ಮನು ದಾಸ್ (ಒರಿಯಾ ಮೂಲ)
ಕನ್ನಡಕ್ಕೆ: ಕಮಲಾಕರ ಕಡವೆ
ನಮ್ಮ ಪ್ರಖ್ಯಾತ ಪುರಾಣಗಳಲ್ಲಿ
ಯಾವತ್ತೂ ಸಹ ಕಾಣಬಹುದು
ಈ ನೋವುನವೆಗಳನ್ನು
ಕಥಾನಾಯಕನೊಡನೆ ಹೋಲಿಸಿದರೆ
ಅರಿವಿಗೆ ಬರುವುದು, ಮರೆತಿದ್ದೇವೆ
ನಾವು ಜನಿಸಿರುವ ಜಗತ್ತು ಕುರುಡು ಎಂದು
ನಿಮ್ಮ ದುಃಖವೇ ಚಪ್ಪಾಳೆ
ನಿಮ್ಮ ಮಗಳು
ಟೈಬರ್ನಿನ ವಧಾಸ್ಥಾನವನ್ನು ದಾಟಿದಂತೆ.
*
ಸತ್ತವಳ ಹೊತ್ತು ಸಾಗುವಾಗ
ಅದು ಯಾವ ಬಗೆಯ ಸೇಡು
ಮಸೆಯುತ್ತಿದೆ ನಿನ್ನೂಳಗೆ? ನೆನಪಿಗಿದೆಯೇ ಸಾವು?
ಸೀಸಬಳಿದ ಬಾನಿನಡಿ
ಹೆಡೆಮುರಿಗೆ ಹಾಕಿ ಕಟ್ಟಲಾಗಿದೆಯೆ ಸೂರ್ಯನಿಗೆ?
ದಾನಾ, ಸಮಯದ ಸೀಳಿನಲ್ಲಿ ಜಾರುತ್ತಿರುವ ನಿನ್ನ
ಅಸಹಾಯಕತೆಯ ಅಕ್ಶಾಂಶ ರೇಖಾಂಶಗಳನ್ನು
ತಡವುತ್ತಿದೆಯೇ ಕೆಕ್ಕರಿಸಿ ನೋಡುವ ಮಾಧ್ಯಮ?
ನಾವು, ಕಣ್ಣೀರು ಸುರಿಸುವ ಜನ,
ಅದು ಮಾಣಿಕ್ಯದ ರೂಪ ಪಡೆದೀತು ಎಂದು ಹಂಬಲಿಸುವ
ಕಪಟಿಗಳ ಸಂಸತ್ತು, ಮರುಕ ಪ್ರದರ್ಶಿಸುವ ಗುಲಾಮರ
ವಸ್ತು ಸಂಗ್ರಹಾಲಯ
ದೋಷಗಳ ಅವಶೇಷ
ಹಸಿವು ಹಬ್ಬಿದೆ
ಪುರಾತನ ಹಸ್ತಪ್ರತಿಗಳಂತೆ
ನಮ್ಮ ಕನಸುಗಳ ನಕ್ಷೆಗಳಲ್ಲಿ
ದಾನಾ, ನಾನೂ ಸಹ
ಕಾಲಮೀರಿದ ಇದೇ
ಮಬ್ಬುದೀಪದ ಗುಂಪಿನ ಸದಸ್ಯ
Letter to Dana Majhi
(ಓದೀಶಾದ ಕಾಲಹಂಡಿಯ ಭವಾನಿಪಟ್ಟಣದಲ್ಲಿ ದಲಿತನೆಂಬ ಕಾರಣಕ್ಕೆ ಶವದ ಗಾಡಿ ದೊರಕದಿದ್ದಾಗ ದಾನಾ ಮಾಝಿ ತನ್ನ ಹೆಂಡತಿಯ ಶವವನ್ನು ಹೆಗಲ ಮೇಲೆ ಹೊತ್ತು ಹೋಗಬೇಕಾಯಿತು.)
ಮನು ದಾಸ್
ಕವಿ, ಸಂಪಾದಕ, ಅನುವಾದಕ, ಪ್ರಕಾಶಕ ಮತ್ತು ವಾರ್ಷಿಕ “ಓದೀಷಾ ಆರ್ಟ್ ಅಂಡ್ ಲಿಟರೇಚರ್ ಫೆಸ್ಟಿವಲ್” ಸಂಯೋಜಕರಾದ ಮನು ದಾಸ್ (೧೯೫೬) 25ಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತಂದಿದ್ದಾರೆ. ದ್ವಿಭಾಷಾ ಬರಹಗಾರರಾದ ಮನು ದಾಸ್ ಒರಿಯಾ ಭಾಷೆಯಲ್ಲಿ ಸಹ ಕತೆ ಕಾವ್ಯ, ಗದ್ಯ ಮತ್ತು ಪ್ರವಾಸಕಥನಗಳನ್ನು ಬರೆದಿದ್ದಾರೆ. ಹಲವು ಮೇರು ಕೃತಿಗಳನ್ನು ಒರಿಯಾ ಭಾಷೆಗೆ ಅನುವಾದಿಸಿದ್ದಾರೆ. ಅವರು ನಡೆಸುತ್ತಿರುವ “ಧೌಲಿ ಪ್ರಕಾಶನ” ಹಲವು ಭಾರತೀಯ ಭಾಷೆಗಳ ಕೃತಿಗಳನ್ನು ಒರಿಯಾ ಮತ್ತು ಇಂಗ್ಲೀಷಿನಲ್ಲಿ ಪ್ರಕಟಿಸಿದೆ. ಪ್ರಸಕ್ತ ಕವನ ಅವರ ಹೊಸ ಸಂಗ್ರಹ “ಅ ಬ್ರೀಫ್ ಹಿಸ್ಟರಿ ಆಫ್ ಸೈಲೆನ್ಸ್ “ (2019) ದಿಂದ ಆಯ್ದುಕೊಳ್ಳಲಾಗಿದೆ.
0 ಪ್ರತಿಕ್ರಿಯೆಗಳು