ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮ್ಮೆದುರಿನ “ಬ್ರಹ್ಮಾಂಡ”

nhegde1.jpgನಾಗೇಶ ಹೆಗಡೆ.
-ಇದನ್ನು ಇನ್ನಷ್ಟು ನೇರವಾಗಿ ಸರಳವಾಗಿ ಬರೆಯುವುದು ಹೇಗೆಂದು ಯೋಚಿಸುತ್ತಿದ್ದೇನೆ. ನಾಗೇಶ ಹೆಗಡೆ ಕಲಿಸಿದ ಪಾಠ ಇದು. ಯಾವುದನ್ನೇ ಆಗಲಿ ಸರಳವಾಗಿ ಬರೆಯುವುದು. ಕೊಂಕಣ ಸುತ್ತಿ ಮೈಲಾರಕ್ಕೆ ಹೋಗದೆ ಇರುವುದು.

ಕನ್ನಡ ಪತ್ರಿಕೋದ್ಯಮ ಕಂಡ ಅದ್ಭುತ ಪ್ರತಿಭೆಗಳಲ್ಲಿ ಯಾರಾದರೂ ಮರೆಯದೇ ಹೇಳುವ ಒಂದು ಹೆಸರು- ನಾಗೇಶ ಹೆಗಡೆ.

ಸೀರೆಯ ಸೆರಗು ನಾಗೇಶ ಹೆಗಡೆಗೆ ಅತ್ಯಂತ ಪ್ರಿಯ. ಹಾಗಾಗಿಯೇ “ಗಗನಸಖಿಯ ಸೆರಗು ಹಿಡಿದು” ದೇಶ ದೇಶಗಳನ್ನು ಸುತ್ತಿದ್ದಾರೆ. ಅರ್ಥಾತ್ ಏರ್ ಹೋಸ್ಟೇಸ್ ರೇಖಾಗೆ ಮನಸೋತ ಇವರು, ಅವರ ಬೆನ್ನು ಹಿಡಿದು ಸುತ್ತಿದ ದೇಶ ಹಲವಷ್ಟು. ನಾಗೇಶ ಹೆಗಡೆಯ ನೋಟ ಎಂಥದ್ದು ಎಂದು ಕಾಣಬೇಕಾದರೆ ಅವರ ಈ ಪ್ರವಾಸಕಥನಕ್ಕೆ ಡಿಕ್ಕಿ ಹೊಡೆಯಲೇ ಬೇಕು.

ದೂರದ ಈಶಾನ್ಯದ ಚಿಲ್ಕಾದಲ್ಲಿ ವಿಜ್ಞಾನದ ಲ್ಯಾಬೊರೇಟರಿಗಳಲ್ಲಿ ಅಡಗಿ ಹೋಗಿದ್ದ ಜೆ ಎನ್ ಯು ಪ್ರತಿಭೆ, ನೈನಿತಾಲ್ ನ ಪ್ರೊಫೆಸರ್ ಪತ್ರಿಕೋದ್ಯಮಕ್ಕೆ ಸರಕ್ಕನೆ ಹೊರಳಿಕೊಂಡರು. ಇದರಿಂದ ವಿಜ್ಞಾನಕ್ಕೆ ನಷ್ಟವಾಯಿತೇನೋ. ಆದರೆ ಪತ್ರಿಕೋದ್ಯಮಕ್ಕಂತೂ ಲಾಭವಾಯಿತು.

ನಾಗೇಶ ಹೆಗಡೆ ವಿಜ್ಞಾನದ ಪ್ರೊಫೆಸರ್ ಆಗಿದ್ದರಿಂದಲೇ ಇರಬೇಕು, ಇವರಿಗೆ ಕಬ್ಬಿಣದ ಕಡಲೆಗಳನ್ನು ಕರಗಿಸುವ ಕಲೆಯೂ ಗೊತ್ತಿದೆ. ಅರ್ಥವಾಗದ ಕಬ್ಬಿಣದ ಕಡಲೆ ಎನ್ನಿಸಿಕೊಂಡ ವಿಜ್ಞಾನವನ್ನು ಇವರಷ್ಟು ಸರಳವಾಗಿ, ಆಕರ್ಷಕವಾಗಿ ತಲೆಯಲ್ಲಿ ಕೂರಿಸುವವರು ಇನ್ನಾರಿದ್ದಾರೆ, ಇನ್ನೂ ಹುಡುಕುತ್ತಿದ್ದೇವೆ.

ಕಬ್ಬಿಣದ ಅದಿರಿನ ರಫ್ತಿನ ಬಗ್ಗೆ ನಾಗೇಶ ಹೆಗಡೆ ಮಾಡಿದ ಸಂಶೋಧನೆ ಸಂಸತ್ತಿನಲ್ಲೇ ಸದ್ದು ಮಾಡಿತು. ನಾಗೇಶ ಹೆಗಡೆ ಕಲಿಸಿದ ಒಂದೊಂದು ಪಾಠವೂ ಕೊಟ್ಟ ನೋಟವೂ ಒಂದು ಅರಿವುಳ್ಳ ಎಚ್ಚರದ ಪತ್ರಿಕೋದ್ಯಮಿಗಳ ಪೀಳಿಗೆಯನ್ನು ಹುಟ್ಟುಹಾಕಿದೆ. ವೈಎನ್ಕೆ, ಎಂ ಬಿ ಸಿಂಗ್, ಜಿ ಎಸ್ ಸದಾಶಿವ ಮಾರ್ಗದರ್ಶನದಲ್ಲಿ ಬೆಳೆದವರು ಎಂದು ಹೇಗೆ ಹೆಮ್ಮೆಪಡುತ್ತಾರೋ ಹಾಗೆಯೇ ನಾಗೇಶ ಹೆಗಡೆ ಅಖಾಡದಲ್ಲಿ ಪಳಗಿದವರು ಎಂಬುದನ್ನೂ ಕಾಲೇಜಲ್ಲಿ ಪಡೆದ ಗೋಲ್ಡ್ ಮೆಡಲಂತೆ ಬಣ್ಣಿಸಿಕೊಳ್ಳುವವರೂ ಇದ್ದಾರೆ.

nhagde1.jpgಕೈಗಾದಲ್ಲಿ ಅಣುಸ್ಥಾವರ ತಲೆ ಎತ್ತಿದಾಗ ನಾಗೇಶ ಹೆಗಡೆ ಲೇಖನಿಯನ್ನೇ ಕತ್ತಿಯಾಗಿಸಿಕೊಂಡು ಕಣಕ್ಕೆ ಧುಮುಕಿದರು. ಈ ಭೂಮಿ ನಮ್ಮ ಮುಂದಿನ ಪೀಳಿಗೆಗೆ ಸೇರಿದ್ದು ಎಂಬ ಎಚ್ಚರ ಮೂಡಿಸಿದರು. ಸುಧಾ, ಕರ್ನಾಟಕ ದರ್ಶನ, ಕೃಷಿ ರಂಗ ಈಗಲೂ ನಾಗೇಶ ಹೆಗಡೆಯ ಹೆಸರನ್ನು ಉಸಿರಾಡುತ್ತಿವೆ. ಪತ್ರಿಕೋದ್ಯಮಕ್ಕೆ ಕಳಕಳಿಯ ಕಣ್ಣು ತೊಡಿಸಿದ ಹೆಮ್ಮೆ ನಾಗೇಶ ಹೆಗಡೆಯವರದ್ದು. ಇರುವುದೊಂದೇ ಭೂಮಿ, ನಮ್ಮೊಳಗಿನ ಬ್ರಹ್ಮಾಂಡ, ಮುಷ್ಠಿಯಲ್ಲಿ ಮಿಲೇನಿಯಮ್ -ಇದಲ್ಲದೆ ತರಲೆಯ ರುಚಿ ಹತ್ತಿಸುವ ಕ್ಯಾಪ್ಸೂಲಗಿತ್ತಿ ಪುಟಗಳನ್ನು ತಿರುವಬೇಕು.

ನಾಗೇಶ ಹೆಗಡೆ ಮಣ್ಣು ಪರೀಕ್ಷೆ ಮಾಡುತ್ತಾ ಪತ್ರಿಕೋದ್ಯಮಕ್ಕೆ ಜಿಗಿದವರು ಈಗ ಮತ್ತೆ ಮಣ್ಣು ಪರೀಕ್ಷೆಗೇ ಇಳಿದಿದ್ದಾರೆ. ಕೆಂಗೇರಿಯ ಮೈತ್ರಿ ಫಾರಂ ಈಗ ನಾಗೇಶ ಹೆಗಡೆಯವರ ಪ್ರಯೋಗದ ಕ್ಯಾನವಾಸ್. ನಾಗೇಶ ಹೆಗಡೆ ಕಿಂದರಿ ಜೋಗಿಯಾದರೆ ಇಲಿಗಳಾಗಲು ನಾವೂ ನೀವೂ ಎಷ್ಟೊಂದು ಜನ ಸಜ್ಜಾಗಿದ್ದಾರೆ.
ಸಂಪರ್ಕಕ್ಕೆ: nagesh.hegde@gmail.com

ಅವಧಿ ಓದುಗರ ಆಸ್ವಾದನೆಗೆಂದೇ ಹೆಗಡೆಯವರ “ಪುರುಷರ ಶೃಂಗಾರಮಾಸ” ಲೇಖನವನ್ನು(“ನಮ್ಮೊಳಗಿನ ಬ್ರಹ್ಮಾಂಡ” ಕೃತಿಯಿಂದ ಆರಿಸಿದ್ದು) ಇಲ್ಲಿ ಕೊಡುತ್ತಿದ್ದೇವೆ.

‍ಲೇಖಕರು avadhi

5 July, 2007

0 Comments

Trackbacks/Pingbacks

  1. ಒಂದೇ ಒಂದು ಇಂಜೆಕ್ಷನ್! « ಅವಧಿ - [...] ಥಟ್ಟನೆ ನೆನಪಿಗೆ ಬಂದದ್ದು ಪತ್ರಕರ್ತ ನಾಗೇಶ ಹೆಗಡೆಯವರ “ಗಗನ ಸಖಿಯರ ಸೆರಗು ಹಿಡಿದು” [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading