ಡಾ. ಶಿವರಾಜ ಬ್ಯಾಡರಹಳ್ಳಿ
ಎದೆಯ ಬಾರವನ್ನೆಲ್ಲಾ
ಬಸಿದು
ಬಯಕೆ ಬೇಲಿಯ ಆಸೆಯತೊರೆದು
ಬಟ ಬಯಲಲ್ಲಿ ಸಿಕ್ಕ ಕವಿತೆಯನ್ನು
ಭಾವ ಲಹರಿಯೊಳಗೆ ಬಚ್ಚಿಟ್ಟು ತಂದೆ
ಕವಿತೆ ಕಾಲವ ನೆನೆದು ಕದವ
ತೆಗೆದ ಊರ ಬಾಗಿಲಿಗೆ ಹೋಗಿ
ಕಂಡ ಕಂಡವರ ಮುಂದೆ ಅಂಗಲಾಚಿದೆ,
ಗದ್ಯವನ್ನೇ ಪದ್ಯದಂತೆ ಓದಿದರು.
ಬರೆಯಲಾರದ ಕವಿತೆ ,ನುಡಿಯಲಾರದ
ಕವಿತೆ ತನ್ನ ಕುರುಹು ಕಳಚಿ
ವೇಷ ಮರೆಸಿ ಬಯಲಾದ ಎದೆಯೊಳಗೆ,
ಬದುಕೇ ಬಯಲಾದ ಜನರೊಡನೆ
ಅವಿತು ಕೂತಿತು.
ಬಂದ ಜನ ಹೋದ ಜನ ಬೆತ್ತ ಲಾದರು
ಕತ್ತಲಾದರು.ಬಯಕೆಗಳ ಮಾರಿ ,ಬಯಕೆಗಳ
ಕೊಂಡ ಸಂತೆಯಾಹಿತು.
ಅವಿತ ಕವಿತೆಯ ಬೆನ್ನ ಹತ್ತಿ ತಡಕಾಡಿದೇ.
ನೋಡಿದವರು ನೋಡದಂತೆ ನೋಟ ಬೀ ರಿದರು
ಬೀಡು ಬಿಟ್ಟ ಜಾಗದಲ್ಲೇ ಬಯಕೆಯ ತೋಡಿಕ್ಕೊಂಡರು.
ಬಿಟ್ಟ ಕವಿತೆಯ ಕಟ್ಟು ಜಾಗದ ಕೊರಳ
ಹಿಡಿದು ಜಾಡು ಹರಸಿದೆ .
ಸಿಕ್ಕ ಕುರುಹು ಗಳಲ್ಲಿ ಬಿಟ್ಟ
ನೆನಪುಗಳ ಮೆರವಣಿಗೆಯಲ್ಲಿ
ಬದಲಿ ಕನಸುಗಳ ಭಾವನೆಯ ಬಲೆ ಹರಸಿ
ಬಲೆಯ ಬೀ ಸಿದೆ. ಹರಿದು ಹಂಚಿ ಹೋದ
ಸಣ್ಣ ಸಣ್ಣ ಪದ್ಯ ಕುರುಹುಗಳು
ಮೈಯ ತುಂಬಾ ಗಾಯ ಗುರುತು
ಹೊತ್ತು ಗೋಚರವಾದವು.
ಕೇರಿ ಕೇರಿಗಳಲ್ಲಿ ಅವಿತ ಕವಿತೆ
ಕೊಟ್ಟಿಗೆಯ ಕದದ ಹಿಂದೆ ಆವುಚಿ
ಬಿದ್ದುದನ್ನುಕಂಡೆ,ಹಿತ್ತಿಲ ಹಿಂದೆ
ನೇತು ಬಿದ್ದ ಬಟ್ಟೆಯೊಳಗೆ ಅವಿತದ್ದನ್ನು
ಕಂಡೆ .ಸೂರಿನೊಳಗೆ ಇರಿಸಿದ್ದ ಚೂರಿ
ಯೊಳಗೆ ಕಂಡೆ.
ಕೊರಳ ಕುಡಿಗೆ ಅಂಟಿಕೊಂಡ
ಕನಕ ಮಣಿಗಳ ಸರಗಳ ಸಂಗವ ತೊರೆದು
ಕರಿಮಣಿ ಬಿಚ್ಚಾಲೆ ಗೌರಮ್ಮಗಳ
ಪದಮಂಟ ಪದಲ್ಲಿ ಇರುವದ ಕಂಡೆ,
ಮಹಡಿ ಮಹಲಲ್ಲಿ ನಿಲ್ಲದ ಕವಿತೆ
ಗುಡಿಸಲ ಬೀದಿ ಬಯಲಲ್ಲಿ ಬಿಡದೇ
ಬಾಯ್ತೆರೆದು ಬಂದವರ ಎದೆಯೊಳಗೆ
ಭಾವನೆಗೆ ಬಣ್ಣ ತುಂಬಿ ಕಾಮನ ಬಿಲ್ಲಾಗಿಸಿ
ಭಾನು ಭುವಿಗೆ ಬೆಳಕ ತೋರಿದವು.
ಯಂತ್ರಗಳಲ್ಲಿ ಸಿಗದ ಕವಿತೆ ,ರೈತನೆದೆ ಯೊಳಗೆ,
ನೇಗಿಲ ಗೆರೆಯೊಳಗೆ ,ದನದ ಗೊರ ಸೊಳಗೆ
ನಿಲುಕದ ಪದವಿಲಾಸದಲಿ ಕಣ್ಣಿಗೊತ್ತಿದವು.
ಬಡವನ ಕರಗಳಲಿ ,ಬಡಿಗೆ ಹಿಡಿದ ಕುಲುಮೆಯಲ್ಲಿ
ಎಲ್ಲೋ ತಪ್ಪಿಸಿಕೊಂಡ ಕವಿತೆಗಳು ಸಿಕ್ಕು ನಕ್ಕವು.
ನೆನಪುಗಳ ಹಂಚಿಕೊಂಡವು ಕತ್ತಲೆಯ
ಸಂಗದಲ್ಲಿ ಸಾವಿರದ ಸಂಗತಿಗಳ ,ನೂರು
ನೂಕಾಟಗಳ,ತಬ್ಬಲಿ ತಾಯ್ತನಗಳ ಹರುಹಿ
ಹಗುರಾದವು.ನೂರು ಗಿಲಕೆಯ ನಾದ ನೂರ್ಮಡಿ
ಇಟ್ಟು ಕಾಡು ಕಣಿವೆಯಲ್ಲಿ ಯಲ್ಲಿ ಕರಗಿ
ನದಿ ತೊರೆಯಾಗಿ ,ಕಾಡ ಬೆಳದಿಂಗಳಾಗಿ
ಗಿಡ ಹೂ ಕಾಯಾಗಿ ಹರಿವ ನದಿಯಾಗಿ
ಕುಣಿವ ಝರಿಯಾಗಿ ಹಾಲ್ನೊರೆಯಾಗಿ
ಜೀವ ಜಾಲದಲ್ಲಿ ಬೆರೆತು ಹೋದವು.
0 ಪ್ರತಿಕ್ರಿಯೆಗಳು