ರಂಗಾಯಣದ ವನರಂಗದಲಿ ಕುಸುಮಬಾಲೆಯ ಇಂಗ್ಲಿಷ್ ಅವತರಣಿಕೆಯ ಸಂವಾದದಂದು ಎದುರು ಸಿಕ್ಕು ಅವರ ಪುಸ್ತಕ ಕೊಟ್ಟಿದ್ದರು ಹರಿ ಪ್ರಸಾದ್. ಕಲುಬುರ್ಗಿಗೆ ಹೋಗುವ ರೈಲು ಹಾದಿಯಲಿ ಈ ಪುಸ್ತಕ ಕೈಗೆತ್ತಿಕೊಂಡೆ. ಪ್ರಬಂಧವೋ, ಕಥೆಯೋ, ಲೇಖನವೋ ಎಂಬ ಚೌಕಟ್ಟು ಮೀರಿದ ಬರಹಗಳವು. ಆದರೆ ನಿರೂಪಣೆಯಲ್ಲಿ ಕಾಣುವ ಪ್ರಾಮಾಣಿಕತೆ.. ತಾನು ಯಾವುದನ್ನೂ ತೀರ್ಮಾನಕ್ಕಿಳಿಯದೇ ಓದುಗರಿಗೇ ಬಿಡುವ, ತಾನೂ ಇದೇ ದ್ವಂದ್ವದಲ್ಲಿದ್ದೇನೆ ಅಂತ ಹೇಳುವ ರೀತಿ ಹಿಡಿಸಿತು.
ಕರ್ನಾಟಕದ ಹಲವು ಸೀಮೆಗಳ ಭಾಷೆಯ ಮಿಶ್ರಣ ಇಲ್ಲಿದೆ. “ಬಸವಣ್ಣ ಮತ್ತು ಭಗೀರಥ” ಅನ್ನುವ ಅಧ್ಯಾಯ ಓದತೊಡಗಿದೆ. ಉತ್ತರ ಕರ್ನಾಟಕದ ನೀರಿನ ಸಮಸ್ಯೆಯ ಕರುಣಾಜನಕ ಕಥಾನಕ ಅದು. ನನ್ನ ರೈಲು ರಾಯಚೂರು ದಾಟುತ್ತಿತ್ತು.. ನಾನು ಆ ಅಧ್ಯಾಯದ ದಲಿತ ತಾತನ ನೀರೆಂಬ ಕಣ್ಣೀರಿನ ಕಥೆಯ ಒಂದು ಪ್ಯಾರಾ ಓದುತ್ತಲೂ ರೈಲಿನ ಕಿಟಕಿ ಇಣುಕಿ.. ಒಂದು ಹನಿ ನೀರಾದರೂ.. ಅಂಗುಲ ಹಸಿರಾದರೂ ಕಂಡೀತಾ ಅಂತ ಹುಡುಕುತ್ತಿದ್ದೆ. ಈ ಅಧ್ಯಾಯವೂ.. ನನ್ನ ರೈಲು ದಾರಿಯೂ ಎಂತಾ ಕಾಕತಾಳೀಯ!!
ಎದುರು ಸೀಟಿನಲಿ ಕೂತ ಮುಂಬೈ ದಂಪತಿ ಕಟ್ಲೆಟ್ ಮೆಲ್ಲುತ್ತಾ, ಅಂತ ಕೇಳಿ, ಸಮೋಸಾದವನನ್ನು ಕೂಗಿದರು!
0 ಪ್ರತಿಕ್ರಿಯೆಗಳು