ಕನ್ನಡ ಪತ್ರಿಕೋದ್ಯಮದಲ್ಲಿ ಶ್ರದ್ಧೆ ತುಂಬಿಕೊಂಡ ದುಡಿಮೆಗೆ ಬರವಿಲ್ಲ. ಆ ದಾರಿಯಲ್ಲಿ ಹೊಸ ಹೊಣೆಗಾರಿಕೆಯ ನೊಗ ಹೊತ್ತು ಸಾಹಸಿ ತಂಡವೊಂದು ಹೊರಟಿದೆ. ಕನ್ನಡ ಟೈಮ್ಸ್ ಎಂಬ ಹೆಸರಿನಲ್ಲಿ ಬೆಂಗಳೂರಿನಿಂದ ವಾರಪತ್ರಿಕೆಯೊಂದು ಕಳೆದ ಫೆಬ್ರವರಿಯಿಂದ ಬರುತ್ತಿದೆ. ಕವಿ, ಕಥೆಗಾರ ಡಾ. ನಟರಾಜ್ ಹುಳಿಯಾರ್ ಈ ಸಾಹಸಿ ಸೇನೆಯ ನಾಯಕತ್ವ ವಹಿಸಿದ್ದಾರೆ. ಬರೆಯಲು ಶಕ್ತಿವಂತರ ಸಾಲೇ ಇದೆ.
ಬರೆಯುವ ಕಾತುರ, ಒಟ್ಟಾಗಿ ಕೂತು ಆಲೋಚಿಸುವ ತಹತಹ, ತಲುಪುವ ಆಸೆ, ಪ್ರತಿ ದಿನದ ವಿದ್ಯಮಾನಗಳಿಗೆ ಸ್ಪಂದಿಸುವ ಆಶಯ, ಅಭಿರುಚಿ ರೂಪಿಸುವ ಹಂಬಲ… ಇವೆಲ್ಲ ಸೇರಿ ಹೀಗೆ ನಿಮ್ಮೆದುರು ನಾವೆಲ್ಲ ಹಠಾತ್ತನೆ ಕಾಣಿಸಿಕೊಂಡಿದ್ದೇವೆ ಎಂದು ಪತ್ರಿಕೆಯ ಮೊದಲ ಸಂಚಿಕೆಗೆ ಬರೆದ ಮುನ್ನುಡಿಯಲ್ಲಿ ನಟರಾಜ್ ಹುಳಿಯಾರ್ ಹೇಳಿದ್ದರು. ಅನಂತರದ ಈವರೆಗಿನ ಎಲ್ಲಾ ಸಂಚಿಕೆಗಳು ಆ ಮಾತಿನ ಮೌಲ್ಯವನ್ನು ಮಿನುಗಿಸಿವೆ. ಸಹಯಾತ್ರೆಯ ಬಗೆಗಿನ ಕಾಳಜಿಯೊಂದಿಗೇ, ಪತ್ರಿಕೋದ್ಯಮದಲ್ಲಿನ ಇವತ್ತಿನ ದಿನಗಳ ಪೈಪೋಟಿಯ ಸಂತೆಗೆ ಕನ್ನಡ ಟೈಮ್ಸ್ ಬಂದು ನಿಂತಿದೆ. ಕನ್ನಡವನ್ನು ಪ್ರೀತಿಸುವವರು, ಕನ್ನಡ ಓದುವವರಿಲ್ಲ ಎಂದು ನೋಯುವವರು ಎಲ್ಲಾ ಕನ್ನಡ ಟೈಮ್ಸ್ ಬಳಗದ ಜೊತೆ ಕೈಜೋಡಿಸುವುದು ಅಗತ್ಯವಿದೆ. ಆಸಕ್ತರು ಈ ವಿಳಾಸವನ್ನು ಸಂಪರ್ಕಿಸಬಹುದು.
ಸಂಪಾದಕರು, ಕನ್ನಡ ಟೈಮ್ಸ್, ೫೭, ೨ನೇ ಮಹಡಿ, ವಿನಾಯಕ ಕಾಂಪ್ಲೆಕ್ಸ್, ೯ನೇ ಮುಖ್ಯ ರಸ್ತೆ, ೮೦ ಅಡಿ ರಸ್ತೆ, ಬ್ಯಾಂಕ್ ಕಾಲೊನಿ, ಶ್ರೀನಿವಾಸನಗರ, ಬೆಂಗಳೂರು – ೫೬೦೦೫೦
0 ಪ್ರತಿಕ್ರಿಯೆಗಳು