ವಿಜಯಭಾಸ್ಕರರೆಡ್ಡಿ / ಕಲಬುರಗಿ
ಕಮಲಿಯ ನೀಳ ನೋಟ, ಅವಳ ಸನ್ನೆಯ ಪಿಸುಮಾತು, ಒಲವಿನ ಉಸಿರು ಹೀಗೆ ಅವಳ ನಾನಾ ಬಗೆಯ ಮಗ್ಗಲುಗಳನ್ನ ಹೇಳತ್ತಾ ರಂಗದ ಮೇಲೆ ಬೆಳಕಿನೊಂದಿಗೆ ನಾಜೂಕಾಗಿ ಬಂದು ವಿವರಣೆ ನೀಡುತ್ತಾ ನಿಂತ ಶ್ರೀನಿವಾಸನ ಕಣ್ಣಲ್ಲಿ ಕಂಡದ್ದು ಅಗ್ದಿ ಪ್ರಾಯದ ಪ್ರೇಮ ಬಾಲ್ಯದ ಹಾಗೂ ತನ್ನೊಳಗಿನ ಪ್ರೀತಿಯ ತಂಬೂರಿಯನ್ನು ಮೀಟುತ್ತಾ ರಂಗದ ತುಂಬಾ ಓಡಾಡುತ್ತಾನೆ.
ನೆನಪೆಂಬುದು ದೀಘಕಾಲದ ಉಸಿರಾಟ. ಆ ಉಸಿರಾಟದ ಮೂಲಕ ತನ್ನ ಈಡೀ ಜೀವಮಾನವನ್ನೆ ಕಳೆದು ಬದುಕಿನ ಕೊನೆ ದಿನಗಳನ್ನು, ತನ್ನ ನಿವೃತ್ತಿಯ ಸಮಯವನ್ನು ಕಮಲಿಯ ನೆನಪಿನ ಓಣಿಯಲ್ಲಿ ಸಂಚರಿಸಲು ಮೀಸಲಿಡುತ್ತಾ ಮತ್ತಷ್ಟು ಜೀವನೋತ್ಸಾಹ ಹೆಚ್ಚಿಸಿಕೊಳ್ಳುವ ಶ್ರೀನಿವಾಸ ಒಬ್ಬ ಬ್ಯಾಂಕ್ ನೌಕರುದಾರ. ಆತನ ಬಾಲ್ಯದ ತುಂಬಾ ತನ್ನ ಪ್ರೀತಿಯ ಹುಡುಗಿ ಕಮಲಿಯ ಬಗೆಗಿನ ಕ್ಷಣಗಳನ್ನು ರಂಗದ ಮೇಲೆ ಕಟ್ಟಿಕೊಳ್ಳುತ್ತಾ ಹೋಗುತ್ತಾನೆ.
ರಂಗದ ಮೇಲೆ ಬಂದವರೇ ನಾಲ್ಕು ತುಂಟ ಹುಡುಗರು ಅವರೊಂದಿಗೆ ಕಮಲಿಯೆಂಬ ಮಿಂಚುಳ್ಳಿ. ಬಾಲ್ಯದ ಆಟೋಪಾಯಗಳಲ್ಲಿ ನಿರ್ದೇಶಕ ಎಲ್ಲೂ ಬೇಸರಿಸದೆ ತುಂಬಾ ಶಿಸ್ತಿನಿಂದ ನಾಟಕವನ್ನ ಮುನ್ನೆಡೆಸಿಕೊಂಡು ಕಮಲಿ ಮತ್ತು ಆಕೆಯ ಸುತ್ತಮುತ್ತಲಿನ ವಾತಾವರಣವನ್ನು ಎಳೆ ಎಳೆಯಾಗಿ ತಂದಿಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.
ಕಮಲಿಯ ತಾಯಿಯ ಗಂಭೀರತೆ ಅವಳ ಸುತ್ತ ಇರುವ ಸಮಾಜದ ಕಣ್ಣೋಟಗಳ ತಿಳಿವು ಮತ್ತು ಅದರಾಚೆಗಿನ ಸಮಾಜದ ಶಿಸ್ತನ್ನು ಕೂಡ ಇಲ್ಲಿ ಪ್ರಾಮುಖ್ಯತೆ ನೀಡಲಾಗಿದೆ. ನಾಟಕದ ಮಧ್ಯೆ ಹಾಡುಗಳು ಸಮಯಕ್ಕನುಸಾರವಾಗಿ ನವಿರಾಗಿ ಕೂಡಿಸಲ್ಪಟ್ಟಿದೆ.
ಈ ನಾಟಕದಲ್ಲಿ ಒಂದು ರೀತಿಯ ಹೆಪ್ಪುಗಟ್ಟಿರುವ ಮಾತುಗಳಿವೆ, ಹೇಳಲೊರಟಿದ ನೆನಪಿನ ಸಂಭ್ರಮವಿದೆ. ಭಿನ್ನತೆಗೆ ಹಾಗೂ ಹೊಸ ರೀತಿಯ ತುಡಿತಕ್ಕೆ ಹಾತೊರೆಯುವ ನಿರ್ದೇಶಕ ವಿಶ್ವರಾಜ ಪಾಟೀಲ ಅವರು ತಮ್ಮ ತಂಡದೊಂದಿಗೆ ಕಲಬುರಗಿ ರಂಗಾಸ್ತಕರಿಗೆ ಮೂರು ದಿನಗಳ ಕಾಲ ಅಗ್ದಿ ಬರಪೂರ ಪ್ರದರ್ಶನ ಕೊಡುವ ಮೂಲಕ ರಂಗ ಮನಸ್ಸುಗಳಿಗೆ ಸೇತುವೆ ಆಗಿದ್ದಂತು ನಿಜ.
ಇಲ್ಲೊಂದು ಮಾತು ಹೇಳಲೇಬೇಕು ‘ಕೆಂಡದ ಮೇಲೆ ನಡೆದವನಿಗೆ ಮಾತ್ರ ಗೊತ್ತು ಕೆಂಡ ಕೊಟ್ಟ ನೋವು’ ಅದೇ ತೆರನಾಗಿ ಕಲಬುರಗಿ ರಂಗಾಯಣದ ಈ ರಂಗಚಟುವಟಿಗಳ ಬೆನ್ನ ಹಿಂದನ ಬೆಳಕಾಗಿರುವ ಹಾಗೂ ಕಲಬುರಗಿ ರಂಗಾಯಣದ ಕಡೆಗೆ ಕಲಬುರಗಿ ಮತ್ತು ಅದರಾಚೆಗೂ ರಂಗಾಸಕ್ತರನ್ನ ಸೆಳೆಯುವ ಕೆಲಸವನ್ನು ಮಾಡುತ್ತಲಿರುವ ನಿರ್ದೇಶಕರಾದ ಪ್ರಭಾಕರ ಜೋಶಿ ಅವರಿಗೆ ಅನಂತ ಶರಣು.
ಇನ್ನು ಬೆಳಕಿನ ಮತ್ತು ಹಾಡುಗಳ ಬಗೆಗಿನ ಅಭಿಮಾನ ಮತ್ತು ಮನಸೋಲುವಿಕೆ ಅನುಭವಿಸವರಿಗೆ ತಿಳಿದೀತು. ಹರಿಕೃಷ್ಣ ಎಂಬ ಯುವರಂಗಕರ್ಮಿಯ ರಂಗ ತುಡಿತ ಆತನ ಶ್ರಮ ಎಲ್ಲವೂ ರಂಗದ ಮೇಲೆ ಗೊತ್ತಾಗುತ್ತಾ ಹೋಗುತ್ತದೆ.
ಇದೇ ತ್ರಯಸ್ಥ ನಾಟಕವು ‘ಮೈಸೂರು ರಂಗಾಯಣದಲ್ಲಿ’ ಕೂಡ ತನ್ನ ಪ್ರದರ್ಶನವನ್ನು ನೀಡಿದೆ. ಆ ಮೂಲಕ ಕಲಬುರಗಿ ರಂಗಾಯಣ ಮತ್ತು ತ್ರಯಸ್ಥ ನಾಟಕ ತಂಡ ತನ್ನ ರಂಗಾಭಿಮಾನವನ್ನು ಹೆಚ್ಚಿಸಿಕೊಳ್ಳುತ್ತಲಿದೆ.
0 ಪ್ರತಿಕ್ರಿಯೆಗಳು