
-ಸಂತೋಷ್ ಅನಂತಪುರ
ಎಲ್ಲವೂ ಎಲ್ಲರಿಗೂ ಸಿದ್ದಿಸುವುದಿಲ್ಲ…ಸಿದ್ದಿಸಿದರೂ ಹೆಚ್ಚಿನದನ್ನು ಅಭಿವ್ಯಕ್ತಿಸಲು ಸಾಧ್ಯವಾಗುವುದಿಲ್ಲ ! ಹೀಗಂತ ಜನ ಮಾತನಾಡಿಕೊಳ್ಳುವುದಿದೆ. ಇರಲಿ. ಬ್ಲಾಗ್ ಗಳ ಅಬ್ಬರದ ಸಮಯವದು. ಎಲ್ಲರೂ ಎಲ್ಲವನ್ನು, ಅಂದು ಕೊಂಡದ್ದನ್ನು, ಅನಿಸುತಿರುವುದನ್ನು, ಇನ್ನೂ ಏನೆಲ್ಲವನ್ನೂ ಬ್ಲಾಗ್ ಮಂಡಲದಲ್ಲಿ ಟೈಪಿಸಿ ಬಿಸಾಕುತ್ತಿದ್ದ ಕಾಲವದು. ಹೃದಯದಿಂದ ಭಾವನೆಯನ್ನು , ಮನಸ್ಸಿನಿಂದ ತರ್ಕಗಳನ್ನು ಹೊರ ಹಾಕುತ್ತಿದ್ದ ಲೇಖಕರ ಬಳಗ ಸಾಕಷ್ಟಿತ್ತು.ಈಗಲೂ ಇದೆ. ಆದರೆ ಅಬ್ಬರ ಕೊಂಚ ಕಡಿಮೆ ಅಷ್ಟೆ. ಅದರಲ್ಲೂ ಯುವ ಲೇಖಕ / ಕಿ ಯರು ತೋರುತ್ತಿದ್ದ ಉತ್ಸಾಹ ಶ್ಲಾಘನೀಯವೆ ಸರಿ. ಹೊಚ್ಚ ಹೊಳಪಿನ ಚಿಂತನೆಗಳು, ಭಾವ ಸೂಕ್ಷ್ಮತೆಗಳು…. ಹೀಗೆ ಅಂದುಕೊಡದ್ದನ್ನೆಲ್ಲ ಬರೆದು ಕಕ್ಕುವ ಕಾಯಕ ಅವರವರ ಬ್ಲಾಗ್ ಪ್ರಪಂಚದಲ್ಲಿ ನಡೆಯುತ್ತಿತ್ತು. ಅದೇ ರೀತಿ ಓದಲೇಬೇಕಾದ ಬ್ಲಾಗ್ ಗಳೂ ಇದ್ದುವು. ಅದರಲ್ಲಿ ನನಗೆ ವಿಶೇಷವಾಗಿ ಕಂಡಿದ್ದು ಶ್ರೀದೇವಿ ಕಳಸದ ರ ಬ್ಲಾಗ್. ಸೂಕ್ಷ್ಮ ಮನಸ್ಸಿನ, ಭಾವ ತೀವ್ರತೆಯ, ಮಹಿಳಾ ಸಂವೇದನೆಗಳನ್ನೊಳಗೊಂಡ, ಸೊಗಸಾದ ಭಾಷೆಯ ಮೂಸೆಯಿನ್ದ ಹೊರಬಂದ ಕಾವ್ಯ ಮತ್ತು ಕಥನಗಳವು.
ಬಹಳಷ್ಟು ಇಷ್ಟ ಪಟ್ಟ ಹಲವು ಕಾವ್ಯ–ಕಥನಗಳು ನನ್ನನ್ನು ಅವರ ಬಳಿ ಕೊಂಡೋಯ್ಯಿತು ಎಂದರೆ ತಪ್ಪಾಗಲಾರದು. ಎಂದಿನಂತೆ ಅದೇ ಪ್ರಶ್ನೆಗಳು ಎದುರಾದುವು….ಹೇಗೆ ? ಎಲ್ಲಿ? ಎಂದು ದಾರಿ ಹುಡುಕುತ್ತಿರುವಾಗ ದೊರಕಿದ್ದು ಸೋಶಿಯಲ್ ನೆಟ್ವರ್ಕಿಂಗ್ ಸೈಟ್ ಗಳಾದ ಓರ್ಕುಟ್, ಫೇಸ್ಬುಕ್. ಸರಿ ಎಂದು ಗೆಳೆತನದ ಅರ್ಜಿ ಗುಜರಾಯಿಸಿದೆ. ಎಲ್ಲ ಹುಡುಗರಂತೆ ನನ್ನನ್ನೂ ಪರಿಗಣಿಸಿದರೋ ಏನೋ ತಿಳಿಯಲಿಲ್ಲ !! ಅಂತೂ ಅರ್ಜಿ ಸ್ವೀಕೃತವಾದ ಕುರಿತು ಯಾವುದೇ ಮಾಹಿತಿ ಇಲ್ಲ. ನನ್ನ ಪಾಡು ನಿತ್ಯವೂ ಅಂಚೆ ಅಣ್ಣನಿಗೆ ಕಾಯುವಂತಾಯಿತು ! ಅಂತೂ ಒಂದು ದಿನ ” ನಿಮ್ಮ ಗೆಳೆತನದ ಅರ್ಜಿ ಸ್ವೀಕೃತವಾಗಿದೆ ” ಎಂದು ನನಗೊಂದು ಮಿಂಚ೦ಚೆ ಬಂತು. ಬಂಧ ಬೆಳೆಸಲು ಇದೊಂದು ಉತ್ತಮ ಅವಕಾಶವೆಂದು ತಿಳಿದು ಅವರಿಗೆ ಈ ಮಾಧ್ಯಮದ ಮೂಲಕ ಅಲ್ಲೊಂದು ಇಲ್ಲೊಂದು ಸಂದೇಶಗಳನ್ನು, ಅವರ ಬರಹದ ಕುರಿತಾದ ನನ್ನ ಅನಿಸಿಕೆಗಳನ್ನು ಹಂಚಿಕೊಂಡೆ. ಮುಕ್ತವಾಗಿ ಚರ್ಚಿಸಲು ಅವಕಾಶಗಳು ಒದಗಿ ಬರಲಿಲ್ಲ. ಹಾಗೇ ಒಂದು ದಿನ ‘ಸುಧಾ‘ ವಾರ ಪತ್ರಿಕೆಯ ಸಂಪಾದಕರಾದ ಬಿ.ಎಮ್. ಹನೀಫ್ ಸಾಹೆಬ್ರನ್ನು ಕಾಣಲು ಹೋಗಿದ್ದೆ. ನಮ್ಮ ಕಂಪೆನಿಯ ಉತ್ಪನ್ನದ ಕುರಿತಾದ ಲೇಖನವನ್ನು ‘ಸುಧಾ‘ದಲ್ಲಿ ಪ್ರಕಟಿಸುವ ಕುರಿತಾಗಿತ್ತು ನನ್ನ ಭೇಟಿ. ಹನೀಫ್ ಅವರು ನಮ್ಮ ಕಂಪೆನಿಯ ಎಲ್ಲಾ ವಿಷಯಗಳನ್ನು, ಉತ್ಪನ್ನದ ಕುರಿತಾಗಿಯೂ ಚರ್ಚಿಸಿ ನಂತರ ಆ ಅಸೈನ್ಮೆಂಟ್ ಅನ್ನು, ತಂತ್ರಜ್ಞಾನದ ಕುರಿತಾಗಿ ತಿಳಿದುಕೊಂಡಿರುವ ಶ್ರೀದೇವಿಯವರಿಗೆ ಕೊಡುವುದಾಗಿ ತಿಳಿಸಿ ಅವರನ್ನು ಕರೆದರು. ಹನೀಫ್ ಅವರು ನನ್ನ ಪರಿಚಯವನ್ನು ಹೇಳುವಾಗ ಇತ್ತ ಶ್ರೀದೇವಿಯವರು, ” ಗೊತ್ತು ಸಾರ್ ಇವರು, ನಾವು ಓರ್ಕುಟ್ ಫ್ರೆಂಡ್ಸ್ ” ಎಂದರು. ಅರೆ..!!! ಹೌದಲ್ಲ…ಮರೆತೇ ಬಿಟ್ಟಿದ್ದೆ ಎಂದು ಮನದಲ್ಲೇ ಹೇಳಿಕೊಂಡರೂ, ತಕ್ಷಣ ಎಚ್ಚೆತ್ತು ಹೌದೌದು…ಎಂದು ಉತ್ತರಿಸಿದೆ. ಸರಿ ಹಾಗಾದರೆ ನಿಮ್ಮ ಕೆಲಸ ಸುಲಭವಾಯಿತು…ಅವರ ಬಳಿ ಮಾತನಾಡಿ, ನಿಮ್ಮ ಪ್ರಾಡಕ್ಟ್ ಬಗ್ಗೆ ತಿಳಿಹೇಳಿ ಎಂದು ಹನೀಫ್ ಅವರು ನನ್ನನ್ನು ಅವರ ಸುಪರ್ದಿಗೊಪ್ಪಿಸಿದರು. ಆಮೇಲೆ ಅಲ್ಲಿ ನಾವು ಮಾತನಾಡಿದ್ದಷ್ಟೂ ಅವರ ಕಾವ್ಯ–ಕಥನಗಳ ಬಗ್ಗೆನೇ ಆಗಿತ್ತು, ಇತ್ತ ನಮ್ಮ ಕಂಪೆನಿಯ ಉತ್ಪನ್ನವು ನನ್ನ ಮನದ ಮೂಲೆಯಲ್ಲಿ ಕುಳಿತು ಚಡಪಡಿಸುತ್ತಿತು ! ಇದು ನಮ್ಮ ಮೊದಲ ಭೇಟಿ. ನಂತರ ನಾವು ಅಲ್ಲಿ ಇಲ್ಲಿ ಭೇಟಿಯಾಗಿದ್ದಿದೆ. ಕಥೆ–ಕಾವ್ಯ–ಸಂಗೀತ–ಸಿನೆಮಾ–ನಾಟಕಗಳಲ್ಲದೆ, ಹಲವು ಪ್ರಚಲಿತ ವಿಧ್ಯಾಮಾನಗಳ ಕುರಿತು ಚರ್ಚಿಸಿದ್ದಿದೆ, ವಿಶ್ಲೇಷಿಸಿದ್ದೂ ಇದೆ. ಫೋನಿನಲ್ಲಿ ಕೊರೆದದ್ದು, ಕೊರೆದು ಕೊಂಡದ್ದು ಬಹಳಷ್ಟು ಇದೆ.
ಇಂತಿಪ್ಪ” ಶ್ರೀದೇವಿ ಕಳಸದ ” ರ ಬರಹವನ್ನು ನಾನು ಮೊದಲಬಾರಿಗೆ ಅಂದರೆ ಅವರ ಬ್ಲಾಗ್ ಅನ್ನು ಓದುವು ಮೊದಲು ನೋಡಿದ್ದು–ಓದಿದ್ದು ” ಕೆಂಡ ಸಂಪಿಗೆಯಲ್ಲಿ“. ಅಲ್ಲಿಂದ ಶುರುವಾದ ಅವರ ಬರಹದ ಓದಿನ ಪಯಣ ಇಂದಿಗೂ ಮುಂದುವರಿದಿದೆ. ಯುವ ಲೇಖಕಿ /ಕ ರ ಗುಂಪಿನಲ್ಲಿನ ‘ಬ್ರೈಟ್ ಟ್ಯಾಲೆಂಟ್ ‘ ಈಕೆ. ಇವರು ಕಾವ್ಯ ಕಟ್ಟುವ ಬಗೆಯೇ ವಿಶೇಷ. ಮೊದಲ ಬಾರಿಗೆ ” ಅಂಕಿತ ಯುವ ಪ್ರತಿಭೆಯ” ಅಡಿಯಲ್ಲಿ ಪ್ರಕಟಗೊಂಡ ಇವರ ಕವನ ಸಂಕಲನ ‘ಹಾಡಾಗದ ಸಾಲುಗಳು ‘ ಇಂದು ಎಲ್ಲರ ಬಾಯಲ್ಲೂ ‘ ಹಾಡಾಗಿವೆ‘ ! ಸಂಗೀತದಲ್ಲಿ ಆಳವಾದ ಜ್ಞಾನವಿರುವ ಇವರು ಒಬ್ಬ ಉತ್ತಮ ಗಾಯಕಿಯೂ ಹೌದು. ಹೆಚ್ಚಾಗಿ ಪ್ರಚಲಿತವಲ್ಲದ ಸಾಲುಗಳಿಗೆ ತಾವೇ ರಾಗ ಸಂಯೋಜಿಸಿ ಹಾಡುವ ಖಯಾಲಿ ಇರುವ ಗಾಯಕಿ ಇವರು. ಅದು ಅವರ ಹವ್ಯಾಸಗಳಲ್ಲೊಂದು ಕೂಡ. ಅವರ ಸಂಗೀತ ಜ್ಞಾನವು ಅವರ ಹಲವು ಕಥನ, ಬರಹಗಳಲ್ಲಿ ಸ್ವರ ಸಂಚಾರವನ್ನು ಮಾಡಿದೆ. ರಾಗಗಳು ಪಾತ್ರಗಳಾಗಿ, ಆ ಪಾತ್ರಗಳು ಆ ರಾಗಕ್ಕೆ ತಕ್ಕಂತೆ ಭಾವನೆಗಳನ್ನು ಸ್ಫುರಿಸಿ, ಕಥೆಯಲ್ಲೇ ಒಂದು ರಾಗವನ್ನು ಕಟ್ಟುವ ಬಗೆ ವಿಶಿಷ್ಟವಾದದ್ದು. ಅವರ ಕೆಲವು ಕಥೆಗಳನ್ನು ಓದಿದರೆ, ಕಥೆ ಓದಿದ ಖುಷಿಯ ಜೊತೆಗೆ ಸಂಗೀತದ ಇಂಪಿನ ಸುಖವೂ ಲಭ್ಯ ! ತನ್ನ ಆರು ವರ್ಷದಲ್ಲೇ ಸಂಗೀತಾಭ್ಯಾಸವನ್ನು ಧಾರವಾಡದಲ್ಲಿ ಪ್ರಾರಂಭಿಸಿದ ಇವರು ವಿದ್ವತ್ನಲ್ಲಿ ಅತ್ಯುನ್ನತ ಶ್ರೇಣೀಯಲ್ಲಿ ತೇರ್ಗಡೆ ಹೊಂದಿ, ಧಾರವಾಡ ಆಕಾಶವಾಣಿ ಕಲಾವಿದೆಯೂ ಆಗಿ, ಸಂಗೀತಾಭ್ಯಾಸಕ್ಕಾಗಿ ಹತ್ತು ವರ್ಷಗಳ ಕಾಲ ಸಿಸಿಆರ್ಟಿ ಪ್ರತಿಭಾ ಶಿಷ್ಯವೇತನವನ್ನು ಪಡೆದ ಪ್ರತಿಭೆ ಈಕೆ. ಬರೆಯುವ ಖಯಾಲಿಗೆ ಮತ್ತು ಅಭಿವ್ಯಕ್ತಿಗೆ ಪೂರಕವಾಗಿ ಇಷ್ಟಪಟ್ಟು ಆರಿಸಿಕೊಂಡ ವೃತ್ತಿ ಪತ್ರಿಕೋದ್ಯಮ., ತಾವು ಬರೆಯುವ ವರದಿಗೆ ಕಾವ್ಯದ ಸ್ಪರ್ಶವನ್ನು ನೀಡಿ‘ಜಡ‘ ವಿಷಯಕ್ಕೆ ‘ಚಲನೆ‘ ನೀಡುವ ಇವರ ಲೇಖನಿಯು ಕಾವ್ಯ–ಕಥೆಗಳನ್ನಲ್ಲದೇ, ಚಿತ್ರಕಲೆಯಲ್ಲೂ ತನ್ನ ಛಾಪನ್ನು ಮೂಡಿಸಿದೆ. ಈಕೆ ಒಬ್ಬ ಉತ್ತಮ ಚಿತ್ರ ಕಲಾವಿದೆಯೂ, ಸಂದರ್ಭೋಚಿತವಾಗಿ ಮಾತನಾಡ ಬಲ್ಲ ಉತ್ತಮ ಕಾರ್ಯಕ್ರಮ ನಿರೂಪಕರೂ ಹೌದು !
ಮೃದು ಭಾಷಿ, ಭಾವ ಜೀವಿ,ಸೂಕ್ಷ ಮನಸ್ಸಿನ ಶ್ರೀದೇವಿಯವರ ಆಳವಾದ ಪರಿಶ್ರಮ, ಓದು, ಅಭ್ಯಾಸವು ಇವರನ್ನು ನಮ್ಮ ನಡುವಿನ ಯುವ ಲೇಖಕಿ / ಕ ರ ಬಳಗದಲ್ಲಿ ವಿಶಿಷ್ಟವಾಗಿ ಪರಿಚಯಿಸುತ್ತದೆ ಎಂದರೆ ತಪ್ಪಾಗಲಾರದು !ಪ್ರತಿಭೆಯ ಐಶ್ವರ್ಯವನ್ನು ತನ್ನ ಹೆಸರಿನಲ್ಲೇ ಇಟ್ಟುಕೊಂಡು ನಡೆದಾಡುವ ‘ ಶ್ರೀ‘ – ದೇವಿ ಯುವ ಪೀಳಿಗೆಗೆ ಮಾದರಿಯಾಗಬಲ್ಲರು. ಬೆಳೆಯಲು, ಸಾಧಿಸಲು ಬಹಳಷ್ಟಿದೆ ಎನ್ನುವುದನ್ನು ಮನದಲ್ಲಿಟ್ಟುಕೊಂಡಿರುವುದು ಯಾವತ್ತೂ ಒಳ್ಳೆಯದೇ. ಹಲವು ಪ್ರತಿಭೆಗಳನ್ನು, ಹವ್ಯಾಸಗಳನ್ನು ಮಡಿಲಲ್ಲಿಟ್ಟುಕೊಂಡು ಪೋಷಿಸಿ, ಬೆಳೆಸುತ್ತಿರುವ ಸರಳ, ಸಜ್ಜನಿಕೆಯ ‘ಶ್ರೀದೇವಿ ಕಳಸದ‘ ರನ್ನು – ” ಪ್ರತಿಭೆಯ ಕಳಸ ” ಎಂದು ಕರೆಯುವುದೇ ಉಚಿತವೇನೋ..!? ಎಲ್ಲರ ಮನೆ–ಮನದಲ್ಲೂ ಇಂತಹ ಹೆಣ್ಣು ಮಗಳೊಬ್ಬಳು ಬೆಳಗಬೇಕು. ಇಂತಹವಳು ಹುಟ್ಟಿದ ಮನೆಗೂ– ಕೊಟ್ಟ ಮನೆಗೂ ” ಕಳಸ ” ವೇ ಸರಿ !







ಶ್ರೀದೇವಿಯವರು ಒಳ್ಳೆಯ ಲೇಖಕಿ, ಕವಯಿತ್ರಿ ಅಷ್ಟೇ ಅಲ್ಲ..
ಮಧುರ ಕಂಠದ ಪ್ರತಿಭೆ ಕೂಡ..
ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು ಲೇಖಕರಿಗೂ “ಅವಧಿ” ಕೂಡ…
Such a nice way of introducing a multi talented friend. liked it very much…
🙂
malathi S
Nice introduction! Thanks 🙂