ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪತ್ರಿಕಾ ಮನೆಯೊಳಗಿನ ದುರ್ಘಟನೆಗಳು

ಬಿ ಎಂ ಬಶೀರ್

ದುರ್ಘಟನೆ-1
ನೀವು ಇದನ್ನು ನಂಬಿದರೆ ನಂಬಿ. ಬಿಟ್ಟರೆ ಬಿಡಿ.
ಪತ್ರಿಕೆಯ ಮನೆಯೊಳಗೇ ಕೆಲವೊಮ್ಮೆ ಉಪ ಸಂಪಾದಕರ ಕ್ರೀಯೇಟಿವಿಟಿ ಯಿಂದ ಹತ್ತು ಹಲವು ಅನಾಹುತಗಳಾಗುತ್ತೆ.
ಮತ್ತು ಅದರ ಬಲಿಪಶು ಓದುನಾಗಿರುತ್ತಾನೆ.
ತುಂಬಾ ವರ್ಷಗಳ ಹಿಂದೆ ನಾನೊಂದು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆದ ಅನುಭವ.
ಉಪ ಸಂಪಾದಕರು ಗಂಭೀರವಾಗಿ ಯೋಚನೆ ಮಾಡುತ್ತಾ ಕೂತಿದ್ದರು.
ಏನು ಎಂದು ಕೇಳಿದೆ “ಒಂಟಿ ಹೆಣ್ಣಿನ ಮೇಲೆ ೯ ಜನ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಇದರ ಭೀಕರತೆಯನ್ನು ಹೇಳುವ ತಲೆಬರಹ ಬೇಕಿತ್ತು. ಹೊಳೆಯುತ್ತಿಲ್ಲ” ಎಂದ.
“ಬರ್ಬರ ಅತ್ಯಾಚಾರ” ಎಂದು ಬರೀರಿ ಎಂದೆ.
“ಆದರೆ ಇದು ಅದಕ್ಕಿಂತಲೂ ಭೀಕರವಾದುದು. ಪಂಚ್ ಸಾಕಾಗಲ್ಲ” ಎಂದ. ಸಾಯಲಿ ಎಂದು ನಾನಲ್ಲಿಂದ ತೊಲಗಿದೆ. ಬಂದ ಹೋದವರಲ್ಲೆಲ್ಲ ಅವನು ಇಡೀ ದಿನ ತಲೆಬರಹಕ್ಕಾಗಿ ಯಾಚಿಸುತ್ತಿದ್ದ.
ಅದೇನು ಹೊಳೆಯಿತೋ, ಅದೇನು ಬರೆದನೋ ಗೊತ್ತಿಲ್ಲ.
ಮರುದಿನ ಪತ್ರಿಕೆಯಲ್ಲಿ ತಲೆಬರಹ ಹೀಗೆ ಪ್ರಕಟವಾಗಿತ್ತು “ಯುವತಿಯ ಮೇಲೆ ಒಂಬತ್ತು ಮಂದಿಯಿಂದ ರೋಮಾಂಚಕ ಅತ್ಯಾಚಾರ”
ಮರು ದಿನ ಕಚೇರಿ ಪ್ರವೇಶಿಸಿದಾಗ ಪ್ರಧಾನ ಸಂಪಾದಕರು ಆ ಉಪಸಂಪಾದಕನ ಮೇಲೆ ರೋಮಾಂಚಕವಾಗಿ ಹರಿ ಹಾಯುತ್ತಿದ್ದರು.

ದುರ್ಘಟನೆ-2
ಇದು ಜನವಾಹಿನಿ ಪತ್ರಿಕೆಯಲ್ಲಿದ್ದಾಗ ನಡೆದ ಘಟನೆ. ಆಗ ಕಾರ್ಗಿಲ್ ಯುದ್ಧದ ಸಂದರ್ಭ. ದೇಶಪ್ರೇಮ ನಮ್ಮ ಧಮನಿ ಧಮನಿಯಲ್ಲಿ ಕುದಿಯುತ್ತಿರುವ ಹೊತ್ತು. ಈ ದೇಶದ ಮುಸ್ಲಿಮರಿಗೋ ತಮ್ಮ ದೇಶಪ್ರೇಮವನ್ನು ಪದೇ ಪದೇ ಸಾಬೀತು ಮಾಡಲೇಬೇಕಾದಂತಹ ಪರಿಸ್ಥಿತಿ. ಆದುದರಿಂದ ಬೀದಿ ಬೀದಿಯಲ್ಲಿ ವಿವಿಧ ಧಾರ್ಮಿಕ ಸಂಘಟನೆಗಳು ಪಾಕಿಸ್ತಾನದ ವಿರುದ್ಧ ಮೆರವಣಿಗೆಗಳನ್ನು ಹಮ್ಮಿಕೊಂಡು, ಕಾರ್ಗಿಲ್ ನಿಧಿಯನ್ನು ಸಂಗ್ರಹಿಸಿ ಪ್ರಧಾನಿ ನಿಧಿಗೆ ಅರ್ಪಿಸುತ್ತಿದ್ದರು. ಬಹುಶಃ ಶಿವಮೊಗ್ಗದಲ್ಲಿರಬೇಕು. ಅಲ್ಲಿನ ಮುಸ್ಲಿಮ್ ಧಾರ್ಮಿಕ ಸಂಘಟನೆಯೊಂದು ಅಂತಹದೇ ಒಂದು ದೊಡ್ಡ ಮೆರವಣಿಗೆ ನಡೆಸಿ, ಕಾರ್ಗಿಲ್ ನಿಧಿ ಸಂಗ್ರಹಿಸಿ ಜಿಲ್ಲಾಡಳಿತದ ಮೂಲಕ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯವರ ನಿಧಿಗೆ ಅರ್ಪಿಸಿತು. ಅದನ್ನು ಅಲ್ಲಿನ ವರದಿಗಾರರು ಫ್ಯಾಕ್ಸ್ ಮೂಲಕ ಕಚೇರಿಗೆ ತಲುಪಿಸಿಯೂ ಆಯಿತು. ಫ್ಯಾಕ್ಸನ್ನು ಕಂಪೋಸ್ ಮಾಡುವಾಗ ಉಪಸಂಪಾದಕರೊಬ್ಬರ ಕೈಯಲ್ಲಿ ಭಾರೀ ಅನಾಹುತವೊಂದು ನಡೆದು ಹೋಯಿತು. ‘….ಇಂತಹ ಸಂಘಟನೆಯವರು ಕಾರ್ಗಿಲ್ ನಿಧಿ ಸಂಗ್ರಹಿಸಿ ಪ್ರಧಾನಿ ನವಾಜ್ ಶರೀಫ್ ಅವರ ನಿಧಿಗೆ ಅರ್ಪಿಸಿದರು’ ಎಂದು ಬರೆದು ಬಿಟ್ಟರು. ವಾಜಪೇಯಿ ಹೆಸರಿನ ಬದಲಿಗೆ ನವಾಜ್‌ಶರೀಫ್ ಎಂದು ಕಂಪೋಸ್ ಮಾಡಿ ಬಿಟ್ಟಿದ್ದರು. ಆ ಪ್ರಮಾದ ಹೇಗಾಯಿತು ಎನ್ನುವುದು ಮಾತ್ರ ಒಂದು ಚೋದ್ಯವೇ ಆಗಿದೆ. ಆಗ ಪ್ರೂಫ್‌ರೀಡರ್‌ಗಳು ಎನ್ನುವ ಹುದ್ದೆ ಇರಲಿಲ್ಲ. ಪ್ರೂಫ್‌ರೀಡರ್ ಕೆಲಸವನ್ನು ಉಪಸಂಪಾದಕನೇ ನಿರ್ವಹಿಸಬೇಕಾಗಿತ್ತು. ಅದೇ ಉಪಸಂಪಾದಕರು ಅದಕ್ಕೆ ಪ್ರೂಫ್ ಹಾಕಿ ಕಳುಹಿಸಿ ಬಿಟ್ಟರು. ಮರುದಿನ ಮುದ್ರಣ ಆಗಿಯೇ ಬಿಟ್ಟಿತು.
ಕೇಳಬೇಕೆ? ಸಂಘಪರಿವಾರದ ಮುಖಂಡರು ಪತ್ರಿಕಾಗೋಷ್ಠಿ ಕರೆದು ಮುಸ್ಲಿಮರ ದೇಶದ್ರೋಹವನ್ನು ಖಂಡಿಸಿಯೇ ಬಿಟ್ಟರು. ಸ್ಥಳೀಯ ಠಾಣೆಯಲ್ಲಿ ದೂರೂ ದಾಖಲಾಯಿತು. ಪತ್ರಿಕೆಯ ಸಂಪಾದಕರಿಗೋ ತಾವೇ ಯುದ್ಧಭೂಮಿಯಲ್ಲಿ ಸಿಲುಕಿಕೊಂಡ ಅನುಭವ. ಕೊನೆಗೂ ಅದೇನೋ ಸ್ಪಷ್ಟೀಕರಣ ನೀಡಿ, ಮಾತುಕತೆ ನಡೆಸಿ ಪ್ರಕರಣವನ್ನು ಮುಗಿಸಲಾಯಿತು.
