ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನವೀನ ಸೂರಿಂಜೆ: ಜೈಲು ಎಂದರೆ..

ವಿಚಾರಣಾಧೀನ ಕೈದಿಗಳ ಮತದಾನದ ಹಕ್ಕು

ನವೀನ್ ಸೂರಿಂಜೆ

ಕೃಪೆ: ವಿಜಯ ಕರ್ನಾಟಕ

ಕೇರಳದ ಮೀನುಗಾರರನ್ನು ಕೊಂದ ಆರೋಪ ಎದುರಿಸುತ್ತಿರುವ ಇಟಲಿಯ ನೌಕಾ ಪಡೆಯ ಬಂಧಿತ ಕೈದಿಗಳನ್ನು ಇಟಲಿಯಲ್ಲಿ ನಡೆಯುತ್ತಿರುವ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಭಾರತದ ಸುಪ್ರಿಂ ಕೋರ್ಟು ಕೆಲವು ವಾರಗಳ ಹಿಂದೆ ಅನುಮತಿ ನೀಡಿತ್ತು. ಈ ಮೂಲಕ ಭಾರತದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಇಟಲಿ ಪ್ರಜೆಗಳ ಮತ ಚಲಾವಣೆ ಹಕ್ಕನ್ನು ಭಾರತೀಯ ಸುಪ್ರಿಂಕೋರ್ಟು ಎತ್ತಿ ಹಿಡಿಯಿತು. ವಿಪರ್ಯಾಸ ಎಂದರೆ ಈ ರೀತಿಯ ಆದೇಶ ನೀಡುವ ಸಂದರ್ಭದಲ್ಲಿ ಭಾರತದ ಜೈಲುಗಳಲ್ಲಿರುವ ಲಕ್ಷಾಂತರ ವಿಚಾರಣಾಧೀನ ಕೈದಿಗಳ ಮತ ಚಲಾವಣೆಯ ಹಕ್ಕನ್ನು ತಡೆ ಹಿಡಿದಿರುವ ಬಗ್ಗೆ ನಮ್ಮ ನ್ಯಾಯಾಂಗ ಅಥವಾ ಶಾಸಕಾಂಗ ವ್ಯವಸ್ಥೆ ಗಮನ ಹರಿಸದೇ ಇರುವುದು!
ಭಾರತದಲ್ಲಿ ಬಂಧಿಯಾಗಿರುವ ಇಟಲಿ ಪ್ರಜೆಗಳ ಮನವಿಯಂತೆ ಸುಪ್ರಿಂ ಕೋರ್ಟು ಇಟಲಿ ಪ್ರಜೆಗಳನ್ನು ಮೂರು ವಾರಗಳ ಅವಧಿಗೆ ಬಿಡುಗಡೆ ಮಾಡಿದ್ದು ಅವರನ್ನು ಭಾರತದಲ್ಲಿರುವ ಇಟಲಿ ರಾಯಭಾರಿ ಅಧಿಕಾರಿಗಳ ವಶಕ್ಕೆ ನೀಡಿತು. ಮತ ಚಲಾವಣೆ ಮಾಡಿದ ನಂತರ ಅವರನ್ನು ಮತ್ತೆ ಭಾರತದ ನ್ಯಾಯಾಂಗದ ವಶಕ್ಕೆ ನೀಡುವ ಜವಾಬ್ದಾರಿಯನ್ನು ಇಟಲಿ ರಾಯಭಾರಿ ಹೊತ್ತಿದ್ದಾರೆ. ಆರೋಪಿಗಳು ಈಗ ಭಾರತಕ್ಕೆ ಬರಲು ನಿರಾಕರಿಸಿದ್ದಾರೆ. ಅದು ಬೇರೆ ವಿಚಾರ.
ಆರೋಪ ಸಾಬೀತಾಗಿಲ್ಲದ ವಿಚಾರಣಾಧೀನ ಕೈದಿಯೊಬ್ಬನ ಎಲ್ಲ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿ ನ್ಯಾಯಾಂಗದ್ದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸುಪ್ರಿಂ ಕೋರ್ಟಿನ ಈ ನಿರ್ಧಾರ ಸ್ವಾಗತಾರ್ಹ. ಆದರೆ ಅದೇ ಸಂದರ್ಭದಲ್ಲಿ ಭಾರತದ ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳಾಗಿರುವ ಆರೋಪಿಗಳಿಗೆ ಈವರೆಗೂ ಮತ ಚಲಾವಣೆಯ ಹಕ್ಕು ಲಭಿಸಿಲ್ಲ ಎನ್ನುವುದು ಗಂಭೀರ ವಿಷಯ.

