ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು, ನನ್ನ ಹುಡುಗಿ ಮತ್ತು ಎಚ್ ಎಸ್ ವಿ

ಹಳೆಯದೊಂದು ಖುಷಿ ನೆನಪಿಸಿಕೊಂಡು

ಶ್ರೀನಿಧಿ ಡಿ ಎಸ್

ತುಂತುರು ಹನಿಗಳು

ನನ್ನ ಬ್ಲಾಗನ್ನ ಹಿಂದಿನಿಂದಲೂ ನೋಡಿಕೊಂಡು ಬಂದವರಿಗೆ ನಾನು ಕವನಗಳನ್ನ ಹೆಚ್ಚಾಗಿ ಬರೆಯುತ್ತಿದ್ದದ್ದು ಗೊತ್ತಿದೆ. ಬ್ಲಾಗಿನಿಂದಾಗಿಯೇ ನಾನು ಕವನಗಳನ್ನ ಬರೆದೆ ಅಂದರೂ ತಪ್ಪಾಗಲಾರದು. ನನ್ನ ಕವನಗಳನ್ನ ಮೆಚ್ಚಿ ಹಾರೈಸಿದ ಗೆಳಯ ಬಳಗದಿಂದಾಗಿಯೇ ನನ್ನ ಕವನ ಸಂಕಲನ ಕೂಡ ಮೂರು ವರ್ಷಗಳ ಕೆಳಗೆ ಪ್ರಕಟಣೆಯ ಭಾಗ್ಯ ಕಂಡಿತು. ನನ್ನ ಕವನ ಸಂಕಲನವನ್ನ ಬಿಡುಗಡೆ ಮಾಡೋಕೆ ನನ್ನ ಮೆಚ್ಚಿನ, ಕನ್ನಡದ ಹಿರಿಯ ಕವಿ ಎಚ್.ಎಸ್.ವೆಂಕಟೇಶ ಮೂರ್ತಿಯವರು ಬಂದಿದ್ದರು. ನನ್ನ ಕವನಗಳನ್ನ ಓದಿ, ಅವುಗಳ ಬಗ್ಗೆ ಚೆನ್ನಾದ ಮಾತುಗಳನ್ನಾಡಿ ಹರಸಿದ್ದರು ಎಚ್ಚೆಸ್ವಿ. ಚೆನ್ನಾಗಿ ಬರೀತೀಯಾ, ಕವನಗಳನ್ನ ಬರಿಯೋದನ್ನ ಮುಂದುವರಿಸು ಎಂದಿದ್ದರು. ಅದ್ಯಾಕೋ ನಾನು ಗದ್ಯದ ಕಡೆಗೆ ಜಾಸ್ತಿ ಗಮನ ಕೊಟ್ಟೆ ಆಮೇಲಾಮೇಲೆ.

ನನ್ನ ಕವನ ಸಂಕಲನ ಬಿಡುಗಡೆ ಮಾಡಿದ ಎಚ್ಚೆಸ್ವಿಯವರು, ಆಮೇಲೆ ಬಹಳ ದಿನಗಳ ನಂತರ, ಪ್ರಾಯಶಃ ವರುಷದ ಬಳಿಕ ವರ್ಲ್ಡ್ ಕಲ್ಚರಿನ ಯಾವುದೋ ಕಾರ್ಯಕ್ರಮದಲ್ಲಿ ಸಿಕ್ಕವರು, “ನಿಮ್ಮ ಆ ರಂಗೋಲಿ ಕವನ ಭಾರಿ ಚೆನ್ನಾಗಿದೆ ನೋಡಿ ಇವರೇ. ನಾನು ಅದರಿಂದ ಸ್ಪೂರ್ತಿಗೊಂಡು ಒಂದು ಕವನ ಬರ್ದಿದೀನಿ.ನನ್ನ ಮುಂದಿನ ಸಂಕಲನದಲ್ಲಿ ಆ ಕವನ ಇದೆ” ಅಂದರು. ನಂಗೆ ಭಾರಿ ಖುಷಿ ಆಗಿದ್ದಂತೂ ಹೌದು. ನನ್ನಂತಹ ಸಾಮಾನ್ಯನ ಕವನ ಇಷ್ಟಪಟ್ಟು ಅವರು ಕವನ ಬರೆದ್ರೆ ಸಂತೋಷ ಆಗದೇ ಇದ್ದೀತೆ?

