ಹುಟ್ಟಿನ ಸಾವು
ಸದಾಶಿವ್ ಸೊರಟೂರು
ನನ್ನವ್ವ ನಿತ್ಯ ತರುಣಿ
ಹಸುರುಡಿಗೆ ಬಿಳಿ ಮೊಗ್ಗು
ದಪ್ಪ ದಪ್ಪ ಹೀಚು ಕಾಯಿಗಳು,
ಕುಡಿಯಿಂದ ಹೊರಡುವಾಗ
ಕಂಠ ತುಂಬಿ ಹರಸಿದ್ದಳು
ಎನಗಿಂತ ಮಿಗಿಲಿರಲಿ ನಿನ್ನ ಬಾಳು;
ಕೆಳಗುರುಳಿ ಉಡಿ ಸೇರಿ
ಕಳೆದೆ ಅವ್ವನ ನೆರಳಲಿ ನಾಕು ದಿನ
ಬಿಸಿಲಿಗೆ ಕಾದು ರಾತ್ರಿಯ ಕಾಯ್ತಿದ್ದೆ!
ತಣ್ಣನೆಯ ಒಂಚೂರು ಗಾಳಿಗೆ
ನನ್ನೊಡಲ ಗರ್ಭ ನಡುಗಿತ್ತು ಕಾವಿಗೆ
ದೇವರ ಬೇಡುತ ದಿನ ಕಳೆದಿದ್ದೆ;
ಉಡಿ ಮಣ್ಣು ತಬ್ಬಿದ ಸಲಿಗೆಗೆ
ಭ್ರೂಣ ಮೊಳೆಯುವ ಆಸೆ ಕಂಡಿತ್ತು,
ಮಳೆಯಿಲ್ಲ, ಗಾಳಿಯಲಿಲ್ಲ ಒಂಚೂರು ತೇವ
ಉಸಿರುಗಟ್ಟುವ ಧೂಳು, ಜೀವ ಕಳೆಯಿಲ್ಲ!
ಅವ್ವ ಉದುರಿಸಿದ ಇಬ್ಬನಿಗೆ ಒಂದಿಷ್ಟು ಊದಿದ್ದೆ
ಭ್ರೂಣದಲಿ ಸಣ್ಣಗೆ ಜೀವ ಮೊಳೆದಿತ್ತು;
ಅವ್ವ ಬಾಚಿಟ್ಟ ಇಬ್ಬನಿಯಲ್ಲೇ
ಎರಡೆಲೆಯ ಹೊರ ಹಾಕಿ ಜಗವ ಕಂಡೆ
ಅವ್ವ ಹರಸಿದ ಮಾತು ನೆನಪಾಯ್ತು!
ಎಲೆ ಬಿಚ್ಚುವಲ್ಲೆ ಉಸಿರೋದ ನನಗೆ
ಮರವಾಗುವುದು ಇನ್ನು ಕನಸಾಯ್ತು!
ಬೀಸುವ ಗಾಳಿ, ಸುಡುವ ಬಿಸಿಲು
ಸಂಜೆಗೆ ನನ್ನಲೆಯ ಜೀವ ಹೊರಟೊಯ್ತು;
ಅವ್ವನೆಂತು ಬಾಳಿದಳೋ ಈ ಭುವಿಯಲ್ಲಿ
ಇನ್ಯಾರು ಬೆಳೆಯರು ಮತ್ತೆ ಈ ಜಗದಲ್ಲಿ!
ಎನಗಿಂತ ಮಿಗಿಲಿರಲಿ ನಿನ್ನ ಬಾಳು…ಅಂತಹ ಹರಕೆ ತಾಯಿಯಿಂದ ಮಾತ್ರ ಸಾಧ್ಯ…ಅತ್ಯುತ್ತಮವಾಗಿದೆ ಸರ್..
Super sir
ಮರದಿಂದ ಬಿದ್ದು ಮೊಳಕೆಯಲೇ ಹುಟ್ಟಿ ಮತ್ತೆ ಆಗಲೇ ಸಾವು ಕಂಡ ಬೀಜದ ಪರಿ ನಿಮ್ಮ ಕಲ್ಪನೆಯಲ್ಲಿ ನಿರ್ವಿಕಾರವಾಗಿ ಮೂಡಿ ಬಂದಿದೆ , ಧನ್ಯವಾದಗಳು .