ಭಾರತದ ಜೈಲುಗಳಲ್ಲಿ ಲಕ್ಷಾಂತರ ವಿಚಾರಣಾಧೀನ ಕೈದಿಗಳಿದ್ದಾರೆ. ಇವರೆಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದು ಅರೋಪಿಗಳೇ ಹೊರತು ಅಪರಾಧಿಗಳಲ್ಲ. ಚೋದ್ಯದ ಸಂಗತಿ ಎಂದರೆ ವಿಚಾರಣಾಧೀನ ಕೈದಿ ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸಬಹುದು. ಆದರೆ ಮತ ಚಲಾಯಿಸುವಂತಿಲ್ಲ. ಇದೊಂಥರಾ ವ್ಯವಸ್ಥೆಯ ವ್ಯಂಗ್ಯ. 2011ರ ನ್ಯಾಶನಲ್ ಕ್ರೈಂ ರೆಕಾರ್ಡ್ ಬ್ಯೂರೋದ ದಾಖಲೆಗಳ ಪ್ರಕಾರ, ದೇಶದ 123 ಸೆಂಟ್ರಲ್ ಜೈಲುಗಳು, 333 ಜಿಲ್ಲಾ ಜೈಲುಗಳು, 809 ಸಬ್ ಜೈಲುಗಳೂ ಸೇರಿದಂತೆ ಮಹಿಳಾ ಜೈಲುಗಳು, ವಿಶೇಷ ಜೈಲುಗಳಲ್ಲಿ ಒಟ್ಟು 3,72,926 ಕೈದಿಗಳಿದ್ದಾರೆ. ಅದರಲ್ಲಿ 1,28,592 ಕೈದಿಗಳು ಶಿಕ್ಷೆಗೆ ಒಳಗಾಗಿದ್ದಾರೆ. ಅಂದರೆ ಶಿಕ್ಷೆಗೆ ಒಳಗಾದವರ ಪ್ರಮಾಣ ಶೇ 34.5 ಮಾತ್ರ. ಉಳಿದಿರುವ ಸರಾಸರಿ ಶೇ 65 ಕೈದಿಗಳು ಜೈಲಿನಲ್ಲಿದ್ದಾಗ ಚುನಾವಣೆಯೇನಾದರೂ ನಡೆದಿದ್ದರೆ ಮತದಾನದ ಹಕ್ಕನ್ನು ಕಳೆದುಕೊಂಡಿರುವ ಸಾಧ್ಯತೆ ಇದೆ.
ವಿಚಾರಣಾಧೀನ ಕೈದಿಗಳಿಗೆ ಮತ ಚಲಾವಣೆಯ ಹಕ್ಕು ನೀಡಬೇಕು ಎಂಬ ಮಾನವ ಹಕ್ಕು ಆಯೋಗದ ವರದಿ ಈಗಾಗಲೇ ರಾಜ್ಯಪಾಲರ ಕಚೇರಿಯಲ್ಲಿದೆ. ಮೈಸೂರು ಜಿಲ್ಲಾ ಕಾರಾಗಹಕ್ಕೆ ಅಂದಿನ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರಾದ ಜಸ್ಟಿಸ್ ಎಸ್. ಆರ್. ನಾಯಕ್ ಭೇಟಿ ನೀಡಿದ ಸಂದರ್ಭ ಅದು. ಎಲ್ಲ ಕೈದಿಗಳು ತಮ್ಮ ತಮ್ಮ ಕೇಸುಗಳು, ಪೊಲೀಸು ದೌರ್ಜನ್ಯ, ಫಿಕ್ಸಿಂಗ್ ಬಗ್ಗೆ ಜಸ್ಟಿಸ್ ಎಸ್. ಆರ್. ನಾಯಕ್ ಅವರಿಗೆ ಮನವಿ ಸಲ್ಲಿಸುತ್ತಿದ್ದರು.
ನಕ್ಸಲ್ ಆರೋಪ ಹೊತ್ತಿದ್ದ ಸಾಮಾಜಿಕ ಕಾರ್ಯಕರ್ತರಾಗಿದ್ದ ದೇವೇಂದ್ರ, ನಂದಕುಮಾರ್, ಚಂದ್ರಶೇಖರ ಗೊರಬಾಳ್ ಮತ್ತಿತರರು ಜೈಲಿನ ಸಮಸ್ಯೆಗಳು, ಮೂಲಭೂತ ಹಕ್ಕುಗಳು, ಬಡವರ ಸಣ್ಣ ಪುಟ್ಟ ಕೇಸುಗಳ ಶೀಘ್ರ ವಿಲೇವಾರಿ ಬಗ್ಗೆ ಜಸ್ಟಿಸ್ ಎಸ್.ಆರ್. ನಾಯಕ್ ಜತೆ ಚರ್ಚಿಸುತ್ತಿದ್ದರು. ಈ ಸಂದರ್ಭದಲ್ಲಿ ಮಾತಿನ ಮಧ್ಯಪ್ರವೇಶ ಮಾಡಿದ ಆರೋಪಿ ನಂಜಪ್ಪ ಎಂಬಾತ, ‘ಸಾರ್ ವಿಚಾರಣಾಧೀನ ಕೈದಿಗಳಿಗೂ ಮತ ಚಲಾವಣೆ ಹಕ್ಕು ನೀಡಬೇಕು. ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳು ಚುನಾವಣೆಗೆ ನಿಲ್ಲಬಹುದಾದರೆ, ಮತ ಚಲಾವಣೆ ಯಾಕೆ ಮಾಡಬಾರದು’ ಎಂದು ಪ್ರಶ್ನಿಸಿ ಈ ಸಂಬಂಧ ಮನವಿ ಸಲ್ಲಿಸಿದ್ದ. ಕಾಶ್ಮೀರದ ಯುವಕರಿಗೆ ನಕಲಿ ದಾಖಲೆಗಳನ್ನು ಮಾಡಿಕೊಡುತ್ತಿದ್ದ ಆರೋಪದ ಮೇಲೆ ಬಂಧಿತನಾಗಿದ್ದ ನಂಜಪ್ಪ ಎಂಬಾತನ ಮನವಿಯನ್ನು ಪುರಸ್ಕರಿಸಿದ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಿಂದಿನ ಅಧ್ಯಕ್ಷ ಎಸ್. ಆರ್. ನಾಯಕ್ ಈ ಸಂಬಂಧ ರಾಜ್ಯ ಪಾಲರು ಮತ್ತು ಸರಕಾರಕ್ಕೆ ವರದಿಯೊಂದನ್ನು ಸಲ್ಲಿಸಿದ್ದಾರೆ. ಆದರೆ ಈವರೆಗೂ ಪ್ರಭುತ್ವ ಈ ಬಗ್ಗೆ ಚಿಂತನೆ ನಡೆಸಿಲ್ಲ.
ಕೇರಳದ ಕೊಟ್ಟಾಯಂ ಜಿಲ್ಲೆಯ ಮರಂಗ್ರಾಮ ಪಿಳ್ಳಿ ಎಂಬಲ್ಲಿನ ನಿವಾಸಿ ಶಿಬು ಎಂಬಾತನನ್ನು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು 3 ವರ್ಷದ ಹಿಂದೆ ಬಂಧಿಸಿದ್ದರು. ಮಂಗಳೂರು -ಬಿ.ಸಿ ರೋಡಿ ರಸ್ತೆ ಬದಿಯಲ್ಲಿದ್ದ ಮೊಬೈಲ್ ಅಂಗಡಿಯಲ್ಲಿ ಕಳ್ಳತನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಶಿಬುವನ್ನು ಬಂಧಿಸಿ ಮಂಗಳೂರು ಜೈಲಿಗೆ ಹಾಕಲಾಗಿತ್ತು. ಈತನೊಬ್ಬ ವಿಚಾರಣಾಧೀನ ಕೈದಿ ಎಂದು ಇಲ್ಲಿನ ಜೈಲು ಅಧಿಕಾರಿಗಳಿಗೆ ಮರೆತೇ ಹೋಗಿದೆಯೇನೋ ಎನ್ನುವಷ್ಟು ಜಾಣ ಮರೆವನ್ನು ಅಧಿಕಾರಿಗಳು ಪ್ರದರ್ಶಿಸುತ್ತಾರೆ. ನ್ಯಾಯಾಲಯದ ವಿಚಾರಣೆಯ ದಿನಾಂಕಕ್ಕೆ ಸರಿಯಾಗಿ ಶಿಬುವನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದಿಲ್ಲ. ಹೆಚ್ಚಾಗಿ ನ್ಯಾಯಾಂಗ ಬಂಧನದಲ್ಲಿರುವ ಕೈದಿಗೆ 14 ದಿನ ಅಥವಾ 20 ದಿನದ ಅಂತರದಲ್ಲಿ ವಿಚಾರಣೆಯ ದಿನವನ್ನು ನ್ಯಾಯಾಲಯ ನಿಗದಿ ಮಾಡುತ್ತದೆ. ದಿನಕ್ಕೆ 20ಕ್ಕೂ ಅಧಿಕ ವಿಚಾರಣಾಧೀನ ಕೈದಿಗಳನ್ನು ಪೊಲೀಸ್ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಶಿಬು ಮತ್ತಿತರ ಸಣ್ಣ ಪುಟ್ಟ ಕೈದಿಗಳನ್ನು ಅಪರೂಪಕ್ಕೊಮ್ಮೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಉಳಿದ ದಿನ ಎಸ್ಕಾರ್ಟ್ ಕೊರತೆಯ ನೆಪ ಹೇಳಲಾಗುತ್ತದೆ.
ಆರೋಪಿಗಳು ಕೋರ್ಟಿಗೆ ಹಾಜರಾಗದ ಹೊರತು ಕೇಸು ಕಮಿಟ್ ಆಗುವುದಿಲ್ಲ. ಚಾರ್ಚ್ ಆಗಿ ವಿಚಾರಣೆಯೂ ನಡೆಯುವುದಿಲ್ಲ. ಶಿಬು ಬಗ್ಗೆ ಮಂಗಳೂರಿನಲ್ಲಿ ‘ ಕೇಳುವವರು” ಇಲ್ಲದೇ ಇರುವುದರಿಂದ ಈ ಪರಿಸ್ಥಿತಿ ಎದುರಾಗಿದೆ. ಶಿಬುವನ್ನು ಜೈಲಿನಿಂದ ಸಮಯಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರೆ ನ್ಯಾಯಾಲಯ ಆತನಿಗೆ ಜಾಮೀನು ನೀಡುತ್ತಿತ್ತು. ಜಾಮೀನು ನೀಡದೇ ಇದ್ದರೂ ವಿಚಾರಣೆಯನ್ನಾದರೂ ಮುಗಿಸುತ್ತಿತ್ತು. ವಿಚಾರಣೆಯೆಲ್ಲಾ ನಡೆದು ಆತ ಖುಲಾಸೆ ಆಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಒಂದು ವೇಳೆ ಆರೋಪ ಸಾಬೀತಾಗಿ ಶಿಕ್ಷೆಯಾದರೂ 6 ತಿಂಗಳು ಶಿಕ್ಷೆಯಾಗುತ್ತಿತ್ತು. ಆದರೆ ಶಿಬು ಈಗಾಗಲೇ 2 ವರ್ಷಗಳನ್ನು ವಿಚಾರಣಾಧೀನ ಕೈದಿಯಾಗಿ ಜೈಲುವಾಗ ಅನುಭವಿಸಿದ್ದಾನೆ. ತನ್ನ ಯೌವ್ವನದ ಜತೆಗೆ ಮೂಲಭೂತ ಹಕ್ಕನ್ನು ಕಳೆದುಕೊಂಡ 26 ವರ್ಷ ಪ್ರಾಯದ ಶಿಬು ಈಗೀಗ ಒಮ್ಮೊಮ್ಮೆ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಾನೆ. ವ್ಯವಸ್ಥೆಯ ಬಗ್ಗೆ ಆತನಿಗೆ ಹೇಸಿಗೆ ಬಂದು, ಖಾಕಿ ಕಂಡಾಕ್ಷಣ ಕೆಟ್ಟದಾಗಿ ಬೈಯ್ಯುತ್ತಾನೆ. ಇದು ಆತನದೊಬ್ಬನದೇ ಸಮಸ್ಯೆ ಅಲ್ಲ. ಜೈಲುಗಳಲ್ಲಿರುವ ಸಾವಿರಾರು ಬಂದಿಗಳ ವ್ಯಥೆಯೂ ಹೌದು. ಈ ರೀತಿ ವಿಚಾರಣೆ ವಿಳಂಬವಾಗಿ ಜೈಲಿನಲ್ಲಿರಲು ಆರೋಪಿಗಳೇ ಸಂಪೂರ್ಣ ಕಾರಣರಲ್ಲ. ಹಲವಾರು ನೆಪಗಳನ್ನು ಹೂಡಿ ಆರೋಪಿಗಳನ್ನು ಜೈಲಿನಲ್ಲಿ ಕೊಳೆಸಲಾಗುತ್ತಿದೆ. ಸರಕಾರದ್ದೇ ಆಗಿರುವ ನ್ಯಾಶನಲ್ ಕ್ರೈಂ ರೆಕಾರ್ಡ್ ಬ್ಯೂರೋದ ಪ್ರಕಾರ ದೇಶದಲ್ಲಿ 1,486 ಮಂದಿ ವಿಚಾರಣಾಧೀನ ಕೈದಿಗಳು ಕಳೆದ 5 ವರ್ಷಕ್ಕಿಂತಲೂ ಜಾಸ್ತಿ ಅವಧಿ ವಿಚಾರಣಾಧೀನ ಕೈದಿಯಾಗಿಯೇ ಜೈಲುಗಳಲ್ಲಿದ್ದಾರೆ. ಅವರಿಂದ ಮತ ಚಲಾವಣೆ ಸೇರಿದಂತೆ ಎಲ್ಲ ಮಾನವ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ.
ಕರ್ನಾಟಕದಲ್ಲಿ 8 ಸೆಂಟ್ರಲ್ ಜೈಲು, 15 ಜಿಲ್ಲಾ ಜೈಲು, 74 ಸಬ್ ಜೈಲುಗಳು, 1 ಓಪನ್ ಜೈಲು, 2 ವಿಶೇಷ ಜೈಲುಗಳಿದ್ದು ಒಟ್ಟು 102 ಜೈಲುಗಳಲ್ಲಿ 8,286 ಕೈದಿಗಳು ಇದ್ದಾರೆ. ಇವೆಲ್ಲಕ್ಕಿಂತ ಹೆಚ್ಚು ಆಘಾತಕ್ಕೀಡು ಮಾಡುವ ವಿಚಾರವೆಂದರೆ 3,72,926 ಕೈದಿಗಳ ಪೈಕಿ 1,16,307 ಕೈದಿಗಳು ಈ ದೇಶದ ಭವಿಷ್ಯ ರೂಪಿಸಬೇಕಾದ ಯುವಜನಾಂಗ ವಿಭಾಗಕ್ಕೆ ಸೇರಿದವರು. ಅಂದರೆ 18ರಿಂದ 30ರ ವಯೋಮಾನದವರು. ಒಂದೋ ದಾರಿ ತಪ್ಪಿರುವ ಅಥವಾ ಪೊಲೀಸರಿಂದ ತಪ್ಪುಗ್ರಹಿಕೆಗೊಳಗಾಗಿ ಮುಖ್ಯವಾಹಿನಿಯಿಂದ ದೂರ ಸರಿಯುತ್ತಿರುವ ಯುವಜನಾಂಗವನ್ನು ಚುನಾವಣೆಯಲ್ಲಿ ಮತದಾನ ಮಾಡುವಂಥ ಪ್ರಮುಖ ಘಟ್ಟದಲ್ಲೂ ದೂರ ಇರಿಸುವ ಮೂಲಕ ಮುಖ್ಯ ವಾಹಿನಿ ಸೇರ್ಪಡೆಗೆ ತಡೆಯಾಗುತ್ತಿದ್ದೇವೆ ಎಂಬ ಕನಿಷ್ಠ ಪ್ರಜ್ಞೆಯೂ ನಮ್ಮ ವ್ಯವಸ್ಥೆಗೆ ಇಲ್ಲದೇ ಇರುವುದು ದುರದೃಷ್ಟಕರ.

‍ಲೇಖಕರು G

23 March, 2013

2 Comments

  1. shantha.d.gowda

    i support your view.

  2. Manjunath Bangar

    ಇದು ತುಂಬ ವಿಷಾದಕರ ಸಂಗತಿ. ಒಂದು ಕಡೆ ಮತದಾನ ದಿಂದ ವಂಚನೆ, ಮಾತೊಂದು ಕಡೆ ಕೈದಿಗಳನ್ನು ಸರಿಯಾದ ಸಮಯಕ್ಕೆ ಕೋರ್ಟ್ ಗೆ ಹಾಜರ್ ಪಡಸದಿರುವುದು. ಇದರಿಂದ ಕೈದಿಗಳ ಮನಸಿನ ಮೇಲೆ ಖಂಡಿತ ಪರಿಣಾಮ ವಾಗುವುದು. ಇದರಲ್ಲಿ ಕೈದಿಗಳ ಬದ್ರತೆಯ ಸಮಸ್ಯೆ ಕೂಡ ನಾವು ಪರಿಗಣಿಸಬೇಕು. ಹೆಚ್ಹಿನ ಪೋಲಿಸ್ ರನ್ನು ನೇಮಿಸಬೇಕು. ಇದು ಸರ್ಕಾರದ ಕೆಲಸ. ಇದರಿಂದ ನ್ಯಾಯಲಯ ಮತ್ತು ಚುನಾವಣೆ ಸಂಸ್ಥೆ ಗಳು ಸುಲಭವಾಗಿ ಕೆಲಸ ಮಾಡಬಲ್ಲವು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading