ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಾಮೋದರ ಶೆಟ್ಟಿ ಓದಿದ ‘ಹನಿಗವನ ಏ ಏ ಹೇ?’

ನಾ ದಾಮೋದರ ಶೆಟ್ಟಿ

ಜನವರಿ 27 ರಂದು ಬಿಡುಗಡೆಯಾದ ಅಂಕಿತ ಪುಸ್ತಕ ಪ್ರಕಟಿಸಿರುವ ‘ಹನಿಗವನ ಏ ಏ ಹೇ?’ ಕೃತಿಯ ಕುರಿತು ಸಾಹಿತಿ ಡಾ.ನಾ.ದಾಮೋದರ ಶೆಟ್ಟಿ ಯವರ ಅನಿಸಿಕೆ…

ಇದು ಬೇಕಿತ್ತು..

ಹನಿಗವಿ ಎಂದೇ ಜನಮನ್ನಣೆ ಪಡೆದ ಎಚ್. ಡುಂಡಿರಾಜರರು ಸುದೀರ್ಘ ಕಾಲದಿಂದ ಹನಿಗವನ ರಚಿಸುತ್ತಾ ಅವುಗಳಲ್ಲಿ ಹಲವಾರು ಬಗೆಯ ಪ್ರಯೋಗಗಳನ್ನು ಮಾಡುತ್ತಾ ಆ ವಲಯದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದವರು.

ಉದಯವಾಣಿ ದಿನಪತ್ರಿಕೆಗಾಗಿ ನಿರಂತರ ಹತ್ತುವರುಷಗಳ ಕಾಲ ಹನಿಗವನ ಬರೆದು ಹೊಸ ದಾಖಲೆಯನ್ನು ನಿರ್ಮಿಸಿದವರು. ಅವರು ʻಹನಿಗವನ ಏನು? ಏಕೆ? ಹೇಗೆ?ʼ ಕೃತಿರಚನೆ ಮಾಡಿ ಆ ವಲಯದಲ್ಲಿ ಬೇಸಾಯ ಮಾಡಬಯಸುವವರಿಗೆ ಹೊಸಹೊಸ ದಾರಿಗಳನ್ನು ತೋರಿಸಿಕೊಟ್ಟಿದ್ದಾರೆ.

ತಾನು ಪ್ರಯೋಗಿಸಿ ಯಶಸ್ವಿಯಾದ ಬಳಿಕ ಮಾತ್ರವೇ ಇತರರಿಗೆ ಆ ದಾರಿಯಲ್ಲಿ ಚಲಿಸಹೇಳುವುದು ಸರಿಯಾದ ಮಾರ್ಗ. ಏಕೆಂದರೆ ಆ ಬಗ್ಗೆ ಯಾರಾದರೂ ಪ್ರಶ್ನೆ ಎತ್ತಿದರೆ ಅದಕ್ಕೆ ಸರಿಯಾದ ಉತ್ತರ ಕೊಡಲೂ ಗೊತ್ತಿರಬೇಕಲ್ಲ.

ಡುಂಡಿರಾಜರಿಗೆ ಉತ್ತರ ಗೊತ್ತು; ಪ್ರಶ್ನೆಯೂ ಗೊತ್ತು ಆದ್ದರಿಂದಲೇ ಇತರರು ಪ್ರಶ್ನಿಸಬಹುದಾದ ಪ್ರಶ್ನೆಗಳನ್ನೆಲ್ಲ ತಾವೇ ಕಲೆಹಾಕಿ ಉತ್ತರವನ್ನೂ ತಾವೇ ಕೊಟ್ಟಿದ್ದಾರೆ.

ಹನಿಗವನದ ಹುಟ್ಟು, ಬೆಳವಣಿಗೆ, ಸಾಗಿ ಬಂದ ದಾರಿಗಳನ್ನೆಲ್ಲ ತಮ್ಮ ಹಾಗೂ ಇತರ ಕವಿಗಳ ಕವನಗಳ ಉದಾಹರಣೆ ಸಮೇತ ತಿಳಿಯ ಹೇಳಿ ಅವುಗಳ ಸಾಮಾನ್ಯ ಲಕ್ಷಣವನ್ನೂ ಗಮನಗುಣಗಳನ್ನೂ ವಿಶದಪಡಿಸಿದ್ದಾರೆ. ಅದೇ ಹೊತ್ತಿಗೆ ಸಮಾನಾಂತರವಾಗಿ ಸಾಗಿದ ಇತರ ಪ್ರಕಾರಗಳ ಕುರಿತೂ ಇರಬಹುದಾದ ಸಂದೇಹಗಳನ್ನೂ ಭಿನ್ನತೆಗಳನ್ನೂ ಪರಿಹರಿಸಲೆತ್ನಿಸಿದ್ದಾರೆ.

ಇದು ಬೇಕಿತ್ತು. ಇದೇ ಮೊದಲ ಬಾರಿಗೆ ಡುಂಡಿರಾಜರು ಕನ್ನಡ ಹನಿಗವನದ ವಲಯದಲ್ಲಿ ಹೀಗೊಂದು ವಿನೂತನ ಪ್ರಯತ್ನ ಮಾಡಿದ್ದಾರೆ. ಹಲವಾರು ಹನಿಗವನ ಸಂಕಲನಗಳನ್ನು ಹೊರತಂದಿರುವ ಅವರು ಅದಕ್ಕೆ ಅರ್ಹರೂ ಇದ್ದಾರೆ.

ಮುಂದಿನವರಿಗೆ ಇದೊಂದು ದಾರಿದೀಪ. ಅವರ ಅಭಿಪ್ರಾಯಕ್ಕೇ ಹನಿಗವನಗಳು ನಿಲ್ಲಬೇಕೆಂದಲ್ಲ. ಇದೇ ಹನಿಗವನಗಳ ವ್ಯಾಕರಣ ಎಂದೂ ಅಲ್ಲ. ಹನಿಗವನ ರಚನೆಕಾರರನೇಕರು ಅವುಗಳ ಸಾಮಾನ್ಯ ಲಕ್ಷಣವನ್ನೂ ತಿಳಿಯದವರಿದ್ದಾರೆ.

ಹನಿಗವನಗಳ ಪರಂಪರೆಯನ್ನು ಅರಿಯುವ, ಅವುಗಳ ಸಾಧ್ಯತೆಗಳನ್ನು ಇನ್ನಷ್ಟು ವಿಸ್ತರಿಸುವ ದಾರಿಗಳನ್ನು ಕಂಡುಕೊಳ್ಳಬಯಸುವವರಿಗೆ ಇದು ಮೆಟ್ಟಿಲಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಇಂಥ ಸಾಹಸಕ್ಕೆ ಇದೇ ಮೊದಲ ಬಾರಿ ಕೈ ಹಾಕಿದ ಕವಿಮಿತ್ರ ಡುಂಡಿರಾಜರಿಗೆ ವಿಶೇಷ ಅಭಿನಂದನೆಗಳು ಸಲ್ಲುತ್ತವೆ.

‍ಲೇಖಕರು Admin

3 February, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading