ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಿಥಿ ಬಿಡಿಸಿದರು.. ಸಸಿ ನೆಡಿಸಿದರು..

ಜಿ ಎನ್ ನಾಗರಾಜ್ 

ರೈತ ಇಂಟೆಲೆಕ್ಚುಯಲ್ ಪುಟ್ಟಣ್ಣಯ್ಯ 

ನಗೆಚಾಟಿಕೆಗಳ ನಡುವೆ ನಗೆಚಾಟಿಗಳಿಂದ ತುಂಬಿದ ಮಾತುಗಳು, ರೈತರ, ಕೃಷಿಯ ಸಮಸ್ಯೆಗಳನ್ನು ಬಹು ಸರಳವಾಗಿ ಮತ್ತು ಮನಮುಟ್ಟುವಂತೆ ಜನರಿಗೆ ಮುಟ್ಟಿಸುತ್ತಿದ್ದ ವೈಶಿಷ್ಟ್ಯ ಪುಟ್ಟಣ್ಣಯ್ಯನವರದು.

ನೆಲಮೂಲದ ರೈತನೊಬ್ಬ ತನ್ನ ಬದುಕು, ಅದರ ಬವಣೆಗಳಿಗೆ ನಿಜ ಕಾರಣಗಳ ಅರಿವು ಪಡೆದು ಚಳುವಳಿಕಾರನಾಗಿ, ಜನನಾಯಕನಾಗಿ ರೂಪುಗೊಂಡ ಪರಿಗೆ ಪುಟ್ಟಣ್ಣಯ್ಯನವರೇ ಉದಾಹರಣೆ.

ಪಾಂಡವಪುರದ ಕ್ಯಾತನಹಳ್ಳಿಯಲ್ಲಿ ರೈತಾಪಿ ಜೀವನದಲ್ಲಿ ತೊಡಗಿದ್ದ ಪುಟ್ಟಣ್ಣಯ್ಯನವರಿಗೆ 1980 ರ ದಶಕದ ಆರಂಭದಿಂದ ಫಸಲಿನ ಬೆಲೆ ಕುಗ್ಗುವಿಕೆಯಿಂದ ರೈತರು ಅನುಭವಿಸುತ್ತಿದ್ದ ಸಂಕಟ ಮನಸ್ಸಿಗೆ ತಟ್ಟಿತು.

ಎಸ್ ಎಫ್ ಐ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ನಾಯಕರಾಗಿದ್ದ ಹಳಕಟ್ಟಿಯವರ ನೇತೃತ್ವದಲ್ಲಿ ನರಗುಂದ- ನವಲಗುಂದ ರೈತ ಹೋರಾಟ ರಾಜ್ಯದ ರೈತರನ್ನು ಬಡಿದೆಬ್ಬಿಸಿದ ಕಾಲ. ಆ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳಿಗಾಗಿ ಹೋರಾಟ ನಡೆಸಿದ್ದ ರುದ್ರಪ್ಪನವರ ರೈತ ಸಂಘದೊಡನೆ ಆಗ ವಕೀಲರಾಗಿ, ಸಮಾಜವಾದಿ ಚಳುವಳಿಗಾರರಾಗಿದ್ದ ಪ್ರೊ.ನಂಜುಂಡಸ್ವಾಮಿಯವರು ಸೇರಿದರು.

ಆಗ ಹುಟ್ಟಿಕೊಂಡದ್ದೇ ಕರ್ನಾಟಕ ರಾಜ್ಯ ರೈತ ಸಂಘ.

ಈ ರೈತ ಸಂಘಟನೆ ರಾಜ್ಯದ ನೀರಾವರಿ ಪ್ರದೇಶಗಳಲ್ಲಿ ಬೆಳೆಯಲಾರಂಭಿಸಿತು. ಈ ಸಂಘಟನೆ ಪುಟ್ಟಣ್ಣಯ್ಯನವರನ್ನೂ ಸೆಳೆಯಿತು. ರಾಜ್ಯ ರೈತಸಂಘ ಅಂದು ಹಮ್ಮಿಕೊಂಡಿದ್ದ ಜೈಲು ಭರೊ ಮೊದಲಾದನೇಕ ಹೋರಾಟಗಳಲ್ಲಿ ಪುಟ್ಟಣ್ಣಯ್ಯ ಚಳುವಳಿಗಾರರಾಗಿ ಬೆಳೆದರು.

ಹೋರಾಟಗಳ ಪ್ರಾಯೋಗಿಕ ಅನುಭವದ ಜೊತೆಗೆ ರಾಜ್ಯ ರೈತ ಸಂಘದ ಅನೇಕ ಅಧ್ಯಯನ ಶಿಬಿರಗಳು ಪುಟ್ಟಣ್ಣಯ್ಯನವರಿಗೆ ಸಮಸ್ಯೆಗಳ ಮೂಲದ ಬಗ್ಗೆ ಅರಿವು ಮೂಡಿಸಿದವು.

