– ಲಲಿತಾ ಸಿದ್ಧಬಸವಯ್ಯ
ಮೇಲಿನ ಫೋಟೋ ಮೊನ್ನೆ ಎಂಟನೆ ತಾರೀಖು ಭಾನುವಾರ ನಮ್ಮೂರು ತುಮಕೂರಿನಲ್ಲಿ ನಡೆದ ಸಾಂಬಶಿವಯ್ಯ ಸ್ಮಾರಕ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದ್ದು. ಇದು ೫ನೆ ವರ್ಷದ ಸಮಾರಂಭ. ತಮ್ಮ “ನೆಲದ ಕರುಣೆಯ ದನಿ” ಕವನ ಸಂಕಲನಕ್ಕೆ ವೀರಣ್ಣ ಮಡಿವಾಳರ ಈ ಸಲ ಪ್ರಶಸ್ತಿ ಪಡೆದರು. ಭಾವುಕರಾಗಿ ತಮ್ಮ ನೋವುನಲಿವು ಹಂಚಿಕೊಂಡರು. ಈ ಭರವಸೆಯ ಯುವಕವಿ ಹೇಳಿದ ಅನೇಕ ಸಂಕಟದ ಸಂಗತಿಗಳಿಗೆ ಪರಿಹಾರವಿದೆಯೊ ಇಲ್ಲವೊ ತಿಳಿಯದು . ಈ ಪ್ರಶಸ್ತಿಯ ಆರಂಭದಿಂದಲೂ ನಾನು ಸನಿಹದಿಂದ ಬಲ್ಲೆ. ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಹಾಲಿ ಅಧ್ಯಕ್ಷೆ ಎಂ.ಸಿ.ಲಲಿತಾ ಸಾಂಬಶಿವಯ್ಯ ರವರು ಅಳಿದ ತಮ್ಮ ಪತಿಯ ನೆನಪಿನಲ್ಲಿ ತಮ್ಮ ಅನನ್ಯ ಪ್ರಕಾಶನದ ಮುಖೇನ ಈ ಪ್ರಶಸ್ತಿ ಪ್ರದಾನ ಮಾಡುತ್ತಿದ್ದಾರೆ. ಲಲಿತಾ ಅವರು ಸಾಹಿತ್ಯಪ್ರಿಯರು. ಅವರ ಪತಿ ದೊಡ್ಡ ಮಂಡಿವರ್ತಕರಾಗಿದ್ದರು. ಸಾಹಿತ್ಯ ಅವರ ಆದ್ಯತೆಯಲ್ಲ. ಆದರೆ ತಮ್ಮ ಪತ್ನಿಯ ಪ್ರೀತಿಯ ಕ್ಷೇತ್ರವಾದ ಸಾಹಿತ್ಯವನ್ನು ಅವರೂ ಪತ್ನಿಗಾಗಿಯೆ ಪ್ರೀತಿಸುತ್ತಿದ್ದರು. ಪತ್ನಿಯ ಎಲ್ಲ ಕೆಲಸಗಳಲ್ಲು ಮನಪೂರ್ವಕ ಬೆಂಬಲ ನೀಡುತ್ತಿದ್ದರು. ಬಿಡುಗೈಯಿಂದ ಹಣ ನೀಡುತ್ತಿದ್ದರು. ಅವರು ಇಲ್ಲವಾದ ಬಳಿಕ ಲಲಿತಾ ಅವರ ನೆನಪನ್ನು ಶಾಶ್ವತಗೊಳಿಸಲು ಇಂಥಹದ್ದೊಂದು ಸಾರ್ಥಕ ಕೆಲಸ ಮಾಡುತ್ತಿದ್ದಾರೆ. ಚಂದ್ರಕಾಂತ ಕುಸನೂರ, ಚ.ಹ.ರಘುನಾಥ, ವಿ.ಕೆ.ಭಟ್, ನಂದಾ ಲಿಂಗದೇವರು ಹಳೆಮನೆ , ಈಗ ನಮ್ಮ ಯುವಕವಿ ವೀರಣ್ಣ ಕ್ರಮವಾಗಿ ೫ ವರ್ಷಗಳಿಂದ ತಮ್ಮ ಕೃತಿಗಳಿಗಾಗಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸ್ವತಹ ಒಳ್ಳೆಯ ಸಾಹಿತ್ಯಾಭಿರುಚಿ ಯಿದ್ದರೂ ಲಲಿತಾ ಅವರು ಎಂದೂ ಪ್ರಶಸ್ತಿಯ ತೀರ್ಪಿನಲ್ಲಿ ಕೈ ಹಾಕುವುದಿಲ್ಲ. ಒಂದು ತೀರ್ಪುಗಾರರ ಸಮಿತಿ ಏರ್ಪಡಿಸಿ ಸಂಪೂರ್ಣ ಸ್ವಾತಂತ್ರ್ಯವನ್ನು ಸಮಿತಿಗೆ ನೀಡಿಬಿಡುತ್ತಾರೆ.ಸಮಿತಿಯದ್ದೆ ಅಂತಿಮವಾಕ್ಯ. ಇಲ್ಲಿಯವರೆಗೆ ಪದ್ಮಾ.ಜಿ.ಎಸ್.ಎಸ್., ಎಸ್. ಮಾಲತಿ, ವಿಠಲಭಂಡಾರಿ, ಎಸ್.ಜಿ.ಸಿದ್ಧರಾಮಯ್ಯ, ಚಂದ್ರಶೇಖರ ತಾಳ್ಯ, ಎಮ್.ಎಸ್.ಆಶಾದೇವಿ ಮುಂತಾದವರು ಈ ಪ್ರಶಸ್ತಿಯ ತೀರ್ಪುಗಾರರಾಗಿ ಅತ್ಯುತ್ತಮ ಆಯ್ಕೆಗಳನ್ನು ಮಾಡಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬಹಳ ಅಚ್ಚುಕಟ್ಟಾಗಿ ಏರ್ಪಡಿಸುವ ಅನನ್ಯ ಪ್ರಕಾಶನ ಇದಕ್ಕಾಗಿ ಖ್ಯಾತರಾದ ವಿಜಯಕ್ಕ,ನಾಗತಿಹಳ್ಳಿ ಚಂದ್ರಶೇಖರ್, ಮುಕುಂದರಾಜು, ಮುಂತಾದವರನ್ನು ಪ್ರಶಸ್ತಿ ಪ್ರದಾನಕ್ಕೆ ಆಹ್ವಾನಿಸಿ ಕಾರ್ಯಕ್ರಮ ನಡೆಸಿದೆ. ಪ್ರಶಸ್ತಿಯು ೫ ಸಾವಿರ ರೂಪಾಯಿ ನಗದು, ಫಲಕ, ಶಾಲು ,ಫಲ ಪುಷ್ಪಗಳ ಗುಚ್ಚವನ್ನು ಹೊಂದಿರುತ್ತದೆ. ಮೇಲಿನ ಚಿತ್ರದಲ್ಲಿರುವವರು ಬಲದಿಂದ , ಎಂ.ಸಿ.ಲಲಿತಾ ಸಾಂಬಶಿವಯ್ಯ, ಡಾ.ವಿಜಯಾ,ವೀರಣ್ಣ ಮಡಿವಾಳರ, ವಸುಂಧರಾ ಭೂಪತಿ, ಮತ್ತು ನಮ್ಮ ತುಮಕೂರಿನ ಜನಪ್ರಿಯ ದೈನಿಕ ಪ್ರಜಾಪ್ರಗತಿಯ ಸಂಪಾದಕ ನಾಗಣ್ಣ ಇವರು.ಈ ವಿಷಯವನ್ನು “ಅವಧಿ” ಪ್ರಕಟಿಸಿದ್ದು ನನಗೆ ಬಹಳ ಸಂತೋಷ ಕೊಟ್ಟಿತು.ನಾನು ‘ಅವಧಿ’ಗೆ ತುಮಕೂರಿಗರ ಪರವಾಗಿ ಆಭಾರಿ. ]]>
howdu madam. veerananige abinandanegalu. mattu karyakramada ruvari lalitaha madamgu abinandqanegalu. (namma tumkurnalli ottu muru jana lalitha madamgalu iddare) nanna somberitanadinda karyakramakke baralagalilla, avdhiyalli nodi santoshavayitu.
Thanks Avadhi Team.