ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀ ಬರುವ ದಾರಿಗೆ ಕಣ್ಣು ಕೀಲಿಸಿ ಕುಳಿತಿರುವೆ..

ಶ್ರೀದೇವಿ ಕೆರೆಮನೆ 

‘ಆನೋ ಭದ್ರಾಃ ಕೃತವೋ ಯನ್ತು ವಿಶ್ವತಃ’

ನೀ ಬರುವ ದಾರಿಗೆ
ಕಣ್ಣು ಕೀಲಿಸಿ ಕುಳಿತಿರುವೆ
ಬಾಗಿಲು ಕಿಟಕಿಗಳನ್ನೆಲ್ಲ ತೆರೆದಿಟ್ಟು
ನಿರೀಕ್ಷೆಯಲ್ಲಿರುವೆ ಕಣ್ಣೆವೆ ಮುಚ್ಚದೇ

ಬರುವವರು ಎಲ್ಲಿದ್ದರೂ ಬರುತ್ತಾರೆ
ಊಟ ನಿದ್ದೆ ಬಿಟ್ಟು
ನಾವೇಕೆ ಕಾಯಬೇಕು
ಎನ್ನುವ ಅಜ್ಜಿಯ ಮಾತು
ಮತ್ತೆ ಮತ್ತೆ ಮನದ
ಒಳಕೋಣೆಯೊಳಗೆ ಕೇಳಿಸುತ್ತಲೇ ಇದೆ

ಬರುವವರಿಗೆ ಬರುವ ಮನಸ್ಸಿದ್ದರೆ
ದಾರಿ ತಿಳಿದೇ ತಿಳಿಯುತ್ತದೆ
ಬರುತ್ತಾರೆ ಬರಬೇಕೆನಿಸಿದಾಗ
ಅಮ್ಮ ಕೂಡ
ಅಜ್ಜಿಯ ಪಕ್ಕ ಕುಳಿತು
ಆಗತಾನೇ ಕೊಯ್ದು ತಂದ
ಅಡಿಕೆ ಮರಕ್ಕೆ ಹಬ್ಬಿದ
ತಾಂಬೂಲದ ತಾಜಾ ಎಲೆಗೆ
ಕಡಲ ಚಿಪ್ಪನ್ನು ಕುದಿವ ನೀರಲ್ಲಿ
ಎರಡು ದಿನ ಮುಳುಗಿಸಿ
ತುಂಬಿಟ್ಟುಕೊಂಡ ಸುಣ್ಣ ಸವರಿ
ಅಡಿಕೆಯೊಂದಿಗೆ ಕುಟ್ಟುಗಲ್ಲಿನಲ್ಲಿ
ಕುಟ್ಟುತ್ತ ಹೇಳಿದ ಮಾತು ಗುಯ್ ಗುಡುತ್ತಿದೆ ಇನ್ನೂ ಕಿವಿಯಲ್ಲಿ

ಇತ್ತ ನೀನೋ
ಒಂದಿಷ್ಟು ಕಾಯಬೇಕು
ಕಾದು ಮಾಗಬೇಕು
ಮಾಗಿದ ಹಣ್ಣಿಗೆ ರುಚಿ ಹೆಚ್ಚು
ಎಂದೆಲ್ಲ ಸಮಾಧಾನದ ಪಾಠ ಮಾಡುತ್ತ
ಅರ್ಥವಾಗಿಲ್ಲ ತಾನು
ತನ್ನೊಂದಿಗೆ ವರ್ಷಗಟ್ಟಲೆ ಜೊತೆಯಾದವರಿಗೂ
ಇತ್ತೀಚೆಗೆ ಬಂದ ನೀನು
ಅವಸರಿಸಬೇಡ ಅರಿಯದೇ
ಎಂದು ಬೇಸರಿಸುವಾಗ
ನಾನು ಮತ್ತೆ ಕಿಟಕಿಯ ಸರಳಿಗೆ
ಮುಖ ಆನಿಸುತ್ತೇನೆ

ಬಾಗಿಲು, ಕಿಟಕಿ, ಕಟಾಂಜನವನ್ನೆಲ್ಲ
ಅಗಲವಾಗಿ ತೆರೆದಿಟ್ಟು
ಬರುವುದೇ ಆದರೆ
ಬಂದು ಬಿಡು ಕಾಯಿಸದೇ ಎಂದು
ಕರೆಯುವುದಾದರೂ ಹೇಗೆಂದು
ಶರಣಾಗಿರುವೆ ನಾನೀಗ ಮೌನಕ್ಕೆ
ಮೌನ ನನ್ನಿಂದ ಸಾಧ್ಯವಿಲ್ಲ
ಎಂಬುದನ್ನು ತಿಳಿದವರಂತೆ ನೀವೆಲ್ಲ
ಠೇಂಕರಿಸಿ, ಕೇ ಕೇ ಹಾಕಿ
ವೃತಭಂಗ ಮಾಡಿದರೂ
ಕಾಯುತ್ತಲೇ ಇರುತ್ತೇನೆ ಬರುವವನಿಗಾಗಿ

‍ಲೇಖಕರು avadhi

10 September, 2018

2 Comments

  1. ಜಯಶ್ರೀ. ಜೆ.ಅಬ್ಬಿಗೇರಿ

    ಮನ ಸೆಳೆಯುವ ಕವಿತೆ
    ಎರಡ್ಮೂರು ಸಾರಿ ಓದಿಸಿಕೊಂಡಿತು ಶ್ರೀ

  2. ರಾಜು ಪಾಲನಕರ ಕಾರವಾರ

    ಏನ್ರೀ ಶ್ರೀದೇವಿ ಮೇಡಂ ನಿಮ್ಮ ಬರವಣಿಗೆಯ ಕರಾಮತ್ತು…..Wow Really Super….. ನಿಮ್ಮ ಬರವಣಿಗೆಗೆ ಸರಿಸಾಟಿ ಯಾರು ಇಲ್ಲಾ…. ನಿಜಕ್ಕೂ ನನಗೆ ನಿಮ್ಮ ಕವಿತೆ ತುಂಬಾ ಇಷ್ಟ ಆಯ್ತು….ನೀವು ಹೀಗೆ ಬರೆಯುತ್ತಾ ಇರಿ ನಿಮ್ಮ ಬರವಣಿಗೆಯ ರಸದೌತಣ ನಮಗೆ ಉಣಬಡಿಸುತ್ತಾ ಇರಿ ನಿಮಗೆ ಅಭಿನಂದನೆಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading