಲ್ಲ.
  2. ಕಾಂಗ್ರೆಸ್ ತನ್ನ ಕಾಲಬುಡಕ್ಕೆ ತಾನೇ ಹೊಡೆದುಕೊಳ್ಳುವ ಕೆಲಸವನ್ನು ಎಂದಿನಂತೆಯೇ ಬಹಳ ಶಿಸ್ತು-ಶೃದ್ಧೆಗಳಿಂದ ನಡೆಸುತ್ತಿದೆ.
  3. ಒಬ್ಬ ಸರ್ಕಾರಿ ಅಧಿಕಾರಿ ತಾನು ಇರುವ ಸ್ಥಾನದ ಕಾರಣದಿಂದಾಗಿ ತನಗೆ ಸಿಕ್ಕಿದ ಮಾಹಿತಿಯೊಂದನ್ನು (ಈ ಪ್ರಕರಣದಲ್ಲಿ ಇದೆಯೆನ್ನಲಾದ ಸಿ.ಡಿ.) ತನ್ನ ವೈಯಕ್ತಿಕ ಹಗೆಸಾಧನೆಯಂತಹ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದೆ? ಈ ಪ್ರಕರಣದಿಂದಾಗಿ ಇನ್ನು ಅಧಿಕಾರಿಗಳಿಗೂ ತಮ್ಮ ಅಧಿಕಾರದ ಗೌಪ್ಯತೆಯನ್ನು ಕಾಪಾಡುವ ಪ್ರಮಾಣವಚನ ಸ್ವೀಕರಿಸುವ ಅಗತ್ಯ ಬರಬಹುದೆ?
  4. ಸಾರ್ವಜನಿಕ/ಗೌಪ್ಯ ಮಾಹಿತಿಗಳು ಸರ್ಕಾರದಲ್ಲಿ; ಅದೂ ಈ ಡಿಜಿಟಲ್ ಯುಗದಲ್ಲಿ ಎಷ್ಟು ಸುರಕ್ಷಿತ?

‍ಲೇಖಕರು Admin

9 June, 2016

10 Comments

  1. Anonymous

    Rajaram’s article on the Republic of facebook vs Republic of Ballari is symptomatic of how the feudal republic is negotiating with the corporate republic where one constitutes the other and negotiates to perpetuate and consolidate their respective power and hegemony. Rajaram’s style of expression is quite readable. Robert Jose

    • ರಾಜಾರಾಂ ತಲ್ಲೂರು

      Thank you Robert!

  2. Vasanth

    Article is only criticizing Congress govt. The DySP act is very childish. Police protest and this incidents have political propaganda. This govt is not so media savvy and there nothing for media to run the show so they are putting this govt under grill for trivial issues

    • ರಾಜಾರಾಂ ತಲ್ಲೂರು

      Thank you!

  3. dr k s karanth

    ” ಅನ್ಯಾದೃಶ “ಪ್ರಹಸನಕ್ಕೆ ” ಅನುಪಮ “ಭಾಷ್ಯೆಯನ್ನೇ ಬರೆದಿದ್ದೀರಿ, ರಾಜಾರಾಮರೆ !!ಮೊದಲ ವಾಕ್ಯವೇ : ” ತುದಿಯಿಲ್ಲದವರ….ತಳವಿಲ್ಲದವರ ನಡುವಿನ ಸಮರ ….” ನಗು ಬಂತು!!ಎಂತಹ ರೂಪಕ !!!Hats off to your down to earth explicit analysis !!(dr k s karanth)

    • ರಾಜಾರಾಂ ತಲ್ಲೂರು

      Thank you Dr Karanth!

  4. ಆದಿವಾಲ ಗಂಗಮ್ಮ

    ತಾರ್ಕಿಕ, ಸುಸಂಬದ್ಧ, ಸಾಂದರ್ಭಿಕ,ಸುಲಲಿತ ಮತ್ತು ಹಾಸ್ಯಲೇಪಿತ.

    • ರಾಜಾರಾಂ ತಲ್ಲೂರು

      Thank you!

  5. Sudha ChidanandGowd

    ದೀಪದ ಕೆಳಗೆ ಕತ್ತಲೆ,
    ಧನವಂತಿಕೆಯ ಮಗ್ಗುಲಲ್ಲಿ ಕಡು ಬಡತನ,
    ಭತ್ತ ಬೆಳೆಯುವಲ್ಲಿ ಕಾಂಕ್ರೀಟ್ ನಾಡು,
    ರಸ್ತೆಯೇ ಸರಿಯಿಲ್ಲ, ಹೆಲಿಕಾಪ್ಟರ್ ನ ಜಾಡು
    ಡೈನಾಮೈಟ್ ತುಂಬಿದ ಶಿಲಾಸೌಂದರ್ಯದ ಬುನಾದಿ
    ಇತಿಹಾಸವೂ ಹೀಗೇ ಇತ್ತು,
    ವರ್ತಮಾನವೂ ಹೀಗೇ ಇದೆ
    ಆದರೂ ನಾವು ಬಳ್ಳಾರಿಗರು ಹೆಮ್ಮೆಪಡಲು ಕಾರಣಗಳು ನೂರಾರು
    ಮಿದುಳಿಲ್ಲದವರು ಮೆರೆಯಲಿ, ಉರಿಯಲಿ
    ಕೊನೆಗೆ “ಹಾಳಾಗ್ಹೋಗ್ಲಿ” ಎಂದು ಶುಭಹಾರೈಸಿ
    ಒಮ್ಮೆ ಬೈದು, ಒಮ್ಮೆ ನಕ್ಕು ತಲೆಕೊಡಹುವ ಹೃದಯವಿರುವ ಜನಸಾಮಾನ್ಯರು
    ಎಲ್ಲದರ ನಡುವೆ ನಗುನಗುತ್ತಾ ಬಾಳಬಲ್ಲ ನಾವು ಧೀರ ಬಳ್ಳಾರಿಗರು..!

    • ರಾಜಾರಾಂ ತಲ್ಲೂರು

      Thank you! ನಾವು ಕನ್ನಡಿಗರೆಲ್ಲ ಹೀಗೇ ಅಲ್ಲವೇ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading