ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೈಜ ಜೀವನ ಪಾಠ ಕ್ರೀಡೆ…

ಕವಿ ರಾಜ್‌

ನಿನ್ನೆ ಕೇವಲ 60 ಸಾವಿರ ಜನಸಂಖ್ಯೆಯ ಬರ್ಮುಡಾ ದೇಶಕ್ಕೆ ಒಲಿಂಪಿಕ್ಸ್ ನಲ್ಲಿ ಟ್ರಯಾಥ್ಲಾನ್ ಸ್ಪರ್ಧೆಯಲ್ಲಿ ಫ್ಲೋರಾ ಡಫೀ ಎನ್ನುವ ಹೆಣ್ಣು ಮಗಳು ಮೊದಲ ಚಿನ್ನದ ಪದಕ ಗೆದ್ದು ಕೊಟ್ಟಿದ್ದಾಳೆ. ನಮ್ಮ ದೇಶವು ಈ ತನಕ ಎಲ್ಲಾ ಒಲಿಂಪಿಕ್ಸ್ ಗಳನ್ನು ಸೇರಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಗಳಿಸಿರುವುದು 2008ರ ಬೀಜಿಂಗ್ ಒಲಿಂಪಿಕ್ಸ್ ಶೂಟಿಂಗ್ ಸ್ಪರ್ಧೆಯಲ್ಲಿ ಅಭಿನವ್ ಬಿಂದ್ರಾ ಗೆದ್ದ ಒಂದೇ ಒಂದು ಚಿನ್ನದ ಪದಕ ಮಾತ್ರ. ಇದರ ಹೊರತಾಗಿ ನಾವು ಗೆದ್ದಿರುವ 8 ಚಿನ್ನದ ಪದಕಗಳು 40 ರಿಂದ 90 ವರ್ಷಗಳ ಹಿಂದೆ (1926 – 1980) ಅಂದರೆ ನಮ್ಮಲ್ಲಿ ಬಹುತೇಕರು ಜನಿಸುವ ಮೊದಲು ತಂಡವಾಗಿ ಹಾಕಿಯಲ್ಲಿ ಗೆದ್ದಿದ್ದು.

ಪಠ್ಯಕ್ಕೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ನಮ್ಮ ಸರ್ಕಾರ, ಶಾಲೆಗಳು, ಪೋಷಕರು ಕ್ರೀಡೆಗೂ ಕೊಡದೇ ಹೋದರೆ, ಪುಟ್ಟ ವಯಸ್ಸಿನಿಂದಲೇ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಪೋಷಿಸದೇ ಹೋದರೆ, ಅದೇ ವಾರಕ್ಕೊಂದು ಪಿಟಿ ಪಿರಿಯಡ್ ಮಾದರಿಯಲ್ಲೇ ಮುಂದುವರಿದರೆ ನಾವು ಕ್ರೀಡಾ ಜಗತ್ತಿನಲ್ಲಿ ಗುರುತರವಾದ ಸಾಧನೆ ಮಾಡುವುದು ಸಾಧ್ಯವೇ ಇಲ್ಲ. ಪ್ರತಿ ಒಲಿಂಪಿಕ್ ಮುಗಿದಾಗಲೂ ಈ ರೀತಿ ಪುಟ್ಟ ಪುಟ್ಟ ದೇಶಗಳು ಪದಕ ಗೆಲ್ಲುವುದನ್ನು ನೋಡಿ ಈ ಸಂಭ್ರಮದ ಭಾಗ್ಯ ನಮಗಿಲ್ಲವಲ್ಲ ಎಂದು ಕೊರಗುವುದಷ್ಟೇ ನಮ್ಮ ಪಾಲಿಗೆ ಉಳಿಯುವುದು.

ಇದರಾಚೆ ಕ್ರೀಡೆಗೆ ಪ್ರೋತ್ಸಾಹ ಬೇಕಿರುವುದು ಕೇವಲ ಪದಕ ಗೆಲ್ಲಲು ಮಾತ್ರವಲ್ಲ. ಅದಕ್ಕಿಂತ ಮುಖ್ಯವಾಗಿ ಪಠ್ಯಪುಸ್ತಕಗಳಿಗಿಂತ ಹೆಚ್ಚಿನ ನೈಜ ಜೀವನ ಪಾಠ ಕ್ರೀಡೆಗಳಲ್ಲಿದೆ. ಸವಾಲನ್ನು ಎದುರಿಸುವ, ಸೋಲನ್ನು ಸ್ವೀಕರಿಸುವ, ಸೋತರು ಎದೆಗುಂದದೆ ಆ ಅನುಭವವನ್ನೇ ಗೆಲುವಿನ ಮೆಟ್ಟಿಲಾಗಿಸುವ, ಹೋರಾಟದ ಛಲ ಕಲಿಸುವ, ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುವ, ಶಿಸ್ತು ಮತ್ತು ಸಂಯಮ ಕಲಿಸುವ ಮಹಾನ್ ಕಲೆಯೇ ಕ್ರೀಡೆ. ಹೆಚ್ಚು ಕ್ರೀಡಾ ಮನೋಭಾವ ಉಳ್ಳ ಯುವ ಸಮಾಜ ನಿರ್ಮಾಣವಾದರೆ ಅದು ಖಂಡಿತವಾಗಿಯು ದೇಶವನ್ನು ಎಲ್ಲಾ ರಂಗಗಳಲ್ಲೂ ಉತ್ತಮವಾಗಿ ಮುನ್ನಡೆಸುವುದು.

‍ಲೇಖಕರು Admin

28 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading