ಸಂದೀಪ್ ಈಶಾನ್ಯ ಅವರ ಕವಿತೆ ‘ಎರಡು ದೇಹಗಳ ನಿರಂತರ ಹೊರಳಾಟದಿಂದ‘ ಅವಧಿಯಲ್ಲಿ ಪ್ರಕಟವಾಗಿತ್ತು . ಆ ಕವಿತೆ ಇನ್ನೊಬ್ಬಕವಿಯಲ್ಲೂ ಕಿಚ್ಚು ಹಚ್ಚಿದೆ. ‘ಮಹೀ’ ಅನ್ನುವ ಹೆಸರಿನಲ್ಲಿ ಬರೆಯುವ ಪಶು ವೈದ್ಯ ಡಾ ಮಹೇಂದ್ರ ಬರೆದದ್ದು ಈಗ ಓದಿ
ಅಷ್ಟೇ ಅಲ್ಲ, ಈ ಎರಡೂ ಕವಿತೆಗಳು ನಿಮ್ಮೊಳಗೆ ಕಿಚ್ಚು ಹಚ್ಚಿದ್ದಲ್ಲಿ ನೀವೂ ಕವಿತೆ ಮುಂದುವರೆಸಿ
–
ದೀಪದ ದೂರು
ಮಹೇಂದ್ರ ಎಸ್ ತೆಲಗರಹಳ್ಳಿ -ಮಹೀ
ಮಕಾಡೆ ಮಲಗಿಕೊಂಡವನ
ಬುಡದಿಂದ
ಬಿರಡೆ ಬಿಚ್ಚಿಕೊಂಡು
ಒಂದಷ್ಟು ತೆವಲುಗಳು
ತೆವಳುತ್ತಾ ಲ್ಯಾಂಡಾಗುತ್ತಿದ್ದವು.
ಉಗುರುಗಳಿಗೆ ಗೋರಂಟಿ
ಹಾಕಿಕೊಂಡ ಮೆತ್ತನೆಯ ಚಿರತೆಯೊಂದು
ಬೆನ್ನ ಪಾಟಿಯ ಮೇಲೆ
ಗೀರಿ ಗೀರಿ ರಕ್ತಸ್ರಾವ ಮಾಡಿ
ತಿರುಗಾಮುರುಗಾ ಒಂದೇ ಸಾಲನ್ನು
ತಿದ್ದುತ್ತಿತ್ತು.
ಬರಗೆಟ್ಟ ದರವೇಸಿ
ಅನಕ್ಷರಸ್ಥ ಅಕ್ಷಿಗಳು
ಬಾಯಿ ಬಿಟ್ಟುಕೊಂಡು
ಹೊಸ ಭಾಷೆಯೊಂದನ್ನು
ಕಲಿಯಲು ಅರ್ಜಿ ಹಿಡಿದು ನಿಂತು
ವಲಸೆಬಂದ ಪಕ್ಷಿಗಳಂತೆ
ಪಟ ಪಟ ರೆಕ್ಕೆ ಬಡಿಯುತ್ತಿದ್ದವು.
ದಿನನಿತ್ಯದ ಲೆಕ್ಕಗಳನ್ನು ಬರೆದು
ಬೇಸತ್ತು ಬೋರುಹೊಡೆಸುಕೊಂಡಿದ್ದ
ಬೆರಳುಗಳೆಲ್ಲವೂ ಗುಪ್ತಚರ ದಳದ
ತನಿಖಾಧಿಕಾರಿಗಳಂತೆ ತದೇಕಚಿತ್ತದಿಂದ
ತಡಕಾಡುತ್ತಿದ್ದವು.
ನಾಲಿಗೆಗಳಂತು
ನಾಗರಹಾವುಗಳಿಗೂ ಸೆಡ್ಡು
ಹೊಡೆಯುವಂತೆ ಸುರುಳಿ ಸುತ್ತಿ
ಸಮೂಹಗಾನದ ಹಾಡುಗಾರಂತೆ
ಮೇಳೈಸಿಕೊಂಡು ಪೋಲಿಗೀತೆಗಳನ್ನು
ಸ್ತುತಿಸುತ್ತಿದ್ದವು.
ಕಾಲಿನ ಬೆರಳುಗಳೆಲ್ಲವೂ
ಪ್ರೈಮರೀ ಶಾಲೆಯ ಪೋರರಂತೆ
ನುಣುಪಾದ ಕಾಲಿನ ಮೇಲೆ
ಜಾರೋ ಬಂಡಿಯಾಟ ಆಡುವದರಲ್ಲಿ
ತಲ್ಲೀನವಾಗಿದ್ದವು.
ಮುಂದೇನಾಗಬಹುದು
ಅಂತ ನಾನೂ ಕೂಡ ಎಣ್ಣೆ
ಕುಡಿದು ಮತ್ತಿನಿಂದ
ಪ್ರಖರವಾಗಿ ನೋಡುತ್ತಿರಲು
ಮಾನಕ್ಕಂಜಿದ ಅವಳು ಬಂದು
ನನ್ನ ಉಫ್ ಅಂತ ಆರಿಸಿಬಿಟ್ಟಳು.
ನನ್ನ ಉಪಸ್ಥಿತಿಯಲ್ಲಿ
ಉಪಹಾರ ಸೇವಿಸಿಕೊಂಡ
ಆ ಹಸಿದ ಉದರಗಳು
ರಸಗವಳ ತಿಂದು ತೇಗಿ
ಹೊಟ್ಟೆ ತುಂಬಿಸಿಕೊಳ್ಳುವ
ದೃಶ್ಯವನ್ನು ನನಗೆ ನೋಡುವ
ಅವಕಾಶ ದಕ್ಕದ್ದಿದ್ದಕ್ಕೆ
ನನಗೆ ಅವರಿಬ್ಬರ ಮೇಲೂ
ನಖಶಿಕಾಂತ ಕೋಪವಿದೆ.
ಹೌದು
ನನಗೂ ಕೋಪ ಬರುತ್ತಿದೆ
ಹೆಣ್ಣಿನ ಅಂಗಾಂಗಳಿಗೆ
ಮೂರು ಕಾಸಿನ
ಬೆಲೆ ಕೊಡದೆ
ಮಾರಾಟದ ಸರಕಾಗಿ
ಪರಿಗಣಿಸುವ ಒಂದೊಂದು
ಗಂಡಿನ ಮನಸಿನ
ಕ್ಷುದ್ರ ದಾಹಕ್ಕೆ
ಹಡೆದವಳು ಹೆಣ್ಣು
ಎಂಬುದ ಮರೆತಂತೆ
ನಟಿಸುವ ನಟನಾ
ಚಾತುಯ೯ಕ್ಕೆ
ನುಣುಪಾದ ದೇಹದ ಮೇಲೆ
ಕೀಚಕನ ಅಟ್ಟಹಾಸ
ದಕ್ಕದೇ ಇರುವಾಗ
ರೊಚ್ಚಿಗೆದ್ದು ಶಪಿಸಿ
ಅಮಾಯಕಳ ಕೊಲೆಗೈವ
ಇಲ್ಲ
ಸಿಕ್ಕರೆ ಮಾನ ನುಂಗಿ
ಗೆದ್ದೆ ಎನ್ನುವ
ಗೆಲುವಿನ ತನ್ನೊಳಗೇ
ಗೋರಿ ಕಟ್ಟಿ ಬೀಗುವ
ಅಟ್ಟಹಾಸ ಸಾಕು
ಉಫ್ ಎಂದು
ಊದಿಬಿಟ್ಟಿದ್ದು ಸರಿ
ಮರೆಯಾಗಿ ನಶಿಸಿ ಹೋಗಲಿ
ಮುಖವಾಡ ಧರಿಸಿ
ಬದುಕು ನಡೆಸಬೇಕಾದ
ಹೆಣ್ಣಿನ ಅನಿವಾಯ೯ತೆ
ಕಣ್ಣಿಗೆ ಕಾಣದಿರಲಿ
ನಗ್ನತೆಯ ಚಿತ್ರ ವಿಚಿತ್ರ ಭಂಗಿ!