ಮಹಿಳೆಯರ ಕುರಿತಾದ ಎರಡು ನಾಟಕಗಳು
ಗ್ರೇಟಾ ಹಾಗೂ ರಾಮಾಯಣ
ಗ್ರಾಮ ಸೇವಾ ಸಂಘವು ಪವಿತ್ರ ಆರ್ಥಿಕತೆಗಾಗಿ ಸತ್ಯಾಗ್ರಹ ನಡೆಸುತ್ತಿದೆ. ಇಂದಿನ ರಾಕ್ಷಸ ಆರ್ಥಿಕತೆಯ ನೆಲೆ ಗಂಡಸುತನವಾದರೆ, ಪವಿತ್ರ ಆರ್ಥಿಕತೆಯ ತಾಯಿ ಬೇರೆ ಹೆಣ್ತನವಾಗಿದೆ. ಹೆಣ್ಣಿಗತನವೆಂಬ ಬೈಗುಳಕ್ಕೆ ಪಕ್ಕಾಗಿರುವ ಹೆಣ್ತನವು, ಕೂಲಿಪಡೆಯುವ ಕಾಯಕವೂ ಹೌದು. ಕೂಲಿ ಪಡೆಯದ ವಾತ್ಸಲ್ಯ ಕಾಯಕವೂ ಹೌದು.
ಮಾರ್ಚ್ 8, 2020, ಅಂತರರಾಷ್ಟ್ರೀಯ ಮಹಿಳಾದಿನ ಅಂದು ಬೆಂಗಳೂರಿನ ರಂಗಶಂಕರದಲ್ಲಿ ಎರಡು ರಂಗಪ್ರದರ್ಶನಗಳನ್ನು ಆಯೋಜಿಸಲಾಗಿದೆ
ಹೆಸರಾಂತ ನಾಟಕಕಾರ ಹಾಗೂ ರಂಗ ನಿರ್ದೇಶಕ ಪ್ರಸನ್ನ ಅವರು ರಚಿಸಿ ನಿರ್ದೇಶಿಸಿರುವ ಈ ಎರಡು ರಂಗಕೃತಿಗಳಲ್ಲಿ ಎಂ.ಡಿ. ಪಲ್ಲವಿ, ನಾದ ಮಣಿನಾಲ್ಕೂರು, ಲಹರಿ, ದುರ್ಗಾ ದೇವಿ ನಟಿಸುತ್ತಿದ್ದಾರೆ.
ಮಾರ್ಚ್ 8, ಭಾನುವಾರ, ಮಧ್ಯಾಹ್ನ 3:30 ಹಾಗೂ ಸಂಜೆ 7:30 ಕ್ಕೆ ರಂಗಶಂಕರದಲ್ಲಿ ಎರಡು ಪ್ರದರ್ಶನಗಳಿರುತ್ತವೆ. ಬುಕ್ಮೈಷೊನಲ್ಲಿ ಟಿಕೆಟ್ಟುಗಳು ಲಭ್ಯವಿರುತ್ತವೆ.
ರಾಮಾಯಣವೇ ಏಕೆ?
ಸೀತೆ ಹಾಗೂ ರಾಮರ ಪ್ರೀತಿಯ ಕತೆ ವಾಲ್ಮೀಕಿ ರಾಮಾಯಣ. ರಾಮಾಯಣ ಬರಿದೆ ರಾಮನ ಕತೆಯಲ್ಲ. ಸೀತೆ ಇಲ್ಲದೆ ರಾಮನಿಲ್ಲ, ರಾಮನಿಲ್ಲದೆ ಸೀತೆಯಿಲ್ಲ. ಆದರೆ ರಾಮಾಯಣ ಮದುವೆಯ ಕತೆಯೂ ಹೌದು. ರಾಮನoತಹ ರಾಮನೇ ಗಂಡನಾಗಿ ಹೆಂಡತಿ ಸೀತೆಯನ್ನ ಗೋಳುಹೊಯ್ದು ಕೊಳ್ಳಬಲ್ಲನಾದರೆ ನಮ್ಮನಿಮ್ಮಂತಹ ಸಾಧಾರಣ ಗಂಡಸರ ಕತೆಯೇನೂ ಎಂಬ ಪ್ರಶ್ನೆ ಎತ್ತುತ್ತದೆ ರಾಮಾಯಣ. ನಾಗರೀಕತೆ ಹಾಗೂ ಪ್ರಕೃತಿಯ ನಡುವಿನ ಅಸಮಾನತೆಯ ಕತೆಯೂ ಹೌದು ರಾಮಾಯಣ. ಅತಿ ನಾಗರೀಕ ಅಹಂಕಾರದಿಂದ ಬೀಗುವ ಹಾಗೂ ಪ್ರಕೃತಿಯನ್ನು ಶೋಷಿಸಿಬದುಕುವ ರಾವಣ, ಸೀತೆಯನ್ನು ಬಲವಂತದಿಂದ ಕೊಂಡೊಯ್ದು ಬಂಧಿಸುವುದು ಇಂದಿನ ರಾಕ್ಷಸ sಸಭ್ಯತೆಗೆ ರೂಪಕವಾಗಿದೆ.
ಗ್ರೇಟಾ ಯಾಕೆ?
ಈ ಚೋಟುದ್ದದ ಹುಡುಗಿ ನೋಡಿ, ಯಾವ ಗಂಡಸೂ ಮಾಡದೆ ಇರುವ ಕೆಲಸವನ್ನು ಮಾಡಿ ತೋರಿಸಿದ್ದಾಳೆ. ಹೊಗೆಯುಗುಳಿ ಉಗುಳಿ ವಾತಾವರಣವನ್ನು ಬಿಸಿಮಾಡಿ, ನಮ್ಮ ಅವಸಾನಕ್ಕೆ ನಾವೇ ಕಾರಣರಾಗುತ್ತಿರುವ ರಾಕ್ಷಸರು ನಾವು ಎಂಬ ಕಟು ಸತ್ಯವನ್ನು ಶಾಲಾ ಮುಷ್ಕರದ ಮೂಲಕ ಎತ್ತಿಹಿಡಿದಿದ್ದಾಳೆ.
ಶಾಲೆಯ ತನ್ನ ಗೆಳೆಯ ಗೆಳೆಯತಿಯರು ಮುಂದೆ ಬರಲಿಕ್ಕೆ ಸಿದ್ಧರಿರದಿದ್ದಾಗ, ಸ್ವೀಡನ್ನಿನ ಈ ಪೋರಿ, ತಾನೇ ಹೋಗಿ ಪಾರ್ಲಿಮೆಂಟಿನ ಮುಂದೆ, ತಾನೇ ಬರೆದ ಒಂದು ಪುಟ್ಟ ಮುಷ್ಕರ ಫಲಕ ಹಿಡಿದು, ಒಂದು ದಿನ ಕುಳಿತು ಕೊಂಡಿತು. ಪ್ರತಿ ಶುಕ್ರವಾರ ಹೀಗೇ ಮಾಡಿತು. ನಂತರ ಗೆಳೆಯ ಗೆಳತಿಯರೂ ಬಂದವು. ಪತ್ರಿಕೆಗಳೂ ಬಂದವು, ಎಲ್ಲ ಮಾಧ್ಯಮಗಳೂ ಬಂದವು. ಪಾರ್ಲಿಮೆಂಟುಗಳ ಒಳಗೇ ಕರೆದು ಈ ಹುಡುಗಿಯಿಂದ ಭಾಷಣ ಮಾಡಿಸಿದರು. ಅಷ್ಟೇ ಏಕೆ, ವಿಶ್ವಸಂಸ್ಥೆಯೇ ಕರೆಸಿ, ಜಗತ್ತಿನ ಎಲ್ಲ ರಾಷ್ಟ್ರಗಳ ಎಲ್ಲ ಪ್ರತಿನಿಧಿಗಳೆದುರು ನಿಲ್ಲಿಸಿ, ಈ ಹುಡುಗಿಯ ಮಾತುಕೇಳಿದರು. ಈಗ, ವಿಶ್ವದ ಎಲ್ಲ ಹುಡುಗ ಹುಡುಗಿಯರೂ ಮುಂದೆ ಬಂದಿದ್ದಾರೆ. ದನಿ ಎತ್ತಿ ಕೇಳುತ್ತಿದ್ದಾರೆ. ನಮ್ಮ ಭವಿಷ್ಯವನ್ನು ಹಾಳುಗೆಡವಲಿಕ್ಕೆ ನಿಮಗೇನು ಹಕ್ಕಿದೆ ಎಂದು.
– ಪ್ರಸನ್ನ
ನಿರ್ದೇಶಕರ ಆಯ್ದಮಾತುಗಳು
ರಂಗಪ್ರಯೋಗ ಹೇಗಿದೆಯೋ ನೋಡಬೇಕು