ಕಿರಸೂರ ಗಿರಿಯಪ್ಪ
ಗದ್ದೆಯ ನಾಟಿಯಲಿ ತಲ್ಲಿನಗೊಂಡ ಕಣ್ಣುಗಳು
ಸಾಲು ನಾಗರಗಳ ಕಣ್ಣು ತಪ್ಪಿಸಿ ಬಯಲಿಗೆ ಬಿದ್ದ ಬಂಡೆಯಂತೆ
ಬಿಸಿ ನೆತ್ತಿಯಲಿ ಕೆಸರ ಉಂಡೆಯನು ಹೊಕ್ಕಳಿಗೆ ಹೊತ್ತಿಕೊಳ್ಳುವವು
ಪರದೇಶಿ ಬೀದಿಯ ನಾಡಿಯಲಿ
ಕುಸಿದ ಕರುಳು ಬೆಸುಗೆಗೊಳ್ಳಲಿಯೆಂದು
ಬಿರಿದ ರಾತ್ರಿಯಲಿ ಕೊಳೆತ ಕನಸುಗಳ ಆಯುವ ಕಣ್ಣುಗಳು
ಕೆಂಪು ಧೂಳಿನ ಹುಡಿಯಲಿ ನೊಂದ ಮೆಲಕುಗಳ ಹುಡುಕುತ
ಕುಡಗೋಲಿನ ಬಾಯಿಗೆ ತೆನೆಗಳ ನಗಿಸುತ
ಕಾಲು ಬೀದಿಯಲಿ ಮೆಲಕು ಹಾಕುವವು
ಎದೆಯ ನಿದ್ರೆಗೆ ಯೌವ್ವನದ ನಾಳೆಗಳ ಹುಡುಕುತ್ತಾ
ಮಣ್ಣು ಹೆಂಟೆಗಳ ಮಧುರಗೊಳಿಸುವ ಇರುಳ ನಿರಿಗೆಗಳು
ಸಾಲು ತಿಗಣಿಗಳ ಗೋರಿ ಮೇಲೆ ರಕ್ತದ ನೆನಪು ಬಿತ್ತಿ
ಪಾಪದ ಕೂಸಾಗಿ ಬೆಳೆದ ಅವಳ ನೆತ್ತಯ ಕಪ್ಪು ಕೊಳೆ ತೊಳೆಯಲು
ನವಿಲ ಸೆರಗೊಳಗೆ ಕಣ್ಣೀರ ಲೇಪನ ಒತ್ತಿದವು
ಬೆಳಕ ಮೂತಿಯನ್ನು ಹೊಲೆಯುವ ಚರಿತ್ರೆಯ ಉಡಿಯ ಹೊಕ್ಕ ನವಿಲ ಹೆಜ್ಜೆಗಳು
ಸುಕ್ಕುಗಟ್ಟಿದ ರಾತ್ರಿಯ ಕೀವು ಮಾಯಲೆಂದು
ದಾರಿ ಕಾಣದ ಪತಂಗವೊಂದು ಕೆನ್ನಯ ಮೇಲೆ ಗೂಡು ನೇಯ್ದು
ಹಣೆಯ ಗೆರೆಯಲಿ ಉಸಿರು ನೇತುಕೊಂಡಿದೆ
ಎತ್ತ ಹೊರಳಿದರೂ ಚುಕ್ಕಿಗ¼ ಚಿತ್ತÀ ನೆನಪಲಿ ಉಳಿಸಲು ಸಾದ್ಯವಾಗುತ್ತಿಲ್ಲ
ಪವಿತ್ರತೆಯ ಪಕ್ಕೆಲುಬು ಹೊಕ್ಕ ನವಿಲೊಳಗೆ
ಸಂಶಯದ ಸಲಾಕೆ ತೂಗುಗತ್ತಿಯಂತೆ ತೇಲುತ್ತಿದೆ
ಹೌದು
ಎದೆಯ ಗರಿಯಲಿ ನಾನೊಂದು ಇತಿಹಾಸದ ಅಕ್ರಮ ಸಂತಾನ






0 Comments