ಸತ್ಯಬೋಧ ಜೋಶಿ
ಚಿತ್ರ: ಬಾದಲ್ ನಂಜುಂಡಸ್ವಾಮಿ
ಹೊಟ್ಟೆ ತಟ್ಟೆಯ ಮಧ್ಯೆ ಇಷ್ಟೊಂದು ಮೈಲುಗಳೆ!!
ಹಸಿವು ರೇಸಿನ ಕುದುರೆ ಗೊತ್ತೆಇರಲಿಲ್ಲ!
ನನಗಿಂತ ಇನ್ನೊಬ್ಬ ಹಸಿದು ಬಂದವನಿಲ್ಲಿ
ಅವನ ಓಟಕೆ ಊರೇ ಸಾಲುತಿಲ್ಲಾ!
ಮುಗಿಲು ದಾಟಿದ ನಿನಗೆ ಹೊಸಿಲು ದಾಟಲು ಭಯವೇ
ಎಷ್ಟು ಬಡ್ಡಿಗೇ ಅವನು ಜೀವ ಬೇಡುತಿಹ
ಸಾವು ಡಾಕ್ಟರಿಗಿಂತ ಬಲು ಅಗ್ಗ ನಂಗೊತ್ತು!
ಚೌಕಾಸಿ ಕುಲಕಸುಬು ಅದಕೆ ಹೊರಟಿರುವೆ
ನೂರು ರೊಟ್ಟಿಗಳಗಲ ನಿನ್ನ ಮನೆ ಚಪ್ಪರವು
ನನ್ನ ಕೂಸಿನ ಹೊಟ್ಟೆ ಕಾಸಿನಗಲಾ
ನಿನಗೆ ಹಾರಲು ಮುಗಿಲು ಆಳ ಇಳಿಯಲು ಕಡಲು
ನನ್ನ ಮೇಟಿಯ ಕಣವೇ ಹಂಚಿನಗ !
ನನ್ನನ್ನೇ ನೋಡುತಿದೆ ಹೊರಟಾಗ ಇಡೀ ಶಹರ
ಮದ್ದು ಚುಚ್ಚಿಸಿಬಿಟ್ಟ ಇಲಿಗಳಂತೆ
ಮಸಣ ಒಂದೇ ಹಳತು ದೊಡ್ಡ ನಗರಗಳಲ್ಲಿ
ನಮ್ಮ ಹಾಜರಿ ಲೆಕ್ಕ ಊರಲಂತೆ!
ನಾನೇ ಸವೆದರು ಕೂಡ ಈ ದಾರಿ ಸವೆಯದದು!
ನಿನ್ನ ನೆನೆದನು ಅವ್ವ ರೆಕ್ಕೆ ಬರುತಿಲ್ಲ!
ಕರುಳಿಗಂಟಿದ ಊರು ನಡೆದಂತೆ ಬಲು ದೂರ
ಹೊತ್ತು ಹಾರಲು ಕರೆದೆ ದೇವ್ರೂ ಬರಲಿಲ್ಲ!!
Joshi sir ಸೂಪರ್
ನಿನಗೆ ಹಾರಲು ಮುಗಿಲು ಆಳ ಇಳಿಯಲು ಕಡಲು
….
ನನ್ನನ್ನೇ ನೋಡುತಿದೆ ಶಹರ ,ಮದ್ದು ಚುಚ್ಚಿಟ್ಟ ಇಲಿಗಳಂತೆ….
ಈ ಸಾಲುಗಳು ಕವಿತೆ ಕಸುವು ಹೆಚ್ಚಿಸಿವೆ. ಭಾರತದ ಶ್ರಮಿಕರ, ಬೆವರು ಸುರಿಸಿ ಉಣ್ಣುವ ಜನರ ಕಷ್ಟಗಳನ್ನು ಸಮರ್ಥವಾಗಿ ಧ್ವನಿಸುತ್ತದೆ ಕವಿತೆ. ಬಾದಲ್ ಅವರ ಚಿತ್ರಕ್ಕೆ ಭಾಷ್ಯ ಬರೆದಂತಿದೆ ….
ವಾಸ್ತವದ ಕ್ರೂರತೆಗೆ ಕವಿತೆ ಮುಖಾಮುಖಿ ಯಾಗಿದೆ.