T-10 : ತೇಜಸ್ವಿ ಟೆನ್
ಡಾ ಬಿ ಆರ್ ಸತ್ಯನಾರಾಯಣ
ನಂದೊಂದ್ಮಾತು
ಎಂತಹಾ ಗಂಭೀರವಾದ ವಿಷಯವನ್ನು ಹೇಳುವಾಗಲೂ ಬರೆಯುವಾಗಲೂ ವಿಶೇಷವಾದ ಪಂಚಿಂಗ್ ಲೈನುಗಳನ್ನು ಸೇರಿಸಿ ನಗಿಸುವ ಶೈಲಿ ತೇಜಸ್ವಿಯವರದ್ದಾಗಿತ್ತು. ಅಂತಹ ತೇಜಸ್ವಿ ಸ್ವಲ್ಪ ಲಘುಬರಹ ಅಥವಾ ಹರಟೆಯನ್ನು ಬರೆಯುವಾಗ ಹೇಗೆ ನಗೆ ಬುಗ್ಗೆ ಚಿಮ್ಮಿಸುತ್ತಾರೆ ಎಂಬ ಕುತೂಹಲ ನಿಮಗಿದ್ದರೆ, ಅವರ ‘ಪಾಕಕ್ರಾಂತಿ’ ಓದಬೇಕು. ಆ ನೀಳ್ಗತೆಯ ಹತ್ತು ಪಂಚಿಂಗ್ ಲೈನುಗಳನ್ನು ತೇಜಸ್ವಿ ಟೆನ್ (T-10)ಎಂದು ಇಲ್ಲಿ ಸಂಗ್ರಹಿಸಿದ್ದೇನೆ. ನಕ್ಕು ನಗಿಸುತ್ತಾ ತೇಜಸ್ವಿಯವರನ್ನು ಸ್ಮರಿಸೋಣ. ತೇಜಸ್ವಿ ನಮ್ಮನ್ನಗಲಿ ಇಂದಿಗೆ (ಮೇ ೫) ಮೂರು ವರ್ಷಗಳೇ ಕಳೆದುಹೋದವು. ಆದರೂ ನಮ್ಮ ಬದುಕಿನಲ್ಲಿ, ನಮ್ಮ ಯೋಚನಾ ಕ್ರಮದಲ್ಲಿ ಅವರ ಚಿಂತನೆ ಆದರ್ಶಗಳು ಸದಾ ಜೀವಂತ. ಈ ನಡುಡವೆ ಕುಪ್ಪಳಲ್ಳಿಯಲ್ಲಿ ೪ ಮತ್ತು ೫ ನೇ ತಾರೀಖಿನಂದು ಎರಡುದಿನದ ತೇಜಸ್ವಿ ಹಬ್ಬ ನೆರವೇರಲಿದೆ. ನಾಲ್ಕರಂದು ತೇಜಸ್ವಿಯವರ ಸಾಹಿತ್ಯವನ್ನು ಕುರಿತಂತೆ ವಿಚಾರ ಸಂಕಿರಣವಿದ್ದರೆ, ೫ರಂದು ಅವರ ಸ್ಮಾರಕ ಲೋಕಾರ್ಪಣೆಯಾಗಲಿದೆ. ಈ ಸ್ಮಾರಕವಿರುವ ಜಾಗವಂತೂ ಅರ್ಥಪೂರ್ಣ ಎಂದು ನನಗನ್ನಿಸಿದೆ. ಕೊಪ್ಪ-ತೀರ್ಥಹಳ್ಳಿ ಮುಖ್ಯರಸ್ತೆಯಿಂದ ಕುಪ್ಪಳ್ಳಿಯ ಕವಿಮನೆಗೆ ಹೋಗುವ ರಸ್ತೆ ಮಧ್ಯದಲ್ಲಿ ಕವಿಶೈಲಕ್ಕೆ ಹೋಗಲು ಬಲಭಾಗಕ್ಕೆ ಕವಲೊಡೆಯುತ್ತದೆ. ಅದೇ ಜಾಗದಲ್ಲಿ ಎಡಬದಿಯಲ್ಲಿ ಸ್ಮಾರಕ ಸರಳವಾಗಿ ನಿರ್ಮಾಣಗೊಂಡಿದೆ. ಸುತ್ತ ಒತ್ತೊತ್ತಾಗಿ ಆವರಿಸಿಕೊಂಡಿರುವ ಪೊದೆ ಮರ ಗಿಡಗಳು. ಆಗಾಗ ಕಿವಿಗಪ್ಪಳಿಸುವ ಹಕ್ಕಿಗಳ ಕೂಗು. ನಡುವೆ ನಮ್ಮ ತೇಜಸ್ವಿ!
ಪಾಕಕ್ರಾಂತಿಯ ಈ ಹತ್ತು ಲೈನುಗಳನ್ನು ಓದಿ ಎಂಜಾಯ್ ಮಾಡಿ. ವಿಪರೀತವಾದ ಅರ್ಥ ಗೋಚರಿಸಿದರೆ, ಅದನ್ನು ಸ್ವೀಕರಿಸುವ ಮೊದಲು ಮೂಲಕಥೆ ಪಾಕಕ್ರಾಂತಿಯನ್ನು ಓದಿ, ಡಬಲ್ ಬೆನಿಫಿಟ್ ಪಡೆದುಕೊಳ್ಳಿ.
* ಅಡಿಗೆಯ ರುಚಿಗೂ ಪಾತ್ರಗಳ ಹೊರ ಭಾಗ ತಳತಳ ಹೊಳೆಯುವುದಕ್ಕೂ ಏನಾದರೂ ಸಂಬಂಧವಿದೆಯೇ?
* [ಪೋನಿನಲ್ಲಿ ಮಾತನಾಡಿ ಬರುವಷ್ಟರಲ್ಲಿ ಒಲೆಯ ಮೇಲಿದ್ದ ಹಾಲು ಉಕ್ಕಿ ಇಡೀ ಪಾತ್ರೆಯೇ ಹೊತ್ತಿ ಉರಿಯುತ್ತಿದ್ದುದಕ್ಕೆ] ಹಾಲು ಹೆಂಗಸರನ್ನು ಒಲೆಯ ಬುಡಕ್ಕೆ ಬಂಧಿಸಿರುವ ಮೊದಲ ಸಂಕೋಲೆ.
* ಹಾಲಿನ ಪ್ಯಾಕೆಟ್ಟುಗಳ ಮೇಲೂ ತಲೆಬುರುಡೆಯ ಚಿತ್ರವನ್ನೋ ಹ್ಯಾಂಡಲ್ ವಿತ್ ಕೇರ್ ಎನ್ನುವ ಸೂಚನೆಯನ್ನೋ ಕೊಡುವುದು ಒಳ್ಳೆಯದಲ್ಲವೆ?
* ಅದನ್ನು [ಒಣಮೀನನ್ನು] ಎಣ್ಣೆ ಹಾಕಿ ಹೆಂಚಿನ ಮೇಲೆ ಹುರಿದರೆ ಇಡೀ ತಾಲ್ಲೂಕಿನ ನಾಯಿಗಳೆಲ್ಲಾ ನನ್ನ ಮನೆ ಎದುರು ಕ್ಯೂ ನಿಲ್ಲುವುದರಲ್ಲಿ ಸಂಶಯ ಇರಲಿಲ್ಲ.
* [ಬ್ರೆಡ್ಡಿಗೆ ಸೇರಿಕೊಂಡಿದ್ದ ಇರುವೆಗಳನ್ನು ನಿವಾರಿಸಲಾಗದ್ದಕ್ಕೆ] ಬ್ರೆಡ್ಡು ಇರುವೆಗಳಿಗೆ ಬಹು ಅಂತಸ್ತಿನ ಕಟ್ಟಡ ಇದ್ದ ಹಾಗೆ. ಅದರೊಳಗೆ ಇರುವೆ ಸೇರಿದರಂತೂ ಅವನ್ನು ಅಲ್ಲಿಂದ ಉಚ್ಛಾಟಿಸುವುದು ಬಾಡಿಗೆ ಮೆನಯವರನ್ನು ಬಿಡಿಸಿದ ಹಾಗೆ ಅಸಾಧ್ಯವೇ ಸರಿ.
* [ತಾವು ಮಾಡಿದ ಅಡುಗೆ ತಿನ್ನದೆ ಅನೇಕ ದಿನಗಳಿಂದ ಉಪವಾಸವಿದ್ದ ನಾಯಿ, ಒಣ ಮೀನಿನ ವಾಸನೆ ಬಂದ ತಕ್ಷಣ ಕುಣಿದಾಡಿದ್ದಕ್ಕೆ] ಆವರೆಗೂ ಕಪಟ ಸನ್ಯಾಸಿಯ ಹಾಗೆ ವೈರಾಗ್ಯ ನಟಿಸುತ್ತ ಬಿದ್ದದ್ದ ಅದು ಪ್ಯಾಕೆಟ್ ಬಿಚ್ಚುತ್ತಿದ್ದ ಹಾಗೇ ಮೇನಕೆಯ ಕ್ಯಾಬರೆ ನೋಡಿದ ವಿಶ್ವಾಮಿತ್ರನ ರೀತಿ ತನ್ನ ಉಪವಾಸ ವ್ರತ ಗಾಳಿಗೆ ತೂರಿ ಅನೇಕ ದಿನಗಳಿಂದ ಅನ್ನವನ್ನೇ ಕಾಣದ ಪ್ರಾಣಿ ತರ ಅಯ್ಯಯ್ಯೋ ಎಂದು ಕೂಗುತ್ತ ಶೆಡ್ಡಿನಿಂದಲೇ ಸರಪಳಿ ಜಗ್ಗತೊಡಗಿತು.
* [ಹಗಲು ಹೊತ್ತಿನಲ್ಲಿ ಸ್ಕೂಟರ್ ಹೆಡ್ ಲೈಟ್ ಉರಿಸಿದ್ದರೆ ಸಂಜ್ಞೆ ಮಾಡುವ ಹಿಂದಿನಿಂದ ಕೂಗಿ ಹೇಳುವ ಮೂಲಕ ಕಿರಿ ಕಿರಿ ಮಾಡುವವರ ಬಗ್ಗೆ] ಒಮ್ಮೆ ಬೇಕೆಂದೇ ದೀಪ ಹಾಕಿಕೊಂಡು ಪೇಟೆಯ ಎಲ್ಲಾ ಬೀದಿಗಳಲ್ಲೂ ತಿರುಗಾಡಿ ಊರಿಗೆ ಊರೇ ಹುಚ್ಚು ಹಿಡಿದಂತೆ ಚಪ್ಪಾಳೆ ತಟ್ಟುತ್ತಾ ಕಿರಿಚಾಡುವುದನ್ನು ನೋಡಬೇಕೆಂದಿದ್ದೇನೆ.
* [‘ನೀವು ಬರಹಗಾರರಾಗಿರುವುದರಿಂದ ನನ್ನ ಮಗುವಿಗೆ ಒಳ್ಳೆಯ ಒಂದು ಹೆಸರನ್ನು ಸೂಚಿಸಬೇಕು’ – ಎಂದು ಪೀಡಿಸುತ್ತಿದ್ದವನ ಬಗ್ಗೆ] ಹುಟ್ಟಿಸಿದವರೇ ಹೆಸರಿಡಬೇಕು. ಇಲ್ಲದಿದ್ದರೆ ಹೆಸರು ಯಾರ್ದೋ ಬಸರು ಯಾರ್ದೋ ಅಂತ ಗಾದೆ ಮಾತಾಗುತ್ತೆ. ಕತೆ ಬರೆಯುವವರ ನಾಲಗೆ ತುದಿಯಲ್ಲಿ ಇವರು ಹುಟ್ಟಿಸಿದ ಮಕ್ಕಳ ಹೆಸರೆಲ್ಲಾ ಇರುತ್ತ?
* ಜಿ.ಎಚ್.ನಾಯಕರನ್ನೂ ಟಿ.ಪಿ.ಅಶೋಕರನ್ನೂ ಇಲ್ಲಿಗೆ ಸೀನಿಯಾರಿಟಿ ಪ್ರಕಾರ ಸರ್ಕಲ್ ಇನ್ಸ್ಪೆಕ್ಟರ್, ಸಬ್ಇನ್ಸ್ಪೆಕ್ಟರಾಗಿ ನೇಮಿಸಿ ಬ್ರಹ್ಮಸೃಷ್ಟಿಯ ಈ ಪಾತ್ರಗಳಿಗೆಲ್ಲ ಚೆನ್ನಾಗಿ ಚರ್ಚಿಸಿ ಸರಿಯಾಗಿ ವರ್ತಿಸುವಂತೆ ಹೇಳಿಕೊಡದಿದ್ದರೆ ಇಲ್ಲಿ ತುಂಬಿ ತುಳುಕುತ್ತಿರುವ ಅಸಂಬದ್ಧ ಪಾತ್ರಗಳೆಲ್ಲಾ ಕತೆ ಕಾದಂಬರಿಗಳೊಳಗೆ ನುಸುಳುವುದನ್ನು ಒಬ್ಬ ಲೇಖಕನಿಂದ ತಡೆಯಲು ಸಾಧ್ಯವೇ?
* [‘ಹೆಂಡತಿಗೆ ಗೊತ್ತಿಲ್ಲದಂತೆ ಗಂಡ, ಗಂಡನಿಗೆ ಗೊತ್ತಿಲ್ಲದಂತೆ ಹೆಂಡತಿ ಎಷ್ಟೋ ಸಾರಿ ಉಗ್ರಗಾಮಿಯಾಗಿರೋ ಸಂದರ್ಭಗಳಿದ್ದಾವೆ’ – ಎಂದ ಪೋಲಿಸು ಅಧಿಕಾರಿಯ ಮಾತಿನ ಬಗ್ಗೆ] ಇನ್ನು ಮುಂದೆ ಹೆಂಡತಿ ಮಕ್ಕಳ ಬಗ್ಗೆ ಕೊಂಚ ನಿಗಾ ಇಡುವುದು ಒಳ್ಳೆಯದೆಂದು ಯೋಚಿಸಿದೆ. ಹೆಂಗಸರು ತಾಳಿ ಬದಲು ಸಯನೈಡ್ ಗುಳಿಗೆ ಕುತ್ತಿಗೆಗೆ ಕೊಟ್ಟಿಕೊಂಡು ಓಡಾಡುವುದನ್ನು ಕಲ್ಪಿಸಿಕೊಂಡು ಭಯವಾಯ್ತು.
Super sir…
Lol.
ಅಹ್ಹಹ್ಹಾ….
ಸಂಗ್ರಹಯೋಗ್ಯ ಟಾಪ್ ಟೆನ್….
thanq very much @ ಡಾ ಬಿ ಆರ್ ಸತ್ಯನಾರಾಯಣ