ಸಲೀಮ್ ಪಾಷಾ
“ಓದಿರಿ” ನಾಟಕ ನೋಡಿಕೊಂಡು ಮಂಡ್ಯದಿಂದ ಈಗಷ್ಟೇ ಬಂದೆ. ಅದ್ಬುತ ನಾಟಕ. ಮೊಹಮ್ಮದ್ ಪೈಗಂಬರರು ಕುರಿತ ಈ ನಾಟಕ ವೀಕ್ಷಕರಲ್ಲಿ ಕಣ್ಣೀರು ತರಿಸಿತು. ಭಕ್ತಿ ಗೌರವ ಮೂಡಿಸಿತು. ಮುಸ್ಲಿಮೇತರರ ಕಣ್ಣಲ್ಲಿಯೂ ನೀರು ತರಿಸಿದ ನಾಟಕ ಈ ” ಓದಿರಿ.” ನಾಟಕ ಉದ್ಘಾಟಿಸಿದವರು ರಂಗಾಯಣದ ನಿರ್ದೇಶಕ ಜನಾರ್ದನ್ (ಜೆನ್ನಿ). ನಾಟಕ ಆಯೋಜಿಸಿದವರು ಮಂಡ್ಯದ ಬೌದ್ಧ ಮಹಾಭಾದವರು. ನಿರ್ದೇಶನ, ವಿನ್ಯಾಸ, ಪರಿಕಲ್ಪನೆ ಮತ್ತು ಡಾ.ಗಣೇಶ್ ಹೆಗ್ಗೋಡು.
ಬೊಳುವಾರು ಮೊಹಮ್ಮದ್ ಕುಂಞಿ ಅತ್ಯುತ್ತಮ ಕಾದಂಬರಿಯನ್ನು ಕನ್ನಡದಲ್ಲಿ ಕೊಟ್ಟಿರುವುದಕ್ಕೆ ಎಲ್ಲರೂ ಅಭಿನಂದಿಸಲೇಬೇಕು. ಎಲ್ಲ ಕಲಾವಿದರು ಮುಸ್ಲಿಮೇತರರೇ ಆಗಿದ್ದರೂ, ಇಸ್ಲಾಂ ಧರ್ಮಕ್ಕೆ, ಮೊಹಮ್ಮದ್ ಪೈಗಂಬರ್ ಕಿಂಚಿತ್ ಲೋಪವಾಗದಂತೆ ಅತ್ಯಂತ ಎಚ್ಚರಿಕೆಯಿಂದ, ಗೌರವದಿಂದ, ಇಸ್ಲಾಂ ಸಂಸ್ಕೃತಿಯನ್ನು ಒಳಗೊಂಡು ಅಭಿನಯಿಸಿದರು.
ಪೈಗಂಬರ್ ರವರ ಜನನಕ್ಕಿಂತ ಮುನ್ನ ಇದ್ದ ಸ್ಥಿತಿ, ಪೈಗಂಬರರು ಜನನ, ಬಾಲ್ಯ, ವಿದ್ಯೆ, ಕನಸು, ಯೌವ್ವನ, ವಿವಾಹ, ಸಾಮಾಜಿಕ ಕಾಳಜಿ, ವಿಗ್ರಹ ವಿರೋಧ, ಪ್ರವಾದಿತ್ವ ಒಲಿಯುವುದು, ಅಂತಿಮ ಸತ್ಯದ ಬೆಳಕು ಮುಂತಾದ ಸನ್ನಿವೇಶಗಳು ನಾಟಕದಲ್ಲಿ ಒಂದೂವರೆ ಗಂಟೆಯ ಪ್ರದರ್ಶನದಲ್ಲಿ ನೋಡಬಹುದಾಗಿದೆ. ಅಲ್ಲಲ್ಲಿ ಅರೇಬಿಕ್ ಸಂಗೀತದ ಸ್ಪರ್ಶ, ಹತರ್ ದರ್ದ್ ಕೋ ದವಾ ಹೈ ಮೊಹಮ್ಮದ್ ಕೆ ಶಹರ್ ಮೆ, ಖವ್ವಾಲಿ ನಾಟಕದುದ್ದಕ್ಕೂ ಅಪ್ಯಾಯಮಾನವಾಗಿ ಮೂಡಿ ಬಂದಿದೆ.
ನಾಟಕದ ನಂತರ ಸಂವಾದ ನಡೆಯಿತು. ಮುಸ್ಲಿಮರು ಸಂತಸದಿಂದ ನಾಟಕ ಮೆಚ್ಚಿದರು. ಕೋಮುವಾದದಂತಹ ಸೂಕ್ಷ್ಮ ಸಂದರ್ಭದಲ್ಲಿಯೂ, ನಾಟಕದ ಮೂಲಕ ಇಸ್ಲಾಂ ಮತ್ತು ಪೈಗಂಬರರ ಕುರಿತು ಧೈರ್ಯದಿಂದ ಮತ್ತು ಒಳ್ಳೆಯ ಧ್ಯೇಯದಿಂದ ನಾಟಕ ಪ್ರದರ್ಶಿಸುತ್ತಿರುವ ತಂಡಕ್ಕೆ ಅಭಿನಂದಿಸಿದರು. ರಾಜ್ಯಾದ್ಯಂತ ಪ್ರದರ್ಶಿಸಿ, ಎಲ್ಲೆಡೆ ಪೈಗಂಬರ್ ಮತ್ತು ಇಸ್ಲಾಂ ಧರ್ಮದ ಕುರಿತು ಇರುವ ಅನುಮಾನ ಬಗೆಹರಿಸುವಂತೆ ಮನವಿ ಮಾಡಿದರು. ಒತ್ತಾಸೆಯಾಗಿ ನಿಲ್ಲುವುದಾಗಿ ಭರವಸೆ ನೀಡಿದರು.
ಶಿವಮೊಗ್ಗ ಸತ್ಯ ಶೋಧನಾ ನಾಟಕ ತಂಡದ ಧೈರ್ಯ ಮೆಚ್ಚಲೇಬೇಕಿದೆ. ಬೆಂಬಲಿಸಬೇಕಿದೆ. ಅವರ ನಾಟಕದ ಮೂಲಕ ಎಲ್ಲೆಡೆ ಪೈಗಂಬರರ ಪರಿಚಯ, ಇಸ್ಲಾಂ ಧರ್ಮದ ಪರಿಚಯ ವ್ಯಾಪಕವಾಗಿ ಮಾಡಬೇಕಿದೆ. ದಯವಿಟ್ಟು ಎಲ್ಲರೂ ತಪ್ಪದೇ “ಓದಿರಿ” ನಾಟಕ ನೋಡಿರಿ. ಗೆಳೆಯರನ್ನು ಸಂಗಡ ಕರೆದೊಯ್ಯಿರಿ. ಆತ್ಮೀಯರೇ, ಒಮ್ಮೆ ಎಲ್ಲ ಮುಸ್ಲಿಮರು, ಮುಸ್ಲಿಮೇತರರು ನೋಡಲೇಬೇಕಾದ ನಾಟಕ “ಓದಿರಿ”.
0 ಪ್ರತಿಕ್ರಿಯೆಗಳು