ದೇವನೂರು ಅವರನ್ನು ಭೇಟಿಯಾದೆ…

ನಾಗರಾಜ್ ಹೆತ್ತೂರ್

ಮತ್ತೆ ಯಾವುದಾದರೂ ಪುಸ್ತಕ ಬರೆಯುತ್ತಿದ್ದಿರಾ..?

ಹೀಗೆಂದು ದೇವನೂರರನ್ನು ಪ್ರಶ್ನಿಸಿದರು ದಸಂಸ ಮುಖಂಡ ಎಚ್.ಕೆ. ಸಂದೇಶ್. ಒಂದು ಕ್ಷಣ ಚಕ್ಕಬಕ್ಕಳ ಹಾಕಿಕೊಂಡು ಕುಳಿತು ಯೋಚಿಸಿ `ಏ ಇಲ್ಲಪ್ಪಾ ಹಾಗೆ ಸುಮ್ಮನೆ ಏನು ಬರೆಯಲು ಸಾಧ್ಯ ? ಸಮಯ ಬಂದಾಗ ಬರವಣಿಗೆ ತಾನಾಗೇ ಆಗುತ್ತದೆ ಎಂದರು ದೇವನೂರು.

ಭಾನುವಾರ ಸಚಿವ ಶ್ರೀನಿವಾಸ್ ಪ್ರಸಾದ್ ರನ್ನು ನೋಡಲೆಂದು ದಸಂಸ ಸಂಘಟನೆ ಮುಖಂಡರು ಮೈಸೂರಿಗೆ ಹೋಗಿದ್ದೆವು. ಇಲ್ಲೆ ಬಂದಿದ್ದೀವಾಲ್ಲಾ ಹಾಗೆ ದೇವನೂರು ಮಹದೇವರನ್ನು ನೋಡಿಕೊಂಡು ಬರೋಣ ಎಂದು ಕುವೆಂಪು ನಗರದ ನವಿಲು ರಸ್ತೆ ಕಡೆ ಹೊರಟೆವು. ಆದರೆ ಅಲ್ಲಿಗೆ ಹೋದ ನಮಗೆ ನಿರಾಶೆ ಕಾದಿತ್ತು. ಮಹದೇವರ ಪತ್ನಿ ಸುಮಿತ್ರಾಬಾಯಿ ಮೇಡಂ ನಮ್ಮನ್ನು ವಿಚಾರಸಿ ಅವರು ಬರವಣಿಗೆ ಕೆಲಸ ಮಾಡುತ್ತಿದ್ದಾರೆ. ನೀವು ಸರಸ್ವತಿ ಪುರಂನ 7 ನೇ ಕ್ರಾಸ್ ಗೆ ಹೋದರೆ ಅಲ್ಲಿ ಹಾಡು ಪಾಡು ರಾಮು ಮನೆ ಇದೆ ಅಲ್ಲಿ ಸಿಕ್ಕುತ್ತಾರೆ ಫೋನ್ ನಂ ಬೇಕಾ ಎಂದರು.

ಬೇಡ ನನ್ನ ಬಳಿ ಇದೆ ಎಂದು ತಕ್ಷಣ ಫೋನ್ ಮಾಡಿದೆ. ಹಾ ಹೇಳು ನಾಗರಾಜ್ ಎಂದರು. ಸಾರ್ ನಿಮ್ಮ ಮನೆಗೆ ಬಂದಿದ್ದೀವಿ ಎಂದೆ. ಓ ನಾನು ಹೊರ್ಗಡೆ ಬಂದಿದ್ದೀನಲ್ಲ ಇಲ್ಲಿಗೆ ಬನ್ನಿ ಎಂದು ಅಡ್ರೆಸ್ ಕೊಟ್ಟರು. ಹಾಡು ಪಾಡು ರಾಮು ಮನೆ ಕಡೆಗೆ ಹೋದೆವು. ರಾಮು ಜತೆಗೂಡಿಕೊಂಡು ಕಂಪ್ಯೂಟರ್ ನಲ್ಲಿ ಏನೋ ಕೆಲಸ ಮಾಡುತ್ತಿದ್ದವರು ನಮ್ಮನ್ನು ಬರ ಮಾಡಿಕೊಂಡರು. ಸಂಘಟನೆಯ ಹಳೆ ಗೆಳೆಯರು ಇದ್ದಿದ್ದರಿಂದ ಎಲ್ಲರನ್ನೂ ವಿಚಾರಿಸಿಕೊಂಡು ಮಾತಿಗೆ ಕುಳಿತರು.

