
ಸುಧೀಂದ್ರ ಹಾಲ್ದೊಡ್ಡೇರಿ
ಪತ್ರಕರ್ತನೇ ಅಲ್ಲದ ನಾನು, ನಾನೆಂದೂ ನೋಡದ ಪತ್ರಕರ್ತ ಪ.ಗೋ. ಅವರ ಕುರಿತ ಪುಸ್ತಕಕ್ಕೊಂದು ಮುನ್ನುಡಿ ಬರೆದುಕೊಡಲು ಎರಡು ಮುಖ್ಯ ಕಾರಣಗಳಿವೆ.
ಮೊದಲನೆಯದು, ಕಳೆದ ಶತಮಾನದ ಅರವತ್ತರ ದಶಕದಲ್ಲಿ ಪ.ಗೋ. ಅವರು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ನನ್ನ ತಂದೆ ಹಿರಿಯ ಪತ್ರಕರ್ತ ಹೆಚ್.ಆರ್.ನಾಗೇಶರಾವ್ ಅವರ ಆತ್ಮೀಯ ಗೆಳೆಯರಾಗಿದ್ದರು. ಆ ಆತ್ಮೀಯತೆಯ ಕುರುಹಾಗಿ ಪ.ಗೋ. ಅವರು ನನ್ನ ತಂದೆಯವರಿಗೆ ಬರೆದ ಕೆಲವು ಪತ್ರಗಳು ನನ್ನಲ್ಲಿವೆ.
ಆ ಪತ್ರಗಳಲ್ಲಿ ಓರ್ವ ನಿಷ್ಠಾವಂತ ಪತ್ರಕರ್ತನ ಅಂತರಂಗದ ತೊಳಲಾಟಗಳ ಚಿತ್ರಣವಿದೆ. ವೃತ್ತಿಬದ್ಧತೆಯನ್ನು ಕಾಪಾಡಲು ಅವರು ಪಟ್ಟ ಪಡಿಪಾಟಲುಗಳ ಪಟ್ಟಿಯಿದೆ. ಪ.ಗೋ. ಅವರ ಕುರಿತು ಅವರ ಮಗ ಪದ್ಯಾಣ ರಾಮಚಂದ್ರ ಹಂಚಿಕೊಂಡ ಮಾಹಿತಿ ಹಾಗೂ ಈ ಪುಸ್ತಕದಲ್ಲಿ ಚಿದಂಬರ ಬೈಕಂಪಾಡಿ ಉಲ್ಲೇಖಿಸಿದ ಘಟನೆಗಳನ್ನು ಮೆಲುಕು ಹಾಕಿದರೆ ಪ.ಗೋ. ಅವರಲ್ಲಿ ನನ್ನ ತಂದೆಯವರನ್ನೇ ಕಂಡ ಅನುಭವವಾಗುತ್ತದೆ.
ನನ್ನ ತಂದೆಯವರೂ ಅವರಷ್ಟೇ ಸರಳ, ನಿಷ್ಠುರ, ವೃತ್ತಿಬದ್ಧತೆಯ ಪತ್ರಕರ್ತರಾಗಿದ್ದರು, ಕಿರಿಯ ಪತ್ರಕರ್ತರಿಗೆ ಮಾರ್ಗದರ್ಶಕರಾಗಿದ್ದರು, ವೃತ್ತಿಪರ ಸಂಘಟನೆಗಳನ್ನು ಕಟ್ಟಲು ಶ್ರಮಿಸಿದರು …. ಹುಡುಕುತ್ತಾ ಹೊರಟರೆ ಸಾಮ್ಯತೆಗಳ ಪಟ್ಟಿ ದೊಡ್ಡದಾಗುತ್ತದೆ.
ಇನ್ನು ಮುನ್ನುಡಿ ಬರೆಯಲು ನನಗಿದ್ದ ಮತ್ತೊಂದು ಪ್ರೇರೇಪಣೆ – ಇದು ಕನ್ನಡ ಪತ್ರಕರ್ತರೊಬ್ಬರ ಕುರಿತ ಜೀವನಚಿತ್ರ ಹಾಗೂ ಇದನ್ನು ಬರೆದವರು ಮತ್ತೊಬ್ಬ ಕನ್ನಡ ಪತ್ರಕರ್ತರು. ಪೈಪೋಟಿಯ ಈ ದಿನಗಳಲ್ಲಿ ಪತ್ರಕರ್ತರ ಜೀವನಚರಿತ್ರೆ ಪ್ರಕಟವಾಗುವುದು ನಿಜಕ್ಕೂ ಒಂದು ಅಪರೂಪದ ಸಂಗತಿ, ಜತೆಗೆ ಪತ್ರಕರ್ತರೊಬ್ಬರು ಮತ್ತೊಬ್ಬ ಪತ್ರಕರ್ತರ ಕುರಿತು ಬರೆಯುವುದು ಕನ್ನಡದ ಮಟ್ಟಿಗೆ ವಿಶೇಷ ವಿಷಯ.
ಪುಸ್ತಕ ಪ್ರಕಟಿಸುತ್ತಿರುವ ಮೇರುತ್ಸಾಹಿ ರಂಗಸ್ವಾಮಿ ಮೂಕನಹಳ್ಳಿಯವರನ್ನು ಅಭಿನಂದಿಸೋಣ




0 Comments