ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಥಟ್ಟನೆ ಹೊರಟೇ ಬಿಟ್ಟಿರಲ್ಲಾ ಕಾಮ್ರೇಡ್ !

ಖ್ಯಾತ ಕಾರ್ಮಿಕ ಮುಂದಾಳು, ಭಾರತ ಕಮ್ಯೂನಿಸ್ಟ್ ಪಕ್ಷದ ಹಿರಿಯರಾದ ಎಚ್ ವಿ ಅನಂತ ಸುಬ್ಬರಾವ್ ಅವರು ನಿನ್ನೆ ನಿಧನ ಹೊಂದಿದರು

ಅವರ ನೆನಪಿಗೆ ನಾ ದಿವಾಕರ್ ಅವರು ಬರೆದ ಕವಿತೆ ಇಲ್ಲಿದೆ-

ಚಿತ್ರದಲ್ಲಿ ಅನಂತಸುಬ್ಬರಾವ್ ಅವರು ತಮ್ಮ ಮಗಳು ಮಹಿಳಾ ಚಳವಳಿಯ ಮುಂದಾಳು ಜ್ಯೋತಿ ಅವರೊಂದಿಗೆ

ಲಾಲ್ ಸಲಾಂ ಸುಬ್ಬರಾಯರೇ


-ನಾ ದಿವಾಕರ

ನೀವೊಮ್ಮೆ ಹೇಳಿದ ನೆನಪು
ಕೊನೆಗಳಿಗೆಯಲಿ ಎದೆಯೊಳಗೊಂದು
ಭಾವ ಸ್ಫುರಿಸಿದರೆ ಸಾಕು ಕಣೋ ,,,,,,,
” ಸಮಾಜಕ್ಕೆ ಏನೋ ಕೊಟ್ಟು ಹೋಗುತ್ತಿದ್ದೇನೆ
ಹೆಜ್ಜೆ ಕರುಹುಗಳ ಬಿಟ್ಟು ಹೊರಟಿದ್ದೇನೆ ” ಎಂದು ,
ಥಟ್ಟನೆ ಹೊರಟೇ ಬಿಟ್ಟಿರಲ್ಲಾ ಕಾಮ್ರೇಡ್ !

ನಿಮ್ಮ ತಣ್ಣನೆಯ ದೇಹ
ಶೀತ ಪೆಟ್ಟಿಗೆಯಲಿ ವಿರಮಿಸುವುದ ಕಂಡಾಗ
ನೆನಪಾದುದು ನೀವು ದಾನ ಮಾಡಿದ್ದ
ಅಮೂಲ್ಯ ಮಿದುಳು ಕಣ್ಗಳು ಇತ್ಯಾದಿ
ನೆರೆದ ಜನಸ್ತೋಮದ ಒಕ್ಕೊರಲ ಕೂಗು
” ಅಮರ್ ರಹೇ ಕಾಮ್ರೇಡ್ ಅಮರ್ ರಹೇ “
ಬಿಟ್ಟು ಹೋದ ಹೆಗ್ಗುರುತುಗಳ ಚಿಹ್ನೆ ;

ಅಲ್ಲಿ ಮಾರ್ದನಿಸುತ್ತಿದ್ದುದು
ಅಭಿಮಾನದ ದನಿಯಲ್ಲ ಕಾಮ್ರೇಡ್
ಆರಾಧನೆಯ ಕೊರಳುಗಳಲ್ಲ
ನೂರಾರು ಸಂಗಾತಿಗಳ ಆಂತರ್ಯದ ನೋವು
ನಾಯಕನ ಅಗಲಿಕೆಯ ವೇದನೆ
ದಶಕಗಳ ನಿಸ್ಪೃಹ ಸೇವೆಯ ಮೂಕ ಸ್ಮರಣೆ ;

ಕರುಳುಬಳ್ಳಿಯ ಸೋಂಕಿಲ್ಲದ ಬಾಂಧವ್ಯಕೆ
ಹೆಸರೇನುಂಟು ಕಾಮ್ರೇಡ್ ?
ನೋಡುತ್ತಾ ಕೇಳುತ್ತಾ ಒಡನಾಡುತ್ತಾ ಬೆಳೆದ
ಈ ಜೀವದಂಗಳದಲಿ ನೀವು ನೆಟ್ಟ ಸಸಿಗಳು
ಹೆಮ್ಮರಗಳಾಗಿವೆಯಲ್ಲಾ ,,,,,
ಇನ್ನೇನ ಬಯಸಲಿ ಕಾಮ್ರೇಡ್ ?

ಹೊರಟುಬಿಟ್ಟಿರಿ ಒಂದು ಮಾತ ಹೇಳದೆ
ನಿಮಗೇ ಅರಿವಿಲ್ಲದೆ
ಇರಬಾರದಿತ್ತೇ ಎಂದು ಯಾರನ್ನು ಕೇಳಲಿ ?
ಇರಬೇಕಿತ್ತೆಂದು ಸಾರಿಸಾರಿ ಹೇಳಬಲ್ಲೆ
ಹೌದು ಕಾಮ್ರೇಡ್  ಇನ್ನೂ ಇರಬೇಕಿತ್ತು
ಶ್ರಮಿಕರ ಬೆವರಳಿಸಲು ಉಳ್ಳವರ ಬೆವರಿಳಿಸಲು
ಇರಬೇಕಿತ್ತು ;

ಕುಸಿಯುತ್ತಿರುವ ಮೌಲ್ಯಗಳ ಅಂಗಳದಲಿ
ಮರೆಯಾಗಿಹ ಆದರ್ಶಗಳ ಜಾತ್ರೆಯಲಿ
ಮನುಜ ಸಂಬಂಧಗಳು ಸರಕುಗಳಾಗಿರುವಾಗ
ಈ ಹಾಳು ಸಂತೆಯಲೊಬ್ಬ ಸಂತ
ಬೇಕಲ್ಲವೇ ಕಾಮ್ರೇಡ್ ?

ಇರಬಹುದು ನೂರು ಸಾವಿರ ,
ನಾ ಕಂಡ ಬೆರಳೆಣಿಕೆಯ ನಿತ್ಯ ಸಂತರಲಿ
ಒಬ್ಬರಲ್ಲವೇ ನೀವು ?
ಹ್ಞೂ ಎನ್ನಲು ನೀವಿಲ್ಲ ಬಿಡಿ
ನಿಮ್ಮ ಹೆಜ್ಜೆ ಗುರುತುಗಳಿವೆ
ದುಡಿವ ಕಾರ್ಮಿಕರ ಬೆವರ ಹನಿಗಳಲಿ
ನಿಮ್ಮ ಈ ಮಾನಸ ಸೋದರನ
ಹೃದಯಾಂತರಾಳದಲಿ , ಸ್ಮೃತಿಯಾಗಿ ;

ಮತ್ತೊಮ್ಮೆ ಹುಟ್ಟಿ ಬನ್ನಿ ಎನ್ನಲೇ ?
ಇಲ್ಲ, ನೀವು ಮರಳುವುದಿಲ್ಲ
ನಿಮ್ಮೊಳಗಿದ್ದ ಸರಳ ನಿಸ್ಪೃಹ ಜೀವ
ಇನ್ನು ಕೈಗೆಟುಕುವುದಿಲ್ಲ ;

ಚಿಂತೆಯಿಲ್ಲ ಬಿಡಿ ಕಾಮ್ರೇಡ್
ಹಾಕಿಕೊಟ್ಟ ಹಾದಿಯಿದೆ ನೆಟ್ಟ ಸಸಿಗಳಿವೆ
ಬಿರಿವ ಮೊಗ್ಗುಗಳಿವೆ
ನಾಳೆಯ ಕನಸುಗಳ ಮತ್ತೆ ಅರಳಿಸಲು
ಈ ಜೀವದಲಿ ಉಸಿರಿದೆ
ಅದರೊಳಗೊಂದು ಕಣ ನೀವಾಗಿರಿ
ಕೊನೆಯವರೆಗೂ ;

ಹೇಳದೆಯೇ ಹೊರಟಿರುವಿರಿ
ಹೋಗಿಬನ್ನಿ ಎನ್ನಬೇಕೇ ?
ಎಲ್ಲಿಗೂ ಹೋಗದಿರಿ ಕಾಮ್ರೇಡ್
ನಮ್ಮೊಳಗೊಂದಾಗಿರಿ ನಗುತ್ತಾ ನಗಿಸುತ್ತಾ
ಅರಿವಿನ ಕುಸುಮಗಳನರಳಿಸುತ್ತಾ
ಆ ಹೆಜ್ಜೆ ಕುರುಹುಗಳು ಚಿರಸ್ಥಾಯಿಯಾಗಲಿ
ನಮ್ಮೆದೆಯ ಅಂಗಳದಲಿ ;

ಲಾಲ್ ಸಲಾಂ ಕಾಮ್ರೇಡ್ ,
ಕೊನೆಯದಾಗಿ 
ಒಂದೆರಡು ಹನಿಗಳು ನೆಲ ಸೇರಲಿ
ಅವುಗಳಲ್ಲಡಗಿದೆ ನಿಮ್ಮ ಚಹರೆ
ನೀವಿತ್ತ ಮೌಲ್ಯಾದರ್ಶಗಳ ಹೆಬ್ಬಯಲು
ಕಂಡ ಕನಸುಗಳ ಮಹಲು !

‍ಲೇಖಕರು avadhi

30 January, 2026

2 Comments

  1. Shyamala Madhav

    ತುಂಬಾ ಮನಸ್ಪರ್ಶಿ!
    ಗೌರವಾದರದ ನಮನ!

    — ಶ್ಯಾಮಲಾ ಮಾಧವ

    • na divakara

      Thank you madam

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading