ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮ್ಮೂರ ಬಂಡಿಯಲಿ ನಿಮ್ಮೂರ ಬಿಟ್ಟಾಗ….

‘ಅವಧಿ’ಗಾಗಿ ಜೋಗಿ

ಬಂಡಿಹೊಳೆಯು ಸಣ್ಣ ಹಳ್ಳಿ; ನೂರೈವತ್ತೆರಡು ಮನೆಗಳು ಇರುತ್ತವೆ. ಜನಸಂಖ್ಯೆ ಸ್ವಲ್ಪ ಹೆಚ್ಚು ಕಡಿಮೆ ಒಂಬೈನೂರು. ಪೂರ್ವದಿಕ್ಕಿಗೆ ಬೆಟ್ಟದ ಸಾಲು. ಉಳಿದ ದಿಕ್ಕುಗಳಲ್ಲಿ ಹೇಮಾವತಿ ನದಿ ಈ ಊರಿನ ಎಲ್ಲೆಯೆಂದು ಹೇಳಬಹುದು. ಊರಿನ ಸುತ್ತಲೂ ಪೈರುಪಚ್ಚೆಗಳಿಂದ ತುಂಬಿದ ಹೊಲಗದ್ದೆಗಳೂ ಹಸುರು ಹುಲ್ಲಿನ ಗೋಮಾಳಗಳೂ ಪ್ರಕೃತಿಯ ದಿನಕ್ಕೊಂದು ವಿಧವಾದ ಸೊಬಗಿನ ನೋಟವೂ ನಮ್ಮೂರಿನ ಕಳೆಯನ್ನು ಹೆಚ್ಚಿಸಿದ್ದವು. ಊರಿನ ಸುತ್ತಲೂ ಕಳ್ಳಿಬೂತಾಳೆಗಳ ಬಲವಾದ ಬೇಲಿಗಳಿದ್ದವು. ಇತ್ತೀಚೆಗೆ ಅದು ಕಮ್ಮಿಯಾಗುತ್ತಿದೆ. ಹೊರ ಊರುಗಳಿಂದ ಬರುವ ದಾರಿಗಳಲ್ಲಿ ಹೇಮಗಿರಿಯಿಂದ ಬರುವ ದಾರಿಯೇ ಸ್ವಲ್ಪ ಸುಮಾರಾಗಿತ್ತು. ಇದೇ ಹೆದ್ದಾರಿ. ಈ ಮಾರ್ಗವಾಗಿ ಬರುವಾಗ ಬಲಗಡೆ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನವು ಸಿಕ್ಕುವುದು. ಇದನ್ನು ಕಟ್ಟಿ ನೂರಾರು ವರ್ಷಗಳಾದವು. ಆಳಿದ ಮಹಾಸ್ವಾಮಿಯವರರಾದ ಮುಮ್ಮಡಿ ಕೃಷ್ಣರಾಜ ಒಡೆಯರವರ ತಾಯಿಯವರಾದ ಮಾತೃಶ್ರೀ ದೇವರಾಜಮ್ಮಣ್ಣಿಯವರು ಈ ದೇವಸ್ಥಾನವನ್ನು ಕಟ್ಟಿಸಿ ಇದರ ಸೇವೆಗಾಗಿ ವೃತ್ತಿಗಳನ್ನು ಬಿಟ್ಟಿರುವರು. ಈ ಪುಣ್ಯಾತ್ಮರ ವಿಗ್ರಹವೂ ಅವರ ಜ್ಞಾಪಕಾರ್ಥವಾಗಿ ಇದೇ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವುದು.
ಊರಿನ ದಕ್ಪಿಣ ಭಾಗದಲ್ಲಿ ಸ್ವಲ್ಪ ದೂರವಾಗಿ ಏಳೂರಮ್ಮನ ತೋಪು ಮತ್ತು ಗುಡಿಗಳಿವೆ. ಪೂರ್ವಕಾಲದಲ್ಲಿ ಇಲ್ಲಿಗೆ ಸುತ್ತುಮುತ್ತಲಿನ ಏಳೂರು ಶಿಡಿ ತೇರುಗಳು ಬಂದು ದೊಡ್ಡ ಜಾತ್ರೆಯಾಗಿ ಕುಸ್ತಿ ದೊಂಬರಾಟ ಎಲ್ಲ ಆಗುತ್ತಿದ್ದವಂತೆ. ಈಗ ಏನೂ ಇಲ್ಲ. ಗುಡಿಯ ಮುಂದೆ ಏಳು ಕಲ್ಲುಗಳಿವೆ. ಒಳಗೆ ಏಳು ದೇವರುಗಳಿವೆ. ನಮ್ಮೂರಿನಲ್ಲಿ ಐದಾರು ಮನೆಗಳು ಬ್ರಾಹ್ಮಣರದು. ಉಳಿದದ್ದೆಲ್ಲಾ ಒಕ್ಕಲು ಮಕ್ಕಳದು. ಬಡಗಿಗಳು ಅಕ್ಕಸಾಲಿಗಳು, ವಾದ್ಯದವರು, ಅಗಸರು, ಕುಂಬಾರರ ಒಂದೆರಡು ಮನೆಗಳಿದ್ದವು.ಊರ ಹೊರಗೆ ದಕ್ಪಿಣ ದಿಕ್ಕಿನಲ್ಲಿ ಹದಿನಾರು ಗುಡಿಸಲುಗಳಿದ್ದವಲ್ಲ ಅವೆಲ್ಲಾ ಹೊಲೆಯರದು. ಇವರು ತಮ್ಮ ಗುಡಿಸಲುಗಳ ಮಧ್ಯೆ ಒಂದು ಹೆಂಚಿನ ಮನೆಯನ್ನು ಕಟ್ಟಿ ಅದರಲ್ಲಿ ಮಾಯಮ್ಮ ದೇವರನ್ನಿಟ್ಟು ಪೂಜಿಸುತ್ತಿದ್ದರು.
ಊರಿನ ಹವಾಗುಣವು ಆರೋಗ್ಯವಾಗಿದ್ದಿತು. ವ್ಯವಸಾಯವೇ ಮುಖ್ಯವಾಗಿದ್ದುದರಿಂದ ತಿಪ್ಪೇಗುಂಡಿಗಳು ಊರಿಗೆ ಸಮೀಪವಾಗಿದ್ದವು. ಹಳೇ ಸಂಪ್ರದಾಯದ ಬೀದಿಗಳೂ ಕೆಲವಿದ್ದವು. ಬೆಳಕಿಗೆ ಅನುಕೂಲ ಕಮ್ಮಿ. ದನಕರುಗಳನ್ನು ಮನೆಯೊಳಗೆ ಕಟ್ಟುತ್ತಿದ್ದರು. ಇತ್ತೀಚೆಗೆ ಗ್ರಾಮಪಂಚಾಯ್ತಿ ಏರ್ಪಾಡಾಗಿ ಮೇಲಿನ ಕಷ್ಟಗಳೆಲ್ಲ ನಿವಾರಣೆಯಾಗುತ್ತಲಿವೆ. ಬಾಲ್ಯದಲ್ಲಿ ನೋಡಿದ ಬಂಡಿಹೊಳೆಯು ಈಗೀಗ ಗುಣಮುಖನಾದ ರೋಗಿಯು ಹಾಸಿಗೆಯಿಂದೆದ್ದು ತಿರುಗಾಡುವಂತೆ ಕಾಣುತ್ತಿದ್ದಿತು. ಊರೊಳಗೆ ಕಾಹಿಲೆ ಹರಡಿದಾಗ ಆರು ಮೈಲಿ ಆಚೆಗಿರುವ ವೈದ್ಯರು ಬಂದು ಔಷಧಿಗಳನ್ನು ಕೊಡುತ್ತಿದ್ದರು. ರೈತರು ವ್ಯವಸಾಯಕ್ಕಾಗಿ ಊರಿಗೆ ದೂರವಾದ ಬೈಲುಗಳಲ್ಲೇ ಹೆಚ್ಚಾಗಿ ಕೆಲಸ ಮಾಡುತ್ತಿದ್ದುದರಿಂದ ಅನಾರೋಗ್ಯಕ್ಕೆ ಅವಕಾಶವು ಕಮ್ಮಿಯಾಗಿತ್ತು.
*****
ಅರ್ಚಕ ಬಿ. ರಂಗಸ್ವಾಮಿ ಯಾರು? ಈ ವ್ಯಕ್ತಿಯ ಬಗ್ಗೆ ಯಾಕೆ ಯಾರೂ ಬರೆದಿರಲಿಲ್ಲ. 1933ರಲ್ಲಿ ಪ್ರಕಟವಾದ ಈ ಕೃತಿಯ ಬಗ್ಗೆ ಯಾವ ವಿಮರ್ಶೆಯೂ ಯಾಕೆ ಬಂದಿಲ್ಲ. ಇದು ಬೇರೆ ಬೇರೆ ವಿಶ್ವವಿದ್ಯಾಲಯಗಳ ಜಾನಪದ ವಿದ್ಯಾರ್ಥಿಗಳಿಗೆ ಆಕರಗ್ರಂಥವಾಗಿದೆ ಎನ್ನುವ ಮಾತು ಮುನ್ನುಡಿಯಲ್ಲಿದೆ. ಆದಕೆ ಕೇವಲ ಆಕರಗ್ರಂಥವಾಗಿ ಉಳಿಯುವಂಥ ಕೃತಿಯೇ ಇದು. ನವರತ್ನರಾ್ ಅವರ ಕೆಲವು ನೆನಪುಗಳು, ಎಂ. ಆ್. ಶ್ರೀಯವರ ರಂಗಣ್ಣನ ಕನಸಿನ ದಿನಗಳು, ಬಿಜಿಎ್ ಸ್ವಾಮಿ ಬರೆದ ಹಸುರುಹೊನ್ನು ಕೃತಿಗಳಂತೆ ಇದೂ ಕೂಡ ಯಾಕೆ ಪ್ರಸಿದ್ಧವಾಗಲಿಲ್ಲ.
ಉತ್ತರಗಳನ್ನು ಮರೆತುಬಿಡೋಣ. ಕೆ. ಆ್. ಪೇಟೆ ತಾಲೂಕಿನ ಬಂಡಿಹೊಳೆ ಎಂಬ ಗ್ರಾಮದ ಕುರಿತು ಅರ್ಚಕ ಬಿ. ರಂಗಸ್ವಾಮಿ ಬರೆದಿರುವ ಈ 200 ಪುಟಗಳ ಪುಸ್ತಕವನ್ನು ತೀನಂಶ್ರೀ, ಗೊರೂರು ರಾಮಸ್ವಾಮಿ ಅಯ್ಯಂಗಾ್, ಜೀಶಂಪ ಮುಂತಾದವರು ಮೆಚ್ಚಿಕೊಂಡಿದ್ದರು ಅನ್ನುವುದು ಅವರು ಬರೆದ ಪತ್ರದಿಂದ ಗೊತ್ತಾಗುತ್ತದೆ. ಗೊರೂರು 1933ರಲ್ಲೇ ಇದನ್ನು ಆಕಸ್ಮಿಕವಾಗಿ ಓದಿ ಸಂತೋಷಪಟ್ಟದ್ದನ್ನು ಲೇಖಕರಿಗೆ ಬರೆದು ತಿಳಿಸಿದ್ದೂ ಪುಸ್ತಕದ ಕೊನೆಯಲ್ಲಿದೆ. ಅವೆಲ್ಲ ಶಿಫಾರಸುಗಳನ್ನು ಮರೆತು ಕೂಡ ಸುಖವಾಗಿ ಓದಿಸಿಕೊಂಡು ಹೋಗುವ ವಿಚಿತ್ರ ಗುಣ ಈ ಪುಸ್ತಕಕ್ಕೇ ಅದು ಹೇಗೋ ದಕ್ಕಿಬಿಟ್ಟಿದೆ.
*******
ನಮ್ಮೂರಿನ ವಾರ್ಷಿಕ ಉತ್ಪನ್ನವು ನಾಲ್ಕು ತಿಂಗಳಿಗೆ ಸಾಕಾಗುವಂತಿತ್ತು. ಮೂರು ತಿಂಗಳು ಕೂಲಿಯಿಂದ ಜೀವನ. ಇನ್ನುಳಿದ ತಿಂಗಳಲ್ಲಿ ಇದ್ದ ಗದ್ದೆ ಹೊಲ ಮಾರಿ ಜೀವನ. ಬೆಳೆಯು ಕಮ್ಮಿಯಾದ ವರ್ಷ ನಮ್ಮೂರಿನ ಪಾಡು ದೇವರಿಗೇ ಪ್ರೀತಿ. ಹರಕು ಬಟ್ಟೆಯು ಸಾರ್ವತ್ರಿಕವಾಗಿತ್ತು. ತಲೆಗೆ ಎಣ್ಣೆ ಕಾಣದವರೂ ಎರಡು ಹೊತ್ತು ಊಟವಿಲ್ಲದೇ ಇರುವವರೂ ಅನೇಕರಿದ್ದರು. ಇನ್ನೇನೂ ಉಳಿದಿಲ್ಲವೆಂದು ತಿಳಿದ ಮೇಲೆ ಕಾಫಿತೋಟಕ್ಕೆ ಹೋಗಿ ಸೇರುವ ವಾಡಿಕೆ. ಒಟ್ಟಿನ ಮೇಲೆ ಬಡತನವು ಅಸಾಧ್ಯವಾಗಿ ಸಂತೋಷದಿಂದ ನಗುವುದೂ ಮಾಮೂಲು ಮೀರಲಾಗದೇ ವಿನಾನಿಜವಾದ ಸನ್ನಿವೇಶದಿಂದ ಇರಲಿಲ್ಲ. ಕೊಟ್ಟ ಕಾಳುಗಳನ್ನು ಕಟ್ಟಿಕೊಳ್ಳಲು ತಮಗೆ ಬಟ್ಟೆಯಿಲ್ಲದುದರಿಂದ ಕಷ್ಟಪಡುವವರನ್ನೂ ನಾಚಿಕೊಳ್ಳುವವರನ್ನೂ ನೋಡಿತು ಈ ಕಣ್ಣು, ಮರುಗಿತು ಈ ಮನವು.
******
ಇದು ಮತ್ತೊಂದು ಚಿತ್ರ. ಹಳ್ಳಿಯ ಜೀವನದ ಎರಡೂ ಮುಖಗಳನ್ನೂ ರಂಗಸ್ವಾಮಿ ಕಂಡಂತೆ ತುಂಡರಿಸಿ ನಮ್ಮ ಮುಂದಿಟ್ಟಿದ್ದಾರೆ. ಆದಷ್ಟೂ ತಮ್ಮ ಸಹಾನುಭೂತಿ, ಮರುಕ ಮತ್ತು ಭಾವುಕತೆಗಳನ್ನು ಬದಿಗಿಟ್ಟು ಬರೆದಿದ್ದಾರೆ. ಇಂಥ ಪ್ರಬಂಧಗಳನ್ನು ಬರೆಯುವ ಹೊತ್ತಿಗೆ ಒಂದೋ ಅಹಂಕಾರ ಇಲ್ಲವೇ ಆತ್ಮಾನುಕಂಪ ಲೇಖಕರನ್ನು ಬಾಧಿಸುವುದಿದೆ. ಇವೆರಡರ ನೆರಳೂ ಬೀಳದಂತೆ ಬರೆಯಹೊರಟಾಗ ಅದು ವರದಿಯಾಗುವ ಅಪಾಯವೂ ಇದೆ. ಆದರೆ ರಂಗಸ್ವಾಮಿ ತಮ್ಮೂರನ್ನೂ ಸಾಧ್ಯವಾದಷ್ಟೂ ನಿರುದ್ವಿಗ್ನವಾಗಿ ನಿರುಮ್ಮಳವಾಗಿ ನೋಡಿದ್ದಾರೆ. ತಾವೂ ಕೂಡ ಅದೇ ಹಳ್ಳಿಯ ಒಂದು ಭಾಗ ಎಂಬಂತೆ ಅನುಭವಿಸಿದ್ದನ್ನು ಬರೆದಿದ್ದಾರೆ.
******
ಹಿಂದಣವರು ತಿಳಿದಿದ್ದ ಆತ್ಮೀಯ ತೃಪ್ತಿ, ಆಧ್ಯಾತ್ಮಿಕ ಶಾಂತಿಯೇ ಮುಖ್ಯಲಕ್ಪಣವಾದ ನಾಗರಿಕತೆಯು ಈಗ ಇರಲಿಲ್ಲ. ಮೊದಲ ಕಾಲದವರು ಒಬ್ಬೊಬ್ಬರಿದ್ದರಲ್ಲ ಅವರು ಮಂಡಿಯಿಂದ ಮೇಲೆ ದಟ್ಟಿ ಸುತ್ತಿದ್ದರು. ಆದರದು ಸ್ವಚ್ಛವಾಗಿತ್ತು. ಅವರ ಮೈಕಟ್ಟು ತೇರಿನ ಹೂರ್ಜಿ ಹಗ್ಗದಂತೆ ಗಟ್ಟಿಯಾಗಿಯೂ ವಿಭಕ್ತವಾಗಿಯೂ ಪುಷ್ಟವಾಗಿಯೂ ಇತ್ತು. ಮುಖದಲ್ಲಿ ಆರ್ಯಜನಾಂಗ ಸೂಚಕವಾದ ಗಂಧವಿಭೂತಿ ನಾಮದ ಚಿನ್ಹೆಗಳು ಅವರ ಅಂತಸ್ತೃಪ್ತಿಯನ್ನು ತುಂಬಿಕೊಂಡ ಮುಖಕುಂಭಕ್ಕೊತ್ತಿದ ಮುದ್ರೆಯಂತೆ ಕಾಣುತ್ತಿದ್ದವು. ಒಟ್ಟಿನ ಮೇಲೆ ಸರಳ ಜೀವನ ದೇಹಪಟುತ್ವ, ಶುಚಿತ್ವ ಸಾಮಾನ್ಯವಾಗಿ ಇಹಪರಗಳ ಜ್ಞಾನ ಇವೆಲ್ಲ ಹಳೇ ನಾಗರಿಕತೆಯ ಹಳ್ಳಿಗನ ಲಕ್ಪಣಗಳಾಗಿದ್ದಿತು. ಇತ್ತೀಚೆಗೆ ಘನಗಾಬರಿಯ ನಾಗರಿಕತೆ ಬಂದಿದೆ.
ಅರ್ಧ ಶತಮಾನಕ್ಕೆ ಹಿಂದೆ ಕೂಲಿ ಮಠಗಳಿದ್ದವು. ಆಗ ಜೈಮಿನಿ ಭಾರತ, ಅಮರಕೋಶ, ರಾಮಾಯಣ, ಅಡ್ಡ, ಹಾಗ, ಮುಪ್ಪಾಗದ ಲೆಕ್ಕಗಳು ಇವೆಲ್ಲಾ ಬಳಕೆಯಲ್ಲಿದ್ದವು. ಆಗಿನ ಕಾಲದ ಹಳಬರು ಅನೇಕವಾಗಿ ಬಾಯಲ್ಲಿ ಹೇಳುತ್ತಿದ್ದರು. ಇತ್ತೀಚೆಗೆ ನೂತನ ರೀತಿಯ ಪಾಠಶಾಲೆ ಬಂದಿದೆ. ಸಮುದ್ರದ ಏರಿಳಿತದಂತೆ ಒಂದು ಸಲ ಅತ್ಯುನ್ನತ ಸ್ಥಿತಿಗೆ ಬರುತ್ತದೆ.
ಬ್ರಾಹ್ಮಣರ ಮನೆ ನಾಲ್ಕೈದು ಮಾತ್ರವೆಂದು ಹೇಳಿದೆಯಷ್ಟೇ. ಇವರು ಸ್ನಾನ ಜಪ ದೇವರಪೂಜೆಯಲ್ಲೇ ವಿಶೇಷ ಆಸಕ್ತರಾಗಿದ್ದರು. ಶ್ರುತಿಸ್ಮೃತಿಗಳ ವಿಚಾರದಲ್ಲಿ ಸಂದೇಹ ಬಂದರೆ ಮಸೂರಿಗೆ ಹೋಗಿ ಪಂಡಿತರಿಂದ ಸರಿಯಾದ ವಿಷಯ ತಿಳಿದುಕೊಂಡು ಬರುತ್ತಿದ್ದರು. ಅಕಸ್ಮಾತ್ತು ಯಾರಾದರೂ ತಪ್ಪು ಮಾಡಿದರೆ ಇಬ್ಬರು ಬ್ರಾಹ್ಮಣರು ವಿಧಿಸಿದ ತೀರ್ಮಾನವನ್ನು ಒಪ್ಪಿಕೊಂಡು ತಪ್ಪಿನಿಂದ ಬಿಡುಗಡೆಯಾಗಬೇಕಿತ್ತು. ಮದುವೆ ಸಮಯದಲ್ಲಿ ಮತತ್ರಯ, ಸ್ಥಳ, ಪರಸ್ಥಳ, ಕಾವೇರಿ ಸಂಧ್ಯಾಮಂಟಪ ಮುಂತಾದವುಗಳಿಗೆ ತಾಂಬೂಲವೆತ್ತುತ್ತಿದ್ದರು. ಕಾವೇರಿ ಸಂಧ್ಯಾಮಂಟಪದ ತಾಂಬೂಲವನ್ನು ಯಾಕೆ ಎತ್ತಬೇಕೆಂಬ ಚರ್ಚೆ ಪ್ರತಿ ಮದುವೆಯಲ್ಲೂ ಇತ್ತು. ಒಂದು ಸಲ ಪುರೋಹಿತರಿಗೆ ತಾಂಬೂಲ ಕೊಡುವುದನ್ನು ಮರೆತರು. ` ಓಹೋ ಬ್ರಹಸ್ಪತಿ ಪೀಠಕ್ಕೆ ಅವಮಾನವಾಗಿ ಹೋಯ್ತು’ ಎಂದು ಪುರೋಹಿತರು ಆಗಲೇ ಮೂಟೆ ಹೆಗಲಿಗೆ ಹಾಕಿದ್ದರು. ಅವರನ್ನು ಸಮಾಧಾನ ಮಾಡುವ ಹೊತ್ತಿಗೆ ಸಾಕಾಗಿ ಹೋಯ್ತು.
******
ನಾಸ್ಟಾಲ್ಜಿಯ ಯಾರೆಷ್ಟೇ ಕೆಟ್ಟದು ಎಂದರೂ ಅದರಿಂದ ತಪ್ಪಿಸಿಕೊಳ್ಳುವುದು ಕಷ್ಟ. ರಂಗಸ್ವಾಮಿ ಪುಸ್ತಕವನ್ನು ಓದುತ್ತಾ ಇದ್ದರೆ ಕಾಲದ ಕಾಲುವೆಯಲ್ಲಿ ಹಿಂದಕ್ಕೆ ಪ್ರಯಾಣ ಮಾಡಿದಂತೆ ಭಾಸವಾಗುತ್ತದೆ. ಬೆಂಗಳೂರಿನ ಜನಜಂಗುಳಿ, ಟೀವಿ, ಸಿನಿಮಾ, ಮೆಜೆಸ್ಟಿಕ್ಕಿನ ಗದ್ದಲ, ಕ್ರಿಕೆ್ ಮ್ಯಾಚು ಎಲ್ಲವನ್ನೂ ಮರೆತುಬಿಡಬೇಕು ಅನ್ನಿಸುತ್ತದೆ. ಊರ ತುಂಬ ದನಕರುಗಳು, ಗಾಳಿ ಮಳೆ ಬಿಸಿಲಿಗೆ ಜಪ್ಪಯ್ಯ ಎನ್ನದೆ ನಿಂತ ಮಾವಿನ ತೋಪು, ಆಷಾಢದ ಗಾಳಿಗೆ ಮನೆಯೊಳಗೆ ನುಗ್ಗಿಬರುವ ಕಸಕಡ್ಡಿ ಮರಳು ಮಣ್ಣು, ಬೇಸಗೆಯಲ್ಲೂ ತಣ್ಣಗಿರುವ ಹೊಳೆ, ಚಪ್ಪಲಿ ಹಾಕದ ಕಾಲಿಗೆ ಹಿತವಾಗಿ ಒದಗುವ ಹಳ್ಳಿಯ ನೆಲ, ಮುದ್ದೆ, ಅನ್ನ, ಸಾರು, ಚಟ್ನಿಯ ಊಟ. ಜಗಲಿಯಲ್ಲಿ ಗಾಳಿಗೆ ಕಾಯುತ್ತಾ ಮಲಗಿ ಸುಖಿಸುವ ಅಪರಾಹ್ಣ, ಶಾಲೆಯಲ್ಲಿ ಕನ್ನಡದಲ್ಲಿ ಪಾಠ ಓದುತ್ತಾ ಕನ್ನಡ ಹಾಡು ಹೇಳುವ ಮಕ್ಕಳು, ಹಬ್ಬ ಬಂದಾಗ ಹೊಸ ಬಟ್ಟೆ ತೊಟ್ಟು ಕುಣಿಯುವ ಮಕ್ಕಳು, ಹೊಳೆದಂಡೆಯಲ್ಲಿ ಗುಟ್ಟಾಗಿ ಜಿನುಗುವ ಪ್ರೀತಿ, ಧೋ ಎಂದು ಸುರಿಯವ ಮಳೆಗೆ ಸೋರುವ ಮನೆಯೊಳಗೆ ಆಡುವ ಆಟ…
ನಾಗರಿಕತೆ ಎಲ್ಲವನ್ನೂ ಮರೆಸುತ್ತದೆ. ಹಳ್ಳಿಗಳಲ್ಲೇ ಉಳಿದುಬಿಟ್ಟವರಿಗೆ ಇವು ಲಕ್ಪುರಿಯಲ್ಲ. ಆದರೆ ನಗರಕ್ಕೆ ಬಂದು ಬೀರುಬಾರುಗಳ, ಕ್ರೆಡಿ್ ಕಾರ್ಡುಗಳ, ಏಸಿ ರೂಮುಗಳ, ಚಿಕ್ ಬಿರಿಯಾನಿಗಳ ಲೋಕಕ್ಕೆ ಸಂದವರಿಗೆ ಹಳ್ಳಿಯ ಕಷ್ಟಕಾರ್ಪಣ್ಯದ ದಿನಗಳ ನೆನಪೇ ಒಂದು ಲಕ್ಪುರಿ. ಆದರೆ ಅಂಥ ವ್ಯಕ್ತಿ ಕೊಂಚ ಸೃಜನಶೀಲನೂ ಮಾನವೀಯನೂ ಆಗಿದ್ದರೆ ನೆನಪುಗಳಲ್ಲೇ ಆತ ಮರುಹುಟ್ಟು ಪಡೆಯಬಲ್ಲ ಕೂಡ.
ಹಾಗೆ ಮರುಹುಟ್ಟಿಗೆ ಕಾರಣವಾಗುವ ಶಕ್ತಿ ಅರ್ಚಕ ರಂಗಸ್ವಾಮಿಯವರ ಕೃತಿಗಿದೆ. ಎಲ್ಲಾದರೂ ಸಿಕ್ಕರೆ ಬಿಡದೆ ಓದಿ.
*****
ಬಂಡೀಹಳ್ಳಿಯ ಮಾತುಗಳು ಹೇಗಿರುತ್ತವೆ ಅನ್ನುವುದಕ್ಕೊಂದು ಉದಾಹರಣೆ ತಗೊಳ್ಳಿ;
ವಾದಿ- ಇದೋ ನೀವು ಹತ್ತೂ ಜನ ಸೇರಿದ್ದೀರಿ. ನಾನು ಬಡವೆ, ತಿರಕೊಂಡು ತಿಂಬೋಳು. ನನ್ನ ಕೋಳೀನ ನೆನ್ನೆ ರಾತ್ರಿ ಇವರಿಬ್ಬರೂ ಸೇರಿ ಮುರ್ದವ್ರೆ. ನ್ಯಾಯಾನ ನೀವೇ ಪರಿಹರಿಸಿ.
ಪ್ರತಿವಾದಿಗಳು- ನಾನಲ್ಲ, ದೇವ್ರಾಣೆ, ನನ್ನಾಣೆ, ನಿಮ್ಮಾಣೆ ನಾವಲ್ಲ.
ಮುಖಂಡರು ಕಾಗದವನ್ನು ತರಿಸಿ `ನೋಡೀ ಕೆಟ್ಹೋಗ್ತೀರಿ, ಬ್ಯಾಡೀ, ಬ್ಯಾಡೀ, ಪೊಲೀಸ್ರಿಗೆ ಅರ್ಜಿ ಕೊಡ್ತೀವಿ, ನಿಜಾ ಹೇಳ್ರೀ’
ಪ್ರತಿವಾದಿಗಳು (ಮೆತ್ತಗೆ)- ನಾವು ಬತ್ತಾ ಹರ್ಡಿದ್ದೋ, ಮೇಯೋಕೆ ಕೋಳಿಗಳು ಬಂದೊ, ದೊಣ್ಣೇಲಿ ಹಿಂಗಂದೊ ನೆಗೆದು ಬಿದ್ಹೋದೋ. ಹೊತ್ತಾರೀಕೆ ಕೊಡೋನೆ ಅಂತ ರಾತ್ರಿ ಮನೇಲಿ ಮಡಗಿದ್ದೊ.
ಮುಖಂಡರು ನಾನಲ್ಲ ನಾನಲ್ಲ ಅಂತ ಸುಳ್ಳು ಹೇಳಿದ್ದಕ್ಕಾಗಿ ನಾಲ್ಕಾಣೆ ಜುಲ್ಮಾನೆ ವಿಧಿಸಿ ನಾಲ್ಕಾಣೆಯನ್ನೂ ಕೋಳಿಗಳನ್ನೂ ವಾದಿಗೆ ಕೊಡಿಸಿ ಉಳಿದ ನಾಲ್ಕಾಣೆಯನ್ನು ಊರೊಟ್ಟಿನ ಹಣಕ್ಕೆ ಸೇರಿಸಿದರು.
ಸಭಿಕರಲ್ಲೊಬ್ಬ- ಹೋಗ್ರಯ್ಯ. ಎಂತಾ ನ್ಯಾಯ ಹೇಳಿದ್ರಿ. ಅವರಿಬ್ಬರ ಮೇಲೂ ಕೋಳಿ ಹೊರ್ಸಿ ಊರೆಲ್ಲ ಮೆರವಣಿಗೆ ಮಾಡಿಸೋದು ಬಿಟ್ಟು ಜುಲ್ಮಾನೆಯಂತೆ ಜುಲ್ಮಾನೆ.
ಮುಖಂಡರು- ಓಹೋ.. ಇಲ್ಲಿ ಸೇರಿರೋ ಜನವೇ ಊರೆಲ್ಲಾ ಆಯ್ತು. ಇನ್ನು ತಿರುಗಿ ಬೇರೆ ಮಾನಾ ಹೋಗಬೇಕೋ.
******
ಇದನ್ನು ಓದಿದ ನಂತರ ವಿವರಿಸುವುದಕ್ಕೆ ಹೋಗಬಾರದು. ಅದು ಅಧಿಕಪ್ರಸಂಗವಾಗುತ್ತದೆ.

‍ಲೇಖಕರು avadhi

26 May, 2008

1 Comment

  1. A T Krishnamurthy

    ನಮ್ಮೂರ ಬಂಡಿ….. ಶೈಲಿ ಬಹಳ ಇಷ್ಟವಾಯ್ತು. ನಮ್ಮೂರಿನ ಬಗ್ಗೆ ನಾನೂ ಬರೆಯಬೇಕೆಂದುಕೊಂಡಿದ್ದೇನೆ. ನೀವು ತಿಳಿಸಿರುವಂತೆ ಸಂಧ್ಯಾಮಂಟಪ ನಮ್ಮೂರಿನಲ್ಲೂ ಕಲ್ಲೇಶ್ವರ ದೇವಸ್ಥಾನ ಮತ್ತು ಕೆರೆಯ ದಂಡೆಯಲ್ಲಿದೆ. ಆದರೆ ಅದು ಪಾಳು ಬಿದ್ದಿದೆ. ಸಂಧ್ಯಾಮಂಟಪ ಅಂದರೆ ಏನು? ಅಲ್ಲಿ ಸಂಧ್ಯಾವಂದನೆ ಮಾಡುತ್ತಾರ ಅಥವ ಗುರುಕುಲ ಇತ್ತಾ. ಇವೇ ನನ್ನನ್ನು ಕಾಡುತ್ತಿದೆ. ಸಂಧ್ಯಾ ಮಟಪದ ಉಪ್ಯೋಗದ ಬಗ್ಗೆ ಏನಾದರೂ ತಿದಿದ್ದರೆ ದಯವಿಟ್ಟು ತಿಳಿಸಿ
    ಇಂತಿ ತಮ್ಮ ವಿಶ್ವಾಸಿ
    ಎ. ಟಿ. ಕೃಷ್ಣಮೂರ್ತಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading