
ಈ ಇಡೀ ಪ್ರತಿಮೆ ಅನಾವರಣದ ಹಿಂದಿನ ರಾಜಕೀಯದ ಬಗ್ಗೆ ಹೆಚ್ಚು ಹೇಳುವುದಕ್ಕೇನೂ ಉಳಿದಿಲ್ಲ. ಮರು ಚುನಾವಣೆಯಲ್ಲಿ ಜಾತಿವಾರು ಮತ ವಿಂಗಡಣೆಯ ಬಗ್ಗೆ, ಮಹಾನಗರಪಾಲಿಕೆಯಲ್ಲಿ ತಮಿಳಿಗರ ಓಟುಗಳ ಬಗ್ಗೆ ಒಂದು ಕೈಯ್ಯಲ್ಲಿ ಲೆಕ್ಕ ಹಾಕುತ್ತಾ, ಇನ್ನೊಂದು ಕೈಯ್ಯಲ್ಲಿ ಪ್ರತಿಮೆ ಅನಾವರಣ ಮಾಡುವವರ ಬಗ್ಗೆ ಹೇಳುವುದಾದರೂ ಏನು? ಹದಿನೆಂಟು ವರ್ಷಗಳ ಹಿಂದೆ ತಿರುವಳ್ಳುವರ್ ಪ್ರತಿಮೆ ಅನಾವರಣದ ಬಗ್ಗೆ ವಿರೋಧಿಸಿದವರು ಆಳುವ ಪಕ್ಷದ ಮೇಲಿನ ಕಕ್ಕುಲತೆಯಿಂದ ಈಗ ಸುಮ್ಮನಿದ್ದುಬಿಟ್ಟದ್ದಾಗಲಿ, ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು ಎಂಬ ಕವಿವಾಣಿಯನ್ನು literal ಆಗಿ ಅರ್ಥ ಮಾಡಿಕೊಂಡು ಸುಖವಾಗಿರುವ ಕೆಲವು ಕನ್ನಡ ನೇತಾರರು ಒಂದಷ್ಟು ಕಂಠ ಶೋಷಣೆ ಮಾಡಿಕೊಂಡು ಮತ್ತೆ ತೆಪ್ಪಗಾಗಿಬಿಟ್ಟಿದ್ದಾಗಲಿ ಯಾರಿಗೂ ಗೊತ್ತಿರದೆ ಇರುವ ವಿಷಯವಲ್ಲ. In fact, ಇವೆಲ್ಲ ಎಷ್ಟರಮಟ್ಟಿಗೆ ನಮ್ಮ common senseನ ಭಾಗವಾಗಿದೆಯೆಂದರೆ ”ಜಾತಿ ವಿಜಾತಿ ಎನಬೇಡ ಅನ್ನುತ್ತಾ ಸರ್ವಜ್ಞನನ್ನು quote ಮಾಡಿ ಭಾಷಣ ಮಾಡುವ ಮಂದಿಯ ಜಾತಿ ರಾಜಕೀಯದ ಪರಿ ನೋಡಿ” ಅನ್ನುವ ಮಾತೂ ಕೂಡ ಭಾಷಣದಷ್ಟೇ rhetorical ಆಗಿ ತೋರುತ್ತದೆ!

ಈ ಪ್ರತಿಮಾ ನಾಟಕ ರಾಜಕಾರಣ ಒಂದು ಕಡೆಯಾದರೆ, ನನಗೆ ವೈಯ್ಯಕ್ತಿಕವಾಗಿ ಈ ಪ್ರಕರಣ ನನ್ನ ಅಜ್ಜಿಯ ನೆನಪುಗಳನ್ನು ತಾಜಾ ಮಾಡಿದೆ. ನಾನು ಸರ್ವಜ್ಞನ ತ್ರಿಪದಿಗಳನ್ನು ಮತ್ತು ಸೊಮೇಶ್ವರ ಶತಕದ ಸಾಲುಗಳನ್ನು ಮೊದಲು ನಾನು ಕೇಳಿದ್ದು ನನ್ನ ಅಮ್ಮನ ಅಮ್ಮನ ಬಾಯಿಯಿಂದ. ಶಾಲೆಗೆ ಎಂದೂ ಹೋಗದ ನನ್ನಜ್ಜಿ ಅವಳ ಅಣ್ಣ ತಮ್ಮಂದಿರ ಪುಸ್ತಕಗಳನ್ನು ದೇವರ ಮನೆಯ ದೀಪದ ಬೆಳಕಿನಲ್ಲಿ ತಾನೇ ಓದಿಕೊಂಡು ಬರೆಯಲಿಕ್ಕೆ ಓದಲಿಕ್ಕೆ ಕಲಿತಿದ್ದಳು. ಅವರಪ್ಪ ಶಾಲೆಯ ಪ್ರಸ್ತಾಪ ಮಾಡಿದರೆ “ಹೆಣ್ಣು ಮಕ್ಕಳೇನು ಶಾನುಬೋಗಿಕೆ ಮಾಡಬೇಕಾ?” ಅಂತ ಸಿಡಿಮಿಡಿಗೊಂಡಿದ್ದರಂತೆ. ಮದುವೆ, ಮಕ್ಕಳು, ಅಡುಗೆ, ಮನೆ ಹಿತ್ತಲ ಕುಂಬಳ ಗಿಡ, ಅಡಿಕೆ ಕೊಯ್ಲು, ಮೊಮ್ಮೊಕ್ಕಳು… ಹೀಗೆ ಜೀವನ ಬೇರೆ ದಿಕ್ಕಿಗೆ ಎಳೆದುಕೊಂಡು ಹೋದರೂ ಅವಳನ್ನು ಮಿಣುಕು ಬೆಳಕಿನಲ್ಲಿ ಕಲಿಯುವುದಕ್ಕೆ ಪ್ರೇರೇಪಿಸಿದ್ದ ಅಕ್ಷರದ ಆಕರ್ಷಣೆ ಎಂದೂ ಅವಳಲ್ಲಿ ಸಂಪೂರ್ಣ ಆರಿರಲಿಲ್ಲ. ಮನೆಯ ಗಂಡು ಮಕ್ಕಳಿಗಿಂತ ಚೆನ್ನಾಗಿ ಪದ್ಯಗಳನ್ನು ಬಾಯಿಪಾಠ ಮಾಡಿದ್ದ ನನ್ನಜ್ಜಿ ಇಳಿವಯಸ್ಸಿನಲ್ಲಿಯೂ ಅವೆಲ್ಲವನ್ನು ನೆನ್ನೆಯೇ ಕಲಿತವಳಂತೆ ಪಠಪಠ ಹೇಳುತ್ತಿದ್ದಳು. ರಾತ್ರಿ ಎಲ್ಲರೂ ಮಲಗಿದ ಮೇಲೆ ಬಾವಿಯ ಪಕ್ಕ ಇದ್ದ ವಿದ್ಯುತ್ ದೀಪವಿರದ ಹಳೆಯ ಬಚ್ಚಲಿನ ಮನೆಯಲ್ಲಿಯೋ, ಅತವ ಅವಳು ಹಟಹಿಡಿದು ಕೆಡವಲಿಕ್ಕೆ ಬಿಡದೆ ಇರಿಸಿಕೊಂಡಿದ್ದ ಹಿತ್ತಲಿನ ಹಳೆಯ ಹಂಚಿನ ಮನೆಯಲ್ಲಿಯೋ ಸೇರಿಕೊಂಡು ಎನೋ ಕೆಲಸ ಮಾಡುತ್ತಲೇ ಇರುವುದು ಅವಳಿಗೆ ಜನ್ಮಕ್ಕಂಟಿದ ಅಭ್ಯಾಸ. ಅವಳು ಎಲ್ಲಿದ್ದಾಳೆ ಎನ್ನುವುದ ಸುಳಿವು ನಮಗೆ ನೀಡುತ್ತಿದ್ದುದು ಅವಳ ಗುನುಗುನುಗುನು ಪದ್ಯಗಳ ಪಠಣ. ರಜದಲ್ಲಿ ನಮ್ಮ ಮನೆಗೆ ಬಂದಾಗಲೂ ಕೈಗೆ ಸಿಕ್ಕ ನಮ್ಮ ಕತೆ ಪುಸ್ತಕಗಳನ್ನೆಲ್ಲಾ ಬೇಜಾರಿಲ್ಲದೇ ಕೂತು ಓದುತ್ತಿದ್ದಳು.
ಪೂರ್ಣ ಓದಿಗೆ: ಭಾಗೇಶ್ರೀ





ನಿಮ್ಮ ಲೇಖನದ ಮೊದಲ ಪ್ಯಾರಾದ ೊಂದು ದೀರ್ಘ ವಾಕ್ಯವನ್ನು ಓದಿ ಮುಗಿಸುವಷ್ಟರಲ್ಲಿ ನನ್ನ ತಲೆಯೊಳಗೆ ನೋರಾರು ಪ್ರಶ್ನೆಗಳು ಸುಳಿದು ಹೋದವು. ಇವೆಲ್ಲಾ ಈಗಾಗಲೇ ನನಗೆ ಆಗಾಗ ಕಾಡಿದ ಪ್ರಶ್ನೆಗಳೇ ಆಗಿವೆ.
ಇಂದು ಸರ್ವಜ್ಞ ಮತ್ತು ತಿರುವಳ್ಳವರ್ ಅಥವಾ ಯಾವುದೇ ಸಂತನಾಗಲೀ ಇವರಿಗೆ ಬೇಕಾಗಿರುವುದು ಓಟಿನ ಲೆಕ್ಕಾಚಾರದ ಮೇಲೆ ಮಾತ್ರ! ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ಪುಟಗಟ್ಟಲೆ ಅಂಕಿ-ಸಂಖ್ಯೆಗಳನ್ನು ಹಿಡಿದು ಊರೂರು ಅಲೆದು ಕನ್ನಡ ಜಾಗೃತಿಗೆ ಸ್ವಲ್ಪವಾದರೂ ಕಾರನರಾಗಿದ್ದ ಕನ್ನಡ ಶಕ್ತಿ ಕೇಂದ್ರವೇ ಈಗ ತಮಗೆ ಪ್ರಿಯವಾದ ಸರ್ಕಾರವಿದೆ ಎಂದು ಕಣ್ಣು ಮುಚ್ಚಿ ಕುಳಿತುಕೊಂಡಿಬಿಟ್ಟಿದೆ. ತಮಗೆ ಬೇಕಾದ ವಿಷಯಗಳಿಗೆ ತಕ್ಷಣ ಸತ್ಯಶೋಧನೆ ಸಮಿತಿಗಳನ್ನು ಕಟ್ಟಿಕೊಂಡು ಸತ್ಯವನ್ನು ಹುಡುಕಿ-ಹುಟ್ಟುಹಾಕಿ ಬೆಂಗಳೂರಿನಲ್ಲಿ ಪ್ರೆಸ್ ಮೀಟ್ ಮಾಡಿಯೇ ವಿರಮಿಸುತ್ತಿದ್ದವರೆಲ್ಲಾ ಕನ್ನಡದ ಗಣಿ-ಗಡಿ ಧೂಳಿಪಟವಾಗುತ್ತಿದ್ದರೂ ಜಪ್ಪೆನ್ನುತ್ತಿಲ್ಲ. ಇದಲ್ಲವೂ ಕೌತುಕದಂತೆ ಕನಸಿನಂತೆ ಕಾಣುವ ಪರಸರ ನಿರ್ಮಾಣವಾಗಿದೆ. ಆ ನಿರ್ಮಾಣವೂ ವ್ಯವಸ್ಥಿತ ಪಿತೂರಿಯಂತೆ ಕಂಡರೆ ಅದು ಬಡ ಕನ್ನಡಿಗನ ತಪ್ಪಲ್ಲ!