ನನ್ನ ಕವನ ಹೀಗಿದೆ:

ಹೀಗೊಂದು ಬೆಳಗು

ಕಾರ್ತಿಕದ ಹೊಸ ಬೆಳಗು, ಚಳಿಯು ಬಹಳಿತ್ತು

ದೇಗುಲದ ಘಂಟೆ ತಾನ್ ಇನ್ನು ಮಲಗಿತ್ತು.

ಅವಳಾಗಲೇ ಎದ್ದು ಅಂಗಳದಲಿದ್ದಳು

ರಂಗೋಲಿ ಚುಕ್ಕಿಯಲಿ ತಾನೆ ಚಿತ್ರವಾಗಿದ್ದಳು

ಅದಾವುದೋ ಭಂಗಿಯಲಿ ಕಟೆದಿಟ್ಟ ಹಾಗೆ,

ಕೂತಿದ್ದಳವಳು, ಇಳಿದು ಬಂದಂತೆ ಸೊಬಗೆ.

ಕೈಬೆರಳುಗಳೋಡುತಿವೆ, ಸೇರಿಸಲು ಬಂಧ

ಕಣ್ಣಾಲಿಗಳ ಚಲನೆ, ರಂಗವಲ್ಲಿಗೂ ಚಂದ

ಅಂಗಳದೊಳಿಂಗುತಿದೆ ರಾತ್ರಿಯಾ ಮಳೆನೀರು

ಮಂಗಳದ ರಂಗೋಲಿ ಒದ್ದೆ ನೆಲದಿ.

ಕಾಡಂಚಿನಾ ಮನೆಯು, ತಣ್ಣನೆಯ ಮೆಲುಗಾಳಿ

ಹಾಡುತಿದೆ ವನಪಕ್ಷಿ, ಹಸಿರಿನೊಳಗಿಂದ

ಚಿತ್ರದೊಳಗಡೆಯಿಂದ ಮೆಲ್ಲನೆದ್ದಳು ಅವಳು

ಮೊಗದೊಳಗೆ ತೃಪ್ತಿಗೆರೆ, ಏನೋ ಅನಂದ.

ಬಣ್ಣಬಟ್ಟಲ ಜೊತೆಗೆ, ಸೀರೆಯಂಚನು ಹಿಡಿದು

ನಡೆದು ಹೋದಳು ಆಕೆ ಎಳೆಬೆಳಕಿನೊಳಗೆ

ಮಿದುನೆಲದ ಮಣ್ಣಲ್ಲಿ ಪಾದಪದ್ಮಗಳ ಅಚ್ಚಿತ್ತು

ರಂಗವಲ್ಲಿಯ ಜೊತೆಗೆ ಸ್ಪರ್ಧೆಗಿಳಿದಂತೆ.

ದೂರಲೋಕದ ಸಿರಿಯು, ಎದ್ದು ಹೋದಂತಿತ್ತು

ಹೆಜ್ಜೆಗುರುತುಗಳನ್ನು ಇಲ್ಲೇ ಬಿಟ್ಟು.

 

ಎಚ್.ಎಸ್.ವೆಂಕಟೇಶಮೂರ್ತಿಯವರ ಕವಿತೆ:

ಇನ್ನೊಂದು ರಂಗವಲ್ಲಿ

ಓದುತ್ತಾ ಕೂತಿದ್ದೇನೆ ಹೊಸ ಕವಿಯ ಹೊಸ ಕವಿತೆ

ಯನ್ನ. ಇನ್ನಾ ಬೆಳಗಿನ ಕಾಫಿ ಕೂಡ ಕುಡಿದಿಲ್ಲ

ಹಾಳುಹೊಟ್ಟೆಯಲ್ಲಿ ನುಂಗಲೇ ಬೇಕಿದ್ದ ಸಿಹಿಗುಳಿಗೆ

ನುಂಗಿಲ್ಲ. ಕೂತಿದ್ದೇನೆ ತನ್ಮಯಚಿತ್ತ ಓದುತ್ತ

ಹೊಸ ಕವಿಯ ಹೊಸ ಕವಿತೆ. ಕವಿತೆಯಲ್ಲಿ ರಂಗ

ವಲ್ಲಿ ಬಿಡಿಸುತ್ತಾ ಇದ್ದಾಳೆ ಮಿಂದು ಮಡಿಯುಟ್ಟಿರುವ

ಹುಡುಗಿ. ನೋಡು ನೋಡುತ್ತಿರುವಂತೆ ಕಣ್ಣಲ್ಲೇ ಮೂಡುತ್ತೆ

ಚುಕ್ಕಿ. ಸೇರುತ್ತವೆ ನೇರಗೆರೆ ನಾಜೂಕು. ಒಡಮೂಡುತ್ತೆ

ಮುಖದಲ್ಲೇ ಒಂದು ರಂಗವಲ್ಲಿ,ಆಗಿ ಹುಡುಗಿಯ ಒಡಲೆ

ತೆಳ್ಳನೆಯ ಬಳ್ಳಿ, ಮೆಲ್ಲಗರಳುತ್ತೊಂದು ಷಡ್ದಳಪದ್ಮ

ಝಮ್ಮಂತ.ರಂಗೋಲಿ ಬರೆಯುವುದು ಮುಗಿದು

ಎದ್ದು ಹೋಗುತ್ತಾಳೆ ಬರೆದ ರಂಗೋಲಿಯನ್ನಂಗಳ

ದಲ್ಲೇ ಬಿಟ್ಟು. ಮರೆತೇ ಹೋಗಿದೆ ಪ್ರಾಣಹಿಂಡುವ ನನ್ನ ಮಂಡಿನೋವು

ಕವಿತೆ ಹೀಗಿರಬೇಕು ಇದ್ದರೂ ಮರೆವಂತೆ ಒಳಗಿರುವ ನೋವು.

ಎಚ್ಚೆಸ್ವಿಯವರ ಕವನಕ್ಕೆ ನನ್ನ ಕವನ ಎಷ್ಟರ ಮಟ್ಟಿಗೆ ಸ್ಪೂರ್ತಿಯಾಗಿತ್ತೋ ನನಗೆ ಗೊತ್ತಿಲ್ಲ. ನಿನ್ನೆ ಯಾಕೋ ಪುಸ್ತಕದ ರಾಶಿ ಕೆದಕಬೇಕಿದ್ದರೆ ಅವರ ಕವನ ಸಂಕಲನ ಕೈಗೆ ಸಿಕ್ಕಿ ಹಳೇ ಘಟನೆ ನೆನಪಾಯಿತು, ನಿಮ್ಮ ಜೊತೆಗೆ ಹಂಚಿಕೊಳ್ಳೋಣ ಎನಿಸಿ, ಬರೆದೆ. ಇನ್ನಾದರೂ ಮತ್ತೆ ಕವನ ಬರೆಯಬೇಕು….

 

‍ಲೇಖಕರು G

8 November, 2012

6 Comments

  1. venkatesh

    ನಿಮ್ಮ ಕವನನೂ ಚೆಂದ , ಎಚ್ಚೆಸ್ವಿ ಕವನನೂ ಚೆಂದ.

  2. RJ

    ಎರಡೂ ಕವಿತೆಗಳು ಮನಸೂರೆಗೊಂಡವು..
    🙂

  3. Shwetha Hodabale

    Nice 🙂

  4. shivu k

    ಶ್ರೀನಿಧಿ ನಿಮ್ಮ ಕವನ ಮತ್ತು ಎಚ್.ಎಸ್.ವಿ ಯವರ ಕವನಗಳೆರಡೂ ಮನದಲ್ಲಿ ರಂಗೋಲಿ ಚಿತ್ರಗಳನ್ನು ಮೂಡಿಸುತ್ತವೆ..

  5. Gubbachchi Sathish

    🙂 nimma kavanagalu matastu barali.

  6. Vishal Gourgonda

    ಶ್ರೇಷ್ಠ ರಂಗೋಲಿ.. ಕವನದ ರೂಪದಲ್ಲಿ…!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading