– ಪರಮೇಶ್ವರ ಗುರುಸ್ವಾಮಿ
ಪಕ್ಷಿಧಾಮದ ಕ್ಯಾಟೀನಿನಲ್ಲಿ ಟೀ ಕುಡಿಯುತ್ತಾ ಅಲ್ಲಿನ ವಸತಿ ಊಟದ ವಿವರಗಳನ್ನು ಲೋಕಾಭಿರಾಮವಾಗಿ ವಿಚಾರಿಸಿ ಈ ಗೊಂಬೆಗಳ ಬಗ್ಗೆ ಅಲ್ಲಿದ್ದವರನ್ನು ಕೇಳಿದ್ದೆ. ಅವರಲ್ಲಿ ಒಬ್ಬ ಮಾತ್ರ “ಗಡಿ….. ಗಡಿ ….. ಮಾರಮ್ಮ ….. ಎಂದಿದ್ದನೇ ಹೊರತು ಅದೇನೆಂದು ಹೇಳಲು ಅವನ ಕೈಯಲ್ಲಾಗಿರಲಿಲ್ಲ. ಮುದುಕಪ್ಪನವರು ಮೊರಗಳು ಆ ಗೊಂಬೆಗಳ ಮುಂದೆ ಇದ್ದುವು ಎಂದು ಗೊತ್ತಾದಾಗ ವಿವರಿಸಿದರು, ” …. ಊರಲ್ಲಿ ತೊಂದ್ರೆ ಅದ್ರೆ ಮಾಡ್ತೀವಿ. ಪೂಜೆ ಮಾಡಿ ಅವಳ್ನ ನಮ್ಮ ಗ್ರಾಮದ ಸರಹದ್ದನ್ನ ದಾಟಿಸ್ತೀವಿ” ಎಂದರು.
ಹಾಗೇ ಮುಂದೆ ಇತರರನ್ನು ವಿಚಾರಿಸಿ ನಾನು ತಿಳಿದುಕೊಂಡಿದ್ದು: ಆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ತೊಂದರೆಯೇನಾದರೂ ಬಂದರೆ ಈ ಗಡಿದುರ್ಗವ್ವನನ್ನು ಪೂಜಿಸಿ ನಂತರ ತಮ್ಮ ಗ್ರಾಮದ ಸರಹದ್ದನ್ನು ದಾಟಿಸಿಬಿಡುತ್ತಾರೆ. ಮುಂದಿನೂರಿನವರು ವಿಧ್ಯುಕ್ತವಾಗಿ ತಮ್ಮ ಸರಹದ್ದನ್ನು ದಾಟಿಸಿಬಿಡುತ್ತಾರೆ. ಗಡಿ ದುರ್ಗಮ್ಮ ಹೀಗೆ ಸಾಗುತ್ತಾ ನದಿಗೆ ಉಪ ನದಿ ಸೇರುವಂತೆ ಹಿಂದಿನೂರಿನಂದಲ್ಲದೆ ಅಕ್ಕ ಪಕ್ಕದ ಊರುಗಳಿಂದಲೂ ಆಗಮಿಸುತ್ತಾ ಕೊನೆ ಕೊನೆಯವರು ಲಾರಿಗಳಲ್ಲಿ ಸಾಗಿಸುತ್ತಾರೆ. ಕೊನೆಗೆ ಸಿರ್ಸಿ ಅಮ್ಮನ (ಮಾರಿಕಾಂಬ) ಜಾತ್ರೆಯ ಒಳಗೆ ಸಮುದ್ರ ಸೇರಿಸಲೇ ಬೇಕು.
ಚಂದ್ರಶೇಖರ ಕಂಬಾರರ ಸಂಪಾದಕತ್ವದ ‘ಕನ್ನಡ ಜಾನಪದ ವಿಶ್ವಕೋಶ’ದಲ್ಲಿರುವ ಮಾಹಿತಿ, ಗಡಿಮಾರಮ್ಮ, ಅನ್ನೋ ತಲೆ ಬರಹದಡಿ ಹೀಗಿದೆ: “ಶಿವಮೊಗ್ಗ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಗ್ರಾಮದ ಹೊರಗೆ ಇರುವ ದೇವತೆ. ಗ್ರಾಮದಲ್ಲಿ ಯಾವುದೇ ರೋಗ ಕಾಣಿಸಿಕೊಂಡರೆ ಗಡಿ ಮಾರಮ್ಮನ್ನು ಮಾಡಿ ತಮ್ಮ ಗಡಿಯಿಂದ ಇನ್ನೊಂದು ಊರಿನ ಗಡಿಯಲ್ಲಿ ಬಿಟ್ಟು ಬರುವರು ಅಥವಾ ಪಕ್ಕದ ಊರವರು ತಮ್ಮ ಗಡಿಯಲ್ಲಿ ತಂದಿಟ್ಟ ಗಡಿಮಾರಮ್ಮನ್ನು ತಂದು, ತಮ್ಮ ಊರಿನ ಮೂಲಕ ಇನ್ನೊಂದು ಊರಿನ ಗಡಿಯಲ್ಲಿ ಬಿಟ್ಟು ಬರುವರು. ….. ಆಗ ಅಲ್ಲಿ ಹಳೆ ಮೊರ, ಪೊರಕೆ ಇತ್ಯಾದಿಗಳನ್ನು ಎಸೆದು ಬರುವರು. ……. ಇದು ಹೀಗೆ ನದಿ ಅಥವಾ ಸಮುದ್ರ ಅಡ್ಡ ಬರುವವರೆಗೂ ಹೋಗುತ್ತಿರುವುದು. ಕೊನೆಯಲ್ಲಿ ಗಡಿಮಾರಮ್ಮನನ್ನು ನೀರಿಗೆ ಬಿಸುಡುವರು”.
ಮುದುಕಪ್ಪನವರನ್ನು ಬೀಳ್ಕೊಂಡು ಮುಂದೆ ಸಾಗಿದಂತೆ ಅಲ್ಲೊಂದು ವಿದ್ಯತ್ ತಂತಿಯ ಮೇಲೊಂದು ಪುಟ್ಟ ಹಕ್ಕಿ ಕುಳಿತಿತ್ತು……..
(ಮುಂದುವರಿಯುತ್ತದೆ…)
0 ಪ್ರತಿಕ್ರಿಯೆಗಳು