
ಗೀತಾ ಹೆಗ್ಡೆ ಕಲ್ಮನೆ
ಇತ್ತೀಚಿಗೆ ಅವಧಿಯಲ್ಲಿ ಬಂದ ಆತ್ಮಹತ್ಯೆಯ ಕುರಿತ ಎರಡು ಲೇಖನಗಳು ನನ್ನ ಸ್ವಂತ ಅನುಭವ ಬರೆಯಲು ಪ್ರೇರೇಪಿಸಿತು.
ಆ ಒಂದು ಮನಸ್ಥಿತಿ ಹೇಗಿರುತ್ತದೆ ಎನ್ನುವುದು ಈ ಲೇಖನದ ತಾತ್ಪಯ೯.
ನಾನು ಸಾಯಬೇಕು, ಬದುಕಿರಬಾರದು. ಅವಮಾನ, ಹತಾಷೆಗಳ ಸಂಕೋಲೆ ನನ್ನ ಸುತ್ತುವರೆದಿದೆ. ರೋಗದ ಕೂಪ ನಾನಾಗಿದ್ದೇನೆ. ನಾನು ಯಾರಿಗೂ ಬೇಡಾದವಳು. ನನಗೆ ಬದುಕಲು ಯೋಗ್ಯತೆ ಇಲ್ಲ. ನಾನು ಸತ್ತರೆ ಯಾರಿಗೇನು ನಷ್ಟ. ನನ್ನಿಂದ ಆಗಬೇಕಾಗಿದ್ದು ಏನೂ ಇಲ್ಲ. ಇಷ್ಟ ಪಟ್ಟ ರೀತಿಯಲ್ಲಿ ಬದುಕುವ ಅವಕಾಶ ನನಗಿಲ್ಲದ ಮೇಲೆ ನಾನ್ಯಾಕೆ ಬದುಕಿರಬೇಕು. ಸಾಯೋದೆ ಮೇಲು. ಬೇಡ ಈ ಜೀವನವೇ ಬೇಡ. ಸಾಕು.
ಈ ರೀತಿಯ ಮನಸ್ಥಿತಿಯಲ್ಲಿ ನಾನೂ ಒಂದು ಕಾಲದಲ್ಲಿ ನರಳಿದ್ದೆ. ಆದರೆ ನಾನು ಯಾವ ರೀತಿ ಸಾಯಬೇಕು? ನೇಣು ಬಿಗಿದುಕೊಳ್ಳಲಾ? ಕುಣಿಕೆ ಹಾಕಲು ಬರೋದಿಲ್ಲ. ಯಾರನ್ನಾದರೂ ಕೇಳಿದರೆ ಯಾಕೆ ನಿನಗೆ ಇದನ್ನು ಕಲಿಯಬೇಕು ಅನ್ನುವ ಆಸೆ ಕೇಳಿದರೆ? ಬೇಡ.
ಯಾವುದಾದರೂ ನದಿಗೊ ಸಮುದ್ರಕ್ಕೊ ಹಾರಿ ಬಿಟ್ಟರೆ. ಸಾಯೋದು ಸುಲಭ. ಹಾಗಂತ ಯೋಚಿಸಿ ಸಮುದ್ರದ ತೀರಕ್ಕೆ ಹೋದ ಗಳಿಗೆಗಳ ನೆನಪಿಸಿಕೊಂಡೆ. ಅಬ್ಬಾ! ಆ ಅಲೆಗಳ ಕಂಡರೆ ಭಯವಾಗಿ ದೂರದಲ್ಲಿ ನಿಂತು ನೋಡಿ ಬಂದವಳು. ಬೇಡ ಇದು ಬೇಡ.
ಯಾವುದಾದರೂ ವಿಷ ತಗೊಂಡು ಸತ್ತರೆ. ಅಲ್ಲ ಅದು ತಗೊಂಡರೆ ತುಂಬಾ ಸಂಕಟ ಆಗುತ್ತಂತೆ. ಆ ಸಂಕಟ ನನ್ನಿಂದ ಸಹಿಸೋಕೇ ಆಗೋಲ್ಲಪ್ಪ. ಸತ್ತರೆ ಸುಃಖವಾಗಿ ಸಾಯಬೇಕು. ಗೊತ್ತೇ ಆಗಬಾರದು. ಆಮೇಲೆ ವಿಷ ತಗೊಂಡು ಸಾಯದೆ ಆಸ್ಪತ್ರೆಯಲ್ಲಿ ಮೂಗಿಗೆಲ್ಲ ನಳಿಕೆ ಹಾಕಿ ವಾಂತಿ ಮಾಡಿಸ್ತಾರೆ. ಸ್ವತಃ ಈ ಘಟನೆ ನೋಡಿದ್ದೆ. ಕಣ್ಣು ಮುಂದೆ ಬಂತು. ಅಯ್ಯೋ ಬೇಡಪ್ಪ ಈ ದಾರಿ.
ಸಾಯುವ ಸಮಯದಲ್ಲಿ ನಾನೊಬ್ಬಳೆ ಮನೆಯಲ್ಲಿ ಇರಬೇಕು. ಬಾಗಿಲು ಹಾಕ್ಕೊಂಡಿರಬೇಕು. ಯಾರಿಗೂ ಗೊತ್ತಾಗಬಾರದು. ಗ್ಯಾಸ್ ಫುಲ್ ಬಿಟ್ಟು ಬೆಂಕಿ ತಗಲಿಸಿಕೊಂಡರೆ? ಈ ಉಪಾಯ ಸರಿ. ಹಾಗೆ ಮಂಚದ ಮೇಲೆ ರಾತ್ರಿ ಮಲಗಿದಾಗ ಮನಸ್ಸಿಗೆ ಬಂದ ಉಪಾಯ. ಕಣ್ಣು ಬಿಟ್ಟು ನೋಡ್ತಾ ಇದ್ದೆ. ಎಷ್ಟು ಕಷ್ಟ ಪಟ್ಟು ಕಟ್ಟಿದ ಸುಂದರ ಮನೆ. ಬೆಂಕಿ ಹತ್ತಿ ಸುಟ್ಟೋದರೆ? ಹೊರಗಿನವರು ಬಾಗಿಲು ಒಡೆದು ಒಳ ಬರಬೇಕು. ಬಾಗಿಲು ಹಾಳಾಗುತ್ತೆ ಟೀಕ್ ವುಡ್ ಬಾಗಿಲು. ಛೆ! ಬೇಡಪ್ಪ ಬೆಂಕಿಯಲ್ಲಿ ಮೈ ಸುಟ್ಟಕೊಂಡು ಸಾಯೋದಾ? ಆ ಉರಿ ತಡೆಯೋಕಾಗುತ್ತ? ಸಾಯದೆ ಇದ್ದರೆ ವಿಕ್ಟೋರಿಯಾದಲ್ಲಿ ನರಳಬೇಕಲ್ಲ. ಅಲ್ಲಿಗೆ ಈ ಯೋಚನೆ ತಳ ಹಿಡಿತು.
ಹಾ! ಒಂದು ಉಪಾಯ ಸುಃಖವಾಗಿ ಸಾಯಬೇಕು ಅಂದರೆ ನಿದ್ದೆ ಮಾತ್ರೆ ತಗೋಬೇಕು. ಸರಿ ಔಷಧಿ ಅಂಗಡಿಗೆ ಹೋಗಿ ತಂದರಾಯಿತು. ಅಲ್ಲಾ ಚೀಟಿ ಇಲ್ಲದೆ ಇಂಥ ಮಾತ್ರೆ ಕೊಡೋಲ್ಲ. ಅದೂ ಸ್ಟ್ರಾಂಗ್ ಇರಬೇಕು ಮಾತ್ರೆ. ಏನ್ಮಾಡೋದು? ಸಮಸ್ಯೆ ಬಗೆಹರಿದಿಲ್ಲ. ಅಲ್ಲಿಗೆ ಈ ದಾರಿ ಕೂಡಾ ಬಿಟ್ಟಾಯಿತು.
ಅಷ್ಟೊತ್ತಿಗೆ ಹಲವಾರು ದಿನಗಳೇ ಕಳೆದು ಹೋಯ್ತು. ಮನದಲ್ಲಿ ಮತ್ತೊಂದು ಯೋಚನೆ ಸುಳಿದಾಡಿತು. ಹೌದು ಸಾಯಬೇಕು ಅಂದರೆ ನನ್ದೇನಿದೆ ಎಲ್ಲ ಸಂಬಂಧಪಟ್ಟವರಿಗೆ ತಲುಪುವಂತೆ ಪತ್ರ ಬರೀಬೇಕು. ಸತ್ತ ಮೇಲೆ ಬೇರೆಯವರು ಆದು ಸಂಬಂಧಪಟ್ಟವರಿಗೆ ತಲುಪದೆ ಮೋಸ ಆದರೆ? ಸರಿ ಪೋಲೀಸ್ ಸ್ಟೇಷನ್ನಿಗೆ ಪೋಸ್ಟ್ ಮಾಡಿದರಾಯಿತು. ದಾರಿ ಸಿಕ್ಕಿತು. ಸಮಾಧಾನವೂ ಆಯಿತು. ಪಕ್ಕನೆ ಮನಸ್ಸೆಂಬ ಮಕ೯ಟಕೆ ಇನ್ನೊಂದು ಗಾಬರಿ. ಅಲ್ಲಾ ಪತ್ರ ಪೋಸ್ಟ್ ಮಾಡಿ ಸಾಯೋ ಯೋಚನೆ ಬದಲಾದರೆ? ಆಮೇಲೆ ಪೋಲೀಸರು ಹುಸಿ ಪತ್ರ ಬರೆದಿದ್ದೀಯಾ ಬಾ ಸ್ಟೇಷನ್ನಿಗೆ ಅಂತ ಎಳಕ್ಕೊಂಡು ಹೋದರೆ ಗತಿ? ಅಯ್ಯಬ್ಬಾ ಈ ಯೋಚನೆ ಅಲ್ಲಿಗೆ ನಿಂತೋಯಿತು.
ನೋಡಿ ಕಳ್ಳಂಗೊಂದು ಪಿಳ್ಳೆ ನೆವ ಅಂದಾಗೆ ಮೊದಲನೆದಾಗಿ ನನಗೆ ಅತ್ಮಹತ್ಯೆ ಮಾಡಿಕೊಳ್ಳಲು ಧೈರ್ಯ ಇರಲಿಲ್ಲ. ಧೈರ್ಯ ಇದ್ದವರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯ. ಯಾವ ಡಿಪ್ರೆಶನ್ಗೆ ಹೋಗಿರಲಿಲ್ಲ ಅನಿಸುತ್ತೆ. ಮನಸ್ಸು ಸ್ವಾಧೀನದಲ್ಲಿ ಇಲ್ಲದೆ ಡಿಪ್ರೆಶನ್ನಲ್ಲಿ ಇರುವ ಆ ಒಂದು ಸಂದರ್ಭದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಾರೆ ಜನ. ಅದಿಲ್ಲವಾದರೆ ಯಾರೊ ಕೊಲೆ ಮಾಡಿ ಆತ್ಮಹತ್ಯೆ ನಡೆದಂತೆ ಸಂದರ್ಭ ಚಿತ್ರಿಸಿರುತ್ತಾರೆ ಮಾಡಿದವರು.
ಆದುದರಿಂದ ಈ ಆತ್ಮಹತ್ಯೆ ಮಾಡಿಕೊಂಡು ಸಾಯುವುದು ಅಷ್ಟು ಸುಲಭದಲ್ಲಿ ಇಲ್ಲ. ಯಾರೂ ಮಾಡಿಕೊಳ್ಳಲೂ ಬಾರದು. ಏಕೆಂದರೆ ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ. ಎಲ್ಲದಕ್ಕೂ ಏನಾದರೂ ಪರಿಹಾರ ತೋರಿಸಿಯೇ ತೋರಿಸುತ್ತಾನೆ. ತಾಳ್ಮೆಯಿಂದ ಕಾಯಬೇಕು.





0 Comments
Trackbacks/Pingbacks