ಜಿ ಎನ್ ನಾಗರಾಜ್
ತ್ರಿಪುರಾಕ್ಕೆ ಚುನಾವಣಾ ವರದಿಗೆ ಹೋಗಿದ್ದ ವರದಿಗಾರರೊಬ್ಬರು ಅಲ್ಲಿ ಬಿಜೆಪಿ ಆಕ್ರಮಣಶಾಲಿಯಾಗಿದೆ. ಗೆಲ್ಲುವ ಸಾಧ್ಯತೆ ಕಾಣುತ್ತಿದೆ ಎಂದು ಹತ್ತು ದಿನದ ಹಿಂದೆ ಹೇಳಿದರು.
ನಾನು 25 ವರ್ಷಗಳ ಆಡಳಿತದ ನಂತರ ಅಂತಹ ಸಂಭವವನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಹೇಳಿದ್ದೆ.
ಕಾರಣಗಳೇನು ?
1. 35- 40 ವರ್ಷಗಳ ಕೆಳಗಿನವರ್ಯಾರಿಗೂ ಬೇರೆ ಯಾವ ಆಡಳಿತದ ಬಗ್ಗೆ ಗೊತ್ತೇ ಇಲ್ಲ. ಅವರೆಲ್ಲಾ ತಮ್ಮ ಎಲ್ಲಾ ಸಮಸ್ಯೆಗಳಿಗೂ ಸಿಪಿಎಂ, ಎಡರಂಗವೇ ಕಾರಣ ಎಂಬ ತೀರ್ಮಾನಕ್ಕೆ ಬರುವುದು ಬಹಳ ಸಹಜ . ಅವರುಗಳಲ್ಲಿ ಬಹಳ ಜನ ಎಡ ವಿರುದ್ಧ ಓಟು ಹಾಕುವುದು ಸಾಧ್ಯ.
2. ಒಂದು ರಾಜ್ಯ ಸರ್ಕಾರ ತನ್ನ ಅಧಿಕಾರದ ಅಳವಿನಲ್ಲಿ ಸಾಧ್ಯವಿರುವುದೆಲ್ಲವನ್ನೂ ಪ್ರಾಮಾಣಿಕವಾಗಿ, ದಕ್ಷವಾಗಿ ಮಾಡಿದರೂ ಕೂಡ ಜನರ ಮುಖ್ಯ ಸಮಸ್ಯೆಗಳನ್ನು ಪರಿಹರಿಸಲಾಗದ ಸ್ಥಿತಿ ನಮ್ಮ ದೇಶದಲ್ಲಿದೆ. ಸ್ವಾತಂತ್ರ್ಯ ಬಂದ ಮೇಲಿನ ಮೊದಲ ರಾಜ್ಯ ಸರ್ಕಾರಗಳ ಬಗ್ಗೆಯೇ ಅಂದಿನ ಮೇಧಾವಿ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ರಾಜಾಜಿ, ರಾಜ್ಯ ಸರ್ಕಾರಗಳು ಕೇವಲ ವೈಭವೀಕೃತ ಮುನಿಸಿಪಾಲಿಟಿಗಳು ಎಂದು ಹೇಳಿದ್ದರು.
ಕರ್ನಾಟಕದ ಬಗ್ಗೆ ಕೂಡ ಫೇಸ್ಬುಕ್ ಮತ್ತು ಟಿವಿ ಚರ್ಚೆಗಳಲ್ಲಿ, ಸಾಹಿತ್ಯ ಪರಿಷತ್ತಿನಲ್ಲಿ ಈ ಬಗ್ಗೆ ವಿವರವಾಗಿ ಮಾತನಾಡಿದ್ದೇನೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮಾಡಿದರೂ ಪ್ರಮುಖವಾಗಿ ಉದ್ಯೋಗದ ಬಗ್ಗೆ ಏನೂ ಮಾಡಲಾಗದ ಸ್ಥಿತಿ.
3. ತ್ರಿಪುರಾದಲ್ಲಿ ಶಿಕ್ಷಣ, ಸಾಕ್ಷರತೆ ಕೇರಳದ ನಂತರ ದೇಶದಲ್ಲಿಯೇ ಅತಿ ಹೆಚ್ಚು. ಒಳ್ಳೆಯ ಶಿಕ್ಷಣದ ನಂತರ ಎಲ್ಲರೂ ಬಯಸುವುದು ಉದ್ಯೋಗ. ಆದರೆ ಅದು ಹೆಚ್ಚಾಗಿ ರಾಜ್ಯ ಸರ್ಕಾರದ ಕೈಯಲ್ಲಿಲ್ಲ. ಮುಖ್ಯವಾಗಿ ಕೈಗಾರಿಕೆಗಳ ಸ್ಥಾಪನೆ .
4. ತ್ರಿಪುರಾ ಮೂರು ಕಡೆ ಬಂಗ್ಲಾದೇಶದಿಂದ ಆವೃತ್ತವಾಗಿದೆ. ರೈಲು ಸೌಲಭ್ಯ, ಬಸ್ ಸೌಲಭ್ಯ ಇಲ್ಲ. ವಿಮಾನ ಒಂದೇ. ಅರಣ್ಯ ಬಿಟ್ಟರೆ ಖನಿಜ ಮೊದಲಾದ ಬೇರೆ ಸೌಲಭ್ಯಗಳಿಲ್ಲ. ಖಾಸಗಿಯವರ್ಯಾರೂ ಅಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಮುಂದಾಗುವುದಿಲ್ಲ.
5. ಕೃಷಿ ಅಭಿವೃದ್ಧಿಗೂ ಸೀಮಿತ ಅವಕಾಶ.
6. ರಾಜ್ಯ ಸರ್ಕಾರದ ಆದಾಯ ಬಹಳ ಸೀಮಿತ.
7. ಇವುಗಳ ಜೊತೆಗೆ ಪಕ್ಷ ಮತ್ತು ಸರ್ಕಾರದ ಬುಡಕಟ್ಟು ಜನರು, ಯುವಜನರ ಜೊತೆಗಿನ ಸಂಬಂಧ ದುರ್ಬಲವಾಗಿರುವ ಬಗ್ಗೆ , ಅಧಿಕಾರದ ಕಾರಣ ಜನರ ಜೊತೆಯಲ್ಲಿನ ವರ್ತನೆಯ ಬಗ್ಗೆ ಸ್ವಯಂ ವಿಮರ್ಶೆ ಮತ್ತು ತಿದ್ದುಪಡಿ ಅಗತ್ಯವಿದೆ.
ಈ ಮೇಲಿನ ಅಂಶಗಳ ಬಗ್ಗೆ ಜನರಿಗೆ ಏಕೆ ಮನವರಿಕೆ ಮಾಡಲಾಗಿಲ್ಲ ಎಂಬುದು ಈ ಅಂಶಕ್ಕೆ ನೇರವಾಗಿ ಸಂಬಂಧಪಟ್ಟಿದೆ.
ಇನ್ನು ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ನೀಡಿದ ಕಿರುಕುಳ,
ಮೇಲೆ ವಿವರಿಸಿದ ಪರಿಸ್ಥಿತಿಯಲ್ಲಿಯೂ ಬುಡಕಟ್ಟುಗಳ ಸ್ವಾಯತ್ತತೆ , ಸಂಸ್ಕೃತಿ, ಭಾಷೆಗಳ ರಕ್ಷಣೆ, ಅಭಿವೃದ್ಧಿ,
ಬುಡಕಟ್ಟು ಮತ್ತು ಇತರ ಜನರ ಜೊತೆಗೆ ಮೈತ್ರಿಯ ಬೆಳವಣಿಗೆ, ಜನರನ್ನು ಪೋಲೀಸ್ ಸೇರಿ ಎಲ್ಲ ಆಡಳಿತದಲ್ಲಿ ಒಳಗೊಂಡ ಪ್ರಜಾಪ್ರಭುತ್ವದ ವಿಸ್ತರಣೆ ಇತ್ಯಾದಿ ಹಲವು ಸಾಧನೆಗಳ ಬಗ್ಗೆ ಈಗ ಮಾತನಾಡುವುದು ಹೆಚ್ಚು ಪ್ರಯೋಜನಕರವಲ್ಲ.
ಚುನಾವಣೆಗಳ ಬಗ್ಗೆ, ಹಣ, ಗೂಂಡಾ, ಮಾಫಿಯಾಗಳ ಬಗ್ಗೆ ಕೂಡಾ ಈಗ ಮಾತನಾಡುವುದು ಬೇರೆಯೇ ಅರ್ಥ ಕೊಡುತ್ತದೆ.
ಈ ವಿಶ್ಲೇಷಣೆ ಮತಗಳಿಕೆ , ಅದರ ಪ್ರಾದೇಶಿಕ, ಸಾಮಾಜಿಕ, ವಯಸ್ಸು ಮೊದಲಾದ ವಿವರಗಳಿಲ್ಲದೆ , ಸ್ಥಳೀಯ ಪರಿಸ್ಥಿತಿಯ ನೇರ ಅರಿವು ಇಲ್ಲದೆ ಮಾಡಿದ ಕೇವಲ ಮೊದಲ observation ಮಾತ್ರ.
ರಾಜ್ಯ ಸರ್ಕಾರದ ಆಡಳಿತ, ಫಸ್ಟ್ ಪಾಸ್ಟ್ ದಿ ಪೋಸ್ಟ್ ಎಂಬ ನಮ್ಮ ಚುನಾವಣಾ ವ್ಯವಸ್ಥೆ ಬಗ್ಗೆ ಬೇರೆ ಸ್ಟೇಟಸ್ ಹಾಕುತ್ತೇನೆ .
0 ಪ್ರತಿಕ್ರಿಯೆಗಳು