ಸಂದೀಪ್ ಈಶಾನ್ಯ ಅವರ ಕವಿತೆ ‘ಎರಡು ದೇಹಗಳ ನಿರಂತರ ಹೊರಳಾಟದಿಂದ‘ ಅವಧಿಯಲ್ಲಿ ಪ್ರಕಟವಾಗಿತ್ತು .
ಆ ಕವಿತೆ ಇನ್ನೊಬ್ಬಕವಿಯಲ್ಲೂ ಕಿಚ್ಚು ಹಚ್ಚಿತು. ‘ಮಹೀ’ ಅನ್ನುವ ಹೆಸರಿನಲ್ಲಿ ಬರೆಯುವ ಪಶುವೈದ್ಯ ಡಾ ಮಹೇಂದ್ರ ‘ನುಣುಪಾದ ಕಾಲಿನ ಮೇಲೆ ಜಾರೋ ಬಂಡಿಯಾಟ..’ ಬರೆದರು.
ಇದನ್ನು ಓದಿದ ಗೀತಾ ಹೆಗ್ಡೆ ಕಲ್ಮನೆಯವರು ಅದಕ್ಕೆ ಹೌದು ನನಗೂ ಕೋಪ ಬರುತ್ತಿದೆ.. ಎಂದು ಪ್ರತಿಕ್ರಿಯಿಸಿದರು.
ಈಗ ಮತ್ತೆ ಮೈಸೂರಿನಿಂದ ಮತ್ತೊಂದು ಪ್ರತಿಕ್ರಿಯೆ ಕವಿತೆ.
ಬರೆದದ್ದು ನಾಗೇಶ ಮೈಸೂರು
ಈಗ ಓದಿ
ಅಷ್ಟೇ ಅಲ್ಲ, ಈ ಎರಡೂ ಕವಿತೆಗಳು ನಿಮ್ಮೊಳಗೆ ಕಿಚ್ಚು ಹಚ್ಚಿದ್ದಲ್ಲಿ ನೀವೂ ಕವಿತೆ ಮುಂದುವರೆಸಿ
ನಾಗೇಶ ಮೈಸೂರು
ನನಗದೊಂದೆ ವಿಸ್ಮಯ
ಸಂಗಾಟದ ಸಂಗತಿ ಗುನುಗು
ನೋಡುವರೆಲ್ಲ ಕಣ್ಣು ಕಿವಿ ಮೂಗು
ನಯ ನಾಜೂಕು ತೆಳ್ಳ ಬೆಳ್ಳಗಿನ ಸರಕು
ಹಾಲುಗಲ್ಲ ಬಿಳುಪು ದಂತದ ಮೈ
ಚೆಂದದ ತುಟಿ ಕದಪು ಮುಂಗುರುಳು
ಕಣ್ಣು ಮೂಗರಳಿಸಿ ಗುಟ್ಟಲಿ
ಆಸ್ವಾದಿಸೊ ಅದೆಷ್ಟೊ ಕಾನನ ಕೊತ್ತಲ
ಸಂದಿ ಗೊಂದಿ ಕಣಿವೆ ಪರ್ವತ ಶಿಖರ
ದೃಷ್ಟಿ ವಿನಿಮಯ ಬೆಳಕಲೆ
ಎಲ್ಲದರ ವ್ಯಾಪಾರವು ಮೌನ ಸಮ್ಮತ.
ಕಣ್ಣಿಗೆ ಪಟ್ಟಿ ಕಟ್ಟಿದ ಗಾಂಧಾರಿ ನಾನು
ಕೋರೈಸುವ ಕಾಮ ಕಣ್ಣಿದ್ದೂ ಕುರುಡು
ನಾ ಪಟ್ಟಿ ಬಿಚ್ಚುವುದು ತಮದಲ್ಲೆ
ಅವರು ಬೆತ್ತಲಾಗುವುದು ಕತ್ತಲಲೆ..
ದೀಪದ ಬೆಳಕು ಕಾಣದ್ದೆಲ್ಲ ಕಾಣುವೆ –
ಅಂಧಕಾರದ ಬಿಸಿಯುಸಿರಲಿ ಅನನ್ಯ
ಅನುಭವಿಸಿದವರನೆ ನಾ ಅನುಭವಿಸುವ
ಅದ್ಭುತ ಮಿಲನ ಸಮಭೋಗದ ಕಾವ್ಯ
ಅವರಿಸಿಕೊಂಡವರಿಬ್ಬರ ನಡುವೆ
ನುಸುಳುವ ಗಾಳಿ, ನುಸುಳದ ನಿರ್ವಾತ
ಎಲ್ಲೆಂದರಲ್ಲೆನ್ನ ದಾಂಧಲೆಯಾಗ ;
ನಿಚ್ಚಳ ನೋಟ, ಗೂಬೆಯ ದೃಷ್ಟಿ
ಆವರಿಸಿಬಿಡುವೆನವರೆಲ್ಲ ಗುಟ್ಟನು
ಅವರೂ ಕಾಣದ ಅವರೊಳಗ್ಹೊರಗಿನ
ಪ್ರತಿ ಸಂದಿನ ನಡುವಿನ ಬೆತ್ತಲೆಯಾಗಿ.
ಆದರೂ ಮತ್ತೆ ಕಾಡುವ ವಿಸ್ಮಯ
ಹೇಗೂ ಕಾಣದ ತಮದೆ
ಕಣ್ಮುಚ್ಚಿ ಕುರುಡೆ ಅನುಭವಿಸೆ
ಬೆಳಕಲದೇಕೊ ಅಷ್ಟು ಜುಗ್ಗಾಟ, ಜಗ್ಗಾಟ..?
ತುಲನೆ ತಲ್ಲಣ ವಿಮರ್ಶೆ
ಆಕರ್ಷಣೆಗಳ ಬೊಗಸೆ ..
ನಾನೆಂಬ ಕತ್ತಲೆಯೇ ಸೊಗಸೆ..!
ಗಾಂಧಾರಿಯ ಮನದಿಂಗಿತ ಚೆನ್ನಾಗಿ ಮೂಡಿ ಬಂದಿದೆ. Super
Thank you 🙂