ಮಣ್ಣು ಮತ್ತು ಬೀಜ
– ಸಂತೆಬೆನ್ನೂರು ಫೈಜ್ನಟ್ರಾಜ್
ಮಣ್ಣ ಮಡಿಲಲ್ಲಿ ಮಲಗಿರುವ
ಬೀಜಕ್ಕೆ ಅದು ತಾಯ ಗರ್ಭ ಕಣ್ಣು ಮುಚ್ಚಿದೆ
ತೆರೆಯುವ ಕ್ಷಣ ನಾಳಿನ ಸೂರ್ಯೋದಯ!
ಮಣ್ಣು ಬರೀ ಮಡಿಲಲ್ಲ ಸುತ್ತಲಿನ ಕತ್ತಲ
ಗಾಳಿ ಜೊತೆಗಿನ ಲಾಲಿಯಾಗಿಸೋ ಜೀವ ತಂತು!
ಕಾಲನ ದಾರಿಯಲ್ಲಿ ನಸೀಬು ನೆಚ್ಚಿ
ಕಾಲು ಹಾಕುವ ಎಷ್ಟೋ ಬೀಜಗಳು
ಓಕಾಗಿ ‘ನಾಳೆ’ ಕಾಣದೇ ಗರ್ಭ ಪಾತಕ್ಕೆ ಶರಣು;
ನಿಜದ ಮುಂದೆ ಅಹಂಕಾರಿ ಸುಳ್ಳು ಸತ್ತಂತೆ!
ಗಾಂಧಾರಿ ಪಿಂಡ ನೂರಾರು ಇದ್ದರೇನು ಬಂತು
ಅನಂತ ಕಾಯ್ವ ಏಕಚಕ್ರಾಧಿಪತ್ಯದ ಕಲ್ಪವೃಕ್ಷದಂತೆ
ಬೀಜವೊಂದಿರದಿರೆ?
ನಾವು ಮಣ್ಣಾಗದಿರೆ ಬೀಜ ಕಾಯಲಾರೆವು;
ಖಬರಸ್ತಾನದ ಮಣ್ಣು ನಮ್ಮ ಕಾದಂತೆ!
ಅನ್ನಕ್ಕೆ, ಚಿನ್ನಕ್ಕೆ, ನಾಳಿನ ದಾಹಕ್ಕೆ,
ದರ್ದಿಗಿರಲೆಂದು ಮಣ್ಣ ಮಾಡಿ
ನೆರಳಾಗೋ ಬೀಜ ನೆಡದೇ ನಡೆದರೆ
ಮಣ್ಣೊಳಗೆ ಬುಲಾವಿಲ್ಲ!
ಕತ್ತಲ ಕೂಪದಿ ಬೀಜ ಬೆಳಕಿಗೆ
ಹುಡುಕಾಟ,ಕಾಯೋ ಕ್ಷಣ ಮೈ ಮುರಿದು ಮೇಲೆ ಬಂದಾಗ
ನವಜಗತ್ತಿನಾಗಮನ!
ಕೊಲ್ವ ಮಣ್ಣಿಗಿಂತ ಕಾಯ್ವ ಮಣ್ಣು ಬೀಜಕ್ಕೆ ಬೇಕು
ಹಾಗಾಗಲು ನಾವೂ ಮಾಗಬೇಕು!
koneya saalu kaaditu..