ಸಭ್ಯಸ್ತರ ಓಣಿಗೆ…
-ದೇವರಾಜ್ ಹುಣಸಿಕಟ್ಟಿ
*
ಪ್ರಿಯ
ಸಭ್ಯಸ್ತರ ಓಣಿಯೇ..
ನಿಮ್ಮ…
ಮೀನು ತಪ್ಪಿಸಿಕೊಂಡು
ಹೊಕ್ಕಿತಂತೆ..
ಅಂಕೆ ಇಲ್ಲದ ಲಂಕೆಯಂತಹ ಬಜಾರಿಗೆ..
ನಶೆಯ ಘಮಟು ಇರುವ ಬೀದಿಗೆ…
ಉಟ್ಟ ಬಟ್ಟೆಯ ತುಂಬಾ
ಹೆತ್ತ ಬೆವರ ಹೊತ್ತು..
ಹಣ್ಣ ಮಾರುವ ಮುದುಕಿ ಕಣ್ಣಲ್ಲಿ..
ಒಣ ಮೀನಿನು ಹೊತ್ತ ತಿರುಗುವ..
ತುಂಬು ಯವ್ವನದ ಹುಡುಗಿಯ ನಗುವಲ್ಲಿ…
ಅಲ್ಲೇ ಸೊಪ್ಪು ಮಾರುವವಳು ಹೊತ್ತು ತಿರುಗುತ್ತಿರುವ ಕನಸಲ್ಲಿ…
ಕಾಣುವುದೇನಿತ್ತು…
ಇಷ್ಟೇ ಎನ್ನಬೇಡಿ..
ರಾತ್ರಿ ಪಾಳಿಗೆ ಚೌಕಾಸಿ ಯಲಿ ಸೋತು..
ಮಂಚ ಏರಲೆದ್ದ ಲಲನೆಯ ನಡುವಲ್ಲಿ…
ಕುದಿಯುವ ಹರಯದ ಎಣ್ಣೆಯಲ್ಲಿ ತೆಲುತ್ತಿರುವ
ಹುಡುಗನ ಎದೆಯಲ್ಲಿ…
ಮಟ ಮಟ ಮದ್ಯಾಹ್ನವೇ.. ಮೈ ಮರೆತು..
ನರಳುವ…ಕಾಮ ದಹನದ ಗೊಂಬೆಗಳಲಿ…
ಅದೇ ಅದೇ ಕಿರಿದಾದ ದಾರಿಯಲಿ…
ನಶೆ ಹೊದ್ದು ಮೆದ್ದು ಮಲಗಿರುವ…
ನಟ್ಟ ನಡು ಇರುಳಲ್ಲಿ..
ಅಲ್ಲಿ
ಕಂಡಿತೇ ಬೆಳಕು ಮೀನಿಗೆ…
ತಪ್ಪಿಸಿಕೊಂಡ ಸಭ್ಯಸ್ತರ…ಕಣ್ಮಣಿಗೆ..
ಛೇ ಎಂದು ಮೂಗು ಮುರಿಯಬೇಡಿ..
ಮೀನು ಎಂದೂ ಮರಳದು ಇನ್ನು
ಸ್ವರ್ಗ ಬಿಟ್ಟು..
ತಾನೂ ಕೆಟ್ಟು ಆ ನಿಮ್ಮ
ಸಭ್ಯಸ್ತರ ಓಣಿಗೆ…






0 Comments