ಹೀಗೆ ಅನುಭವ ಮತ್ತು ಅರಿವು ಮೇಳೈಸಿದ ಅವರ ಮಾತುಗಳಲ್ಲಿ ಹಳ್ಳಿಗಳ ಭಾಷೆ, ಗಾದೆ, ಪಡೆನುಡಿ ಮತ್ತು ಹಾಸ್ಯ ಪ್ರಜ್ಞೆ ಬೆರೆತು ಅವರದೇ ಶೈಲಿ ರೂಪುಗೊಂಡಿತು. ಈ ಶೈಲಿಯಲ್ಲಿ ಕೃಷಿಗೆ ಸಂಬಂಧಿಸಿದ ಅತ್ಯಂತ ಗಹನವಾದ ವಿಚಾರಗಳನ್ನೂ ಗ್ರಾಮೀಣ ಜನರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗುತ್ತಿದ್ದರು. ಇದು ಯಾವುದೇ ಉತ್ತಮ ಸಾಹಿತಿಗೆ ಹೋಲಿಸಬಹುದಾದ ಶೈಲಿಯಾಗಿತ್ತು. ನನಗೆ ಅಚ್ಚರಿಯನ್ನು ಉಂಟು ಮಾಡುತ್ತಿತ್ತು.

ನೂರಾರು ಸರಳ ಮದುವೆಗಳ

ನೇತಾರ ಪುಟ್ಟಣ್ಣಯ್ಯ

ಸತ್ತ ಆಪ್ತರಿಗೆ “ತಿಥಿ ಬಿಡಿ,ಸಸಿ ನೆಡಿ” ಎಂದು ಸಾರಿದರು. ಅಂಧಶ್ರದ್ಧೆಗಳ ಕಟು ವಿರೋಧಿ. ಮಂಡ್ಯದಲ್ಲಿ ರೈತ ಚಳವಳಿ ಸಾಂಸ್ಕೃತಿಕ ಆಯಾಮವನ್ನೂ ಪಡೆದಿತ್ತು.

ರಾಜ್ಯ ರೈತ ಸಂಘದ ನಾಯಕರದು ಸರಳ, ಶಾಸ್ತ್ರ ರಹಿತ ಮದುವೆಗಳಲ್ಲದೆ ಬೇರೆ ಮದುವೆಗಳಿಗೆ ಬರುವುದೇ ಇಲ್ಲ ಎಂಬ ಪಾಲಿಸಿ. ಪುಟ್ಟಣ್ಣಯ್ಯ ನೂರಾರು ಕುವೆಂಪು ಮಂತ್ರಾಕ್ಷತೆಯ ಮದುವೆಗಳನ್ನು ನಡೆಸಿಕೊಟ್ಟಿದ್ದಾರೆ.

ಮದುವೆ ಮಾತ್ರವಲ್ಲ ಸತ್ತಾಗ ತಿಥಿ ಮಾಡಬಾರದು. ಬದಲಾಗಿ ಜನರಿಗೆ ಸತ್ತವರ ಮೇಲಿನ ಗೌರವ ತೋರಿಸುವುದಕ್ಕೆ ಉಪಯುಕ್ತವಾಗುವುದನ್ನೇನಾದರೂ ಮಾಡಲಿ ಎಂಬುದು ಪಾಲಿಸಿ.ಸತ್ತವರಿಗೆ “ತಿಥಿ ಬಿಡಿ ಸಸಿ ನೆಡಿ” ಎಂದು ಸಾರುತ್ತಿದ್ದವರು.
ಇದನ್ನು ತಮ್ಮ ತಂದೆ ತಾಯಿಗಳ ವಿಷಯದಲ್ಲಿಯೂ ಪಾಲಿಸಿದರು. ಅವರ ನೆನಪಿನಲ್ಲಿ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪುಸ್ತಕ ಹಂಚಿಕೆ ಇಂತಹವುಗಳನ್ನು ಏರ್ಪಡಿಸುತ್ತಿದ್ದರು.

ಅಂಧಶ್ರದ್ಧೆ ಆಚರಣೆ ವಿರೋಧಿ ಕಾಯಿದೆಗಾಗಿ ನಿಡುಮಾಮಿಡಿ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಎಲ್ಲ ಹೋರಾಟಗಳಲ್ಲಿ ಭಾಗವಹಿಸಿದ್ದರು. ವಿಧಾನಸಭೆಯಲ್ಲಿ ಅದನ್ನು ಬೆಂಬಲಿಸಿ ವಿಚಾರಪೂರಿತ ಭಾಷಣ ಮಾಡಿದ್ದರು.

‍ಲೇಖಕರು avadhi

21 February, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading