ಡಾ ಎಲ್ ಸಿ ಸುಮಿತ್ರಾ,ತೀರ್ಥಹಳ್ಳಿ
ಆಹಾ ನಿನ್ನ ಕೂದಲಿನ ಸೊಂಪು ಶಾಂಪೂವಿಂದ
ಬಂದಿದ್ದಲ್ಲ, ಮತ್ತಿಸೊಪ್ಪು, ನೆಲ್ಲಿಕಾಯಿ ಸೀಗೆ ಬೆರೆಸಿ
ಹಚ್ಚಿ ತೊಳೆದು ಒರೆಸಿ ಒಣಗಿಸಿ ಹಗೂರಾಗಿ ಬಾಚಿ
ಹೆಣೆದವರು ಯಾರೆ?
ತುದಿಯಲ್ಲಿ ಕನಕ ಮುದ್ರಿಕೆಯ ರೇಷಿಮೆ ಕುಚ್ಚು
ತಲೆಯಲ್ಲಿ ಸುವರ್ಣಪುಷ್ಪ, ಜಡೆಯಲ್ಲಿ ಬಿಲ್ಲೆಗಳ
ಭಾರ ಬೇಕಿರಲಿಲ್ಲ ನಿನ್ನ ಸಹಜ ಚೆಲುವಿಕೆಗೆ
ಮಾಡುವುದೇನು ಕಾಲ ಮಹಿಮೆ ,
ಅಯ್ಯೊ ಮೈಯೆ ಭಾರ ಮನವೆ ಭಾರ ನಿನ್ನ ಹರೆಯಕೆ
ವಂಕಿ, ಒಡ್ಯಾಣ ಮಾರುದ್ದ ಕೂದಲು ಹೊರುವೆ ಹೇಗೆ
ಪಾಪ ಬಿಗಿ ಜಡೆಯ ಗಂಟು, ಒಡವೆಯ ಭಾರ ,
ನೋಯುವ ಕಂಚುಕ, ಒತ್ತುವ ಸೀರೆ ತಾಳಲಾರದೆ
ನೀ ಕಲ್ಲಾದೆಯ?
ಅವರಳತೆಗೆ ತಕ್ಕಂತೆ ಕೊರೆದು, ಕೆತ್ತಿ, ನಿನ್ನ
ರೂಪಿಸಿದ್ದಾರೆಂದು ನಿನಗೆ ಕೋಪವೆ?
ನಿನ್ನ ದೇಹದ ಮೇಲೆ ನಿನಗೆ ಅಧಿಕಾರವಿಲ್ಲ.
ನೋಡುಗರ ಕಣ್ಣಿಗೆ ನೀ ಚೆಂದ ಕಾಣಬೇಕಷ್ಟೆ
ಮೊಗ ತಿರುವಿರುವಿಯೇಕೆ…ತುಟಿ, ಕಟಿ, ನಿತಂಬವೇ
ಹೆಣ್ಣೆಂದು ಕಟೆದಿರುವರು. ಭಾರ ಹೊರುವ ಕಷ್ಟ ಅವರೇನು ಬಲ್ಲರು.
ಅವರು ಹೇಗಾದರೂ ನೋಡಲಿ. ನನಗೆ ನೀನು ನೂರಾರು ವರ್ಷದ
ಇತಿಹಾಸ, ಆಭರಣ ಅಲಂಕಾರಗಳ ರೂಪದರ್ಶಿ,
ಜನ ಮೆಚ್ಚಲಿ ಟೀಕಿಸಲಿ ನೀನಂತೂ “ಕಲ್ಲಾಗಿ’ ಮಾದರಿಯಾಗಿರುವಿ
ಇನ್ನೂ ನೂರ್ಕಾಲ ಬಾಳುವಿ, ಕಲ್ಲಾದರೆ ಮಾತ್ರ ಬಾಳುವೆ .?!
ವಿಜಯ್ ಅಬ್ಬಿಗೇರಿ
ಬಾರದವನ ಬರುವಿಕೆಗಾಗಿ
ಕಾದು ಕಲ್ಲಾಗುವ ಮೊದಲು
ನೋಡೊಮ್ಮೆ ಹಿಂತಿರುಗಿ
ಕಾದಿರುವೆ ನಿನ್ನದೊಂದು ಅಪ್ಪಣೆಗಾಗಿ
ನಿನ್ನ ಬೆನ್ನ ಹಿಂದೆ ಆಡಿಕೊಳ್ಳುವವರ
ನಾಲಿಗೆ ಸೀಳಲು
ಮೌನ ಮುರಿದು
ಮಾತಾಡಬೇಕಿದೆ ನೂರು ಮಾತು
ಆದರೆ ನಿನ್ನ ಮಾತಲ್ಲೂ
ಬರಿ ಅವನದ್ದೇ ನೆನಪು
ಅವನ ನೆನಪುಗಳಲ್ಲಿ ಬಂದಿಯಾಗಿರುವ
ನೀನವನ ಪ್ರೇಮಕೈದಿ
ನಾನಿನ್ನ ಕಾವಲುಗಾರ
ನಮ್ಮಿಬ್ಬರ ನಡುವೆ ಇನ್ನೆಂತಹ ಸಂಭಾಷಣೆ
ಹೇಳಬೇಕಿದೆ ಜಗಕೆ ಸಾರಿ ಸಾರಿ
ಯೋಗ್ಯನಲ್ಲ ಅವನು ನಿನ್ನ ಕಾಯುವಿಕೆಗೆ
ಆದರೆ ನೋಯಿಸಲಾರೆ ಅವನಂತೆ ನಾನು
ಕಾಯುವೆ ನಿನ್ನೊಲುಮೆಗೆ ನಿನ್ನಂತೆ ಕಲ್ಲಾಗಿ
ಅವನ ನೆನಪು ಬತ್ತಿ
ಚಿಗುರೋಡೆಯುವುದು ನನ್ನ ಪ್ರೀತಿ
ಕಾಯುವೆ ಅಲ್ಲಿಯವರೆಗೂ
ನಿನ್ನ ಬೆನ್ನ ಹಿಂದಿನ ನೆರಳಾಗಿ
ನಿನ್ನದೊಂದು ಒಪ್ಪಿಗೆಗಾಗಿ
ಕಾದಿರುವಳು ಸ್ಥಿರಳು
ಕಟೆದ ಚರನು ಬರುವನೆಂದು,
ನಿರೀಕ್ಷೆ ಹಗಲಿರುಳು
ಹಗಲು ನಮ್ಮಂತ ಹಲವರ ಮೇಲೆ
ಬೆಳಕ ಚೆಲ್ಲೀತೆಂದು
ಮೊಗಸಾಲೆಯ ಹೊಂಬೆಳಕ
ಕಿರಣಕ್ಕೆ ಕಾಯಲಿವೆ ಕಂಬ
ಸವರಲಾರವೆ ನಿನ್ನ ನಿರೀಕ್ಷೆಯ
ಭಾರದ ತುಂಬುನಿತಂಬ
ಗರ್ಭಗುಡಿಯ ದೇವನ ಹುಡುಕುವವರು
ಭಿತ್ತಿ,ಪ್ರಾಕಾರ ನೋಡರು
ಹೆಣೆದ ನೀಳ್ಜಡೆಗೆ ಕುಚ್ಚು
ಕಟ್ಟುವ ಸಖಿಯು,
ಕಾಯಕದ ನಿರಂತರತೆಯಲ್ಲೇ
ಪರಮ ಸುಖಿಯು,
ಅತ್ತ ಕಣ್ಣೆಟ್ಟ ನಿನಗೆ ಸಖಿಯಸುಖ ಕಾಣಲಿಲ್ಲ,
ನಿಡುಸುಯ್ವ ಬೆನ್ನಮಾಡಿ
ನಿಂತುಬಿಟ್ಟೆಯಲ್ಲ
ಯಾವನೋ ಬರಬಹುದು
ಚರಿಸುತ್ತ ಚರನೊಬ್ಬ
ಜೋಗಿಜಂಗಮ
ಸನ್ಯಾಸ ಧಿಕ್ಕರಿಸಿ
ಮನದ ಮಗ್ಗುಲ ಬದಲಿಸಿ
ಜಗದ ಕಣ್ಣಿಗೆ ಭ್ರಷ್ಟ
ನಿನ್ನ ಸ್ಥಿರತೆಗೆ ಶಿಷ್ಟ
ಆಗಿಬಿಡು ಅವನ ಮನದನ್ನೆ
ದೇವನ ತೋರಬಹುದವಗೆ
ನಿನ್ನ ಕಲ್ಲ ಕಣ್ಣೇ.
~ಪ್ರವೀಣ್.
ಪ್ರಿಯ ಡಾ. ಸುಮಿತ್ರಾ: ಆ ಕಲ್ಲಾದ ’ಪ್ರಾಚೀ ನಿತಂಬಿನಿ’ಯಂತೆ ನಿಮ್ಮ ಕವನವೂ ತುಂಬಾ ಧ್ವನಿಪೂರ್ವಕವಾಗಿ ’ಭಾರತೀಯ ನಾರಿ’ಯ ಇಡೀ ಚರಿತ್ರೆಯನ್ನೇ, ಕಥೆ-ವ್ಯಥೆಗಳನ್ನೇ ಕಟ್ಟಿಕೊಡುತ್ತದೆ. ಅಭಿನಂದನೆಗಳು. ರಾಮಚಂದ್ರನ್
thank you sir .
nimma sahrudaya pratikriyege dhanyavaadagalu.
sumithra lc
ಸರ್ ನೀವು ಓದಿ ಪ್ರತಿಕ್ರಿಯಿಸಿದ್ದು ತುಂಬಾ ಸಂತೋಷ. ಧನ್ಯವಾದಗಳು. ಸುಮಿತ್ರಾ ಎಲ್ ಸಿ.
ನಿನ್ನ ದೇಹದ ಮೇಲೆ ನಿನಗೆ ಅಧಿಕಾರವಿಲ್ಲ.
ಭಾರ ಹೊರುವ ಕಷ್ಟ ಅವರೇನು ಬಲ್ಲರು.
ಪ್ರಾಮಾಣಿಕ….ಕಂಗೆಡಿಸುವ….ಸಾಲುಗಳು….
Dr.Ashok Kumar
ಧನ್ಯವಾದಗಳು ಸಾರ್. ಸುಮಿತ್ರಾ.