ನೆನ್ನೆ ಎದಗೆ ಬಿದ್ದ ಅಕ್ಷರದ ಬಗ್ಗೆ ಮೈಸೂರಿನಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ ನಡೆದಿದ್ದರಿಂದ ಪತ್ರಿಕೆಯಲ್ಲಿ ಬಂದಿದ್ದ ವರದಿ ಬಗ್ಗೆ ಸಂದೇಶ್ ಪ್ರಸ್ತಾಪಿಸಿದರು. ಮಹದೇವರ ಮಾತು ಪುಸ್ತಕದತ್ತ ಹೊರಳಿತು. `ಎದೆಗೆ ಬಿದ್ದ ಅಕ್ಷರ ನನ್ನನ್ನು ಮೀರಿ ಹೋಗಿದೆ. ಈಗ ಅದು ನನ್ನ ಕೈಯ್ಯಲಿಲ್ಲ. ಅಷ್ಟೊಂದು ಪ್ರತಿ ಖರ್ಚಾಗುತ್ತವೆ ಎಂದು ನಮಗೆ ಯಾವತ್ತೂ ಅನಿಸಿರಲಿಲ್ಲ. ದೊಡ್ಡವರು, ಸಣ್ಣವರಿಗೂ ಇಷ್ಟವಾಗಿದೆ. ಹಾಗೆ ಮಾತನಾಡುತ್ತಿದ್ದವರು ಒಮ್ಮೆಲೆ ನನ್ನತ್ತ ತಿರುಗಿ ನಾಗರಾಜ್ ನಿಮ್ಮ ಅಮ್ಮ ಹೇಗಿದ್ದಾರೆ..? ಎಂದು ವಿಚಾರಿಸಿದರು.

ಅಮ್ಮನ ಬಗ್ಗೆ ಕೆಳುತ್ತಿದ್ದಾರಲ್ಲಾ ಎಂದು ನನಗೆ ಅಚ್ಚರಿ. ಚೆನ್ನಾಗಿದ್ದಾರೆ ಎಂದೆ. ಗ್ರೇಟ್ ಕಣೋ ಅಮ್ಮಾ ಅವರನ್ನು ಒಮ್ಮೆ ನೋಡಬೇಕು ಎಂದರು. ಆ ತಕ್ಷಣಕ್ಕೆ ಯಾವುದಕ್ಕೆ ಹೀಗೆ ಅಮ್ಮನನ್ನು ಹೊಗಳುತ್ತಿದ್ದಾರೆ ಏನಾದ್ರೂ ಮಿಸ್ ಮಾಡ್ಕೊಂಡ್ರಾ ಎಂದು ಮತ್ತೆ ಯಾರು ಏನು ಹೇಳಿದ್ರು ಸಾರ್ ಎಂದೆ. ಅಷ್ಟರಲ್ಲಿ ಅದೇನೂ ಕಾಕತಾಳಿಯ ಎಂಬಂತೆ ಮಾವ ಸುಬ್ಬುಹೊಲೆಯಾರ್  ಮಹದೇವರಿಗೆ ಕರೆ ಮಾಡಿದ್ದರು. ಸುಬ್ಬು ನಿಮ್ಮ ಅಕ್ಕನ ಮಗ ಬಂದಿದ್ದಾನೆ. ನಿಮ್ಮ ಅಕ್ಕನನ್ನು ಒಮ್ಮೆ ನೋಡಬೇಕಲ್ಲಾ..? ಎಂದರು.

ನನಗೆ ಅಚ್ಚರಿಯೋ ಅಚ್ಚರಿ ಆ ಕಡೆಯಿಂದ ಆಯ್ತು ಒಮ್ಮೆ ಕರ್ಕೊಂಡು ಬರ್ತೀನಿ ಎಂದ ಮಾವ. ಇಲ್ಲಾ ನಾನೇ ನಿಮ್ಮೂರಿಗೆ ಬರ್ತಿನಿ ಒಮ್ಮೆ ಹೋಗಿ ನೋಡ್ಕಂಡು ಬರೋಣ… ಎಂದವರು ಆಮೇಲೆ ಮಾತನಾಡುತ್ತೇನೆ ಎಂದು ಫೋನ್ ಇಟ್ಟು ನಮ್ಮೊಂದಿಗೆ ಮಾತನಾಡಲು ಪ್ರಾರಂಭಿಸಿದರು. ಕೊನೆಗೂ ಕುತೂಹಲ ತಡೆಯಲಾಗದೆ ಅಮ್ಮನ ಬಗ್ಗೆ ಯಾರು ರೂಪ ಹಾಸನ್ ಮೇಡಂ ಹೇಳಿದರಾ..? ಎಂದು ಪ್ರಶ್ನಿಸಿದೆ.

ಹೌದೆಂದು ಹೇಳಿ ಒಂದಿಷ್ಟು ಅಮ್ಮನ ಬಗ್ಗೆ ಮಾತನಾಡಿ ಹೋಗೋಣ ನಿಮ್ಮೂರಿಗೆ ನಿಮ್ಮ ಅಮ್ಮನ ನೋಡಬೇಕು ಎಂದು ಹೇಳಿದರು, ಹೂ ಎಂದು ತಲೆ ಆಡಿಸಿದೆ. ಮಾತು ಮತ್ತೆ ಎದೆಗೆ ಬಿದ್ದ ಅಕ್ಷರದತ್ತ ಹೊರಳಿತು. ಬಸವಲಿಂಗಪ್ಪ ಬದುಕಿದ್ದರೆ ಎದೆಗೆ ಬಿದ್ದ ಅಕ್ಷರವನ್ನು ಬೂಸಾ ಸಾಹಿತ್ಯ ಎನ್ನುತ್ತಿದ್ದರು ಎಂದು ಕೆಲವರು ಹೇಳುತ್ತಿದ್ದಾರೆ. ಒಂದು ಸತ್ಯ ಹೇಳುತ್ತೀನಿ ಕೇಳಿ ನಿಜ್ಕಕೂ ಬಸವಲಿಂಗಪ್ಪ ನನ್ನ ಸಾಹಿತ್ಯವನ್ನು ಇಷ್ಟಪಡುತ್ತಿದ್ದರು. ಅವರು ಮೈಸೂರಿಗೆ ಬಂದಾಗ ಹೋಟೆಲ್ನಲ್ಲಿ ಉಳಿದುಕೊಂಡಿದ್ದಾಗಲೆಲ್ಲ ಸಂಘಟನೆಯ ಸ್ನೇಹಿತರಿಗೆ ಹೇಳಿ ನನ್ನ ಕರೆಸಿಕೊಳ್ಳುತ್ತಿದ್ದರು. ಪ್ರೀತಿಯ ಮಾತನಾಡುತ್ತಿದ್ದಾರೆ. ನನ್ನ ಬರವಣಿಗೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಂದುಕೊಳ್ಳುವರು ಅಂದುಕೊಳ್ಳಲಿ ಎಂದರು. ಈ ಮಧ್ಯೆ ಕೆ.ಬಿ ಸಿದ್ದಯ್ಯ ನವರ ಬಗ್ಗೆ ಪ್ರಸ್ತಾಪವಾಯಿತು. ಹೇಗೆ ನೋಡುತ್ತಾರೋ ನೋಡಲಿ ಅದು ಅವರಿಗೆ ಬಿಟ್ಟಿದ್ದು ಇಷ್ಟಕ್ಕೂ ಎದೆಗೆ ಬಿದ್ದ ಅಕ್ಷರ ನನ್ನ ವ್ಯಾಪ್ತಿಯಲಿಲ್ಲ ತನ್ನಿಂದ ಬಹಳ ದೂರ ಹೋಗಿದೆ ಎಂದು ನಕ್ಕರು.

ಈ ಮಧ್ಯೆ ಮಾತು ರಾಜಕಾರಣದತ್ತ ಹೊರಳಿತು. ನಮ್ಮೊಂದಿಗೆ ಬಂದಿದ್ದ ನಾರಾಯಣದಾಸ್ ಸಿಎಂ ನಿಮ್ಮ ಮನೆಗೆ ಬಂದಿದ್ದರು ಏನಾದರೂ ಸಲಹೆ ಕೊಟ್ರಾ ..? ನೋಡಿ ಅವರಿಗೆ ಸಿಎಂ ಆಗಬೇಕು ಎಂದು ಒಂದು ಆಸೆ ಇತ್ತು ಅರೆ ತೃಪ್ತ ರಾಗಿದ್ದರು. ಈಗ ಅವರು ತೃಪ್ತರು. ಸಾಯುವವರೆಗೆ ಸಿಎಂ ಆಗುವ ಆಸೆ ಏನು ಅವರಿಗಿಲ್ಲ. ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಎಂದ ಮೇಲೆ ಕಾಲೆಳೆಯುವರು ಇದ್ದೇ ಇರುತ್ತಾರೆ. ನಾನು ಹೋದರೂ ಕಷ್ಟ. ಅವರಿಗೆ ಹೆಚ್ಚಿನ ಅಧಿಕಾರದ ಆಸೆ ಇಲ್ಲ. ತೃಪ್ತಿ ಆಗಿದ್ದಾರೆ. ಈಗಾಗಲೇ ಕಳೆದ ಬಾರಿ ನಾವೇ ನೋಡಿದ್ದೀವಲ್ಲಾ ಬಿಜೆಪಿ ಸರ್ಕಾರದವರು ಯಾವ ಜನ್ಮಕ್ಕೂ ನೋಡುವುದು ಬೇಡ ಎನ್ನುವಷ್ಟು ಕೆಟ್ಟ ಆಡಳಿತ ಕೊಟ್ಟಿದ್ದಾರೆ. ಸಿದ್ದರಾಮಯ್ಯನವರಲ್ಲಿ ಒಳ್ಳೆಯತನ ಇದೆ. ಇಂದು ರಾಜಕೀಯಕ್ಕೆ ಬುದ್ದಿ ಅಗತ್ಯವಿಲ್ಲ. ಬುದ್ದಿಯೂ ಕೆಲವು ಸಲ ಕುತಂತ್ರವಾಗುತ್ತದೆ. ಸಿದ್ದರಾಮಯ್ಯನವರಿಕೆ ಕೆಲಸ ಮಾಡುವ ಅಮಲು ಇದೆ.

ಆದರೆ ಅದು ಕೂಡ ಅಷ್ಟು ಸುಲಭ ಅಲ್ಲ. ಅಧಿಕಾರ ಶಾಹಿ ಇದೆಯಲ್ಲ. ಇವರು ಯಾರು ಅಧಿಖಾರಕ್ಕೆ ಬರುತ್ತಾರೋ ಅವರಿಗೆ ಜೋತು ಬೀಳುತ್ತಾರೆ. ತನ್ನಷ್ಟಕ್ಕೆ ತಾನೆ ಎಕ್ಷ್ ಪೋಸ್ ಆಗುತ್ತಾರೆ ಎಫಿಷಿಯನ್ಸಿ ಬೇಕು. ಸಿದ್ದರಾಮಯ್ಯನವರಿಗೆ ಅನುಭವ ಇದೆ ಮಾಡುತ್ತಾರೆ. ನಾವೇನು ಸಲಹೆ ಹೇಳಬೇಕೆಂದಿಲ್ಲ. ನಮಗೆ ಪುಟ್ಟಣ್ಣಯ್ಯ ಜೊತೆ ಇನ್ನೊಂದಿಬ್ಬರು ಶ್ರೀರಾಂ ರೆಡ್ಡಿ , ನಂಜುಂಡೇಗೌಡ ಗೆಲ್ಲ ಬೇಕಿತ್ತು. ಇವರು 3 ಜನ ಒಂದೇ ಅಲ್ಲಿರುವರೆಲ್ಲ ಒಂದು ಆದರೆ ಗೆಲ್ಲಲಿಲ್ಲ. ನಮ್ಮ ಪುಟ್ಟಣ್ಣಯ್ಯ ದೊಡ್ಡ ಮಟ್ಟದ ಹೋರಾಟ ನಡೆಸಲು ಸಿದ್ದರಾಗುತ್ತಿದ್ದಾರೆ. ದಲಿತರಿಗೆ ಬಿಡುಗಡೆಯಾದ ಹಣ ಎಷ್ಟು, ಎಲ್ಲಿ ದುರುಪಯೋಗಬಾಗಿದೆ..? ಏನಾಗಿದೆ ಇಂತಹವುಗಳನ್ನೆಲ್ಲ ಹೆಕ್ಕಿ ತೆಗೆದು ಅಸೆಂಬ್ಲಿಯಲ್ಲಿ ದೊಡ್ಡ ವಾಯ್ಸ್ ಮಾಡಲಿದ್ದಾರೆ ನೋಡುತ್ತಿರಿ…. ಎಂದು ನಕ್ಕರು.

ಹೀಗೆ ಹೆಚ್ಚು ಮಾತನಾಡುವ ಇಷ್ಟ ಇದ್ದರೂ ಸಮಯದ ಕಾರಣದಿಂದ ಅಲ್ಲಿಂದ ಹೊರಟೆವು. ಮೆಟ್ಟಿಲು ಇಳಿಯುವಾಗ ಸಂಘಟನೆ ಮುಖಂಡರೊಬ್ಬರು ಸಾರ್ ಸರಕಾರಿ ಶಾಲೆ ಮುಚ್ಚಬೇಡಿ ಎಂದು ಸಿದ್ದಯಾಮಯ್ಯನವರಿಗೆ ಹೇಳಿ ಎಂದು ನೆನಪಿಸಿದರು. ಬೇಡ..! ಅವರು ಮಾಡುತ್ತಾರೆ ಎಂದವರೇ ಮತ್ತೆ ನಮ್ಮತ್ತ ನೋಡಿ ` ನೋಡಿ ನಿಮ್ಮಲ್ಲಿ ಯಾರು ಅಲ್ಪಸ್ವಲ್ಪ ಅನುಕೂಲವಾಗಿದ್ದೀರೋ ಶಾಲೆ ಆರಂಭಿಸಿ ಎಂದರು. ಸರಕಾರಿ ಶಾಲೆಗಳು ಮುಚ್ಚುವ ಭಯ ಅವರಲ್ಲಿದೆಯೇ..? ಎಂದು ಯೋಚಿಸುತ್ತಲೇ ಅಲ್ಲಿಂದ ಹೊರಟೆವು.

ಕುರ್ಚಿ ಪ್ರೇಮ: ಬಸವಲಿಂಗಪ್ಪ

ಸಚಿವ ಶ್ರೀನಿವಾಸ್ ಪ್ರಸಾದ್ ಮನೆಯಲ್ಲಿ ಅವರ ಭೇಟಿಗಾಗಿ ಸಾಕಷ್ಟು ಮಂದಿ ಕಾಯುತ್ತ ಕುಳಿತಿದ್ದೆವು. ಈ ಮಧ್ಯೆ ಅವರ ಮನೆಯ ಎಲ್ಲ ಕುರ್ಚಿಗಳು ತುಂಬಿದ್ದವು. ಶ್ರೀನಿವಾಸ್ ಪ್ರಸಾದ್ ಅವರು ಯಾವಾಗಲು ಕುಳಿತುಕೊಳ್ಳುವ ಕುರ್ಚಿ ಮಾತ್ರ ಖಾಲಿಯಾಗಿತ್ತು. ಕೆಲವರು ಗೊತ್ತಾಗದೆ ಕುಳಿತುಕೊಳ್ಳುತ್ತಿದ್ದರು. ತಕ್ಷಣ ಪಕ್ಕದಲಿದ್ದವರು ಅದು ಸಾಹೆಬ್ರು ಕುರ್ಚಿ ಕೂರಬೇಡಿ ಎಂದು ಏಳಿಸುತ್ತಿದ್ದರು. ಕೂತು ಎದ್ದವರಿಗೆ ಏನೋ ತಪ್ಪು ಮಾಡಿದ ಭಾವದಿಂದ ಓ ಸಾರಿ ತಪ್ಪಾಯಿತು ಎಂದು ಕುರ್ಚಿ ಒರೆಸಿ ಬರುತ್ತಿದ್ದರು. ಈ ಸಂದರ್ಭ ನಮ್ಮ ಸಂಘಟನೆಯ ಮುಖಂಡರೊಬ್ಬರು ಒಂದು ಘಟನೆ ನೆನಪಿಸಿಕೊಂಡರು.

ಬಸವಲಿಂಗಪ್ಪ ಮಂತ್ರಿಯಾಗಿದ್ದ ಕಾಲ. ದಲಿತ ಸಂಘಟನೆ ಮುಖಂಡರು ಅವರ ಕಚೇರಿಗೆ ಹೋಗಿ ಕುಳಿತುಕೊಳ್ಳುತ್ತಿದ್ದರಂತೆ. ಈ ಮಧ್ಯೆ ಅವರು ಬಂದ ತಕ್ಷಣ ಎದ್ದು ಬೇರೆ ಕರೆ ಹೋಗಿ ಎಂದು ಸಹಾಯಕರು ಹೇಳಿದರೆ ಅವರನ್ನು ತಡೆಯುತ್ತಿದ್ದ ಬಸವಲಿಂಗಯ್ಯ ` ಕೂರಲಿ ಬಿಡಿ ಅವರ ಮನೆಯಲ್ಲಿ ಕುರ್ಚಿ ಇರುತ್ತದೋ ಇಲ್ಲವೋ..? ಸಂಘಟನೆಗಾಗಿ ಎಲ್ಲೆಲ್ಲಿ ಕುಳಿತು ಮಲಗಿದ್ದಾರೆಯೋ ಇಲ್ಲಾದರೂ ಕುರ್ಚಿಯಲ್ಲಿ ತೃಪ್ತಿಯಿಂದ ಕುಳಿತುಕೊಳ್ಳಲಿ ಎನ್ನುತ್ತಿದ್ದರಂತೆ. ಯಾಕೂ ಬಸವಲಿಂಗಪ್ಪ ಕಾಡಲು ಪ್ರಾರಂಭಿಸಿದರು.

‍ಲೇಖಕರು avadhi

September 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

5 ಪ್ರತಿಕ್ರಿಯೆಗಳು

  1. nagraj harapanahalli

    ಈ ಬರಹದಲ್ಲಿ ಅನೇಕ ಧ್ವನಿಗಳಿವೆ. ದೇವನೂರರ ತಾಯಿ ಪ್ರೀತಿ, ಸಂಬಂಧಗಳ ಪ್ರಾಮುಖ್ಯತೆ , ಸಿದ್ಡ್ರಾಮಯ್ಯನವರ ಬಗ್ಗೆ ಭರವಸೆ , ಬಸವಲಿಂಗಪ್ಪ ಮೇಲಿನ ಪ್ರೀತಿ, ಎಲ್ಲವೂ ಕಾಣುತ್ತಿದೆ

    ಪ್ರತಿಕ್ರಿಯೆ
  2. gururaj katriguppe

    ‘Devanooru’ is a socially concerned, motherly hearted writer, ‘Sidramaiah’ a socially sensitive politician, and ‘Sanghatane’ is the forum of social justice. but amazing fact is that in 70’s ‘Basavalingappa’ played the roll of all for the cause of downtrodden daliths. That is why he is ‘haunting’ all of us forever. Thanks ‘Nagaraj’ for your good and timely article.

    ಪ್ರತಿಕ್ರಿಯೆ
  3. ಉದಯಕುಮಾರ್ ಹಬ್ಬು

    ಚನ್ನಾಗಿ ಮೂಡಿ ಬಂದಿದೆ. ದೇವನೂರರ ಸರಳತೆ ಇಲ್ಲಿ ವ್ಯಕ್ತವಾಗಿದೆ. ಮೃದುಹೃದಯಿ ದೇವನೂರಾರು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: