ಲಕ್ಷ್ಮಣ್
ಕವಿತೆಯೊಂದರ ಹಿಂಬದಿಯ ಪುಟ
ಖಾಲಿಯಿದೆ
ಯಾರದರೂ ಬರೆಯಬಹುದು
ಏನಾದರೂ ಬರೆಯಬಹುದು
ಶಿಲೆಯ ಬೆನ್ನು ಪುಟದ ಮೇಲೆ
ಯಾವ ಶಾಸನವೂ ಮೂಡುವುದಿಲ್ಲ
ಶಿಲೆಯ ಮೇಲೆ
ಎದೆಯೊಳಗೆ ಬರೆಯದ ಹೊರತು
ಡಾಬು, ದಾಗಿನ,
ತೋಳುಬಂಧಿ, ತೊಡೆಯ ಸಂಧಿ
ಎಲ್ಲ ಬರೆದವರಿದ್ದಾರೆ ದೇಹವೇ ದೇಗುಲವೆಂದು
ನನ್ನ ಬಹಿರಂಗದ ಕುರಿತು
ಅಂತರಂಗ ಬಗೆಯುವ ಉಳಿಯೊಂದ
ತುರ್ತಾಗಿ ತರಬೇಕಿದೆ
ತಲೆಬಾಗಿ ನಡೆದವರಿಗೆ
ಮಾತ್ರ
ಒಳಬಾಗಿಲ ಪ್ರವೇಶವಿದೆ
ಏಳು ಹೆಡೆಯ
ಜಡೆ ನಾಗರವೊಂದು ಅನವರತ
ಕಾಯುತಿದೆ
ಒಳಮನೆಯ ನಿಗೂಢ ನಿಧಿಯ
ಜೈಲು ಸರಳುಗಳಿಂತಿರುವ
ನನ್ನೆದುರಿಗಿನ
ಸಾಲು ಕಂಬಗಳಲಿ
ಸಾವಿರದ ಕತೆಯಿದೆ ಪುರುಸೊತ್ತಿದ್ದರೆ
ಕೇಳಿಸಿಕೊ
ನನ್ನ ಹಸಿವು ನಿದ್ದೆ ನೀರಡಿಕೆ
ಒಂಟಿತನ
ನೀರವ ರಾತ್ರಿಯ ನಿಡುಸುಯ್ಯುವಿಕೆ
ಕತ್ತಲ ರಾತ್ರಿಯ ಬಿಕ್ಕಳಿಕೆ
ತುಟಿಯಂಚಿನಲಿಯ ವಿಷಾದ
ಉಳಿಯಾಡುವಾಗಿನ
ಒಡಲ ನೋವು
ಬೆನ್ನ ಮೇಲಿನ ಬೆವರು ಸಾಲಿನ
ಮುತ್ತ ಹನಿಯ ಹತಾಶೆ
ನಿನಗೊಂಚೂರು ಅರ್ಥವಾದರೆ
ಬರೆ
ಇಲ್ಲವೇ ಸುಮ್ಮನೆ
ಸೆಲ್ಪೀ ತೆಗೆದು ಸಂಭ್ರಮಿಸು
ಅಕ್ಕ
ಬಿಗ್ ಬ್ಯಾಂಗ್ ಥಿಯರಿಯ
ಉಲ್ಕಾಪಾತದಿಂದ ಸಿಡಿದ ಯಃಕಶ್ಚಿತ್
ಶಿಲೆಯೊಂದು ಇಲ್ಲಿ
ಹೀಗೆ
ಚಿತ್ತವೇ ಕೆತ್ತಿದಂತ ಚಿತ್ರವಾಗಿರಲು
ಇದು
ಚೆನ್ನಮಲ್ಲಿಕಾರ್ಜುನನ ಪವಾಡವಲ್ಲದೆ
ಇನ್ನೇನು?
ಆದಿಮದ ಹೊತ್ತಿಗೆಯಲ್ಲಿ
ಗೀತೆ, ಕುರಾನ, ಬೈಬಲ್ಲಿನಲ್ಲಿ
ಈ ಇಂತಹ ಅನೇಕ ಕವಿತೆಗಳ
ಮುಟ್ಟಲಾರದ ಶಿಲೆಗಳ
ಹಿಂಬದಿಯ ಪುಟ ಇನ್ನೂ ಖಾಲಿಯಿದೆ
ಕೆಲವರು ಕಲ್ಲಿನಲಿ
ಬರೆದರು ಕೆಲವರು ಬಂಗಾರದಲಿ
ತಾಳೆ, ಹಿತ್ತಾಳೆ, ತಾಮ್ರಗಳಲಿ ಬರೆದ
ನಾಗರಿಕತೆಗಳು
ಹೇಳ ಹೆಸರಿಲ್ಲದೆ
ಬೆಳಕು ಹರಿಯುವುದರೊಳಗೆ
ಮಣ್ಣುಪಾಲಾಗಿವೆ
ಎದೆಯ ಮೇಲೆ ಶಾಶ್ವತವಾಗಿ
ಉಳಿಯುವ ಶಾಸನ ಬರೆಯಬಹುದಾದರೆ
ನೀನು
ಸದ್ಯಕ್ಕೆ ನನ್ನ ಬೆನ್ನ ಪುಟ
ಖಾಲಿಯಿದೆ ಏನು ಬೇಕಾದರೂ
ಬರೆದುಕೊ
ಕುಟಿಲ ಕಷ್ಟದೊಳು
ಕೆತ್ತಿದ ಶಿಲ್ಪಿ.
ದಂಡಿಸಿ ಉಳಿಯ
ಖಂಡಿಸಿ ಗೊರ್ಗಲ್ಲ.
ತಿಂದ ಏಟಿಗೆ ಗೊರ್ಗಲ್ಲು ನಗಲಿಲ್ಲ
ಶಿಲ್ಪಿ ಹೃದಯ ಕರಗಲಿಲ್ಲ
ಎದೆಯ ಒಳಗೆ ಮೆರೆಯುತ್ತಿತ್ತು
ಪ್ರೇಮದ ಮೂರುತಿ.
ಜನ್ಮವ ತಳೆದು ನಿಂತಿತ್ತು
ನೋವುಗಳ ಮರೆಸಿ.
ಭಾವನೆಗಳ ಭಾವೈಕ್ಯ
ಬೆರೆತು ಹೋಗಿದ್ದೊ.
ಪ್ರೇಮ ಮೂರುತಿಯ ಸೃಷ್ಟಿಗೆ
ಕನಸ ಹೆಣೆದಿದ್ದೊ.
ಬೇಲೂರು ಐಹೊಳೆಯ
ಶಿಲ್ಪಗಳೆ ನಾಚಿದವು.
ನೋಡಿ ನಡೆದ ಬಳುಕುವ
ನಡುವಿನ ಮಾಯೆಗೆ.
ಬಂಧಿಯಾದವು ಶಿಲ್ಪಿಯ
ಕನಸು ಜಡೆಯೊಳಗಿನ ತೆಕ್ಕೆಗೆ.
ಹಿಂಬಾಲಿಸುತ್ತಿದ್ದೊ ಕನಸುಗಳು
ಅವಳ ಕೊರಳ ನಾದದ
ಕರೆಗೆ.
Bahala olle saalugalu
ಧನ್ಯವಾದಗಳು ಮಮತಾ ಮೇಡಂ
ಅಭಿಷೇಕ ಸರ ನಿಮ್ಮ ಕವಿತೆ ಚೆನ್ನಾಗಿದೆ
Very nice.