ಲಂಕೇಶ್ ಪತ್ರಿಕೆ ಕಾಲದಿಂದ ನಟರಾಜನ “ಗಾಳಿ ಬೆಳಕು” ಅಂಕಣವನ್ನು ಇಷ್ಟಪಟ್ಟು ಓದಿಕೊಂಡು ಬಂದವರಲ್ಲಿ ನಾನೂ ಒಬ್ಬ. ವರ್ಷಾಂತರಗಳ ಕಾಲ ನಟರಾಜ್ ಬರೆಯದಿದ್ದಾಗಲೂ, ಅವನ ಪುಸ್ತಕದ ಕೆಲವು ಲೇಖನಗಳನ್ನು ನೆನೆಸಿಕೊಂಡು ಓದುತ್ತಿದ್ದೆ. ಬರಹದ ವಿಷಯದಲ್ಲಿ, ನಮಗೆ ಆ ಕ್ಷಣಕ್ಕೆ ಅನಿಸಿದ್ದನ್ನು ನಿಷ್ಠುರವಾಗಿ ಹೇಳುವುದೇ ಪ್ರಾಮಾಣಿಕತೆ ಎಂಬುದು ನನ್ನ ನಂಬಿಕೆ. ನಟರಾಜನ ಬರಹದ ಬಗ್ಗೆ ಇರುವ ವಾಂಛೆಗೂ ಇದೇ ಕಾರಣವಿರಬಹುದು. ಎರಡನೆಯದು, ಎಂದೂ ಉಡಾಫೆಯಾಗದಂತೆ ಉಕ್ಕುವ ತುಂಟತನ ಮತ್ತು “ಪನ್”. ಮೂರನೆಯದು: ಎಷ್ಟೋ ಸಾರಿ ಸಂವಹನೆಯ ಸುಖಕ್ಕಾಗಿ ವಿಷಯವನ್ನು ಹೃಸ್ವಗೊಳಿಸುತ್ತಾನೆ ಅನ್ನಿಸಿದರೂ, ಇದೇ ವಿಷಯದ ಬಗ್ಗೆ “ಒಂದಿಷ್ಟು ಗಹನವಾಗಿ-ಆದರೆ ಸರಳವಾಗಿ, ಚುರುಕಾಗಿ-ಬರೆಯುವುದಿದ್ದರೆ ಬರಿ ನೋಡೋಣ” ಎನ್ನುವ ಆಸೆ-ಆಹ್ವಾನಗಳನ್ನೂ ಹುಟ್ಟಿಸುತ್ತಾನೆ. ತನ್ನ ಕಾಲದ ಬರಹಗಾರರಿಗೆ ಬರೆಯಬೇಕು ಎನ್ನುವ ಕಿಚ್ಚು ಮೂಡಿಸುವ ಬರಹದ ಶಕ್ತಿ ಕಡಿಮೆಯದಲ್ಲ. ಬರೆಯುವ “ಅದೃಷ್ಟ” ಯಾವತ್ತೂ ನಿನಗಿರಲಿ ಗುರುವೇ.
ಕೆ ಫಣಿರಾಜ್





0 Comments