ಘಟನೆ-3
ಇದೂ ಜನವಾಹಿನಿ ಪತ್ರಿಕೆಯಲ್ಲಿದ್ದಾಗಲೇ ನಡೆದ ಘಟನೆ. ಆಗ ಪತ್ರಿಕೆಗೊಬ್ಬರು ಜನರಲ್ ಮ್ಯಾನೇಜರ್ ಇದ್ದರು. ಅವರು ನಿವತ್ತ ಕರ್ನಲ್ ಆಗಿದ್ದರು. ಭಯಂಕರ ಶಿಸ್ತಿನವರು ಕೂಡ. ಆದರೆ ಅವರಿಗೆ ಸರಿಯಾಗಿ ಕನ್ನಡ ಬರೋದಿಲ್ಲ. ಹೀಗಿದ್ದರೂ ಅವರು ಸಂಪಾದಕೀಯ ವಿಭಾಗದೊಳಗೆ ಆಗಾಗ ತಲೆ ಹಾಕುತ್ತಿದ್ದರು. ಯಾರಾದರೂ ತಪ್ಪುಗಳ ಬಗ್ಗೆ ದೂರು ನೀಡಿದರೆ ತಕ್ಷಣ ಸಂಪಾದಕೀಯ ಮನೆಯೊಳಗೆ ಬಂದು ಅದನ್ನು ವಿಚಾರಿಸುವುದು, ಸಂಪಾದಕೀಯ ವಿಭಾಗಕ್ಕೆ ಬಂದ ಲಕೋಟೆಗಳನ್ನು ಒಡೆಯುವುದು, ಕೆಲವನ್ನು ಸೆನ್ಸಾರ್ ಮಾಡುವುದು ಇತ್ಯಾದಿಗಳೆಲ್ಲ ನಡೆಯುತ್ತಿತ್ತು. ಪ್ರಧಾನ ಸಂಪಾದಕರಿಗಿಂತ ಈ ಮ್ಯಾನೇಜರ್‌ಗೇ ಉಪಸಂಪಾದಕರುಗಳು ಹೆಚ್ಚು ಹೆದರುತ್ತಿದ್ದರು.
ಒಂದು ದಿನ ಸಂಪಾದಕೀಯ ವಿಭಾಗದಲ್ಲಿ ಉಪಸಂಪಾದಕರೊಬ್ಬರಿಂದ ಒಂದು ದೊಡ್ಡ ಅನಾಹುತವಾಯಿತು. ಸೋನಿಯಾಗಾಂಧಿ ಇರುವ ಫೋಟೋ ಒಂದಕ್ಕೆ ಕ್ಯಾಪ್ಶನ್ ಬರೆಯುವ ಸಂದರ್ಭದಲ್ಲಿ, ಸೋ ಬದಲಿಗೆ ಯೋ (ನಂಬಿದರೆ ನಂಬಿ, ಬಿಟ್ಟರೆ ಬಿಡಿ) ಎಂದು ಕಂಪೋಸ್ ಮಾಡಿ ಬಿಟ್ಟರು. ಸ ಮತ್ತು ಯ ಕೀಲಿಗಳು ತುಂಬಾ ಹತ್ತಿರ ಇದ್ದ ಪರಿಣಾಮವಾಗಿ ಆದ ಅನಾಹುತ ಇದು. ದುರದಷ್ಟಕ್ಕೆ ಎಲ್ಲರ ಕಣ್ಣನ್ನು ತಪ್ಪಿಸಿ ಅದು ಮುದ್ರಣವಾಗಿಯೂ ಬಿಟ್ಟಿತು.
ಮರುದಿನ ಕರ್ನಲ್ ಸಾಹೇಬರು ಬಂದು ಕೂತದ್ದಷ್ಟೇ ಅವರಿಗೊಂದು ಫೋನ್ ಬಂತು. ಶಬ್ದವನ್ನು ಹೇಳಲು ಮುಜುಗರವಾಗುವುದರಿಂದ ‘‘ನಿಮ್ಮ ಪತ್ರಿಕೆಯಲ್ಲಿ ಸೋನಿಯಾ ಹೆಸರಲ್ಲಿ ಸೋ ಬದಲಿಗೆ ಯೋ ಎಂದು ಮುದ್ರಣವಾಗಿದೆ’’ ಎಂದು ಓದುಗ ದೊರೆ ದೂರು ಹೇಳಿದರು.
ಕರ್ನಲ್ ಸಾಹೇಬರಿಗೆ ಅಂದು ಯಾಕೋ ಸಂಪಾದಕೀಯ ವಿಭಾಗದ ಮೇಲೆ ಕರುಣೆ ಉಕ್ಕಿತ್ತು ‘‘ಒಂದು ಸಣ್ಣ ಅಕ್ಷರ ಆಚೆ ಈಚೆ ಆಗುವುದು ಸಹಜ. ಅದನ್ನೆಲ್ಲಾ ದೊಡ್ಡದು ಮಾಡಬಾರದು….’’ ಎಂದೆಲ್ಲ ತಮ್ಮ ಮಿಲಿಟರಿ ಇಂಗ್ಲಿಷ್‌ನಲ್ಲಿ ಫೋನ್ ಮಾಡಿದ ಓದುಗರ ಮೇಲೆಯೇ ಹರಿ ಹಾಯ್ದರು. ವಿಪರ್ಯಾಸವೆಂದರೆ, ಈ ಶಬ್ದ ಬದಲಾವಣೆಯಿಂದಾಗಿ ಆದ ಅರ್ಥ ಬದಲಾವಣೆ ಅವರಿಗೆ ಗೊತ್ತೇ ಇರಲಿಲ್ಲ. ಅಷ್ಟರಲ್ಲಿ ಯಾರೋ ಬಂದು, ಸೋ ಬದಲಿಗೆ ಯೋ ಬಳಸಿದರೆ ಏನಾಗುತ್ತದೆ ಎನ್ನುವುದನ್ನು ವಿವರಿಸಿದ್ದೇ, ಕುರ್ಚಿಯಿಂದ ಒಮ್ಮೆಲೆ ಹಾರಿಬಿದ್ದಿದ್ದರು. ಕರ್ನಲ್ ಸೀದಾ ಸಂಪಾದಕೀಯ ವಿಭಾಗಕ್ಕೆ ಹೋದವರೇ ಫೈರಿಂಗ್ ಆರಂಭಿಸಿದರು.
ದುರ್ಘಟನೆ-4
ಇದೂ ನಾನೊಂದು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವಾಗಲೇ ನಡೆದಿರುವುದು. ಪತ್ರಿಕೆಗೆ ಹೊಸ ವಿಶೇಷ ಸಂಪಾದಕರೊಬ್ಬರನ್ನು ದೊಡ್ಡ ಪತ್ರಿಕೆಯೊಂದರಿಂದ ತರಿಸಲಾಯಿತು. ಅವರು ರಾಜ್ಯ ಮಟ್ಟದ ಪತ್ರಿಕೆಯೊಂದರಲ್ಲಿ ಸುಮಾರು 15 ವರ್ಷ ಕೆಲಸ ಮಾಡಿದ್ದರು. ಆದರೆ ಮುಖಪುಟ ನಿರ್ವಹಿಸಿ ಅವರಿಗೆ ಅನುಭವವಿಲ್ಲ. ತಲೆಬರಹಗಳನ್ನು ನೀಡಿ ಅದೇನೇನೋ ಎಡವಟ್ಟುಗಳನ್ನು ಮಾಡುತ್ತಿದ್ದರು.
ಅದೇ ಸಂದರ್ಭದಲ್ಲಿ ಅಹ್ಮದಾಬಾದ್‌ನಲ್ಲಿ ಮಾಜಿ ಸಚಿವ ಹರೇನ್ ಪಾಂಡ್ಯ ಅವರ ಹತ್ಯೆಯಾಯಿತು. ‘ಪಂಚ್ ಬೇಕು…ಹೆಡ್ಡಿಂಗ್ ಕ್ಯಾಚ್ ಆಗಬೇಕು…’ ಎಂದೆಲ್ಲ ಹೇಳುತ್ತಾ ಹೇಳುತ್ತಾ ‘ಹರೇನ್ ಪಾಂಡ್ಯಾ ಢಮಾರ್’ ಎಂಬ ಲೀಡ್ ತಲೆಬರಹವನ್ನು ಕೊಟ್ಟೇ ಬಿಟ್ಟರು. ಟ್ಯಾಬ್ಲಾಯಿಡ್‌ಗಳು ಬಳಸುವ ಈ ತಲೆಬರಹವನ್ನು ಒಬ್ಬ ಮಾಜಿ ಸಚಿವನ ಹತ್ಯೆಗೆ ಅವರು ಬಳಸಿದ್ದು ನಿಜಕ್ಕೂ ಆಘಾತದ ವಿಷಯ. ನಾವ್ಯಾರೂ ತುಟಿ ಬಿಚ್ಚುವಂತಿಲ್ಲ. ಪತ್ರಿಕೆಯಲ್ಲಿ ಇದು ಪ್ರಕಟವಾಗಿಯೇ ಬಿಟ್ಟಿತು.
ಕೆಲವೇ ದಿನಗಳಲ್ಲಿ ಈ ಸಂಪಾದಕರೂ ಪತ್ರಿಕಾ ಕಚೇರಿಯಿಂದ ‘ಢಮಾರ್’ ಆದರು.
 

‍ಲೇಖಕರು G

9 August, 2014

3 Comments

  1. ajit

    Hahaha. Quite a dhamaar write up 🙂

  2. Rudranna

    janavahini ya incidents gottiddavu, koneyadu swarasyakaravagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading