ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನನ್ನ ದೇಹ ಗಂಡಾದರೂ, ನನ್ನ ಮನಸ್ಸು ಮಾತ್ರ ಹೆಣ್ಣು…..'

ಸುಮಾ ಮುದ್ದಾಪುರ್

“ನಾನು ಹೀಗೆ ಅಂತ ನಮ್ಮ ಮನೆಯವರಿಗೆ ಗೊತ್ತು. ಆದರೆ ಈ ಕೆಲಸ ಮಾಡ್ತಾ ಇದಿನಿ ಅಂತ ಗೊತ್ತಿಲ್ಲ. ನಾನು ಈ ಕೆಲಸ ಮಾಡ್ತಾ ಇದಿನಿ ಅಂತ ಗೊತ್ತಾದರೆ ನನಗೆ ಮದುವೆ ಮಾಡ್ತಾರೆ. ನನಗೆ ಬೇರೆ ಹುಡುಗಿನ ಮದುವೆ ಆಗಿ ಅವಳ ಜೀವನ ಹಾಳು ಮಾಡೊಕೇ ಇಷ್ಟ ಇಲ್ಲ. ಏಕೆ ಅಂದ್ರೆ ನಾನು ಒಬ್ಬ ಗಂಡಾಗಿದ್ರೂ ಕೂಡ ಹುಡುಗಿಯ ಮೇಲೆ ಆಗಲಿ ಅವಳ ದೇಹದ ಮೇಲೆಯಾಗಲಿ ಆಸೆ ಇಲ್ಲ ಆ ರೀತಿಯ ಭಾವನೆಗಳು ಕೂಡ ಹುಟ್ಟುವುದಿಲ್ಲ. ನನಗೆ ಹುಡುಗಿಯರನ್ನ ನೊಡಿದ್ರೆ ಏನೂ ಅನ್ನಿಸುವುದಿಲ್ಲ. ಅವರ ಮೇಲೆ ಪ್ರೀತಿ ಹುಟ್ಟಲ್ಲ. ಆದರೆ ನನಗೆ ನಾನು ಇಷ್ಟ ಪಡುವ ಹುಡುಗನ ಮೇಲೆ ಪ್ರೀತಿ ಹುಟ್ಟುತ್ತದೆ. ಅವನ ದೇಹದ ಮೇಲೆ ಆಸೆಯಾಗುತ್ತೆ. ನಾನೇನು ಮಾಡ್ಲಿ ಇದು ನನ್ನ ತಪ್ಪಲ್ಲ, ನನ್ನ ಮನಸ್ಸಿನ ತಪ್ಪು. ಆದರೆ ಎಲ್ಲಾರು ನಾನು ತಪ್ಪು ಮಾಡುತ್ತಾ ಇದ್ದೆನೆ ಅನ್ನೋ ರೀತಿಯಲ್ಲಿ ಮಾತಾಡ್ತಾರೆ. ನಾನು ಇರೋದೇ ಹೀಗೆ. ನನ್ನ ದೇಹ ಗಂಡಾದರೂ, ನನ್ನ ಮನಸ್ಸು ಮಾತ್ರ ಹೆಣ್ಣು.”

ಹೀಗೆ ನನ್ನ ಜೊತೆ ಮಾತಾಡಿದವರು ಲಕ್ಷಣ್. ಮೂಲತಃ ಹಾವೇರಿ ಯವರು. ಇವರು ಸರಕಾರೇತರ ಸಂಸ್ಥೆಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡುವವರು. ಡಿಸೆಂಬರ್ 11 2013 ರಂದು ಸುಪ್ರೀಮ್ ಕೋರ್ಟ ಇಂಡಿಯನ್ ಪೀನಲ್ ಕೋಡ್ ನ 377 ಸೆಕ್ಷನ್ ಪ್ರಕಾರ ಸಲಿಂಗರತಿ ( ಸಲಿಂಗ ಕಾಮ ) ಕಾನೂನು ಬಾಹಿರ ಎಂದು ಘೋಷಿಸಿದೆ. ಈ ತೀರ್ಪಿನ ಬಗ್ಗೆ ಸರಕಾರೇತರ ಸಂಸ್ಥೆಯಾದ ಎ.ಎಲ್.ಎಫ್ ನಲ್ಲಿ ಚರ್ಚೆಯನ್ನು ಆಯೋಜಿಸಿದ್ದರು. ಅಲ್ಲಿಗೆ ಲಕ್ಷಣ್ ಬಂದಿದ್ದರು. ನಾನು ಕೂಡ ಅಲ್ಲಿಗೆ ಹೋಗಿದ್ದೆ. ಆಲ್ಲಿ ಲಕ್ಷಣ್ ಅವರ ಪರಿಚಯ ಆಯಿತು.

ಅವರು ಹೇಳುತ್ತಾರೆ ಸಲಿಂಗ ಕಾಮ ಅನ್ನುವುದು ಇತ್ತಿಚೆಗೆ ಬಂದಿರುವುದಲ್ಲ. ಇದು ಅನಾದಿ ಕಾಲದಿಂದಲೂ ಇದೆ.  ಮಹಾಭಾರತದ ಬೃಹನ್ನಳೆ ನಮ್ಮಂತೆಯೇ ಇರಲಿಲ್ಲವಾ ? ಸ್ವತಂತ್ರ್ಯ ಪೂರ್ವದಲ್ಲಿ ಗುಲಾಮಗಿರಿ ಪದ್ದತಿ ಜಾರಿಯಲ್ಲಿತ್ತು. ಆಗ ಮನುಷ್ಯರನ್ನು ಕೊಂಡುಕೊಂಡು ಅವರನ್ನು ತಮ್ಮ ಕಾಮ ತೃಷೆಗೆ ಬಳಸಿಕೊಳ್ಳುತ್ತಿದ್ದರು. ಅದು ಹೆಂಗಸು ಗಂಡಸನ್ನು, ಗಂಡಸು ಹೆಂಗಸನ್ನು ಅಲ್ಲ. ಗಂಡು ಗಂಡನ್ನೆ, ಹೆಣ್ಣು ಹೆಣ್ಣನ್ನೆ ಈ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದರು. ಆದರೆ ಈ ಪುರುಷರು ತಮ್ಮ ಅಸ್ಥಿತ್ವದ ಉಳಿವಿಗಾಗಿ, ಪುರುಷ ಪ್ರಧಾನ ಸಮಾಜದ ನಿಮಾಣಕ್ಕಾಗಿ ಹೆಣ್ಣು ಗಂಡನ್ನು, ಗಂಡು ಹೆಣ್ಣನ್ನು ಕಾಮಿಸುವುದೇ ನೈಸರ್ಗಿಕ. ಹೆಣ್ಣು ಹೆಣ್ಣನ್ನು, ಗಂಡು ಗಂಡನ್ನು ಕಾಮಿಸುವುದು ಅನೈಸರ್ಗಿಕ ಎಂದು ಸಾರುತ್ತಾ ಬಂದರು. ಇವರು ಹೇಗೆ ಹೇಳುತ್ತಾರೆ ಯಾವುದು ನೈಸರ್ಗಿಕ ಯಾವುದು ಅನೈಸರ್ಗಿಕ ಎಂದು. ಪ್ರಕೃತಿಯಲ್ಲಿ ನೈಸರ್ಗಿಕ ಮತ್ತು ಅನೈಸರ್ಗಿಕಗಳನ್ನು ಗುರುತಿಸಿದವರು ಯಾರು? ಸಲಿಂಗ ಕಾಮ ತಪ್ಪು ಎನ್ನುವುದು ಸಮಾಜದಲ್ಲಿ ಭದ್ರವಾಗಿ ಬೇರೂರಿ ಬಿಟ್ಟಿದೆ. ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತಾಡುವುದೇ ತಪ್ಪು ಹಾಗೇ ಮಾತಾಡಿದರೆ ಅದು ಅನಾಚಾರ ಎಂದು ಭ್ರಮಿಸಲಾಗಿತ್ತು. ಹಲವು ಶತಮಾನಗಳ ಮಡಿವಂತಿಕೆಯ ಫಲವಾಗಿ, ಹಾಗೂ ಮಿಕ್ಕವರು ಏನೆಂದುಕೊಳ್ಳುತ್ತಾರೋ ಎಂಬ ಭೀತಿಯಿಂದ, ಜನರು ತಮ್ಮ ವೈಯಕ್ತಿಕ ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡುವುದು ದೊಡ್ಡ ಅಪರಾಧ ಎಂದು ಭಾವಿಸಿದ್ದ ಸಮಾಜ ಅಥವಾ ಜನರು ಇಂದು ಮುಕ್ತವಾಗಿ ಮಾತನಾಡುವುದನ್ನು ಕಲಿತಿದ್ದಾರೆ.ಅದರಲ್ಲೂ ಇತ್ತಿಚಿಗಿನ 15 – 20 ವರ್ಷಗಳಿಂದ ಸಲಿಂಗ ಕಾಮದ ಬಗ್ಗೆ ಮತ್ತು ತಮ್ಮ ವೈಯಕ್ತಿಕ ಲೈಂಕತೆಯ ಬಗ್ಗೆ ಮುಕ್ತವಾಗಿ ಮಾತನಾಡಲು ಆರಂಭಿಸಿದ್ದಾರೆ ಜನರು.

ಇಂತಹ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನ ಈ ತೀರ್ಪು ಎಷ್ಟರ ಮಟ್ಟಿಗೆ ಸಮಂಜಸ ಎಂದು ಅವರು ನನಗೆ ಪ್ರಶ್ನೇ ಹಾಕಿದರು. ನನಗೆ ಏನು ಹೇಳುಬೇಕು ಅನ್ನುವುದೇ ತೋಚಲಿಲ್ಲ. ಸುಪ್ರೀಂ ಕೋರ್ಟ್ ನ ಈ ತೀರ್ಪು ಬರುವುದಕ್ಕೂ ಮುಂಚೆ ಪೋಲಿಸರಿಂದ ಒಂದು ಹಂತದ ವರೆಗಿನ ಹಿಂಸೆಯಾಗುತ್ತಿತ್ತು. ಆದರೆ ಈ ತೀರ್ಪು ಬಂದ ನಂತರ ಪೋಲಿಸರ ಹಾವಳಿ ಇನ್ನೂ ಹೆಚ್ಚಾಗಿದೆ. ಅವರುಗಳು ನಮ್ಮ ಮೇಲೆ ನಡೆಸುವ ದೌರ್ಜನ್ಯಕ್ಕೆ ನಾವು ಕುಸಿದು ಹೊಗಿದ್ದೇವೆ. ಲೈಂಗಿಕ ಕಾರ್ಯಕರ್ತರಿಗೆ/ರ್ತಿಯರಿಗೆ ಹೆಚ್.ಏ.ವಿ ಬಗ್ಗೆ ಮಾಹಿತಿ ನೀಡಿ ಅವರಿಗೆ ಉಚಿತವಾಗಿ ಕಾಂಡೋಮ್ ಅನ್ನು ವಿತರಿಸುವುದು ಮತ್ತು ಸ್ವಚ್ಛತೆಯ ಬಗ್ಗೆ ಅವರಿಗೆ ಮಾಹಿತಿ ನೀಡುವುದು ನಮ್ಮ ಕೆಲಸ. ಹೀಗೆ ಇತ್ತಿಚೆಗೆ ಸಂಜೆ ಹೊತ್ತು ನಮ್ಮ ಕೆಲಸದಲ್ಲಿ ನಾವು ನಿರತರಾಗಿದ್ದಾಗ ಇಬ್ಬರು ಪೋಲಿಸರು ಬಂದು ನಮ್ಮ ಬ್ಯಾಗ್ ಚಕ್ ಮಾಡಿ ಅದರಲ್ಲಿ ಇದ್ದ ಕಾಂಡೋಮ್ಗಳನ್ನು ನೋಡಿ ಕೇಳಿದರು ಏನಿದು ? ಎಂದು. ನಾವು ಮಾಡುತ್ತಿರುವ ಕೆಲಸದ ಬಗ್ಗೆ ಮತ್ತು ನಮ್ಮ ಸಂಸ್ಥೆಯ ಬಗ್ಗೆ ಎಲ್ಲವನ್ನು ತಿಳಿಸಿ ಹೇಳಿದೆವು. ಆದರೆ ಆ ಪೋಲಿಸರು ನಮ್ಮ ಮಾತುಗಳನ್ನು ಕೇಳದೆ (ನಂಬದೆ) ನಮ್ಮ ಬ್ಯಾಗ್ ನಲ್ಲಿದ್ದ ಕಾಂಡೋಮ್ ಗಳನ್ನೆಲ್ಲ ಸುಟ್ಟು ಹಾಕಿ ನಮಗೆಲ್ಲ ಅವಾಚ್ಯ ಶಬ್ದಗಳಿಂದ ಬೈದು, ಹೊಡೆದರು. ನೀವು ಯಾಕೆ ಹೀಗೆ ನಡೆದು ಕೋಳ್ಳುತ್ತಿರಿ. ನೀನು ಒಬ್ಬ ಗಂಡಸಾಗಿ ಗಂಡಿನ ತರ ನಡೆದುಕೊ. ಹೆಂಗಸಿನ ಹಾಗೆ ಯಾಕೆ ನೆಡೆದುಕೊಳ್ತಿಯಾ ? ಎಂದು ಅವರು ನನ್ನು ಕೇಳಿದರು. ಅದಕ್ಕೆ ನಾನು ಹೇಳಿದೆ ನಾನು ನೊಡಲಿಕ್ಕೆ ಗಂಡಿನ ಹಾಗೆ ನಿಮಗೆ ಕಾಣಬಹುದು ಆದರೆ ಏನು ಮಾಡುವುದು ಸಾರ್ ನನ್ನ ಒಳಗಡೆ ಮನಸ್ಸು ಅನ್ನುವುದು ಒಂದು ಇದೆಯಲ್ಲ, ಅದು ಹೆಣ್ಣಿನ ಭಾವನೆಗಳನ್ನು ಹೊಂದಿದೆ.

ಆ ಮನಸ್ಸಿಗೆ ನಾನು ಗಂಡಸಿನ ಹಾಗೆ ಇರು ಅಂತ ಎಷ್ಟು ಹೇಳಿದರು ಆ ಮನಸ್ಸು ಕೇಳುತ್ತಿಲ್ಲ ಏನು ಮಾಡಲಿ ಸಾರ್ ಇದು ನನ್ನ ತಪ್ಪ  ಎಂದು ಕೇಳಿದೆ. ಆದರೆ ಆ ಪೋಲಿಸ್ ಇದನ್ನೇಲ್ಲ ಕೇಳಿ ನನಗೆ ಪಾಠ ಹೇಳೋಕೆ ಬರ್ತೀಯಾ ಅಂತಾ ಇನ್ನಷ್ಟ ಹೊಡೆದ್ರು. ಏನು ಮಾಡುವುದು ಮೇಡಂ ನಾವುಗಳು ಈ ಸಮಾಜಕ್ಕೆ ಒಂದು ಪ್ರಶ್ನೇ. ಅತ್ತಾ ಗಂಡಿನ ಹಗೆ ಇರೋಕೆ ಅಗ್ತಾ ಇಲ್ಲ. ಇತ್ತಾ ಹೆಣ್ಣಿನ ಹಾಗೇ ಇರೋಕೂ ಆಗ್ತಾ ಇಲ್ಲ. ಗಂಡಿನ ದೇಹ ಹೊತ್ತು, ಹೆಂಗಸಿನ ಮನಸು ಹೊಂದಿ ಈ ಸಮಾಜದಲ್ಲಿ ನಾವು ಅನುಭವಿಸುತ್ತಿರುವ ನೋವು ಅಷ್ಟಿಷ್ಟಲ್ಲ. ಎಲ್ಲರ ಹಾಗೆ ಸಹಜ ಜೀವನ ನಡೆಸಲು ಆಗದೆ ಈ ಸಮಾಜ ದಲ್ಲಿ ದಿನ ನಿತ್ಯ ಹೋರಾಟ ನಡೆಸುತ್ತಿದ್ದೆವೆ. ನಾವುಗಳು ಕೂಡ ನಿಮ್ಮೆಲ್ಲರ ಹಾಗೆ ಮನುಷ್ಯರು. ಅದರಲ್ಲೂ ಮನಸ್ಸು ಇರುವ ಮನುಷ್ಯರು. ನಮಗೂ ಬದುಕಲು ಬಿಡಿ ಎಂದರು. ಇದನ್ನೆಲ್ಲ ಕೇಳಿ ನನಗೆ ತುಂಬ ನೋವಾಯಿತು. ಲೈಂಗಿಕತೆ ಮತ್ತು ಲೈಂಗಿಕ ಆಸಕ್ತಿ ಅನ್ನುವುದು ಬಹಳ ಸಂಕೀರ್ಣವಾದ ವಿಷಯ. ಗಂಡು ಹೆಣ್ಣಿನ ಪರಸ್ಪರ ಆಕರ್ಷಣೆ ಎಲ್ಲರಿಗೂ ತಿಳಿದ ವಿಷಯ, ಅಂತೆಯೇ ಸಲಿಂಗಿಗಳ ಪರಸ್ಪರ ಆಕರ್ಷಣೆಯೂ, ಅಸ್ತಿತ್ವದಲ್ಲಿರುವ ಸಂಗತಿಯೇ. ಹೇಗೆ ಎಲ್ಲಾ ಬಣ್ಣದ ಜನರು ಈ ಪ್ರಪಂಚದಲ್ಲಿ ಇದ್ದಾರೋ, ಹಾಗೇಯೇ ಜನರ ಲೈಂಗಿಕತೆಯೂ ಭಿನ್ನವಾಗಿ ಇರುವುದರಲ್ಲಿ ಆಶ್ಚರ್ಯವೇನು ಇಲ್ಲ. ಈ ಪುರುಷ ಪ್ರಧಾನ ಸಮಾಜದ ನಿರ್ಮಿತ ಮೌಲ್ಯಗಳನ್ನು ಬದಲಾಯಿಸಬೇಕು. ಆದರೆ ಸುಪ್ರೀಂ ಕೋರ್ಟ್ ನ ಈ ತೀರ್ಪು ಮಾತ್ರ ಪ್ರಜಾಪ್ರಭುತ್ವ ಪದ್ದತಿಯ ಸಮಾಜಕ್ಕೆ ಶೋಭೆ ತರುವಂತಹದಲ್ಲ.

‍ಲೇಖಕರು avadhi

8 February, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading