ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ದೇಶ ಕಾಲ' ಈಗ ಫೇಸ್ ಬುಕ್ ನಲ್ಲಿ

ವಿವೇಕ ಶಾನಭಾಗ ಅವರ ಸಂಪಾದಕತ್ವದ ದೇಶಕಾಲ ಈಗ ಫೇಸ್ ಬುಕ್ ನಲ್ಲೂ ಹೆಜ್ಜೆ ಮೂಡಿಸಿದೆ. ದೇಶಕಾಲದ ಹಳೆಯ ಸಂಚಿಕೆಗಳ ಒಂದು ಝಾಲಕ್ ಅಲ್ಲಿ ಸಿಗುತ್ತದೆ. ಭೇಟಿ ಕೊಡಲು ಇಲ್ಲಿ ಕ್ಲಿಕ್ಕಿಸಿ
ಫೇಸ್ ಬುಕ್ ನಿಂದ ತೆಗೆದ ‘ದೇಶಕಾಲ’ ಐದರಲ್ಲಿ ಪ್ರಕಟವಾದ ಪ್ರತಿಭಾ ನಂದಕುಮಾರ ಅವರ ‘ಕಾಫಿ ಹೌಸ್’ ಪದ್ಯಗಳ ಎರಡು ಭಾಗಗಳು ಇಲ್ಲಿವೆ-

ಒಂದೊಂದು ದಿನ ಕಾಫಿ ಕೆಫೆಯಲ್ಲಿ ಜಾಸ್ತಿ ರಶ್ಶಿಲ್ಲದಿದ್ದರೆ
ವಿನ್ಸೆಂಟ್ ಟೇಬಲ್ಗಳಲ್ಲಿ ಯಾರಿದ್ದಾರೆ ಅಂತ ನೋಡಿ ಬೆಳಕು ಸ್ವಲ್ಪ
ಡಿಮ್ ಮಾಡುತ್ತಾನೆ. ಕಾಫಿ ತಂದುಕೊಟ್ಟು ಸ್ವಲ್ಪ ಹೊತ್ತಿನತನಕ ಬರದೇ
ದೂರ ಇರುತ್ತಾನೆ. ಮಂದಬೆಳಕಿನಲ್ಲಿ ಒಂದೊಂದುಸಲ ಜಗಳವಾಡುತ್ತಿದ್ದವರೂ
ಅದನ್ನು ಬಿಟ್ಟು ಸ್ವಲ್ಪ ಹೊತ್ತಿಗೆ ಮಾತು ಕಡಿಮೆ ಮಾಡಿ ಮನಸ್ಸು
ಹಸಿಯಾಗಿಸಿಕೊಂಡು ಮೆಲ್ಲಮೆಲ್ಲನೆ ಕೈಕೈಹಿಡಿದು ಆಮೇಲೆ ಹಾಗೇ
ಒರಗಿ ಪರಸ್ಪರರನ್ನು ಆಲಂಗಿಸಿಕೊಂಡು ಸಾಧ್ಯವಾದರೆ
ಮೆಲ್ಲನೆ ಪುಟ್ಟದಾಗಿ ಮುತ್ತು ಕೊಟ್ಟುಕೊಳ್ಳುತಾರೆ.
ಆ ಅರ್ಧ್ರ ಗಳಿಗೆಯಲ್ಲಿ ವಿನ್ಸೆಂಟ್ ಕ್ಲೀನರ್ ಬಾಯ್ಗಳ ಜೊತೆ ಹರಟೆ
ಹೊಡಿಯುತ್ತಾ ಅವರನ್ನೂ ಎಂಗೇಜ್ ಮಾಡುತ್ತಾನೆ.

ಒಂದು ಸಲ ಮಾತಾಡುತ್ತಾ ಹೇಳಿದ್ದ ಅವನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು
ಅವಳ ಮನೆಯಲ್ಲಿ ಒಪ್ಪಲಿಲ್ಲ ಅಂತ ಅವಳು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಳಂತೆ

ಅದಕ್ಕೆ ಮೊದಲು ಅವರು ಒಂದು ಸಲವೂ ಅಪ್ಪಿ ಮುತ್ತಿಡಲಿಲ್ಲವಂತೆ.
———————————-
ಬಿಟ್ಟು ಹೋದ ಹೆಂಡತಿ ಬಗ್ಗೆ ಅವನಿಗೆ ಅಪಾರ ಪ್ರೀತಿ.
ಎಲ್ಲರೂ ಮರೆತುಬಿಡು ಅನ್ನುತ್ತಿದ್ದರು. ಅವನಿಗೆ ಆಗಲಿಲ್ಲ.

ಈ ಸಲದ ದೀಪಾವಳಿಯಲ್ಲಿ ಮರೆತು ಅವನು ಅವಳಿಗಾಗಿ
ಸೀರೆ ತಂದ, ಚಿನ್ನದ ಕಡಗ ತಂದ, ಮಲ್ಲಿಗೆ ಹೂ ತಂದ.
ಹಬ್ಬದ ದಿನ ಬೆಳಗಾಗೆದ್ದು ಅವಳು ಆರತಿ ಮಾಡುತ್ತಾಳೆ ಅಂತ ಕಾದ

ಅವರಮ್ಮನೇ ನನ್ನ ಮಗನಿಗೆ ಹುಚ್ಚು ಅಂತ ಹೇಳಿಕೊಂಡು ಅತ್ತಳು

ಪಟಾಕಿ ಹತ್ತಿಸುತ್ತೇನೆ ಅಂತ ಹೇಳಿ ತನಗೇ ಹಚ್ಚಿಕೊಂಡು ಸುಟ್ಟುಹೋದ

ಅವನ ಹೆಂಡತಿ ಬಂದು ಅಯ್ಯೋ ಜೊತೆಗಿದ್ದಾಗ ಇಷ್ಟು ಪ್ರೀತಿ ತೋರಿಸಿದ್ದರೆ
ಬಿಟ್ಟು ಹೋಗುತ್ತಿದ್ನಾ ಅಂತ ಗೋಳಾಡಿದಳು.

ಇದು ಯಾವುದೋ ಸೀರಿಯಲ್ ಕಥೆ ಮೇಡಂ ಅನ್ನುತ್ತಿದ್ದ ವಿನ್ಸೆಂಟ್.

‍ಲೇಖಕರು avadhi

16 March, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading